ಹಲ್ದ್ವಾನಿಯ ಸತಿಂದರ್ ಸಿಂಗ್ ರಾತ್ರೋರಾತ್ರಿ ಲಕ್ಷಾಧಿಪತಿಯಾದ್ದು...
ವದೆಹಲಿ : ಮಲೆನಾಡು ನೈನಿತಾಲ್ ಬಳಿಯ ಪುಟ್ಟ ಶಹರ ಹಲ್ದ್ವಾನಿಯ ಸತಿಂದರ್ ಸಿಂಗ್ಗೆ ಬಿಡುವೇ ಇಲ್ಲ. ದೂರವಾಣಿಯಲ್ಲಿ ಅಭಿನಂದನೆಯ ಮಹಾಪೂರ. ಯಾಕೆ ಎಂದಿರಾ? ಚಿಟಿಕೆ ಹೊಡೆಯೋ ಅಷ್ಟರಲ್ಲಿ ಅವರು ಲಕ್ಷಾಧಿಪತಿಯಾಗಿದಾರೆ!
ಅಮಿತಾಭ್ ಬಚ್ಚನ್ ನಡೆಸಿಕೊಡುವ ಸ್ಟಾರ್ ಟಿವಿ ಪ್ರಸಾರ ಮಾಡುತ್ತಿರುವ ಕೌನ್ ಬನೇಗಾ ಕರೋಡ್ಪತಿ ಕಾರ್ಯಕ್ರಮದ ಗುರುವಾರದ ಕಂತಿನಲ್ಲಿ (ಆಗಸ್ಟ್ 3) ಸತಿಂದರ್ 12 ಪ್ರಶ್ನೆಗಳಿಗೆ ಸರಿಯುತ್ತರ ಕೊಟ್ಟರು. ಹನ್ನೆರಡೂವರೆ ಲಕ್ಷ ಹೊತ್ತು ತಂದರು. ಇನ್ನು ಮೂರು ಪ್ರಶ್ನೆಗಳಿಗೆ ಸರಿಯುತ್ತರ ಕೊಟ್ಟಿದ್ದರೆ ಒಂದು ಕೋಟಿ ಇವರ ಪಾಲಾಗುತ್ತಿತ್ತು. ಹದಿಮೂರನೇ ಪ್ರಶ್ನೆಯಲ್ಲಿ ಗೊಂದಲಕ್ಕೆ ಬಿದ್ದ ಸತಿಂದರ್ ಕರೋಡ್ಪತಿ ಆಟ ಬಿಟ್ಟು ಕೊಟ್ಟರು. ಇದಕ್ಕೆ ಕಾರಣವಿಷ್ಟೆ- ಅವರು ಮೂರೂ ಲೈಫ್ಲೈನ್(ಯಾರಿಗಾದರೂ ಫೋನಾಯಿಸಿ, ವೀಕ್ಷಕರ ಮತಕ್ಕೆ ಹಾಕಿ ಹಾಗೂ ಎರಡು ತಪ್ಪುತ್ತರಗಳನ್ನು ಅಳಿಸಿ ಹಾಕಿ ಉಳಿಯುವ ಎರಡೇ ಛಾಯ್ಸ್ ಉಪಯೋಗಿಸಿ ಉತ್ತರ ಹೇಳುವುದು) ಉಪಯೋಗಿಸಿಬಿಟ್ಟಿದ್ದರು. 13ನೇ ಪ್ರಶ್ನೆಗೆ ತಪ್ಪು ಉತ್ತರ ಕೊಟ್ಟಿದ್ದರೆ ಸಿಗುತ್ತಿದ್ದುದು 3,20000 ಮಾತ್ರ. ನಂತರ ಅಮಿತಾಭ್, ಗೆಸ್ ಮಾಡೋದಾದರೆ ನಿಮ್ಮ ಉತ್ತರ ಏನಾಗುತ್ತಿತ್ತು ಎಂದು ಕೇಳಲು, ಇವರು ಆರಿಸಿದ ಉತ್ತರ ಸರಿಯಾಗೇ ಇತ್ತು. ಆದರೆ ಅಲ್ಲಿಗೆ ಆಟ ಮುಗಿದಿತ್ತು.
ಸತಿಂದರ್ ಈ ಕಾರ್ಯಕ್ರಮಕ್ಕೆ ಆಯ್ಕೆಯಾದದ್ದು ಅವರ ಪತ್ನಿಯ ದೆಸೆಯಿಂದ. ಒಂದು ಸಂಜೆ ಸುಮ್ಮನೆ ಪ್ರಯತ್ನಿಸೋಣ ಎಂದು ಕರೋಡ್ಪತಿ ನಂಬರ್ಗೆ ಫೋನಾಯಿಸಿದರು. ಪ್ರಯತ್ನಿಸಿದ 2ನೇ ಕರೆಗೇ ಇವರ ಹೆಸರು ನೋಂದಾಯಿತವಾಯಿತು. ಗೆಳೆಯರು, ಬಂಧುಗಳು ಗೆದ್ದು ಬನ್ನಿ ಎಂದು ಹಾರೈಸಿ ಮುಂಬೈಗೆ ಕಳಿಸಿದರು(ಕಾರ್ಯಕ್ರಮದ ಚಿತ್ರೀಕರಣ ನಡೆಯುವುದು ಇಲ್ಲೇ). ಹದಿನೈದು- ಇಪ್ಪತ್ತು ನಿಮಿಷ ಕರೋಡ್ಪತಿ ಆಟವಾಡಿದ ಸತಿಂದರ್ ಲಕ್ಷಾಧಿಪತಿಯಾದರು. ಮತ್ತೊಂದು ಒಳ್ಳೆ ವಿಷಯ ಅಂದರೆ ಇವರು ಗೆದ್ದಿರೋ ಹಣದ ಪ್ರತಿಶತ 10ರಷ್ಟನ್ನು ಸಮಾಜ ಸೇವೆಗೆ ವಿನಿಯೋಗಿಸುತ್ತಾರಂತೆ. ಇವರ ಗೆಲುವನ್ನು ಇಡೀ ಹಲ್ದ್ವಾನಿ ಆಚರಿಸುತ್ತಿದೆ.
ಕೆಲವೇ ನಿಮಿಷಗಳಲ್ಲಿ ನೀವು ಲಕ್ಷಾಧಿಪತಿಯಾಗಿದ್ದೀರಿ. ಇದಕ್ಕೆ ನಿಮ್ಮ ಪ್ರತಿಕ್ರಿಯೆ ಏನು ಎಂಬ ಪ್ರಶ್ನೆಗೆ ಸತಿಂದರ್, 'ಇದೊಂದು ಜಾದೂ ಇದ್ದಂತೆ" ಎನ್ನುತ್ತಾರೆ.(ಐಎಎನ್ಎಸ್)