ಮಂಗಳೂರು ವಿವಿ ಉಪ ಕುಲಪತಿ ವಿರುದ್ಧ ರಾಜ್ಯಪಾಲರಿಗೆ ದೂರು
ಮಂಗಳೂರು : ಮಂಗಳೂರು ವಿಶ್ವವಿದ್ಯಾನಿಲಯದ ಉಪ ಕುಲಪತಿ ಡಾ. ಎಸ್. ಗೋಪಾಲ್ ವಿರುದ್ಧ ರಾಜ್ಯಪಾಲರಿಗೆ ದೂರು ಸಲ್ಲಿಸಲು ಮಂಗಳೂರು ವಿವಿ ಕಾಲೇಜು ಉಪನ್ಯಾಸಕರ ಸಂಘಟನೆ ‘ಅಮುಕ್ತ್’ ನಿರ್ಧರಿಸಿದೆ.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅಮುಕ್ತ್ ಅಧ್ಯಕ್ಷ ಡಾ. ಕೆ. ಎಸ್. ಮಾಧವರಾವ್ ಹಾಗೂ ಪ್ರಧಾನ ಕಾಯದರ್ಶಿ ಜೋಸ್ಲನ್ ಟಿ. ಲೋಬೋ, ಉಪ ಕುಲಪತಿಗಳಲ್ಲಿ ತಮಗೆ ವಿಶ್ವಾಸ ಇಲ್ಲವಾಗಿದೆ ಎಂದರು.
ಉಪ ಕುಲಪತಿಗಳನ್ನು ಭೇಟಿಯಾಗಿ ಕೆಲ ಸಮಸ್ಯೆಗಳ ಬಗ್ಗೆ ಚರ್ಚಿಸಲು ಯತ್ನಿಸಿದರೂ ನಮಗೆ ಭೇಟಿಯ ಅವಕಾಶವನ್ನೂ ಅವರು ನೀಡುತ್ತಿಲ್ಲ. ಅದರಿಂದ ನಮಗೆ ನ್ಯಾಯ ದೊರೆಯುತ್ತಿಲ್ಲ ಎಂದು ಅವರು ದೂರಿದರು. ಪರಿಶಿಷ್ಟ ಜಾತಿ- ಪಂಗಡ ಶಿಕ್ಷಕೇತರ ಸಿಬ್ಬಂದಿ ಸಂಘಟನೆಗಳನ್ನು ವಿಭಜಿಸುವಲ್ಲಿ ಉಪಕುಲಪತಿಗಳು ಯಶಸ್ವಿಯಾಗಿದ್ದಾರೆ. ಅಮುಕ್ತ್ ವಿಭಜನೆಗೂ ಅವರು ತಂತ್ರ ರೂಪಿಸಿದ್ದಾರೆ. ಅದಕ್ಕಾಗಿ ಪ್ರಗತಿಪರ ಶಿಕ್ಷಕರ ಸಂಘಟನೆ ರೂಪಿಸಲು ಅವರು ಕುಮ್ಮಕ್ಕು ನೀಡುತ್ತಿದ್ದಾರೆಂದು ಅಮುಕ್ತ್ ಪದಾಧಿಕಾರಿಗಳು ಆಪಾದಿಸಿದರು.
ಟೀಕೆಗಳನ್ನು ತಮ್ಮ ವಿರುದ್ಧವೇ ಮಾಡಲಾಗುತ್ತಿದೆ ಎಂದು ಗೋಪಾಲ್ ಭಾವಿಸುತ್ತಿದ್ದಾರೆ. ಶಿಕ್ಷಣ ರಂಗದಲ್ಲಿರುವ ಅವರು ಸರ್ವಾಧಿಕಾರಿ ಧೋರ-ಣೆ ಬಿಟ್ಟು ಕೊಂಚವಾದರೂ ಪ್ರಜಾಪ್ರಭುತ್ವ ಮಾದರಿಯಲ್ಲಿ ವರ್ತಿಸಬೇಕು ಎಂದು ಮಾಧವರಾವ್ ಹಾಗೂ ಲೋಬೋ ಹೇಳಿದರು. ಅಮುಕ್ತ್ ನ ಮಾಜಿ ಅಧ್ಯಕ್ಷ ನರಹರಿ, ಉಪಾಧ್ಯಕ್ಷೆ ಪ್ರಸನ್ನ ಪಾರ್ವತಿ, ಜಂಟಿ ಕಾರ್ಯದರ್ಶಿ ಮೋಹಿತ್ ಕುಮಾರ್ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.