ವೀರಪ್ಪನ್- ಗೋಪಾಲ್ ಮುಖಾಮುಖಿ ಆಗಿಲ್ಲ : ಕರುಣಾನಿಧಿ
ಚೆನ್ನೈ : ತನ್ನ ಬೇಡಿಕೆಗಳೇನು ಎಂಬುದನ್ನು 2 ಕ್ಯಾಸೆಟ್ಗಳಲ್ಲಿ ವೀರಪ್ಪನ್ ಕಳುಹಿಸಿದ್ದಾನೆ. ಒಂದನ್ನು ಕರ್ನಾಟಕದ ಮುಖ್ಯಮಂತ್ರಿ ಕೃಷ್ಣ ಅವರಿಗೆ ನೀಡಲು ಸೂಚಿಸಿದ್ದು , ಮತ್ತೊಂದನ್ನು ನನಗೆ ಕಳಿಸಿಕೊಟ್ಟಿದ್ದಾನೆ ಎಂದು ತಮಿಳುನಾಡು ಮುಖ್ಯಮಂತ್ರಿ ಕರುಣಾನಿಧಿ ತಿಳಿಸಿದ್ದಾರೆ.
ನಕ್ಕೀರನ್ ಪತ್ರಿಕೆಯ ಸಂಪಾದಕ ಗೋಪಾಲ್ ವೀರಪ್ಪನ್ ಅನ್ನು ಇನ್ನೂ ಭೇಟಿಯಾಗಿಲ್ಲ. ಶನಿವಾರ ಸಂಜೆ ಹೊತ್ತಿಗೆ ಭೇಟಿಯಾಗುವ ಸಾಧ್ಯತೆಗಳಿವೆ ಎಂದು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ವೀರಪ್ಪನ್ ಬೇಡಿಕೆಗಳ ಬಗೆಗೆ ಕೃಷ್ಣ ಅವರು ಭಾನುವಾರ ಇಲ್ಲಿಗೆ ಬಂದ ನಂತರ ಚರ್ಚಿಸಲಾಗುವುದು. ಎರಡು ಕ್ಯಾಸೆಟ್ಗಳ ಪೈಕಿ ಒಂದನ್ನು ಕರ್ನಾಟಕದ ಐಪಿಎಸ್ ಅಧಿಕಾರಿ ಕೆ.ಆರ್. ಶ್ರೀನಿವಾಸನ್ ಮೂಲಕ ಕೃಷ್ಣ ಅವರಿಗೆ ಕಳಿಸಿಕೊಡಲಾಗಿದೆ ಎಂದು ತಮಿಳುನಾಡು ಮುಖ್ಯಮಂತ್ರಿ ತಿಳಿಸಿದ್ದಾರೆ.
ನಕ್ಕೀರನ್ ಪತ್ರಿಕೆಯಲ್ಲಿ ತಮಿಳುನಾಡಿನ ವಿಶೇಷ ಕಾರ್ಯಪಡೆ ವೀರಪ್ಪನ್ ವಿರುದ್ಧ ತನ್ನ ಕಾರ್ಯಾಚರಣೆ ಮುಂದುವರೆಸಿದೆ ಎಂದು ಪ್ರಕಟಿಸಿರುವ ಹಿನ್ನೆಲೆಯಲ್ಲಿ , ವಿಶೇಷ ಪಡೆ ತನ್ನ ಕಾರ್ಯಾಚರಣೆಯನ್ನು ಸಂಪೂರ್ಣವಾಗಿ ನಿಲ್ಲಿಸಿದೆ ಎಂದು ಅವರು ಸ್ಪಷ್ಟೀಕರಣ ನೀಡಿದ್ದಾರೆ. ವೀರಪ್ಪನ್ ಬೇಡಿಕೆ ಪೂರೈಸಲು ಗಡುವನ್ನೇನಾದರೂ ಕೊಟ್ಟಿದ್ದಾನೆಯೇ ಎಂಬ ಪ್ರಶ್ನೆಗೆ, ಇಲ್ಲ ಅಂದ್ಕೊಂಡಿದೀನಿ ಎಂದು ಮಾತ್ರ ಉತ್ತರಿಸಿದ್ದಾರೆ. (ಯುಎನ್ಐ)