Get Updates
Get notified of breaking news, exclusive insights, and must-see stories!

ತುಕ್ಕು ಹಿಡಿದ ಸರ್ಕಾರಿ ವಾಹನ: ಅಧಿಕಾರಿಗಳ ಕಾರ್ಯವೈಖರಿಯ ಕೈಗನ್ನಡಿ

ಕಾರವಾರ: ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ.... ಎಂಬ ವಚನ ಕೇಳಿದ್ದೀರಲ್ಲವೇ? ಇದು ಕಾರವಾರದ ಸರಕಾರಿ ವಾಹನಗಳಿಗೂ ಅನ್ವಯಿಸುತ್ತದೆ. ಸದಾ ಓಡಾಡುತ್ತಿರಲಿ ಎಂದೇ ಕೊಂಡ ಸರಕಾರಿ ವಾಹನಗಳು, ಚಲಿಸದೇ ಒಂದೇ ಕಡೆ ಸ್ಥಿರವಾಗಿ ನಿಂತು ತುಕ್ಕು ಹಿಡಿದಿವೆ. ತುಕ್ಕುಹಿಡಿದ ಈ ವಾಹನಗಳು ನಮ್ಮ ಸರಕಾರಿ ಅಧಿಕಾರಿಗಳ ಕಾರ್ಯವೈಖರಿಗೆ ಕೈಗನ್ನಡಿಯಾಗಿದೆ.

ಅಂಗೈಯ ಹುಣ್ಣು ನೋಡಿಕೊಳ್ಳಲು ಕನ್ನಡಿಯ ಅಗತ್ಯವಿಲ್ಲ. ಅಂತೆಯೇ ಸರಕಾರಿ ಇಲಾಖೆಗಳ ಆವರಣದಲ್ಲಿ ತುಕ್ಕುಹಿಡಿದು ನಿಂತ ವಾಹನಗಳಿಂದ ಸರಕಾರಕ್ಕೆ ಲಕ್ಷಗಟ್ಟಲೆ ನಷ್ಟ ಸಂಭವಿಸುತ್ತಿದೆ. ಉತ್ತರ ಕನ್ನಡ ಜಿಲ್ಲೆಯಾಂದರಲ್ಲೇ ಸುಮಾರು 50 ಲಕ್ಷ ರುಪಾಯಿ ನಷ್ಟ ವಾಗಿದೆ ಎಂದು ಅಂದಾಜು.

ಸರಕಾರಿ ವಾಹನಗಳನ್ನು ಓಡಿಸಲು ಸರಕಾರದ ಚಾಲಕರೇ ಇರುತ್ತಾರೆ. ಇವರು ಸರಕಾರದ ಕೆಲಸ ದೇವರ ಕೆಲಸ ಎಂದು ತಿಳಿದು, ದೇವರೇ ತಮ್ಮ ಕೆಲಸ ಮಾಡುತ್ತಾನೆ ಎಂಬ ಧೋರಣೆ ತಳೆದಿರುವಂತೆ ವರ್ತಿಸುತ್ತಾರೆ. ವಾಹನಗಳ ಚಿಕ್ಕ ಪುಟ್ಟ ರಿಪೇರಿಯನ್ನೂ ಮಾಡಿಕೊಳ್ಳದ ಈ ಮಂದಿ ವಾಹನ ಕೆಟ್ಟ ಕೂಡಲೇ ಒಂದೆಡೆ ನಿಲ್ಲಿಸಿ ತಾವು ಆರಾಮವಾಗಿರುತ್ತಾರೆ. ಕೆಲವರು ವಿಶ್ರಾಂತಿ ಪಡೆಯಲು ವಾಹನಗಳನ್ನು ಸ್ವತಃ ಕೆಡಿಸುತ್ತಾರೆ ಎಂಬ ಆರೋಪವೂ ಇದೆ.

ಈರೀತಿ ತುಕ್ಕು ಹಿಡಿಯುತ್ತಿರುವ ವಾಹನಗಳಲ್ಲಿ ಆ್ಯಂಬುಲೆನ್ಸ್‌ಗಳೂ ಹೊರತಾಗಿಲ್ಲ. ಸರಕಾರಿ ಇಲಾಖೆಗಳು ಜಫ್ತುಮಾಡಿದ ವಾಹನಗಳೂ ಈ ತುಕ್ಕು ಹಿಡಿಯುವ ಕ್ರಿಯೆಯಲ್ಲಿ ಭಾಗಿಗಳು. ಉತ್ತರ ಕನ್ನಡ ಜಿಲ್ಲೆಯ ಆರೋಗ್ಯ ಇಲಾಖೆಯಾಂದರಲ್ಲೇ ಸುಮಾರು ಆರೇಳು ವಾಹನಗಳು ಕೆಟ್ಟು ನಿಂತಿವೆ. ಅದು ಚಿಕ್ಕ ಪುಟ್ಟ ತೊಂದರೆಯಿಂದ. ನಮ್ಮ ಅಧಿಕಾರಿಗಳು ಈ ವಾಹನಗಳ ದುರಸ್ತಿಯ ಬಗ್ಗೆ ಎಂದೂ ಗಮನ ಹರಿಸಿದ್ದಿಲ್ಲ. ಹೋಗಲಿ ಕೆಟ್ಟ ವಾಹನಗಳು ದುರಸ್ತಿ ಆಗುವ ಹಂತದಲ್ಲಿರುವಾಗಲೇ ಹರಾಜು ಹಾಕಿಯಾದರೂ ಸರಕಾರಕ್ಕೆ ಉಪಕರಿಸಬಹುದು. ಈ ಬಗ್ಗೆಯೂ ಯಾರೂ ತಲೆ ಕೆಡೆಸಿಕೊಳ್ಳುವುದಿಲ್ಲ.

ಕರಾವಳಿಯ ಹವೆ: ವಾಹನಗಳು ಬಹುಬೇಗ ತುಕ್ಕು ಹಿಡಿಯಲು ಕರಾವಳಿಯ ಹವಾಮಾನವೂ ಒಂದು ಕಾರಣ ಎನ್ನುವವರಿದ್ದಾರೆ. ಈ ಹವೆಯಲ್ಲಿ ವಾಹನದ ಧೂಳು ಕೊಡವದೆ, ಅದನ್ನು ಬಳಸದೆ ಒಂದೇ ಕಡೆ ನಿಲ್ಲಿಸಿದರೆ, ಅದು ಹೊಸ ವಾಹನವೇ ಆಗಿದ್ದರೂ ಕೂಡ, ಒಂದೆರಡು ವಾರದಲ್ಲಿ ತುಕ್ಕು ಹಿಡಿಯುತ್ತದಂತೆ. ಪರಿಸ್ಥಿತಿ ಹೀಗಿರುವಾಗ ವರ್ಷಾಗಟ್ಟಲೆ ನಿಂತಲ್ಲೇ ನಿಂತಿರುವ ವಾಹನಗಳ ಸ್ಥಿತಿ ಏನು?

ಇನ್ನು ಮಯಾಬಜಾರ್‌ ವಿಷಯ ನಿಮಗೆಲ್ಲ ತಿಳಿದದ್ದೇ ಅಲ್ಲವೆ. ಹೀಗೆ ಸರಕಾರಿ ಕಾರ್ಯಾಲಯಗಳ ಆವರಣದಲ್ಲಿ ನಿಲ್ಲುವ ವಾಹನಗಳ ಟೈರು, ಟ್ಯೂಬು ಇನ್ನಿತರ ಬಿಡಿ ಭಾಗಗಳು ಇದ್ದಕ್ಕಿದ್ದಂತೆ ಕಣ್ಮರೆಯಾಗುವುದೂ ಉಂಟು. ಸರಕಾರಿ ಅಧಿಕಾರಿಗಳು ಈ ವಾಹನವನ್ನು ಹರಾಜು ಹಾಕಬೇಕು ಎಂದು ನಿರ್ಧರಿಸುವ ಹೊತ್ತಿಗೆ ಅಲ್ಲಿ ಉಳಿಯುವುದು ಕೇವಲ ಮೂಳೆ, ಚಕ್ಕಳ ಮಾತ್ರ. ಹೀಗಾಗಿ ಸರಕಾರದ ಬೊಕ್ಕಸಕ್ಕೆ ಆಗುತ್ತಿರುವ ನಷ್ಟ ಅಷ್ಟಿಷ್ಟಲ್ಲ. ಇದು ರಾಜ್ಯದ ಎಲ್ಲ ಜಿಲ್ಲೆಗಳಿಗೂ ಅನ್ವಯಿಸುತ್ತದೆ.

ಶ್ರೀಗಂಧದ ಕಳ್ಳಸಾಗಣೆಯಲ್ಲಿ ತೊಡಗಿ ಸಿಕ್ಕಿಬಿದ್ದ ವಾಹನಗಳು, ಪೊಲೀಸ್‌ ಇಲಾಖೆ ಹಿಡಿದ ದ್ವಿಚಕ್ರವಾಹನಗಳಿಂದ ಹಿಡಿದು, ಅಪಘಾತಕ್ಕೆ ಒಳಗಾದ ವಾಹನಗಳು ಈ ಪಟ್ಟಿಯಲ್ಲಿ ಬರುವುದಿಲ್ಲ. ಇವುಗಳ ನಷ್ಟ ಲೆಕ್ಕ ಹಾಕಿದರಂತೂ ಗಾಬರಿಯೇ ಆದೀತು. ಕೆಲವರಿಗೆ ಇದು ಒಂದು ಚಿಕ್ಕ ವಿಷಯ ಎನ್ನಿಸೀತು. ಆದರೆ ಈ ಬಗ್ಗೆ ಗಂಭೀರವಾಗಿ ಚಿಂತಿಸಿದರೆ, ಅದರ ಮೌಲ್ಯ ತಿಳಿದೀತು. ಉತ್ತರ ಕನ್ನಡ ಜಿಲ್ಲೆಯಾಂದರಲ್ಲೇ ತುಕ್ಕು ಹಿಡಿದ ಸುಮಾರು 40 ಸರಕಾರಿ ವಾಹನಗಳು ಇವೆ. ಇವುಗಳಲ್ಲಿ ಕೆಲವಂತು ಕೊಂಡ ಕೆಲವೇ ದಿನಗಳಲ್ಲಿ ಕೆಟ್ಟು ಮೂಲೆಗುಂಪಾಗಿ ತುಕ್ಕು ಹಿಡಿದಿವೆ. ಇದರಿಂದ ಉಂಟಾಗಿರುವ ನಷ್ಟ ಕೇವಲ 50 ಲಕ್ಷ ಮಾತ್ರ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+