ಗೋಪಾಲ್ ಹಾಗೂ ವೀರಪ್ಪನ್ ಮುಖಾಮುಖಿ ಇನ್ನೂ ಆಗಿಲ್ಲ
ಚೆನ್ನೈ : ರಾಜ್ಕುಮಾರ್ ಬಿಡುಗಡೆಯ ಸಲುವಾಗಿ ಎರಡನೇ ಸುತ್ತಿನ ಸಂಧಾನಕ್ಕೆ ಕಾಡಿಗೆ ತೆರಳಿರುವ ನಕ್ಕೀರನ್ ಪತ್ರಿಕೆಯ ಸಂಪಾದಕ ಆರ್.ಆರ್. ಗೋಪಾಲ್ ಅವರು ವೀರಪ್ಪನ್ ಸಂದೇಶಕ್ಕಾಗಿ ಇನ್ನೂ ಕಾಯುತ್ತಿದ್ದಾರೆ ಎಂದು ತಮಿಳುನಾಡು ಪೊಲೀಸ್ ಹಾಗೂ ನಕ್ಕೀರನ್ ಪತ್ರಿಕೆಯ ಮೂಲಗಳು ತಿಳಿಸಿವೆ.
ಎರಡೂ ಸರಕಾರದ ಪ್ರತಿಕ್ರಿಯೆಗಳು ಹಾಗೂ ತನ್ನ ಬೇಡಿಕೆಗೆ ಸಂಬಂಧಿಸಿದಂತೆ ಪೂರಕ ಹಾಗೂ ಕ್ರೋಡೀಕೃತ ದಾಖಲೆಗಳೊಂದಿಗೆ ತನ್ನ ಬಳಿಗೆ ಬರಲು ಗೋಪಾಲ್ ಅವರಿಗೆ ವೀರಪ್ಪನ್ ವಿಧಿಸಿದ್ದ ಗಡುವು ಶನಿವಾರ ಕೊನೆಗೊಳ್ಳುತ್ತಿದೆ.
ಮೂಲಗಳ ಪ್ರಕಾರ ಸಂಧಾನಕಾರ ಗೋಪಾಲ್ ಹಾಗೂ ಅವರೊಂದಿಗೆ ತೆರಳಿರುವ ಮೂವರು ಸಹೋದ್ಯೋಗಿಗಳು ಕಾಡಿನಲ್ಲಿ ವೀರಪ್ಪನ್ ಸಹಚರರಿಗಾಗಿ ಕಾಯುತ್ತಿದ್ದಾರೆ. ವೀರಪ್ಪನ್ ಸಹಚರರ ಭೇಟಿಯ ನಂತರವಷ್ಟೇ ಗೋಪಾಲ್ ಅವರು ವೀರಪ್ಪನ್ನನ್ನು ಸಂಪರ್ಕಿಸಲು ಸಾಧ್ಯ. ಶನಿವಾರ ರಾತ್ರಿ ವೀರಪ್ಪನ್ನಿಂದ ಗೋಪಾಲ್ಗೆ ಸಂದೇಶ ದೊರಕುವ ಸಾಧ್ಯತೆ ಇದೆ ಎಂದೂ ಮೂಲಗಳು ಹೇಳಿವೆ.
ಈಮಧ್ಯೆ ಗೋಪಾಲ್ ಕಾಡಿಗೆ ತೆರಳಿದ ನಂತರದ ವಿದ್ಯಮಾನಗಳನ್ನು ಅರಿಯಲು ಪತ್ರಕರ್ತರು ತಮಿಳುನಾಡಿನ ಮುಖ್ಯಕಾರ್ಯದರ್ಶಿ ಎ.ಪಿ. ಮುತ್ತುಸ್ವಾಮಿ ಹಾಗೂ ಗೃಹ ಕಾರ್ಯದರ್ಶಿ ಶಾಂತಾ ಶೀಲ ನಾಯರ್ ಅವರನ್ನು ಭೇಟಿ ಮಾಡಲು ಪ್ರಯತ್ನಿಸಿದಾಗ, ಪತ್ರಕರ್ತರಿಗೆ ತಿಳಿಸುವಂತ ವಿಚಾರಗಳು ಏನೂ ಇಲ್ಲ ಎಂದು ಅವರು ನುಣುಚಿಕೊಂಡಿದ್ದಾರೆ.
ಅಪ್ಪಾಜಿ ಬಿಡುಗಡೆ ಆಗೇ ಆಗುತ್ತದೆ : ಪುನೀತ್
ಬೆಂಗಳೂರು : ಅಭಿಮಾನಿಗಳ ಹಾರೈಕೆ, ದೇವರ ಕೃಪೆ ಹಾಗೂ ಸರಕಾರದ ಸಂಧಾನದ ಕ್ರಮಗಳಿಂದಾಗಿ ತಮ್ಮ ತಂದೆ ಡಾ. ರಾಜ್ಕುಮಾರ್ ಹಾಗೂ ಇತರ ಮೂವರ ಬಿಡುಗಡೆ ಆಗೇ ಆಗುತ್ತದೆ ಎಂದು ರಾಜ್ಕುಮಾರ್ ಅವರ ಪುತ್ರ ಪುನೀತ್ ರಾಜ್ಕುಮಾರ್ ಶನಿವಾರ ಇಲ್ಲಿ ತಿಳಿಸಿದರು.
ರಾಜ್ಕುಮಾರ್ ಅವರ ಬಿಡುಗಡೆಗೆ ಪ್ರಾರ್ಥಿಸಿ ಬ್ಯಾಟರಾಯನಪುರ ನಗರ ಸಭೆ ವ್ಯಾಪ್ತಿಯ ಗಂಟಗಾನಹಳ್ಳಿಯ ಈಶ್ವರ ದೇವಾಲಯದಲ್ಲಿ ಏರ್ಪಡಿಸಲಾಗಿದ್ದ 100ಕ್ಕೂ ಹೆಚ್ಚು ಗೋವುಗಳ ವಿಶೇಷ ಪೂಜೆಯ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡುತ್ತಿದ್ದರು.
ಈ ವಿಶೇಷ ಪೂಜೆಯ ನೇತೃತ್ವವನ್ನು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನದ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ವಹಿಸಿದ್ದರು. ಮುಖ್ಯಮಂತ್ರಿ ಕೃಷ್ಣ ಅವರ ಪತ್ನಿ ಪ್ರೇಮಾ ಕೃಷ್ಣ ಅವರು ಗೋವುಗಳಿಗೆ ಪೂಜೆ ಸಲ್ಲಿಸಿ, ರಾಜ್ಕುಮಾರ್ ಅವರ ಸುರಕ್ಷಿತ ಬಿಡುಗಡೆಗೆ ಈಶ್ವರನಲ್ಲಿ ಪ್ರಾರ್ಥಿಸಿದರು.