ಟೆಂಡರ್ ಪ್ರಕ್ರಿಯೆ ಪಾರದರ್ಶಕಗೊಳಿಸುವ ಶಾಸನಕ್ಕೆ ರಾಜ್ಯಪಾಲರ ಅಂಕಿತ
ಬೆಂಗಳೂರು: ಸರಕಾರಿ ಇಲಾಖೆಗಳಲ್ಲಿ ನಡೆಯುವ ಖರೀದಿ ವ್ಯಾವಹಾರಗಳಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲು ಹಾಗೂ ಸಾರ್ವಜನಿಕರಿಗೆ ಮುಕ್ತ ಮಾಹಿತಿ ದೊರಕಿಸಿಕೊಡುವ ಅಧ್ಯಾದೇಶಕ್ಕೆ ರಾಜ್ಯಪಾಲರಾದ ವಿ. ಎಸ್. ರಮಾದೇವಿ ಶನಿವಾರ ಅಂಕಿತ ಹಾಕಿದ್ದಾರೆ.
ಸ್ಥಳೀಯ ಸಂಸ್ಥೆಗಳೂ, ಶಾಸನಬದ್ಧ ಮಂಡಳಿಗಳು, ಸಾರ್ವಜನಿಕ ವಲಯವೂ ಸೇರಿದಂತೆ ಎಲ್ಲ ಇಲಾಖೆಗಳಲ್ಲಿನ ಖರೀದಿ ವ್ಯವಹಾರಗಳು ಪ್ರಾಮಾಣಿಕವಾಗಿ ನಡೆಯಲು ಹಾಗೂ ಸ್ಪರ್ಧಾತ್ಮಕವಾಗಿರಲು ಶಾಸನ ಅತ್ಯಗತ್ಯ ಎಂದು ಶಾಸನ ಜಾರಿಯ ಬಗ್ಗೆ ಮಾತನಾಡಿದ ಭಾರಿ ನೀರಾವರಿ ಸಚಿವ ಎಚ್. ಕೆ . ಪಾಟೀಲ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಟೆಂಡರ್ ಕುರಿತ ಅಸಮರ್ಪಕ ಪ್ರಚಾರ, ಸೀಮಿತ ಟೆಂಡರ್ಗಳ ಸೌಲಭ್ಯ, ಟೆಂಡರ್ಗಳ ಪಡೆಯುವಿಕೆ ಮತ್ತು ಅಂಗೀಕರಿಸುವ ಕುರಿತು ಇರುವ ಸಮಸ್ಯೆಗಳು, ಅಧಿಕಾರ ದುರುಪಯೋಗ ಮತ್ತು ನಕಲಿ ಟೆಂಡರ್ಗಳ ಹಾವಳಿ ತಡೆ ಹಾಗೂ ವಿಷಯಗಳ ಬಗ್ಗೆ ಅಪಾರದರ್ಶಕತೆಗಳನ್ನು ಶಾಸನ ನಿವಾರಿಸುತ್ತದೆ. ಇನ್ನು ಮುಂದೆ ಒಂದು ಕೋಟಿ ರುಪಾಯಿಗಿಂತ ಹೆಚ್ಚಿನ ಮೊತ್ತದ ಟೆಂಡರ್ಗಳಿಗೆ ಸಂಬಂಧಿಸಿದ ಎಲ್ಲ ದಾಖಲೆಗಳು ಸರಕಾರದ ಎಲ್ಲ ಖಜಾನೆಗಳಲ್ಲಿ ಮತ್ತು ಇತರ ಪ್ರಮುಖ ಕಚೇರಿಗಳಲ್ಲಿ ದೊರೆಯಲಿವೆ. ಒಂದು ಲಕ್ಷಕ್ಕಿಂತ ಹೆಚ್ಚಿನ ಮೊತ್ತದ ಎಲ್ಲ ಕಾಮಗಾರಿಗಳನ್ನು ಟೆಂಡರ್ ಮೂಲಕವೇ ವಿತರಿಸಲಾಗುವುದು.
ಟೆಂಡರ್ ಪರಿಶೀಲನೆಯ ವಿಧಿವಿಧಾನಗಳು ಹಾಗೂ ಫಲಿತಾಂಶಗಳನ್ನು ಕೂಡಾ ಸಂಬಂಧಿಸಿದ ಇಲಾಖೆಗಳು ಪ್ರಕಟಿಸಲಿವೆ. ಯಾವುದೇ ಅಧಿಕಾರಿ ನಿವೃತ್ತಿ ಕೇವಲ 6 ತಿಂಗಳು ಇದ್ದಾಗ ಆತ ತನ್ನ ಮೇಲಧಿಕಾರಿಯ ಅನುಮತಿಯಿಲ್ಲದೆ ಯಾವುದೇ ಕಾಮಗಾರಿಗೆ ಅನುಮತಿ ನೀಡುವಂತಿಲ್ಲ ಎಂದು ಪಾಟೀಲ್ ವಿವರಿಸಿದ್ದಾರೆ.