ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೇಡಿಕೆಗಳ ಬಗ್ಗೆ ಗೌಪ್ಯ ಮಾತುಕತೆ, ರಾಜ್ಯಾದ್ಯಂತ ಹೋಮ, ಹವನ..

By Super
|
Google Oneindia Kannada News

ಬೆಂಗಳೂರು: ವೀರಪ್ಪನ್‌ ಕಳುಹಿಸಿರುವನೆನ್ನಲಾಗಿರುವ ಕ್ಯಾಸೆಟ್‌ ಸರಕಾರದ ಕೈಸೇರಿದೆ. ಆದರೆ, ವೀರಪ್ಪನ್‌ ಬೇಡಿಕೆಗಳ ಕುರಿತು ಎರಡೂ ಸರಕಾರಗಳು ಈವರೆಗೂ ಬಾಯಿ ಬಿಟ್ಟಿಲ್ಲ. ಇಬ್ಬರೂ ಮುಖ್ಯಮಂತ್ರಿಗಳು ತಮ್ಮ ರಾಜ್ಯಗಳ ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ.

ರಾಜ್ಯದ ಮುಖ್ಯಮಂತ್ರಿ ಕೃಷ್ಣ ಅವರು ಬಿಕ್ಕಟ್ಟು ನಿವಾರಣಾ ಸಮಿತಿ ಹಾಗೂ ಪ್ರತಿಪಕ್ಷಗಳ ನಾಯಕರೊಂದಿಗೆ ಮಾತುಕತೆ ಮುಗಿಸಿದ್ದಾರೆ. ಬಿಕ್ಕಟ್ಟಿನ ಸಂಬಂಧ ಸರಕಾರ ತೆಗೆದುಕೊಳ್ಳುವ ನಿರ್ಧಾರಕ್ಕೆ ತಾವು ಬದ್ಧರಾಗಿರುವುದಾಗಿ ಪ್ರತಿಪಕ್ಷ ನಾಯಕರು ಪುನರುಚ್ಚರಿಸಿದ್ದಾರೆ. ಬೇಡಿಕೆ ಕುರಿತ ಚರ್ಚೆಯ ಎಲ್ಲ ಸಭೆಗಳೂ ಅತ್ಯಂತ ಗೌಪ್ಯವಾಗಿ ನಡೆದಿರುವುದು ವಿಶೇಷ.

ಎಲ್ಲ ಬೇಡಿಕೆಗಳನ್ನೂ ಕರ್ನಾಟಕವೇ ಈಡೇರಿಸಬೇಕೆ ಎಂಬ ಪ್ರಶ್ನೆಗೆ ಹಾಗೇನೂ ಇಲ್ಲ ಎಂದು ಹೇಳಿರುವ ಕೃಷ್ಣ ಈ ಕುರಿತು ಕರುಣಾನಿಧಿ ಅವರೊಂದಿಗೆ ಚರ್ಚೆ ನಡೆಸುವುದಾಗಿ ತಿಳಿಸಿದ್ದಾರೆ. ಭಾನುವಾರ ಬೆಳಗ್ಗೆ ಮುಖ್ಯಮಂತ್ರಿ ಕೃಷ್ಣ ಉನ್ನತ ಅಧಿಕಾರಿಗಳ ತಂಡದೊಂದಿಗೆ ಚೆನ್ನೈಗೆ ತೆರಳಿ, ಕರುಣಾನಿಧಿ ಅವರೊಂದಿಗೆ ಮಾತುಕತೆ ನಡೆಸಿದ ಬಳಿಕವಷ್ಟೇ ಬೇಡಿಕೆಗಳ ಬಗ್ಗೆ ನಿಖರವಾದ ಮಾಹಿತಿ ದೊರಕಲು ಸಾಧ್ಯ.

ಸರ್ಕಾರದಿಂದ ದುರ್ಗಾ ಹೋಮ : ರಾಜ್‌ ಅವರ ಸುರಕ್ಷಿತ ಬಿಡುಗಡೆಗೆ ರಾಜ್ಯ ಸರಕಾರ ವಿಶೇಷ ದುರ್ಗಾ ಹೋಮ ಹಮ್ಮಿಕೊಂಡಿದೆ ಎಂದು ಮುಜರಾಯಿ ಸಚಿವ ಬಾಬೂರಾವ್‌ ಚಿಂಚನಸೂರ್‌ ಶನಿವಾರ ತಿಳಿಸಿದ್ದಾರೆ. ಈ ಮಧ್ಯೆ ರಾಜ್ಯಾದ್ಯಂತ ಹವನ, ಹೋಮ, ವಿಶೇಷ ಪೂಜಾಕಾರ್ಯಗಳು ನಡೆಯುತ್ತಲೇ ಇವೆ. ಜೆ.ಪಿ ನಗರದ ವೆಂಕಟರಮಣಸ್ವಾಮಿ ದೇವಾಲಯದಲ್ಲಿ ನಟ ಮತ್ತು ಸಂಸದ ಅಂಬರೀಶ್‌ ನೇತೃತ್ವದಲ್ಲಿ ಶನಿವಾರ ವಿಶೇಷ ಪೂಜೆ ನಡೆಯಿತು. ಹವನ ಹೋಮಗಳನ್ನೂ ಏರ್ಪಡಿಸಲಾಗಿತ್ತು. ಚಿತ್ರನಟ - ನಟಿಯರಾದ ಶಿವರಾಂ, ಸುಮಲತಾ, ವೈಶಾಲಿ ಕಾಸರವಳ್ಳಿ, ಭಾರತಿ ವಿಷ್ಣುವರ್ಧನ್‌, ಗಿರಿಜಾ ಲೋಕೇಶ್‌, ರಾಜ್‌ ಪುತ್ರ ಪುನೀತ್‌, ಜಯಂತಿ, ಜಗ್ಗೇಶ್‌ ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.

ರಾಜ್ಯಾದ್ಯಂತ ರಾಜ್‌ ಬಿಡುಗಡೆಗಾಗಿ ಮೃತ್ಯುಂಜಯ ಹೋಮ, ಗಣಪತಿ ಹೋಮ, ಶನಿಶಾಂತಿಯೇ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳು ಜರುಗಿವೆ. ಸಾವಿರಾರು ಸಂಖ್ಯೆಯಲ್ಲಿ ರಾಜ್‌ಕುಮಾರ್‌ ಅಭಿಮಾನಿಗಳು ರಾಜ್ಯಾದ್ಯಂತ ಇರುವ ನಾನಾ ದೇವಾಲಯಗಳಲ್ಲಿ ವಿಶೇಷ ಪ್ರಾರ್ಥನೆ, ಪೂಜೆ ಸಲ್ಲಿಸಿದ್ದಾರೆ.

ಸರದಿ ಉಪವಾಸ: ರಾಜ್‌ ಬಿಡುಗಡೆಗಾಗಿ ಚಲನಚಿತ್ರ ನಿರ್ದೇಶಕರ ಸಂಘ ಹಮ್ಮಿಕೊಂಡಿರುವ ಸರದಿ ಉಪವಾಸ ಸತ್ಯಾಗ್ರಹ ಮುಂದುವರಿದಿದೆ. ಶನಿವಾರದ ಉಪವಾಸ ಮುಷ್ಕರದ ನೇತೃತ್ವವನ್ನು ನಿರ್ದೇಶಕ ನಾಗಾಭರಣ ವಹಿಸಿದ್ದರು. ಫಣಿ ರಾಮಚಂದ್ರ ಅವರು ವಿಷ್ಣು ಸಮಸ್ರನಾಮ ಪಠಿಸಿ ರಾಜ್‌ ಕುಮಾರ್‌ ಅವರ ಬಿಡುಗಡೆಗಾಗಿ ದೇವರನ್ನು ಪ್ರಾರ್ಥಿಸಿದರು. ದೇಶದ ನಾನಾ ಭಾಗಗಳಲ್ಲಿ ಇರುವ ಕನ್ನಡಿಗರು ಹಾಗೂ ಕಡಲಾಚೆಯ ಕನ್ನಡಿಗರು ಸಹ ರಾಜ್‌ಕುಮಾರ್‌ ಅವರ ಬಿಡುಗಡೆಗೆ ವಿಶೇಷ ಪೂಜೆ ನಡೆಸಿದ ವರದಿಗಳು ಬಂದಿವೆ.

English summary
confidential meeting
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X