ಭಾರತ ಹಾಕಿ ತಂಡ ಬೆಂಗಳೂರಿಂದ ದೆಹಲಿಗೆ ಓಡಿದ್ದಾದರೂ ಯಾಕೆ?
ನವದೆಹಲಿ : ಸಿಡ್ನಿ ಒಲಂಪಿಕ್ಸ್ಗೆ ತೆರಳಲಿರುವ ಭಾರತ ಹಾಕಿ ತಂಡದ ಪೂರ್ವ ಸಿದ್ಧತಾ ಶಿಬಿರ ಬೆಂಗಳೂರಿಂದ ದೆಹಲಿಗೆ ಏಕಾಏಕಿ ವರ್ಗಾವಣೆಯಾಗಿದ್ದು ಯಾಕೆ ? ತಂಡ ಬೆಂಗಳೂರಿನಿಂದ ದೆಹಲಿಗೆ ಪಲಾಯನಗೈದಿದ್ದಕ್ಕೆ.
ಕಾಫಿ ಟೀಗೂ ಬರ ಬಂತು : ರಾಜ್ಕುಮಾರ್ ಅಪಹರಣದ ಪರಿಣಾಮ ನಗರದಲ್ಲಿ ಸ್ಫೋಟಿಸಿದ ಗಲಭೆಯ ಬಿಸಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಳಿದುಕೊಂಡಿದ್ದ 22 ಮಂದಿಯ ಹಾಕಿ ತಂಡಕ್ಕೂ ತಟ್ಟಿತು. ಅಡುಗೆ ಭಟ್ಟರು ಕಾಣೆಯಾದರು, ಕೂಗಿದ ತಕ್ಷಣ ಓಡಿ ಬರುತ್ತಿದ್ದ ಕೆಲಸಗಾರರು ಎಲ್ಲಿ ಹೋದರೋ ಗೊತ್ತಿಲ್ಲ, ಊಟ ಇರಲಿ ಟೀ, ಕಾಫೀನೂ ಇಲ್ಲದ ಹಾಗಾಯ್ತು. ಫೋನು, ಕರೆಂಟು ಆಗಾಗ ಕೈಕೊಡುತ್ತಲೇ ಇತ್ತು. ಕೊನೆಗೆ, ಸ್ನಾನ ಮಾಡಲು ಬಚ್ಚಲುಮನೆಗೆ ಹೋದರೆ ನಲ್ಲಿಯಲ್ಲಿ ನೀರು ಬರೋದು ನಿಂತಿತು. ತಮ್ಮ ಕಷ್ಟವನ್ನ ಕೇಳೋರು ಯಾರೂ ಇಲ್ಲದೆ ಬೇಸತ್ತ ಆಟಗಾರರು ಹೇಳದೆ ಕೇಳದೆ ದೆಹಲಿಗೆ ಪೇರಿ ಕಿತ್ತರು. ಈಗ ಶಿಬಿರ ದೆಹಲಿಯಲ್ಲಿ ಮುಂದುವರೆದಿದೆ.
ಈ ವಿವರಣೆ ನೀಡಿದ್ದು ಭಾರತ ಹಾಕಿ ಫೆಡರೇಷನ್ನ ಅಧಿಕಾರಿ. ಚಿನ್ನಸ್ವಾಮಿ ಕ್ರೀಡಾಂಗಣ ಕ್ರಿಕೆಟ್ಟಿಗೆ ಪ್ರಸಿದ್ಧಿ. ಕರ್ನಾಟಕ ರಾಜ್ಯ ಕ್ರಿಕೆಟ್ ಒಕ್ಕೂಟದ ಉಸ್ತುವಾರಿಯಲ್ಲಿರುವ ಈ ಕ್ರೀಡಾಂಗಣದಲ್ಲಿ ಸಕಲ ಸೌಲಭ್ಯ ಸವಲತ್ತುಗಳಿವೆ. ಅಂಥಾದ್ದರಲ್ಲೂ ಆಟಗಾರರಿಗೆ ಈ ಸ್ಥಿತಿ ಬಂದದ್ದಕ್ಕೆ ಅಧಿಕಾರಿ ವಿಷಾದಿಸುತ್ತಾರೆ.
ಈ ಘಟನೆಯಿಂದ ಮತ್ತೊಂದು ಪ್ರಶ್ನೆ ಎದ್ದಿದೆ- ಭಾರತೀಯ ಕ್ರೀಡಾ ಪ್ರಾಧಿಕಾರದ ಕೇಂದ್ರ ಬೆಂಗಳೂರಲ್ಲೇ ಇರುವಾಗ, ಶಿಬಿರವನ್ನು ಕರ್ನಾಟಕ ರಾಜ್ಯ ಹಾಕಿ ಒಕ್ಕೂಟ (ಕೆಎಸ್ಎಚ್ಎ) ದ ಮೈದಾನದಲ್ಲಿ ನಡೆಸುವ ಅಗತ್ಯವಾದರೂ ಏನಿತ್ತು ? ಇದಕ್ಕೆ ಕ್ರೀಡಾ ಪ್ರಾಧಿಕಾರ ಕೊಡುವ ಉತ್ತರ, ತಂಡ ಅಭ್ಯಾಸ ಮಾಡುತ್ತಿದ್ದುದು ಕೆಎಸ್ಎಚ್ಎ ಮೈದಾನದಲ್ಲಿ. ಭಾರತೀಯ ಕ್ರೀಡಾ ಪ್ರಾಧಿಕಾರದ ಕೇಂದ್ರ ಇರುವುದು ಬೆಂಗಳೂರಿನ ಹೊರ ವಲಯದಲ್ಲಿ. ಹೀಗಾಗಿ ಅಷ್ಟು ದೂರ ಪ್ರಯಾಣಿಸುವುದನ್ನು ತಪ್ಪಿಸಲು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ತಂಗಲು ವ್ಯವಸ್ಥೆ ಮಾಡಲಾಗಿತ್ತು.
ಆದರೆ, ವಾಸ್ತವದಲ್ಲಿ ಇದಕ್ಕೆ ಬೇರೆಯೇ ಕಾರಣವಿದೆ ಎನ್ನುತ್ತಾರೆ ಭಾರತೀಯ ಹಾಕಿ ಫೆಡರೇಷನ್ ಅಧಿಕಾರಿ. ಫೆಡರೇಷನ್ ಕೇಂದ್ರದಲ್ಲಿ ಸಿಂಥೆಟಿಕ್ ಬಯಲಿಲ್ಲ, ರೂಮುಗಳೋ ದೇವರಿಗೇ ಪ್ರೀತಿ. ಕಿಟಕಿಗಳಿಂದ ನುಗ್ಗೋ ಬಿಸಿಲನ್ನು ತಡೆಯಲು ಪರದೆಗಳಿಲ್ಲ. ಒಂದು ಕ್ರೀಡಾ ಪ್ರಾಧಿಕಾರ ಕೇಂದ್ರದಲ್ಲಿ ಯಾವ ಯಾವ ಸೌಕರ್ಯಗಳಿರಬೇಕೋ ಅವು ಸರಿಯಾಗಿಲ್ಲ. ಅಂಥ ಕಡೆ ಒಲಂಪಿಕ್ಸ್ ಪೂರ್ವಭಾವೀ ಶಿಬಿರ ನಡೆಸಲಾದೀತೆ ಎಂಬುದು ಅಧಿಕಾರಿ ಪ್ರಶ್ನೆ. ಈ ಪ್ರಶ್ನೆ ಮುಗಿದೇ ಇಲ್ಲ, ಅಷ್ಟರಲ್ಲಿ , ನಲ್ಲೀಲಿ ಸರಿಯಾಗಿ ನೀರೇ ಬರ್ತಿಲ್ಲ ಸ್ವಾಮಿ ಅಂತ ಫೆಡರೇಷನ್ನ ಇನ್ನೊಬ್ಬ ಅಧಿಕಾರಿ ದನಿಗೂಡಿಸಿದರು.
(ಐಎಎನ್ಎಸ್)