ನರಹಂತಕನ ಕಿರುಕುಳದಿಂದ ವಿಶ್ವ ಕನ್ನಡ ಮೇಳ ಮುಂದೆ ಹೋಗಬಹುದೇ ?
ಬೆಂಗಳೂರು : ಅಮೆರಿಕಾದ ಹೂಸ್ಟನ್ನಲ್ಲಿ ಸೆಪ್ಟೆಂಬರ್ 1ರಿಂದ 3ರವರೆಗೆ ನಡೆಯಬೇಕಿದ್ದ ವಿಶ್ವ ಕನ್ನಡ ಮೇಳ ಮುಂದೆ ಹೋಗಲಿರುವ ಸಂಭವವಿದೆ.
ಸಮ್ಮೇಳನದ ಗಣ್ಯ ಅತಿಥಿಯಾಗಿ ಮುಖ್ಯ ಮಂತ್ರಿ ಎಸ್.ಎಂ. ಕೃಷ್ಣ ತೆರಳಬೇಕಾಗಿತ್ತು. ಆದರೆ ವೀರಪ್ಪನ್ ರಾಜ್ಕುಮಾರ್ ಅವರನ್ನು ಅಪಹರಿಸಿರುವುದರಿಂದ ಉಂಟಾಗಿರುವ ಸಮಸ್ಯೆಯಿಂದಾಗಿ ಮುಖ್ಯ ಮಂತ್ರಿಗಳು ಹೂಸ್ಟನ್ಗೆ ಪ್ರಯಾಣಿಸುವುದು ಸಾಧ್ಯವಾಗುತ್ತಿಲ್ಲ.
ಮುಖ್ಯಮಂತ್ರಿಯ ಅಮೆರಿಕಾ ಭೇಟಿ ಕೇವಲ ಸಮ್ಮೇಳನದ ಗಣ್ಯ ಅತಿಥಿಯಾಗಿ ಭಾಗವಹಿಸುವುದಷ್ಟೇ ಆಗಿರಲಿಲ್ಲ. ಅಮೆರಿಕಾದ ಸಿಲಿಕಾನ್ ವ್ಯಾಲಿಗೂ ಭೇಟಿ ನೀಡಿ ಅಲ್ಲಿ ಕೆಲಸ ಮಾಡುತ್ತಿರುವ ಕನ್ನಡಿಗರೊಡನೆ ಸಮಾಲೋಚನೆ ನಡೆಸುವುದು ಮತ್ತು ಅಲ್ಲಿನ ಪ್ರತಿಷ್ಠಿತ ಸಾಫ್ಟ್ವೇರ್ ಕಂಪೆನಿಗಳಿಗೆ ಭೇಟಿ ನೀಡುವ ಉದ್ದೇಶವೂ ಅವರಿಗಿತ್ತು. ಸೆಪ್ಟೆಂಬರ್ 11ರಂದು ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಕೂಡ ಸಿಲಿಕಾನ್ ವ್ಯಾಲಿಗೆ ಭೇಟಿ ನೀಡಲಿದ್ದು, ಅಲ್ಲಿನ ಕನ್ನಡಿಗರಿಗೆ ಇಬ್ಬರನ್ನೂ ಒಂದೇ ವೇದಿಕೆಯಲ್ಲಿ ಕಾಣುವ, ಮಾತಾಡಿಸುವ ಬಯಕೆಯಿತ್ತು. ವೀರಪ್ಪನ್, ತಮಿಳರ ಪರವಾದ ಬೇಡಿಕೆಗಳ ಪಟ್ಟಿಯನ್ನು ಕರ್ನಾಟಕ ಸರಕಾರದ ಮುಂದಿಟ್ಟಿದ್ದು ರಾಜ್ಕುಮಾರ್ ಬಿಡುಗಡೆ ಮತ್ತಷ್ಟು ತಡವಾಗುತ್ತಿದೆ. ಈ ಎಲ್ಲಾ ಹಿನ್ನೆಲೆಯಲ್ಲಿ ವಿಶ್ವ ಕನ್ನಡ ಸಮ್ಮೇಳನವನ್ನು ಮುಂದೂಡುವ ಎಲ್ಲ ಸಾಧ್ಯತೆಗಳು ಕಂಡು ಬರುತ್ತಿವೆ.