ಟಾಡಾ ಆರೋಪಿಗಳ ಬಿಡುಗಡೆ ನಿರ್ಧಾರದ ವಿರುದ್ಧ ಅರ್ಜಿ
ಮೈಸೂರು : ರಾಜ್ಕುಮಾರ್ ಹಾಗೂ ಇತರ ಮೂವರ ಬಿಡುಗಡೆಗಾಗಿ ವೀರಪ್ಪನ್ ವಿಧಿಸಿರುವ ಷರತ್ತಿನನ್ವಯ ಕರ್ನಾಟಕ ಸರಕಾರ ಟಾಡಾ ಆರೋಪಿಗಳನ್ನು ಬಿಡಲೊಪ್ಪಿರುವುದನ್ನು ಮೈಸೂರು ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿದ್ದು, ರಾಜ್ ಅಪಹರಣ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ.
ಎಂಟು ವರ್ಷಗಳ ಹಿಂದೆ ವೀರಪ್ಪನ್ ರಕ್ತದಾಹಕ್ಕೆ ಬಲಿಯಾದ ಪ್ರಾಮಾಣಿಕ ಪೊಲೀಸ್ ಅಧಿಕಾರಿ ಶಕೀಲ್ ಅಹ್ಮದ್ ಅವರ ತಂದೆ ಮೈಸೂರು ನ್ಯಾಯಾಲಯದಲ್ಲಿ ಸರ್ಕಾರದ ಈ ನಿರ್ಧಾರವನ್ನು ಪ್ರಶ್ನಿಸಿದ್ದಾರೆ. ರಾಜ್ಯ ಸರಕಾರ ಟಾಡಾ ಮೊಕದ್ದಮೆಗಳನ್ನು ಕೈಬಿಡುವಂತೆ ಕೋರಿ ಮೈಸೂರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿತ್ತು.
ತಮ್ಮ ಪುತ್ರನ ಹತ್ಯೆಯೂ ಸೇರಿದಂತೆ ಹಲವು ದುಷ್ಕೃತ್ಯಗಳನ್ನು ಎಸಗಿರುವ ಆರೋಪಿಗಳ ಮೇಲಿರುವ ಟಾಡಾ ಮೊಕದ್ದಮೆಗಳ್ನು ಸರಕಾರ ಹಿಂದಕ್ಕೆ ಪಡೆಯಬಾರದು ಎಂದು ಶಕೀಲ್ ಅವರ ತಂದೆ ಅಬ್ದುಲ್ ಕರೀಂ ಈ ತಕರಾರು ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಯನ್ನು ವಿಚಾರಣೆಗೆ ಅಂಗೀಕರಿಸಿರುವ ನ್ಯಾಯಾಧೀಶರು ಪ್ರತಿವಾದಿಗಳಿಗೆ ಅರ್ಜಿಯ ಬಗ್ಗೆ ವಿವರಣೆ ಸಲ್ಲಿಸಲು ಅವಕಾಶ ನೀಡಿ, ವಿಚಾರಣೆಯನ್ನು 16ನೇ ತಾರೀಖಿಗೆ ಮುಂದೂಡಿದ್ದಾರೆ.
ಬೆಂಗಳೂರು ವರದಿ: ಈ ಮಧ್ಯೆ ರಾಜ್ಕುಮಾರ್ ಹಾಗೂ ಇತರ ಮೂವರ ಬಿಡುಗಡೆ ಪ್ರಕ್ರಿಯೆ ಸಂಬಂಧ ವೀರಪ್ಪನ್ ಮುಂದಿಟ್ಟಿರುವ ಬೇಡಿಕೆಗಳಿಗೆ ಸರಕಾರದ ಉತ್ತರ ಹಾಗೂ ಸ್ಪಷ್ಟೀಕರಣದ ಕ್ರೋಡೀಕೃತ ದಾಖಲೆಗಳು ಹಾಗೂ ಅಗತ್ಯ ಕಡತಗಳೊಂದಿಗೆ ರಾಜ್ಯದ ಗೃಹ ಕಾರ್ಯದರ್ಶಿ ಎಂ.ಬಿ. ಪ್ರಕಾಶ್ ಹಾಗೂ ಸಮನ್ವಯಾಧಿಕಾರಿ ಶ್ರೀನಿವಾಸ್ ಅವರು ಚೆನ್ನೈಗೆ ತೆರಳಿದ್ದಾರೆ ಎಂದು ಗೃಹ ಸಚಿವ ಮಲ್ಲಿಕಾರ್ಜುನ ಖರ್ಗೆ ಸೋಮವಾರ ತಿಳಿಸಿದ್ದಾರೆ.
ದಾಖಲೆಗಳೊಂದಿಗೆ ತೆರಳಿರುವ ಗೃಹ ಕಾರ್ಯದರ್ಶಿ ತಮಿಳುನಾಡಿನ ಉನ್ನತ ಅಧಿಕಾರಿಗಳ ಜತೆ ಮಾತುಕತೆ ನಡೆಸಿದ್ದಾರೆ. ಈ ಸಂಬಂಧ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಪೊಲೀಸ್ ಅಧಿಕಾರಿ ಶ್ರೀನಿವಾಸನ್ ಸಹ ಭಾಗವಹಿಸಿದ್ದರು.