ಸರ್ಕಾರದ ಪ್ರತಿಕ್ರಿಯೆಯಾಂದಿಗೆ ನಕ್ಕೀರನ್ ದೂತ ಕಾಡಿಗೆ
ನ್ನೈ : ವೀರಪ್ಪನ್ ಬೇಡಿಕೆಗಳ ಬಗೆಗಿನಸರ್ಕಾರದ ಪ್ರತಿಕ್ರಿಯೆಯನ್ನು ನಕ್ಕೀರನ್ ಪತ್ರಿಕೆಯ ಬಳಗದ ದೂತನೊಬ್ಬ ವೀರಪ್ಪನ್ಗೆ ತಲುಪಿಸುತ್ತಾನೆ. ದೂತ ಭಾನುವಾರ ರಾತ್ರಿ ವೀರಪ್ಪನ್ ಅಡಗುದಾಣಕ್ಕೆ ತೆರಳುತ್ತಾನೆ. ಈ ವಿಷಯವನ್ನು ಬಾನುಲಿ ಮೂಲಕ ಬಿತ್ತರಿಸಲಾಗುವುದು ಎಂದು ತಮಿಳುನಾಡಿನ ಮುಖ್ಯಮಂತ್ರಿ ಎಂ. ಕರುಣಾನಿಧಿ ತಿಳಿಸಿದ್ದಾರೆ.
ಭಾನುವಾರ ಮಧ್ಯಾಹ್ನ ಸುಮಾರು ಎರಡೂವರೆ ಗಂಟೆಗಳ ಕಾಲ ನಡೆದ ಉಭಯ ರಾಜ್ಯಗಳ ಮುಖ್ಯಮಂತ್ರಿಗಳ ಸಭೆಯ ನಂತರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು, ವೀರಪ್ಪನ್ ಬೇಡಿಕೆಗಳು ತಮಿಳುನಾಡು ಬಗೆಗೆ ಅವನಿಗಿರುವ ಸಹಾನುಭೂತಿಯನ್ನು ಸ್ಪಷ್ಟಪಡಿಸುತ್ತದೆ. ಇದೇ ಸಹಾನುಭೂತಿಯನ್ನು ಕನ್ನಡಿಗರ ಬಗೆಗೂ ತೋರುತ್ತಾನೆನ್ನುವ ವಿಶ್ವಾಸವಿದೆ ಎಂದರು.
ಪ್ರಕರಣದ ವಿಷಯದಲ್ಲಿ ಸರ್ಕಾರ ಪಾರದರ್ಶಕವಾಗಿಲ್ಲ ಎನ್ನುವ ಸುದ್ದಿಗಾರರ ಪ್ರಶ್ನೆಗೆ, ಇಡೀ ಪ್ರಕರಣ ಕಾಡಿನಲ್ಲಿ ನಡೆಯುತ್ತಿರುವಾಗ ಪಾರದರ್ಶಕತೆ ಎಲ್ಲಿ ಸಾಧ್ಯ ? ಎಂದು ಕರುಣಾನಿಧಿ ಮರು ಪ್ರಶ್ನೆ ಹಾಕಿದರು. ಪ್ರಕರಣದಲ್ಲಿ ಉಭಯ ರಾಜ್ಯಗಳ ಜನತೆಯ ಹಿತಾಸಕ್ತಿ ಅಡಗಿರುವುದರಿಂದ ಮಾಧ್ಯಮಗಳು ಸಮಸ್ಯೆಯನ್ನು ಜಟಿಲಗೊಳಿಸದಂತೆ ಅವರು ಮನವಿ ಮಾಡಿಕೊಂಡರು.
ಬೆಂಗಳೂರಿನಲ್ಲಿ ಇನ್ನೂ 150 ಜನರ ಬಂಧನ : ಬೇಡಿಕೆಗಳನ್ನೊಳಗೊಂಡ ಕ್ಯಾಸೆಟ್ಟನ್ನು ವೀರಪ್ಪನ್ ಕಳುಹಿಸಿದ ನಂತರ ಬೆಂಗಳೂರಿನ ಕೆಲವು ಪ್ರದೇಶಗಳಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ ಎನ್ನುವ ವದಂತಿಗಳನ್ನು ನಗರ ಪೊಲೀಸ್ ಕಮೀಷನರ್ ಟಿ. ಮಡಿಯಾಳ್ ನಿರಾಕರಿಸಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಇನ್ನೂ 150 ಜನರನ್ನು ಬಂಧಿಸಲಾಗಿದ್ದು, ಬಂಧಿತರ ಸಂಖ್ಯೆ 900 ಕ್ಕೆ ಏರಿದೆ. ನಗರದಲ್ಲಿ ಶಾಂತ ಪರಿಸ್ಥಿತಿ ಇದ್ದು , ಶಾಂತಿ ಕದಡುವಂತಹ ಯಾವ ಪ್ರಕರಣಗಳೂ ವರದಿಯಾಗಿಲ್ಲ ಎಂದು ಮಡಿಯಾಳ್ ತಿಳಿಸಿದ್ದಾರೆ.