ನಮ್ಮಗಳ ಸ್ವಾತಂತ್ರವೇ ಅಪಹರಣವಾದ ಮೇಲೆ ಸಂಭ್ರಮಿಸಲು ಇನ್ನೇನಿದೆ ?
ಬೆಂಗಳೂರು : ರಾಜ್ಕುಮಾರ್ ಅಪಹರಣವಾದ ನಂತರ ಇಡೀ ರಾಜ್ಯದಲ್ಲಿ ಕೇವಲ ಶಾಲೆಕಾಲೇಜು, ಉದ್ಯಮ, ವ್ಯಾಪಾರವಲ್ಲ , ಇಡೀ ಕನ್ನಡಿಗರ ಉತ್ಸಾಹ ಕುಸಿದು ಬಿದ್ದಿದೆ. ಯಾರೋ ಮಹಾನುಭಾವರು ನಮಗೆ ಸ್ವಾತಂತ್ರ ತಂದುಕೊಟ್ಟರು. ದಾಸ್ಯ- ಸ್ವಾಂತಂತ್ರದ ಭೇದಭಾವ ತಿಳಿಯದವರ ಹಾಗೆ ನಾವಿವತ್ತು ವರ್ತಿಸುತ್ತಿದ್ದೇವೆ . ದಾಸ್ಯದ ಸಂಕೋಲೆ ಕಳಚಿಕೊಂಡ ದಿನವನ್ನು ದೇಶಭಕ್ತಿಯ ಸಂಕೇತವನ್ನಾಗಿ ಆಚರಿಸಿ ಸಂಭ್ರಮಿಸುವ ಆಸಕ್ತಿ ನಮಲ್ಲಿ ಮೊದಲೇ ಇಲ್ಲ. ಇಂಥ ಸಂದರ್ಭದಲ್ಲಿ ರಾಜ್ ಅವರಂಥ ವ್ಯಕ್ತಿ ವನವಾಸ ಅನುಭವಿಸುತ್ತಿರುವ ಹೊತ್ತಿನಲ್ಲಿ ‘ ಸ್ವಾತಂತ್ರ ದಿನದ ಶುಭಾಶಯಗಳು ’ ಎಂಬ ಪದಕ್ಕೆ ಅರ್ಥವೇ ಇರುವುದಿಲ್ಲ.
ಹೋಗಲಿ ಬಿಡಿ, ಸ್ವಾತಂತ್ರವೂ ಬೇಡ, ಸಂಭ್ರಮವೂ ಬೇಡ ಅಂದುಕೊಂಡು ಸುಮ್ಮನಿರುವುದಕ್ಕೂ ಆಗುವುದಿಲ್ಲ.
ಯಾಕೆಂದರೆ ನೆಮ್ಮದಿಯನ್ನು ಹಾಳುಗೆಡಹುವ ಶಕ್ತಿಗಳು ಹಗಲಿರುಳೂ ಕಾರ್ಯನಿರತವಾಗಿರುತ್ತವೆ. ಅದಕ್ಕೇ ಇವತ್ತು ಬೆಂಗಳೂರಿನಲ್ಲಿ ನಿಷೇಧಾಜ್ಞೆ ಇದೆ. ಕಳೆದ 15 ದಿನಗಳಿಂದ ಮುಚ್ಚಿದ್ದ ಶಾಲೆ - ಕಾಲೇಜುಗಳು ತೆರೆಯಲೋ ಬೇಡವೋ ಅಂತ ಸೋಮವಾರದಿಂದ ಪುನಾರಂಭಗೊಂಡಿವೆ. ಯಾವ ಶಾಲೆ ಕಾಲೇಜಿನಲ್ಲೂ ಸ್ವಾತಂತ್ರ ಸಂಭ್ರಮಕ್ಕೆ ಇಂಬುಕೊಡುವ ಪೂರ್ವಭಾವಿ ಸಿದ್ಧತೆಗಳು ನಡೆದಿಲ್ಲ. ಪ್ರತಿವರ್ಷ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳ ತಾಲೀಮೂ ನಡೆದಿಲ್ಲ.
ಗೃಹ ಸಚಿವರ ಮುನ್ಸೂಚನೆ : ತಮಿಳು ಉಗ್ರಗಾಮಿ ಸಂಘಟನೆಗಳು ವೀರಪ್ಪನ್ ಹಿಂದಿರುವ ಶಂಕೆ, ಸ್ವಾತಂತ್ರ್ಯ ದಿನದಂದು ವಿಧ್ವಂಸಕ ಕೃತ್ಯ ಎಸಗಲು ಕೆಲವು ಉಗ್ರಗಾಮಿ ಸಂಘಟನೆಗಳು ನಡೆಸಿರುವ ಹುನ್ನಾರಿನ ಬಗ್ಗೆ ಕೇಂದ್ರ ನೀಡಿರುವ ಎಚ್ಚರಿಕೆಯ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಬಿಗಿ ಭದ್ರತೆ ನಡೆದಿದೆ. ಗೃಹ ಸಚಿವ ಮಲ್ಲಿಕಾರ್ಜುನ ಖರ್ಗೆ ಈ ಬಗ್ಗೆ ಪೊಲೀಸರಿಗೆ ಸೂಚನೆಗಳನ್ನೂ ನೀಡಿದ್ದಾರೆ.
ಭಾನುವಾರ ರಾತ್ರಿಯಿಂದಲೇ ಬೆಂಗಳೂರೂ ಸೇರಿದಂತೆ ರಾಜ್ಯದ ಪ್ರಮುಖ ಪಟ್ಟಣಗಳಲ್ಲಿ ಪೊಲೀಸ್ ಬಂದೋಬಸ್ತ್ ಬಿಗಿಯಾಗಿತ್ತು. ಆಯಕಟ್ಟಿನ ಹಾಗೂ ಸೂಕ್ಷ್ಮ ಪ್ರದೇಶಗಳಲ್ಲಿ ರಸ್ತೆ ತಡೆಗಳನ್ನು ಇಟ್ಟು, ಅನುಮಾನ ಬಂದವನ್ನು ಪ್ರಶ್ನಿಸುವ, ವಿಚಾರಣೆಗೆ ಒಳಪಡಿಸುವ ಕಾರ್ಯ ನಡೆದಿತ್ತು. ಸೋಮವಾರವಂತೂ ಎಲ್ಲ ಶಾಲೆ - ಕಾಲೇಜುಗಳ ಮುಂದೂ ಪೊಲೀಸರ ದಂಡು. ಎಲ್ಲೆಲ್ಲೂ ಕಟ್ಟೆಚ್ಚರ.
54ನೇ ಸ್ವಾತಂತ್ರ್ಯ ದಿನಾಚರಣೆಯ ಸರಕಾರಿ ಕಾರ್ಯಕ್ರಮಗಳ ಸಿದ್ಧತೆಗೂ ಗ್ರಹಣ ಹಿಡಿದಿದೆ. ಕಾರ್ಯಕ್ರಮ ನಡೆಸಲೇ ಬೇಕೆಂಬ ಕಾರಣಕ್ಕಾಗಿ ಸಿದ್ಧತೆಗಳು ನಡೆದಿದೆಯೇ ವಿನಾ ಸಂಭ್ರಮ ಮರೆಯಾಗಿದೆ. ಆತಂಕವಂತೂ ಸವ್ರರ್ತ ಮನೆ ಮಾಡಿದೆ. ಪೊಲೀಸ್ ಹಾಗೂ ಹೊರರಾಜ್ಯಗಳಿಂದ ರಾಜ್ಯಕ್ಕೆ ಆಗಮಿಸಿರುವ ಮೀಸಲು ಪಡೆಯ ತುಕಡಿಗಳಿಗೆ ನಿದ್ದೆಗೆಡಿಸಿದೆ. ಪೊಲೀಸ್ ಸರ್ಪಗಾವಲಿನಲ್ಲಿ ಅಧಿಕೃತ ಕಾರ್ಯಕ್ರಮಗಳು ನಡೆಯುತ್ತವೆ ಎಂಬುದನ್ನು ಬಿಟ್ಟರೆ, ಮತ್ತೇನೂ ವಿಶೇಷ ಕಾಣದಾಗಿದೆ.