ಅಪಹೃತರೊಂದಿಗೆ ಟಾಡಾ ಆರೋಪಿಗಳ ಬದಲಾವಣೆ, ಎಲ್ಲರ ಕಣ್ಣು ತಮಿಳುನಾಡಿನತ್ತ
ಬೆಂಗಳೂರು: ತಿರುಚನಾಪ ಳ್ಳಿಯಲ್ಲಿರುವ ಮೂವರು ಬಂದಿಗಳೂ ಸೇರಿದಂತೆ ತಮಿಳುನಾಡಿನ ವಶದಲ್ಲಿರುವ ಐವರು ಟಾಡಾ ಆರೋಪಿಗಳನ್ನು, ರಾಜ್ ಹಾಗೂ ಸಂಗಡಿಗರ ಬಿಡುಗಡೆಯಾಂದಿಗೆ ಬದಲಾಯಿಸಿಕೊಳ್ಳಬೇಕು ಎಂದು ತಮಿಳುನಾಡು ಮುಖ್ಯಮಂತ್ರಿ ಕರುಣಾನಿಧಿ ಸೋಮವಾರ ಸ್ಪಷ್ಟಪಡಿಸಿರುವುದು ರಾಜ್ ಅಪಹರಣ ನಾಟಕದ ಲೇಟೆಸ್ಟ್ ಸುದ್ದಿ.
ಹಾಗಾಗಿ ಅಪಹರಣ ಸಂಬಂಧ ಎಲ್ಲರ ಕಣ್ಣುಗಳು ತಮಿಳುನಾಡಿನತ್ತ ತಿರುಗಿವೆ. ಈ ಹಿನ್ನಲೆಯಲ್ಲಿ ತಿರುಚನಾಪಳ್ಳಿಯ ಜೈಲಿನಲ್ಲಿದ್ದ ಮೂವರು ಆರೋಪಿಗಳನ್ನು ಈರೋಡ್ ಜಿಲ್ಲೆಗೆ ಸೇರಿದ ಭವಾನಿ ಜೈಲಿಗೆ ಸೋಮವಾರ ವರ್ಗಾಯಿಸಲಾಗಿದೆ.
ವೀರಪ್ಪನ್ನ ಜತೆ ಕೈಜೋಡಿಸಿರಬಹುದಾದ ಶಕ್ತಿಗಳ ಬಗ್ಗೆ ಮತ್ತೆ ಊಹಾಪೋಹಗಳೇ ಓಡಾಡುತ್ತಿವೆ. ಕಾಡುಗಳ್ಳನಿಗೆ ಕೆಲವು ಉಗ್ರಗಾಮಿ ಸಂಘಟನೆಗಳ ಜೊತೆ ಸಂಪರ್ಕ ಇರುವ ಬಗ್ಗೆ ಎರಡೂ ರಾಜ್ಯಗಳ ಮುಖ್ಯಮಂತ್ರಿಗಳೂ ಖಚಿತವಾಗಿ ಏನನ್ನೂ ಹೇಳುತ್ತಿಲ್ಲ. ಅನೇಕ ಕಾರಣಗಳಿಗಾಗಿ ಎಲ್ಲವನ್ನೂ ಬಹಿರಂಗಪಡಿಸುವುದು ಸಾಧ್ಯವಿಲ್ಲವಾದರೂ, ರಾಜ್ರಂಥ ಜನಪ್ರಿಯ ವ್ಯಕ್ತಿಗಳ ವಿಷಯದಲ್ಲಿ ಜನತೆ ಭಾವನಾತ್ಮಕವಾಗಿ ಯೋಚಿಸುವುದರಿಂದ ಸಾರ್ವಜನಿಕರಿಗೆ ತಿಳಿಸಬೇಕಾದ ಪ್ರತಿ ವಿಷಯವೂ ಆಳುವ ವರ್ಗಕ್ಕೆ ಬಿಸಿ ತುಪ್ಪವಾಗಿ ಪರಿಣಮಿಸುತ್ತದೆ.
ಏನನ್ನಾದರೂ ಹೇಳಬೇಕಾದರೆ ಸಾಕಷ್ಟು ಯೋಚಿಸಿ, ಅಳೆದು-ತೂಗಿ ಹೇಳಿಕೆ ನೀಡಬೇಕಾಗುತ್ತದೆ. ಹಾಗಾಗಿ ಇವತ್ತಿನ ಅಪಹರಣಂಥ ಸೂಕ್ಷ್ಮ ವಿಷಯದಲ್ಲಿ ಯಾರೂ ಹೇಳಿಕೆ ನೀಡಬಾರದೆಂದು ಮುಖ್ಯಮಂತ್ರಿಗಳು ತಮ್ಮ ಸಹೊದ್ಯೋಗಿಗಳಿಗೆ ತಾಕೀತು ಮಾಡಿರುವ ಸುದ್ದಿಯಿದೆ.
ಬುಧವಾರ ಅಥವಾ ಗುರುವಾರ ಗೋಪಾಲ್ ಕಾಡಿಗೆ : ವೀರಪ್ಪನ್ ಕೇಳಿರುವ ಸ್ಪಷ್ಟೀಕರಣ ಹಾಗೂ ದಾಖಲೆಗಳ ಕ್ರೋಡೀಕರಣದಲ್ಲಿ ಎರಡೂ ರಾಜ್ಯಗಳೂ ತೊಡಗಿದ್ದು, ರಾಜ್ಯಗಳ ಅಧಿಕೃತ ಸಂಧಾನಕಾರ ಗೋಪಾಲ್ ಬುಧವಾರ ಅಥವಾ ಗುರುವಾರ ಕಾಡಿಗೆ ತೆರಳುವ ನಿರೀಕ್ಷೆ ಇದೆ ಎಂದು ಹೇಳಲಾಗಿದೆ.
ಕರ್ನಾಟಕ ಸರಕಾರದ ವಶದಲ್ಲಿ ಮೈಸೂರಿನ ಜೈಲಿನಲ್ಲಿರುವ ಟಾಡಾ ಬಂಧಿಗಳ ಬಿಡುಗಡೆ ಸಂಬಂಧ, ಆರೋಪಿಗಳ ಫೋಟೊ ಹಾಗೂ ರಾಜ್ಯ ಸರಕಾರದ ಆದೇಶದ ಪ್ರತಿಗಳು ಬೇಕೆಂದು ವೀರಪ್ಪನ್ ಕೇಳಿರುವ ಹಿನ್ನಲೆಯಲ್ಲಿ ಗೋಪಾಲ್ ಅವರ ಎರಡನೇ ಭೇಟಿ ಮುಂದಕ್ಕೆ ಹೋಗಬಹುದು ಎಂದು ಹೇಳಲಾಗುತ್ತಿದೆ.
ಇಷ್ಟಲ್ಲದೆ ಎಂಟು ವರ್ಷಗಳ ಹಿಂದೆ ವೀರಪ್ಪನ್ ಕಡೆಯವರಿಂದ ಹತ್ಯೆಗೀಡಾದ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಶಕೀಲ್ ಅಹ್ಮದ್ ಅವರ ತಂದೆ ನಿವೃತ್ತ ಪೊಲೀಸ್ ಅಧಿಕಾರಿ ಅಬ್ದುಲ್ ಖರೀಂ ಅವರು, ಆರೋಪಿಗಳನ್ನು ಬಿಟ್ಟುಕೊಡಬಾರದೆಂದು ಮೈಸೂರು ಟಾಡಾ ಕೋರ್ಟಿನಲ್ಲಿ ತಕರಾರು ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಯನ್ನು ಕೋರ್ಟ್ ಅಂಗೀಕರಿಸಿದ್ದು, ಆರೋಪಿಗಳ ಬಿಡುಗಡೆ ಪ್ರಕ್ರಿಯೆಗೆ ಅಡಚಣೆಯಾಗುವ ಎಲ್ಲ ಲಕ್ಷಣಗಳಿವೆ. ಹಾಗಾಗಿ ಟಾಡಾ ಆರೋಪಿಗಳ ಬಿಡುಗಡೆ ಸಂಬಂಧ ರಾಜ್ಯ ಸರಕಾರ ಮೈಸೂರು ಜಿಲ್ಲಾ ಕೋರ್ಟಿಗೆ ನೀಡಿದ್ದ ನಿರ್ದೇಶನಕ್ಕೆ ಹೊರತಾಗಿ ಖರೀಂ ಮನವಿ ಅನ್ವಯ ವಿಚಾರಣೆಯನ್ನು ಕೋರ್ಟ್ ಬುಧವಾರಕ್ಕೆ ಮುಂದೂಡಿದೆ. ಇದು ಗೋಪಾಲ್ ಕಾಡಿಗೆ ತೆರಳುವ ಪ್ರಕ್ರಿಯೆ ಮೇಲೆ ಪರಿಣಾಮ ಬೀರಲಿದೆ.
ಅಬ್ದಲ್ ಖರೀಂ ಅವರು ಎತ್ತಿರುವ ತಕರಾರಿನಲ್ಲಿ , ಹತ್ತಾರು ಕಾನೂನುಬಾಹಿರ ಚಟುವಟಿಕೆಗಳಲ್ಲಿ ಭಾಗವಹಿಸಿರುವ ಆರೋಪಿಗಳನ್ನು ಏಕಾಏಕಿ ಬಿಟ್ಟುಕೊಡುವ ಕ್ರಮ ಕಾನೂನಿಗೆ ವಿರುದ್ಧ, ಈ ಸಂಬಂಧ ಕೇಂದ್ರ ಸರಕಾರ ಅಥವಾ ಸುಪ್ರೀಂಕೋರ್ಟ್ಗಳನ್ನು ಸಂಪರ್ಕಿಸಿಲ್ಲ ವೆಂದು ವಾದಿಸಲಾಗಿದೆ ಎಂದು ಹೇಳಲಾಗಿದೆ.
ಕಾಡುಗಳ್ಳನ ಬೇಟೆಗಾಗಿ ಹಗಲಿರುಳೂ ಹೋರಾಟ ನಡೆಸಿ ತಮ್ಮ ಪ್ರಾಣ ತೆತ್ತ ನೂರಾರು ಪೊಲೀಸ್ ಅಧಿಕಾರಿಗಳ ಸಂಬಂಧಿಕರು ಕೇಳುತ್ತಿರುವ ಭಾವನಾತ್ಮಕತೆಯಿಂದ ಕೂಡಿದ ಇಂಥ ಕಾನೂನುಬದ್ದ ಪ್ರಶ್ನೆಗಳಿಗೆ ಸಂಬಂಧಿಸಿದವರು ಉತ್ತರಿಸಲೇಬೇಕಾದ ಅನಿವಾರ್ಯ ಕಾಲ ಈಗ ಎದುರಾಗಿದೆ. ರಾಜಕೀಯ ಕಾರಣಗಳಿಗಾಗಿ ಇಂಥ ಆರೋಪಿಗಳ ಬಿಡುಗಡೆಗೆ ನಿರ್ಧಾರಕ್ಕೆ ಉನ್ನತ ಮಟ್ಟದಲ್ಲಿ ಕಾನೂನು ತೊಡಕುಂಟಾದರೆ ರಾಜ್ ಬಿಡುಗಡೆ ಪ್ರಕ್ರಿಯೆ ಗತಿಯೇನು?