ಅಲೌಕಿಕ ಸಂಬಂಧದ ಸತ್ವಪರೀಕ್ಷೆ
ಚೆನ್ನೈ : ಕನ್ನಡಿಗನಲ್ಲದಿದ್ದರೂ, ಕರ್ನಾಟಕದವರೆನ್ನುವ ಹೆಮ್ಮೆಯ ತಮಿಳು ಸೂಪರ್ ಸ್ಟಾರ್ ರಜನಿ ಕಾಂತ್ ಅವರಂತೂ ರಾಜ್ ಅಪಹರಣದಿಂದ ಬಹಳ ಆತಂಕಗೊಂಡಿದ್ದಾರೆ. ಕರುಣಾನಿಧಿ ಅವರೊಂದಿಗೆ ಸತತ ಸಂಪರ್ಕ ಹೊಂದಿರುವ ರಜನಿಕಾಂತ್ ರಾಜ್ಕುಮಾರ್ ಅವರ ಬಿಡುಗಡೆಗೆ ಸಕಲ ಪ್ರಯತ್ನವನ್ನೂ ತ್ವರಿತವಾಗಿ ಮಾಡಬೇಕೆಂದು ಕರುಣಾನಿಧಿ ಅವರ ಮೇಲೆ ಪದೇ ಪದೇ ಒತ್ತಡ ಹೇರುತ್ತಲೇ ಇದ್ದಾರೆ. ರಜನಿಗೂ ರಾಜ್ ಅವರಿಗೂ ಬಿಡಿಸಲಾಗದ ಅಲೌಲಿಕ ನಂಟಿದೆ. ರಜನಿಯ ಪಾಲಿಗೆ ರಾಜ್ ಗಾಡ್ಫಾದರ್.
ರಾಜಮಾರ್ಗ: ರಜನಿಗೆ ರಾಘವೇಂದ್ರರ ಕೃಪಾಕಟಾಕ್ಷ ಒಲಿಯುವಂತೆ ಮಾರ್ಗದರ್ಶನ ನೀಡಿದವರೇ ರಾಜಕುಮಾರ್. ಪುಟ್ಟಣ ಕಣಗಾಲರ ಕಥಾಸಾಗರವೂ ಸೇರಿದಂತೆ ರಜನಿ ಕಾಂತ್ ಕನ್ನಡದ ಕೆಲವು ಚಿತ್ರಗಳಲ್ಲಿ ನಟಿಸಿದ ನಂತರ ತಮಿಳು ಚಿತ್ರರಂಗಕ್ಕೆ ಕಾಲಿಟ್ಟರು. ತಮ್ಮ ವಿಶಿಷ್ಟ ಸ್ಟೈಲ್ ಹಾಗೂ ಸ್ಟಂಟ್ನಿಂದಲೇ ತಮಿಳು ಚಿತ್ರರಸಿಕರ ಮನಗೆದ್ದ ರಜನಿ, ಯಶಸ್ಸಿನ ಬೆನ್ನೇರಿ ಹೊರಟ ಉದಯೋನ್ಮುಖ ನಟರಾಗಿದ್ದ ಕಾಲ ಅದು. ಆದರೂ ರಜನಿ ಮನದಲ್ಲಿ ಅಳುಕು. ತಮ್ಮ ನೂರನೇ ಚಿತ್ರ ಯಾವುದೇ ಕಾರಣಕ್ಕೂ ಸೋಲಬಾರದು ಎಂಬುದು ಅವರ ಆಸೆಯಾಗಿತ್ತು.
ಯಾವುದೇ ನಟನಿಗೆ ಇರಬಹುದಾದ ಆಸೆ ಇದೇ ತಾನೆ. ತನ್ನ ಚಿತ್ರ ಶತದಿನೋತ್ಸವ ಆಚರಿಸಬೇಕು ಎಂಬ ಆಸೆ ಎಲ್ಲರಿಗೂ ಇದ್ದಂತೆ ರಜನಿಗೂ ಇತ್ತು. ಅದೂ ನೂರನೇ ಚಿತ್ರ ನೂರು ದಿನ ಓಡದಿದ್ದರೆ? ಎಂಬ ಹೆದರಿಕೆ ಅವರನ್ನು ಕಾಡುತ್ತಿತ್ತು. ತಮ್ಮ ಈ ಆತಂಕವನ್ನು ಬಹಳ ಆತ್ಮೀಯರಲ್ಲಿ ತೋಡಿಕೊಳ್ಳದಿದ್ದರೆ, ಮನಸ್ಸು ಹಗುರವಾಗುವುದಾದರೂ ಎಂತು. ಆಗ ರಜನಿ ನೆನಪಿಗೆ ಬಂದವರು ಡಾ. ರಾಜ್. ರಾಜ್ಕುಮಾರ್ ಅವರ ಅಭಿನಯ. ಅವರ ಒಳ್ಳೆಯತನವನ್ನೇ ತಮ್ಮ ಆದರ್ಶ ಎಂದು ತಿಳಿದಿದ್ದ ರಜನಿ ರಾಜ್ ಅವರಲ್ಲಿ ತಮ್ಮ ಈ ಅಳಲನ್ನು ತೋಡಿಕೊಂಡರು.
ಗುರುವಿನ ಗುಲಾಮನಾಗುವ ತನಕ...: ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎಂದು ದಾಸರು ಹಾಡಿಲ್ಲವೆ. ರಜನಿಗೆ ಮುಕ್ತಿ ಮಾರ್ಗ ಹಾಗೂ ರಾಜ ಮಾರ್ಗ ತೋರಿದವರು ಡಾ. ರಾಜ್. ರಾಜ್ ಅವರು ರಜನಿಯ ಮನದಂತರಾಳದ ಕತೆಯನ್ನೆಲ್ಲಾ ಆಲಿಸಿ, ಹೆದರದಂತೆ ಅಭಯ ನೀಡಿದರು. ಗುರುರಾಯರು ಎಲ್ಲರನ್ನೂ ಕಾಪಾಡುತ್ತಾರೆ. ಚಿಂತಿಸಬೇಡಿ. ನಿಮ್ಮ ನೂರನೇ ಚಿತ್ರದಲ್ಲಿ ನೀವು ಗುರು ರಾಘವೇಂದ್ರರಾಗಿ ನಟಿಸಿ ಎಂದು ಹೇಳಿದರಂತೆ. ತಮ್ಮ ಎರಡನೇ ಮಗನಿಗೆ ರಾಘವೇಂದ್ರ ರಾಜಕುಮಾರ್ ಎಂದು ಹೆಸರಿಟ್ಟಿದ್ದೇಕೆ? ತಾವು ರಾಘವೇಂದ್ರರಾಗಿ ನಟಿಸಿದ ಸಂದರ್ಭದಲ್ಲಿ ನಡೆದ ಎಲ್ಲ ಘಟನೆಗಳನ್ನೂ ವಿವರಿಸಿದರಂತೆ.
ರಾಯರ ಕೃಪೆಯಿದ್ದರೆ, ಏನೆಲ್ಲ ಆಗಬಹುದು ಎಂಬುದನ್ನು ವಿವರಿಸಿದರಂತೆ. ರಾಜ್ ಅವರ ಮಾರ್ಗದರ್ಶನ ಪಡೆದ ರಜನಿಕಾಂತ್ ಅವರು ರಾಜ್ ಆಣತಿಯಂತೆ, ತಮ್ಮ ನೂರನೇ ಚಿತ್ರದಲ್ಲಿ ರಾಘವೇಂದ್ರರಾಗಿ ನಟಿಸಿದರಂತೆ. ಮೊದಲ ವಾರ ರಜನಿ ರಾಘವೇಂದ್ರರಾಗಿ ನಟಿಸಿದ ಆ ಚಿತ್ರ ' ರಾಘವೇಂದ್ರ " ಗಲ್ಲಾಪೆಟ್ಟಿಗೆಯಲ್ಲಿ ಸೋತು ಸೋರಗಿತಂತೆ. ದಾರಿ ಕಾಣದೆ ರಜನಿ ಮತ್ತೆ ತಮ್ಮ ಆತ್ಮೀಯರೂ, ಹಿತಚಿಂತಕರೂ ಆದ ರಾಜ್ಕಮಾರ್ ಅವರಿಗೆ ಈ ವಿಷಯ ತಿಳಿಸಿದರಂತೆ. 'ಏನೂ ಚಿಂತಿಸಬೇಡಿ, ರಾಯರಿದ್ದಾರೆ. ನಿಮ್ಮ ಚಿತ್ರ ಖಂಡಿತ ಸೂಪರ್ ಹಿಟ್ ಆಗುತ್ತದೆ. ನಿಮ್ಮ ನೂರನೇ ಚಿತ್ರ ಶತದಿನೋತ್ಸವ ಆಚರಿಸುತ್ತದೆ ರಾಯರನ್ನು ನಂಬಿ. ಅವರ ಕೃಪೆ ನಿಮಗೆ ಇದೆ " ಎಂದರಂತೆ ರಾಜ್.
ಪವಾಡವೋ ಎಂಬಂತೆ ಎರಡನೇ ವಾರದಿಂದ ಆ ಚಿತ್ರ ಬಾಕ್ಸ್ ಆಫೀಸಿನಲ್ಲಿ ರೆಕಾರ್ಡ್ ಮಾಡಿತಂತೆ. ಅಂದಿನಿಂದಲೂ ರಜನಿ ಅವರಿಗೆ ರಾಯರು ಹಾಗೂ ರಾಜ್ ಬಗ್ಗೆ ಅಪಾರವಾದ ನಂಬಿಕೆ, ವಿಶ್ವಾಸ. ಇಂದು ರಾಜ್ ಸಂಕಷ್ಟದಲ್ಲಿದ್ದಾರೆ. ನರಹಂತಕನ ಕಬಂಧಬಾಹುಗಳಲ್ಲಿ ಬಂಧಿಯಾಗಿದ್ದಾರೆ. ಅದಕ್ಕಾಗೇ ರಜನಿ ಗುರುರಾಘವೇಂದ್ರರಿಗೆ ಹಾಗೂ ಕರುಣಾನಿಧಿ ಅವರಿಗೆ ರಾಜ್ಬಿಡುಗಡೆ ಮಾಡಿಸುವಂತೆ ಸತತವಾಗಿ ಒತ್ತಾಯಿಸುತ್ತಿದ್ದಾರೆ. ಈ ವಿಷಯವನ್ನು ಸ್ವತಃ ಕರುಣಾನಿಧಿ ಭಾನುವಾರ ಮಧ್ಯಾನ್ಹದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.