ಚಂಚಲ ಮನಸ್ಸನ್ನು ಹತೋಟಿಗೆ ತರಲು ಧ್ಯಾನ ಪರಿಣಾಮಕಾರಿ ಮಾರ್ಗ
ಇಂದಿನ ನಮ್ಮ ಬದುಕು ಹೋರಾಟದ ಬದುಕು. ಪ್ರತಿ ದಿನ ಪ್ರತಿ ಕ್ಷಣವೂ ಬದುಕಲು ಹೋರಾಡಬೇಕಾದ ಅನಿವಾರ್ಯತೆ ಎದುರಾಗಿದೆ. ವ್ಯಾಪಾರ, ಉದ್ಯೋಗ ಎಲ್ಲ ರಂಗಗಳಲ್ಲಿಯೂ ಸದಾ ಒತ್ತಡದಲ್ಲಿಯೇ ದುಡಿಯಬೇಕಾಗಿದೆ. ಪೈಪೋಟಿ ಯುಗದಲ್ಲಿ ಯಾವುದನ್ನೂ ನಾಳೆ ಮಾಡಿದರಾಯಿತೆಂದು ಮುಂದೂಡುವಂತಿಲ್ಲ. ಕ್ಷಣದಲ್ಲಿಯೇ ಮಾಡಿ ಮುಗಿಸಬೇಕಾಗುತ್ತದೆ. ಹೀಗಾಗಿ ಬಹಳಷ್ಟು ಮಂದಿಗೆ ಮಾನಸಿಕ ನೆಮ್ಮದಿ ಮರೀಚಿಕೆಯಾಗುತ್ತಿದೆ.
ನಾವು ಎಲ್ಲವನ್ನೂ ಹಣದಿಂದಲೇ ಅಳೆಯುವಂತಹ ಪರಿಸ್ಥಿತಿ ಉಂಟಾಗಿರುವುದರಿಂದ ಹಣ ಸಂಪಾದನೆಯತ್ತಲೇ ಕೇಂದ್ರೀಕೃತವಾಗಿರುವ ನಮ್ಮ ಮನಸ್ಸು ಹೆಚ್ಚಿನ ಒತ್ತಡಕ್ಕೆ ಒಳಗಾಗುತ್ತಿದೆ. ಇದರಿಂದಾಗಿ ಹೆಚ್ಚಿನವರು ಮಾನಸಿಕವಾಗಿ ಜರ್ಝರಿತರಾಗಿ ವಿವಿಧ ರೋಗಗಳಿಗೆ ಬಲಿಯಾಗುತ್ತಿರುವುದು ಕಂಡು ಬರತೊಡಗಿದೆ.
ಸದಾ ಒತ್ತಡದಲ್ಲಿರುವ ಮಂದಿ ಮಾನಸಿಕವಾಗಿ ಒಂದಷ್ಟು ರಿಲ್ಯಾಕ್ಸ್ ಆಗುವಂತೆ ಮಾಡಲು ಇದೀಗ ಧ್ಯಾನ ಕೇಂದ್ರಗಳು ಹುಟ್ಟಿಕೊಂಡಿದ್ದು, ಇದಕ್ಕೆ ಸೇರ್ಪಡೆಗೊಳ್ಳುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಆಧ್ಯಾತ್ಮದಲ್ಲಿಯೂ ಧ್ಯಾನದ ಮಹತ್ವದ ಬಗ್ಗೆ ಸವಿರವಾಗಿ ಹೇಳಲಾಗಿದೆ. ಸದಾ ಒತ್ತಡದಲ್ಲಿ ಚಂಚಲವಾಗಿರುವ ಮನಸ್ಸನ್ನು ಹತೋಟಿಗೆ ತರಲು ಧ್ಯಾನ ಪರಿಣಾಮಕಾರಿಯಾದ ಮಾರ್ಗವಾಗಿದೆ ಎಂದು ವಿವರಿಸಲಾಗಿದೆ.
ನಿರ್ದಿಷ್ಟ ಸ್ಥಳದಲ್ಲಿ, ನಿರ್ದಿಷ್ಟ ಸಮಯದಲ್ಲಿ ಏಕಚಿತ್ತವಾಗಿ ಭಗವಂತನ ಧ್ಯಾನದಲ್ಲಿ ತೊಡಗುವುದರಿಂದ ಮನೋನಿಗ್ರಹ ಸಾಧ್ಯವಾಗುತ್ತದೆ. ಮನೋನಿಗ್ರಹವಾದರೆ ನಮ್ಮ ಧ್ಯಾನಕ್ಕೆ ಅರ್ಥ ಸಿಗುತ್ತದೆ. ಇಲ್ಲದೆ ಹೊದರೆ ಭಗವಂತನ ಧ್ಯಾನದಲ್ಲಿ ತೊಡಗಿದ್ದರೂ ಮತ್ತೊಂದೆಡೆ ಮನಸ್ಸು ಮತ್ತೆಲ್ಲೋ ಹರಿಯುತ್ತಿರುತ್ತದೆ. ಇದರಿಂದ ಯಾವುದೇ ಪ್ರಯೋಜನವಾಗಲಾರದು.
ನಾವು ದೇವಸ್ಥಾನಕ್ಕೆ ಹೋದಾಗ ದೇವರ ಧ್ಯಾನದಲ್ಲಿಯೇ ಇರುವ ಕಾರಣ ಮನಸ್ಸು ಪ್ರಶಾಂತವಾಗಿ ಏನೋ ಒಂದು ರೀತಿಯ ಮಾನಸಿಕ ನೆಮ್ಮದಿ ದೊರೆತಂತಾಗುತ್ತದೆ. ಕೆಲವು ಮಂದಿ ಮಾನಸಿಕ ಕ್ಷೆೋಭೆಗೆ ಒಳಗಾದಾಗ ದೇವಾಲಯಕ್ಕೆ ಹೋಗಿ ಒಂದಷ್ಟು ಹೊತ್ತು ಇದ್ದು, ದೇವರ ಧ್ಯಾನದಲ್ಲಿ ತೊಡಗಿದ್ದು ಬರುವುದನ್ನು ರೂಢಿಸಿಕೊಂಡಿರುತ್ತಾರೆ. ಇದರಿಂದ ಆ ಕ್ಷಣಕ್ಕೆ ಮಾನಸಿಕ ನೆಮ್ಮದಿ ದೊರೆತು, ಸಮಸ್ಯೆಗಳನ್ನು ಎದುರಿಸಲು ಸಾಧ್ಯವಾಗುತ್ತದೆ.
ನಾವು ನಮ್ಮ ಸುತ್ತಲಿನ ವಾತಾವರಣದಲ್ಲಿ ಯಾವುದು ಪರಿಶುದ್ಧವೋ ಅಥವಾ ಯಾವುದು ಮನಸ್ಸನ್ನು ಶುದ್ಧಗೊಳಿಸಬಲ್ಲದೋ ಅಂತಹದ್ದನ್ನೇ ಸ್ವೀಕರಿಸಬೇಕು. ಇಲ್ಲವೆ ಅಂತಹ ವಿಚಾರದ ಕಡೆಗೆ ನಮ್ಮ ಮನಸ್ಸನ್ನು ಹೊರಳಿಸಬೇಕು. ಇಂತಹದಕ್ಕೆ ಭಗವಂತನ ಕುರಿತ ಧ್ಯಾನ ಅಗತ್ಯವಾಗಿ ಬೇಕಾಗುತ್ತದೆ. ಏಕೆಂದರೆ ಆಧ್ಯಾತ್ಮದಲ್ಲಿ ಹೀಗೊಂದು ಮಾತಿದೆ. ಯಾರು ಯಾವುದನ್ನು ಕುರಿತು ಧ್ಯಾನಿಸುತ್ತಾರೆಯೋ ಅವರು ಅದೇ ಆಗುತ್ತಾರೆ. ಧ್ಯಾನದಲ್ಲಿ ತೊಡಗಿದಾಗ ಮನಸ್ಸು ಅತ್ತ ಇತ್ತ ಹರಿದಾಡಿದರೆ ಅದನ್ನು ಧ್ಯಾನಿತ ವಿಷಯಕ್ಕೆ ಅವಿಶ್ರಾಂತವಾಗಿ ಒಯ್ದು ನಿಲ್ಲಿಸಬೇಕು.
ಒಮ್ಮೆ ರಾಮಕೃಷ್ಣರ ಸಾಕ್ಷಾತ್ ಶಿಷ್ಯರಾದ ಸ್ವಾಮಿ ಬ್ರಹ್ಮಾನಂದರನ್ನು ಶಿಷ್ಯನೊಬ್ಬ ಕೇಳಿದ "ಮಹಾರಾಜ್ ಮನಸ್ಸನ್ನು ನಿಗ್ರಹಿಸುವುದಾದರೂ ಹೇಗೆ?" ಎಂದು. ಆಗ ಸ್ವಾಮಿ ಬ್ರಹ್ಮಾನಂದರು ಉತ್ತರಿಸಿದ್ದು ಹೀಗೆ.
"ನೀನು ಧ್ಯಾನಕ್ಕೆ ತೊಡಗದಿದ್ದರೆ ನಿನ್ನ ಮನಸ್ಸು ನಿಯಂತ್ರಣಕ್ಕೆ ಸಿಕ್ಕದು. ಮನಸ್ಸನ್ನು ಹತೋಟಿಗೆ ತಂದುಕೊಳ್ಳದಿದ್ದರೆ ನಿನಗೆ ಧ್ಯಾನ ಸಿದ್ದಿಸದು." ಮೊದಲು ಮನಸ್ಸನ್ನು ನಿಗ್ರಹಿಸೋಣ ಆ ನಂತರ ಧ್ಯಾನ ಮಾಡೋಣ ಎಂದೇನಾದರೂ ಅಂದುಕೊಂಡರೆ ನೀನೆಂದೂ ಆಧ್ಯಾತ್ಮದ ಹಾದಿಯಲ್ಲಿ ಮುಂದುವರೆಯಲಾರೆ. ನೀನು ಈ ಎರಡನ್ನೂ ಏಕಕಾಲಕ್ಕೆ ನಿರ್ವಹಿಸಬೇಕು. ಮನಸ್ಸನ್ನು ಸ್ತಿಮಿತಕ್ಕೆ ತಂದುಕೊಳ್ಳಬೇಕು, ಧ್ಯಾನವನ್ನು ಮಾಡಬೇಕು. ಇದು ಕಾರ್ಯರೂಪಕ್ಕೆ ಬರಬೇಕಾದರೆ ಮನಸ್ಸನ್ನು ಕಠಿಣ ಅಭ್ಯಾಸದಿಂದ ಮನಸ್ಸನ್ನು ಭಗವಂತನಲ್ಲಿ ನೆಲೆಗೊಳಿಸಬೇಕು. ಮನಸ್ಸಿನೊಳಗೆ ಅನಪೇಕ್ಷಣೀಯವಾದ ಬಯಕೆಗಳು ಅಥವಾ ಗೊಂದಲಗಳು ನುಸುಳಿ ಬರದಂತೆ ಸದಾ ನೋಡಿಕೊಳ್ಳಬೇಕು. ಅಂತಹ ವಿಚಾರಗಳು ನಮ್ಮ ಮನಸ್ಸನ್ನು ತುಂಬಿಕೊಳ್ಳಲು ಪ್ರಯತ್ನಿಸಿದಾಗ ನಮ್ಮ ಮನಸ್ಸನ್ನು ಭಗವಂತನ ಕಡೆಗೆ ತಿರುಗಿಸಿ ಏಕಚಿತ್ತದಿಂದ ಪ್ರಾರ್ಥಿಸಬೇಕು. ಇಂತಹ ಅಭ್ಯಾಸಗಳಿಂದ ಮನಸ್ಸು ನಮ್ಮ ವಶಕ್ಕೆ ಬರುವುದಲ್ಲದೆ, ಅದು ಶುದ್ಧವೂ ಆಗುತ್ತದೆ. ಹೀಗಾದಾಗ ನಮ್ಮ ಧ್ಯಾನಕ್ಕೆ ಅರ್ಥ ಬರುತ್ತದೆ. ಧ್ಯಾನದ ಹಿಡಿತ ಸಿಗುವುದರೊಂದಿಗೆ ಮಾನಸಿಕ ನೆಮ್ಮದಿ, ಶಾಂತಿ ಪಾಪ್ತಿಯಾಗುತ್ತದೆ ಎಂದು ಹೇಳಿದರು.
ಸ್ವಾಮಿ ಬ್ರಹ್ಮಾನಂದರ ಈ ಮಾತುಗಳು ಎಷ್ಟು ಅರ್ಥಗರ್ಭಿತವಾಗಿವೆ ನೋಡಿ..