Get Updates
Get notified of breaking news, exclusive insights, and must-see stories!

ಶುಭಸಂಕಲ್ಪ : ನಿಮ್ಮ ಧರ್ಮ ನೀವು ಪಾಲಿಸಿ

Don't get your mind diverted
ಎಲ್ಲರಲ್ಲೂ ಒಳ್ಳೆತನವಿದೆ, ಎಲ್ಲರಲ್ಲೂ ಪರರ ಬಗ್ಗೆ ಕಾಳಜಿ ಇದೆ. ಆದರೆ ಅದು ಕಷ್ಟದ ಸಮಯದಲ್ಲಿ ಬದಲಾಗದೆ ಸ್ಥಿರವಾಗಿ ಇರಬಲ್ಲೆದೆ? ಪರೀಕ್ಷೆಯನ್ನು ಯಶಸ್ವಿಯಾಗಿ ದಾಟಬಲ್ಲದೆ? ಎಂಬುದರ ಮೇಲೆ ವ್ಯಕ್ತಿತ್ವದ ಗಟ್ಟಿತನದ ನಿರ್ಧಾರವಾಗುತ್ತದೆ. ಎಷ್ಟೋ ಸಾರಿ ಕೆಲವೊಂದು ದುರ್ಬಲ ಕ್ಷಣಗಳಲ್ಲಿ ನಮ್ಮ ಇಚ್ಛೆಯನ್ನು, ಮನೋಧರ್ಮವನ್ನು ಮೀರಿ ನಡೆದುಕೊಂಡು ಬಿಡುತ್ತೇವೆ, ನಂತರ ಪರಿತಪಿಸುತ್ತೇವೆ. ದೃಢವಾದ ಇಚ್ಛಾಶಕ್ತಿ ಇರದೇ ಹೋದರೆ ಕೆಲವೊಂದು ಸಂದರ್ಭದಲ್ಲಿ ನಮ್ಮ ಮನೋಧರ್ಮಕ್ಕೆ ವಿರುದ್ಧ ನಡೆದುಕೊಂಡು, ಬೇರೆಯವನ್ನು ಬಿಡಿ, ನಮಗೆ ನಮ್ಮ ಬಗ್ಗೆ ಬೇಸರ ಮೂಡುವಂತೆ ಮಾಡಿಕೊಂಡು ಬೀಡುತ್ತೇವೆ.

ಒಂದು ಚಿಕ್ಕ ಅನುಮಾನ, ಅವಮಾನ ಅಥವಾ ತಪ್ಪು ಗ್ರಹಿಕೆ ನಮ್ಮ ವ್ಯಕ್ತಿತ್ವವನ್ನೇ ಬದಲಿಸಿ ಬಿಡುತ್ತದೆ, ತಪ್ಪು ದಾರಿಗೆ ಎಳೆದು ಬಿಡುತ್ತದೆ. ಒಂದು ಹನಿ ಹುಳಿಗೆ ಹಾಲಿನ ರೂಪವನ್ನೇ ಬದಲಾಯಿಸಿ ಬಿಡುವ ಶಕ್ತಿಯಿದೆ. ಒಂದು ಚಿಕ್ಕ ಕೋಪತಾಪದ ಕ್ಷಣ ನಮ್ಮ ವ್ಯಕ್ತಿತ್ವವನ್ನೇ ಕೆಣಕಿ ಹಣಿದು ಬಿಡುತ್ತದೆ. ಒಂದು ನೋವಿನ ಘಟನೆ ನಮ್ಮ ಜೀವಮಾನದ ಸಾಧನೆ, ಸಂಯಮಯನ್ನು ನಾಶಮಾಡಿಬಿಡುತ್ತದೆ. ಹಾಗಾಗಬಾರದು, ಎಂತಹ ಪರೀಕ್ಷೆಯನ್ನು ಎದುರಿಸಿ ನಮ್ಮ ವ್ಯಕ್ತಿತ್ವ ಬೆಳಗಬೇಕೆಂದರೆ, ದೃಢನಂಬಿಕೆ ಮತ್ತು ನಾವು ನಂಬಿದ ವಿಚಾರಗಳಲ್ಲಿ ಅಚಲ ವಿಶ್ವಾಸ ಬೇಕು. ಈ ಸಾಲನ್ನು ಬರೆಯುತ್ತಿರುವಾಗ ನನಗೆ ಹಳೆಯ ಆದರೆ ಬಹು ಪ್ರಭಾವಿ ಕತೆಯೊಂದು ನೆನಪಾಗುತ್ತಿದೆ.

***
ಆ ಗುರುಗಳು ಶಿಷ್ಯಂದಿರನ್ನು, ತಮ್ಮ ಭಕ್ತರನ್ನು ಕರುಣೆಯಿಂದ ಪೊರೆಯುವುದರಲ್ಲಿ ತುಂಬಾ ಪ್ರಸಿದ್ಧರು. ಅವರ ಕರುಣಾಪೂರಿತ ದೃಷ್ಟಿ ಭಕ್ತರ ಮೇಲೆ ಬಿದ್ದರೆ ಸಾಕು ಭಕ್ತರು ತಮ್ಮ ಕಷ್ಟಗಳನ್ನು ಮರೆಯುತಿದ್ದರು. ಅವರ ಪ್ರೀತಿಯಲ್ಲಿ ಮಿಂದ ಎಷ್ಟೋ ಶಿಷ್ಯರು ಅವರನ್ನು ದೇವರ ಸ್ಥಾನದಲ್ಲಿ ಕಾಣುತಿದ್ದರು. 'ಹರ ಮುನಿದರೆ ಗುರು ಕಾಯ್ವನು' ಎಂಬ ಮಾತಿನಂತೆ ಗುರುಗಳು ಕರುಣಾಮೂರ್ತಿಯಾಗಿದ್ದರು.

ಒಮ್ಮೆ ಗುರುಗಳು ಪ್ರಾತಃಕಾಲದಲ್ಲಿ ತಮ್ಮ ಶಿಷ್ಯರನ್ನು ಕರೆದುಕೊಂಡು ಸ್ನಾನಕ್ಕೆಂದು ನದಿ ದಂಡೆಯ ಕಡೆ ಹೊರಟರು. ಮುಂಜಾನೆಯ ಆಹ್ಲಾದಕರ ವಾತಾವರಣದಲ್ಲಿ ಶಾಂತಿ ಮಂತ್ರಗಳನ್ನು ಪಠಿಸುತ್ತಾ ನದಿ ದಂಡೆಯ ಕಡೆ ಬಂದರು. ಸೂರ್ಯ ನಾರಾಯಣ ಮೆಲ್ಲಗೆ ಪೂರ್ವದಲ್ಲಿ ಮೂಡುತಿದ್ದ. ಇನ್ನೇನು ನದಿಗೆ ಇಳಿಯಬೇಕು ಅನ್ನುವಷ್ಟರಲ್ಲಿ ಗುರುಗಳ ಗಮನ ಆಗ ತಾನೇ ನೀರಿಗೆ ಬಿದ್ದು ಒದ್ದಾಡುತಿದ್ದ ಒಂದು ಚೇಳಿನ ಕಡೆ ಹೋಯಿತು. ಛೆ! ಎಷ್ಟಾದರು ಅದು ಒಂದು ಜೀವವಲ್ಲವೇ? ಅದು ಕೂಡ ಭಗವಂತನ ಸೃಷ್ಟಿಯಲ್ಲವೆ? ಅಂದುಕೊಂಡು, ಮೆಲ್ಲನೆ ನೀರಿಗೆ ಕೈ ಹಾಕಿ ಚೇಳನ್ನು ಮೇಲೆ ಎತ್ತಿದರು. ನೀರಿಗೆ ಬಿದ್ದು ಗಾಬರಿಯಲ್ಲಿದ್ದ ಚೇಳು ತನ್ನ ಸ್ವಭಾವಕ್ಕೆ ಅನುಗುಣವಾಗಿ ಅವರ ಕೈಯನ್ನು ಕುಟುಕಿ ಚಂಗನೆ ಕೆಳಗೆ ಹಾರಿತು, ಮತ್ತೆ ನೀರಿಗೆ ಬಿತ್ತು. ನೋವಾದರು ಸಹನೆ ಕಳೆದುಕೊಳ್ಳದ ಗುರುಗಳು, ಮತ್ತೆ ಅದನ್ನು ನೀರಿನಿಂದ ಮೇಲೆತ್ತಿ ಕಾಪಾಡುವ ಪ್ರಯತ್ನ ಮಾಡಿದರು. ಮತ್ತೆ ಅದು ಅವರ ಹಸ್ತಕ್ಕೆ ಕುಟುಕಿ ಮತ್ತೆ ನೀರಿಗೆ ಬಿತ್ತು. ಹೀಗೆ ಅನೇಕ ಸಲ ಪುನರಾವರ್ತನೆಯಾಯಿತು. ಅದನ್ನು ಕಂಡು ಅವರ ಶಿಷ್ಯಂದಿರು 'ಗುರುಗಳೇ ಹೋಗಲಿ ಬಿಡಿ. ಮೊದಲೇ ವಿಷಜಂತು, ನಿಮ್ಮ ಪ್ರಾಣಕ್ಕೆ ಅಪಾಯ ತಂದೀತು' ಎಂದರು.

ಆದರೆ ಸಹನೆ ಕೊಳ್ಳದ ಕರುಣಾಮಾಯಿ ಗುರುಗಳು ಕೊನೆಗೂ ಚೇಳನ್ನು ನೀರಿನಿಂದ ಮೇಲೆತ್ತಿ ದಂಡೆಗೆ ಬಿಟ್ಟು, ಚೇಳನ್ನು ಕಾಪಾಡಿದರು. ನಂತರ ಶಿಷ್ಯಂದಿರು ಚೇಳಿನ ಕಡಿತಕ್ಕೆ ಗುರುಗಳ ಶೂಶ್ರೂಷೆ ಮಾಡುತ್ತಾ 'ಗುರುಗಳೇ, ಆ ಚೇಳು ನಿಮ್ಮನ್ನು ಅಷ್ಟುಸಲ ಕುಟಕಿದರೂ, ನೀವು ಕಾಪಡಿದಿರಿ, ನಿಮಗೇನಾದರೂ ಅಪಾಯವಾಗಿದ್ದರೆ? ಅದನ್ನು ಹಾಗೆ ನೀರಲ್ಲಿ ಬಿಟ್ಟು ಬಿಡುವುದಲ್ಲವೇ?' ಎಂದು ನೊಂದು ಕೇಳಿದರು. ಆಗ ಗುರುಗಳು ಶಿಷ್ಯಂದಿರ ಕಾಳಜಿಗೆ ನಗುತ್ತಾ ಹೀಗೆಂದರು 'ಕುಟುಕುವುದು ಚೇಳಿನ ಸ್ವಭಾವ... ಕಾಪಾಡುವುದು ನನ್ನ ಸ್ವಭಾವ... ಅದು ತನ್ನ ಸ್ವಭಾವಕ್ಕೆ ತಕ್ಕಂತೆ ವರ್ತಿಸಿತು... ನಾನು ನನ್ನ ಸ್ವಭಾವಕ್ಕೆ ತಕ್ಕಂತೆ ವರ್ತಿಸಿದೆ. ಅದು ಕುಟುಕಿತು ಎಂದು ನನ್ನ ಸ್ವಭಾವ ಬದಲಾಯಿಸಿಕೊಳ್ಳಬೇಕೆನೂ? ಅದು ಅದರ ಧರ್ಮ ಪಾಲಿಸಿತು... ನಾನು ನನ್ನ ಧರ್ಮ ಪಾಲಿಸಿದೆ. ಧರ್ಮೋ ರಕ್ಷತಿ ರಕ್ಷಿತಃ!'

***
ನಮಗೆ ಯಾರೋ ಅವಮಾನ ಮಾಡಿದರು, ಕಹಿ ನುಡಿದರು, ಕಟಕಿಯಾಡಿದರು ಎಂದು ಕೋಪದಿಂದ, ನಕಾರಾತ್ಮಕ ಆಲೋಚನೆಗಳಿಂದ ನಮ್ಮ ನಿರ್ಮಲ ಮನಸನ್ನು ಕದಡಿಕೊಂಡು ಬಗ್ಗಡ ಮಾಡಿಕೊಳ್ಳುವುದು ಬೇಡ. ನಮ್ಮ ಒಳ್ಳೆತನ ಒಂದು ಚಿಕ್ಕ ಪರೀಕ್ಷೆಯನ್ನು ಯಶಸ್ವಿಯಾಗಿ ಎದುರಿಸದೆ ಸೋಲುವುದು ಬೇಡ. ಬನ್ನಿ, ಎಂತಹ ಪರೀಕ್ಷೆ ಎದುರಾದರು ನಮ್ಮ ಧರ್ಮ, ಮನೋಧರ್ಮ ಮತ್ತು ಮನಶಾಂತಿ ಕಾಪಾಡಿಕೊಳ್ಳುವ 'ಶುಭಸಂಕಲ್ಪ' ಮಾಡೋಣ.

ಶುಭಸಂಕಲ್ಪ - ನೋವ್ವೆ ಅನಾರೋಗ್ಯ ಸಂತೋಷವೇ ಆರೋಗ್ಯ, ಶುಭಸಂಕಲ್ಪದೊಂದಿಗೆ ಗುಣಮುಖರಾಗುವುದೇ ಭಾಗ್ಯ...!

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+