ನೈಋತ್ಯ ರೈಲ್ವೆ ವಲಯ : ಹುಬ್ಬಳ್ಳಿಗೆ ಒಲಿದ ಸುಪ್ರೀಮ್ ಕೋರ್ಟ್
ಹುಬ್ಬಳ್ಳಿ : ನೈಋತ್ಯ ರೈಲ್ವೆ ವಲಯ ಕಚೇರಿಯನ್ನು ಹುಬ್ಬಳ್ಳಿಗೆ ಸ್ಥಳಾಂತರಿಸುವ ಕೇಂದ್ರ ಸರಕಾರದ ನಿರ್ಧಾರವನ್ನು ರದ್ದು ಪಡಿಸಿ ರಾಜ್ಯ ಹೈಕೋರ್ಟ್ ನೀಡಿದ್ದ ತೀರ್ಪಿಗೆ ಸರ್ವೋನ್ನತ ನ್ಯಾಯಾಲಯ ಶುಕ್ರವಾರ ತಡೆಯಾಜ್ಞೆ ನೀಡಿದೆ.
ಜೂನ್ 20ರಂದು ನ್ಯಾಯಮೂರ್ತಿಗಳಾದ ವೈ. ಭಾಸ್ಕರ್ರಾವ್ ಹಾಗೂ ಗೋಪಾಲಗೌಡ ಅವರನ್ನು ಒಳಗೊಂಡ ಹೈಕೋರ್ಟ್ನ ವಿಭಾಗೀಯ ಪೀಠ ನೈಋತ್ಯ ರೈಲ್ವೆ ವಲಯವನ್ನು ಬೆಂಗಳೂರಿನಲ್ಲೇ ಉಳಿಸಿಕೊಳ್ಳುವಂತೆ ನೀಡಿದ್ದ ಆದೇಶದ ವಿರುದ್ಧ ರೈಲ್ವೆ ಮಂಡಳಿ ಸರ್ವೋನ್ನತ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿತ್ತು. ರಾಜ್ಯ ವಿಧಾನಸಭೆಯ ಪ್ರತಿಪಕ್ಷದ ನಾಯಕರಾದ ಜಗದೀಶ ಶೆಟ್ಟರ್ ಹಾಗೂ ಮತ್ತಿತರರು ಕೂಡ ವೈಯಕ್ತಿಕವಾಗಿ ಹೈಕೋರ್ಟ್ ಪೀಠದ ಈ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್ನಲ್ಲಿ ವಿಶೇಷ ತೆರವು ಅರ್ಜಿ ಸಲ್ಲಿಸಿದ್ದರು.
ಮೇಲ್ಮನವಿಯ ವಿಚಾರಣೆ ನಡೆಸಿದ, ನ್ಯಾಯಮೂರ್ತಿಗಳಾದ ಕ್ರಿಪಾಲ್ ಹಾಗೂ ಶಿವರಾಜಪಾಟೀಲ್ ಅವರನ್ನು ಒಳಗೊಂಡ ಸುಪ್ರೀಂಕೋರ್ಟ್ನ ವಿಭಾಗೀಯ ಪೀಠ ಕರ್ನಾಟಕ ಹೈಕೋರ್ಟ್ ತೀರ್ಪಿಗೆ ತಜೆಯಾಜ್ಞೆ ನೀಡಿದೆ ಎಂದು ಜಗದೀಶ ಶೆಟ್ಟರ್ ದೂರವಾಣಿಯ ಮೂಲಕ ಇಂಡಿಯಾ ಇನ್ಫೋದ ಹುಬ್ಬಳ್ಳಿ ಪ್ರತಿನಿಧಿಗೆ ದೂರವಾಣಿಯ ಮೂಲಕ ತಿಳಿಸಿದರು.
ಕೇಂದ್ರ ಸರಕಾರಕ್ಕೆ ರೈಲ್ವೆ ವಲಯ ಕಚೇರಿಯನ್ನು ಎಲ್ಲಿ ಬೇಕಾದರೂ ಸ್ಥಾಪಿಸುವ ಸ್ವಾತಂತ್ರ್ಯ ಇದೆ ಎಂದು ತಡೆಯಾಜ್ಞೆ ನೀಡುವ ಸಂದರ್ಭದಲ್ಲಿ ನ್ಯಾಯಪೀಠ ಅಭಿಪ್ರಾಯಪಟ್ಟಿತು ಎಂದೂ ಅವರು ತಿಳಿಸಿದ್ದಾರೆ.
ಶೆಟ್ಟರ್ ಪ್ರತಿಕ್ರಿಯೆ: ಇದು ಉತ್ತರ ಕರ್ನಾಟಕ ಭಾಗಕ್ಕೆ ಸಂದ ಗೌರವ ಹಾಗೂ ಜಯ ಎಂದು ತೀರ್ಪಿಗೆ ಪ್ರತಿಕ್ರಿಯೆ ವ್ಯಕ್ತಪಡಿಸಿರುವ ಜಗದೀಶ ಶೆಟ್ಟರ್, ಕೇಂದ್ರ ಸರಕಾರ ಕೂಡಲೇ ಹುಬ್ಬಳ್ಳಿಯಲ್ಲಿ ನೈಋತ್ಯ ರೈಲ್ವೆ ವಲಯ ಕಚೇರಿ ಸ್ಥಾಪನೆಯ ಪ್ರಕ್ರಿಯೆ ಆರಂಭಿಸಬೇಕು ಎಂದು ಮನವಿ ಮಾಡಿದ್ದಾರೆ.
ಪ್ರಧಾನಮಂತ್ರಿ ವಾಜಪೇಯಿ ಅವರು ಈ ಕಚೇರಿಯನ್ನು ಉದ್ಘಾಟಿಸುವ ಕಾರ್ಯಕ್ರಮ ಹೈಕೋರ್ಟ್ ತಡೆಯಾಜ್ಞೆಯಿಂದ ರದ್ದಾಗಿದ್ದನ್ನು ಸ್ಮರಿಸಿರುವ ಅವರು, ಹುಬ್ಬಳ್ಳಿ - ಅಂಕೋಲ ರೈಲು ಮಾರ್ಗವನ್ನು ಮಾತ್ರ ಅಂದು ಪ್ರಧಾನಿಯವರು ಉದ್ಘಾಟಿಸುವಂತಾಯಿತು ಎಂದೂ ತಿಳಿಸಿದ್ದಾರೆ.
ಈಗ ಸರ್ವೋನ್ನತ ನ್ಯಾಯಾಲಯ ಉತ್ತರ ಕರ್ನಾಟಕದ ಪರ ತೀರ್ಪುನೀಡಿದೆ. ವಾಜಪೇಯಿ ನೇತೃತ್ವದ ಕೇಂದ್ರ ಸರಕಾರ ನೈಋತ್ಯ ರೈಲ್ವೆ ವಲಯವನ್ನು ಬೆಂಗಳೂರಿನಿಂದ ಹುಬ್ಬಳ್ಳಿಗೆ ಸ್ಥಳಾಂತರಿಸಿತ್ತು . ಈಗ ವಲಯ ಕಚೇರಿ ಸ್ಥಾಪನೆಗೆ ಯಾವುದೇ ಅಡೆ ತಡೆಗಳು ಇಲ್ಲ ಎಂದು ಅವರು ಹೇಳಿದ್ದಾರೆ. ಕೇಂದ್ರ ಸರಕಾರ ವಲಯ ಕಚೇರಿಯನ್ನು ಹುಬ್ಬಳ್ಳಿಗೆ ಸ್ಥಳಾಂತರಿಸಿದ್ದರ ವಿರುದ್ಧ ಜನತಾದಳದ ಸಿ. ನಾರಾಯಣ ಸ್ವಾಮಿ ಅವರು ಹೈಕೋರ್ಟ್ ಮೆಟ್ಟಿಲು ಹತ್ತಿದ್ದರು ಎಂಬುದನ್ನು ಇಲ್ಲಿ ಸ್ಮರಿಸಬಹುದು.
ಮುಖಪುಟ / ಇವತ್ತು... ಈ ಹೊತ್ತು...