ಸೆಂಚುರಿ ಬಾರಿಸಿದ ಮಾರಿಕಣಿವೆ
ಚಿತ್ರ ದುರ್ಗದ ವಾಣಿವಿಲಾಸ ಸಾಗರಕ್ಕೆ ನೂರು ವರ್ಷ ತುಂಬುತ್ತಿದೆ. ಏಷ್ಯಾದಲ್ಲಿ ನಿರ್ಮಿಸಲ್ಪಟ್ಟ ಪ್ರಥಮ ಜಲಾಶಯ ಎಂಬ ಖ್ಯಾತಿ ಇದಕ್ಕಿದೆ. ಇಂದಿನ ಇಂಜಿನಿಯರ್ಗಳ ಕೌಶಲ್ಯಕ್ಕೆ ಸವಾಲಾಗಿ ನಿಂತಿರುವ ವಾಣಿ ವಿಲಾಸ ಸಾಗರವನ್ನು ಕಟ್ಟಿದವರು ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದ ತಂತ್ರಜ್ಞರು. ಆಗಿನ ಕಾಲದಲ್ಲಿ ಮೈಸೂರಿನ ದಿವಾನರಾಗಿದ್ದ ಶೇಷಾದ್ರಿ ಅಯ್ಯರ್ ಅವರ ನೇತೃತ್ವದಲ್ಲಿ ಅಣೆಕಟ್ಟು ನಿರ್ಮಾಣವಾಗಿತ್ತು.
ಚಿತ್ರದುರ್ಗದ ವೇದಾವತೀ ನದಿಗೆ ಕಟ್ಟಿದ ಅಣೆಕಟ್ಟಿಗೆ ನೂರು ವರ್ಷ ತುಂಬುತ್ತಿದ್ದರೂ ಅಣೆಕಟ್ಟಿನ ರಮಣೀಯ ನೋಟಕ್ಕೆ ಚ್ಯುತಿ ಬಂದಿಲ್ಲ. ಬೆಂಗಳೂರಿನಿಂದ 180 ಕಿ. ಮಿ. ಚಿತ್ರದುರ್ಗದಿಂದ 18 ಕಿ.ಮೀ ದೂರದ ಹಿರಿಯೂರಿನಲ್ಲಿ ರುವ ಈ ನಾಲೆಯ ಮೂಲ ಹೆಸರು ಮಾರಿಕಣಿವೆ. ಕೃಷ್ಣರಾಜ ಒಡೆಯರ ಪ್ರೋತ್ಸಾಹದಲ್ಲಿ ಆರಂಭವಾಗಿರುವುದರಿಂದ ಇದಕ್ಕೆ ಕೃಷ್ಣರಾಜ ಸಮುದ್ರವೆಂಬ ಹೆಸರೂ ಇದೆ. ಆದರೆ ಈ ನಾಲೆಯ ಕೆಲಸ ಆರಂಭವಾಗುವಾಗ ಅವರು ಅಪ್ರಾಪ್ತ ವಯಸ್ಕರಾಗಿದ್ದರು. ಆಡಳಿತವನ್ನು ಅವರ ತಾಯಿ ಕೆಂಪನಂಜಮ್ಮಣ್ಣಿಯವರು ವಾಣಿವಿಲಾಸ ಎಂಬ ಸನ್ನಿಧಾನ ಹೆಸರಿನಲ್ಲಿ ನೋಡಿಕೊಳ್ಳುತ್ತಿದ್ದರು. ಆದ್ದರಿಂದ ಸಹಜವಾಗಿಯೇ ಇದಕ್ಕೆ ವಾಣಿ ವಿಲಾಸ ಸಾಗರ ಎನ್ನುವ ಹೆಸರೂ ಬಂದಿದೆ.
ಜಲಾಶಯ 1330 ಅಡಿಗಳಷ್ಟು ಉದ್ದವಿದೆ. 142 ಅಡಿ ಎತ್ತರವಿದೆ. 1898ರಲ್ಲಿ ಈ ನಾಲೆಯ ಕೆಲಸವನ್ನು ಆರಂಭಿಸಲಾಗಿತ್ತು. ಒಂಭತ್ತು ವರ್ಷಗಳ ನಿರಂತರ ಕೆಲಸದ ನಂತರ ಅಣೆಕಟ್ಟು ಎದ್ದು ನಿಂತಿತು. ಈಗ ನೂರುವರ್ಷ ಪೂರೈಸುತ್ತಿರುವ ನಾಲೆಗೆ ಅಂದು ಖರ್ಚಾಗಿರುವುದು 45 ಲಕ್ಷ ರುಪಾಯಿ.
ಎರಡು ಬೆಟ್ಟಗಳ ನಡವೆ ಇರುವ ಜಲಾಶಯದ ಸೌಂದರ್ಯ ಪ್ರವಾಸಿಗರನ್ನು ಸೆಳೆಯುತ್ತಿದೆ. ಆದರೆ ಆಧುನಿಕ ಪ್ರವಾಸೀ ತಾಣವಾಗಿ ವಾಣಿ ವಿಲಾಸ ಸಾಗರ ಬೆಳೆದಿಲ್ಲ . ಯಾಕೆಂದರೆ ಸರಕಾರದ ಬಳಿ ಹಣವಿಲ್ಲ. ಇದು ಸರಕಾರದ ಭಾಷೆ. ನಮ್ಮ ಭಾಷೆಯಲ್ಲಿ ಹೇಳುವುದಾದರೆ ಸರಕಾರಕ್ಕೆ ಮನಸ್ಸಿಲ್ಲ.