95ಲಕ್ಷ ರೂ. ಜೀವವಿಮೆ ಮಾಡಿಸಿದ ನಂತರ ಕಾಡಿಗೆ ತೆರಳಿದ ಗೋಪಾಲ್
ಚಾಮರಾಜ ನಗರ : ರಾಜ್ಕುಮಾರ್ ಮತ್ತಿತರರನ್ನು ಅಪಹರಿಸಿದ ನರಹಂತಕ ವೀರಪ್ಪನ್ ಬಳಿಗೆ ಸಂಧಾನಕಾರನಾಗಿ ತೆರಳಿದ್ದ ನಕ್ಕೀರ್ ಗೋಪಾಲ್, ಕಾಡಿಗೆ ಹೋಗುವ ಮುನ್ನ ತನ್ನ ಸಹಚರರಿಗೂ ಸೇರಿದಂತೆ ಒಟ್ಟು 95 ಲಕ್ಷ ರೂಪಾಯಿಗಳ ಜೀವ ವಿಮೆ ಮಾಡಿಸಿರುವುದು ವರದಿಯಾಗಿದೆ.
ನಕ್ಕೀರನ್ ಸಂಪಾದಕ ಗೋಪಾಲ್ ಮತ್ತು ವರದಿಗಾರರಾದ ಶಿವಸುಬ್ರಹ್ಮಣ್ಯ, ಸುಬ್ಬು, ಹಾಗೂ ಚಾಲಕ ಬಾಲ ಮುರುಗನ್, ಆಟೋ ಸುಂದರ್ ಜೀವ ವಿಮೆ ಮಾಡಿಸಿಕೊಂಡವರು. ಗೋಪಾಲ್, ರಾಜ್ ಅಪಹರಣ ಕುರಿತಂತೆ ವೀರಪ್ಪನ್ನನ್ನು ಭೇಟಿಯಾಗಲು ಕಾಡಿಗೆ ತೆರಳುವ ಮುನ್ನ ಈ ಎಲ್ಲ ಮುನ್ನೆಚ್ಚರಿಕೆ ತೆಗೆದುಕೊಂಡೇ ಹೊರಟಿದ್ದಾರೆ. ನಕ್ಕೀರನ್ ಬಳಗದ ಐದು ಮಂದಿ ಒಟ್ಟು 95 ಲಕ್ಷ ರೂಪಾಯಿಯ ವಿಮೆ ಮಾಡಿಸಿಕೊಂಡ ವಿಷಯವನ್ನು ಸ್ವತಃ ಗೋಪಾಲ್ ಅವರೇ ತಮ್ಮ ನಕ್ಕೀರನ್ ಪತ್ರಿಕೆಯಲ್ಲಿ ಪ್ರಕಟಿಸಿದ್ದಾರೆ. ಆದರೆ ಈ ಹಿಂದೆ ವೀರಪ್ಪನ್ನನ್ನು ಭೇಟಿಯಾಗಲು ಕಾಡಿಗೆ ತೆರಳಿದ ಸಂದರ್ಭದಲ್ಲಿ ಗೋಪಾಲ್ ವಿಮೆ ಮಾಡಿಸಿರಲಿಲ್ಲ.
ವೀರಪ್ಪನ್, ತಮಿಳು ವಿಮೋಚನಾ ಸೇನೆಯಾಂದಿಗೆ ಒಪ್ಪಂದ ಮಾಡಿಕೊಂಡಿರುವುದಾಗಿ ಸುಮಾರು ನಾಲ್ಕು ತಿಂಗಳ ಹಿಂದೆ ನಕ್ಕೀರನ್ ಸಂಚಿಕೆಯಲ್ಲಿ ವರದಿಯಾಗಿತ್ತು. ಈ ಹಿನ್ನೆಲೆಯಲ್ಲಿ ತಮಿಳು ವಿಮೋಚನಾ ಸೇನೆಯಿಂದ ಗೋಪಾಲ್ಗೆ ಜೀವ ಬೆದರಿಕೆಯೂ ಬಂದಿರುವುದರಿಂದ ಜೀವ ವಿಮೆ ಮಾಡಿಸಬೇಕಾಯಿತು ಎಂದು ತಿಳಿದು ಬಂದಿದೆ.