ಸಿದ್ದಲಿಂಗಯ್ಯ ಸೇರಿ ನಾಲ್ವರಿಗೆ ನಾಡೋಜ ಪ್ರಶಸ್ತಿ
ಬಳ್ಳಾರಿ,ಜ.2 : ಕನ್ನಡ ಭಾಷೆ, ಸಂಸ್ಕ್ಕತಿಗೆ ಸಂಬಂಧಿಸಿದ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದವರಿಗೆ ಹಂಪಿ ಕನ್ನಡ ವಿಶ್ವವಿದ್ಯಾಲಯವು ಕೊಡಮಾಡುವ ಪ್ರತಿಷ್ಠಿತ 'ನಾಡೋಜ' ಪ್ರಶಸ್ತಿಗೆ ನಾಲ್ಕು ಮಂದಿ ಗಣ್ಯರನ್ನು ಆಯ್ಕೆ ಮಾಡಲಾಗಿದೆ.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಸಿದ್ದಲಿಂಗಯ್ಯ, ಸಮಾಜ ಸೇವಕ ನ್ಯಾ| ಸುಬ್ರಾಯ ರಾಮಾನಾಯಕ, ಜಾನಪದ ಪ್ರತಿಭೆ ಉತ್ತರ ಕನ್ನಡ ಜಿಲ್ಲೆಯ ಸುಕ್ರಿ ಬೊಮ್ಮಗೌಡ ಮತ್ತು ಗಜಲ್ ಕವಿ ಶಾಂತರಸ ಅವರುಗಳಿಗೆ ನಾಡೋಜ ಪ್ರಶಸ್ತಿ ನೀಡಲಾಗುತ್ತದೆ ಎಂದು ಹಂಪಿ ವಿವಿಯ ಕುಲಪತಿ ಡಾ|ಹಿ.ಚಿ. ಬೋರಲಿಂಗಯ್ಯ ಪ್ರಕಟಿಸಿದ್ದಾರೆ.
ಕನ್ನಡ ನಾಡು, ನುಡಿ, ಸಾಹಿತ್ಯ, ಸಂಸ್ಕೃತಿ ಹಾಗೂ ಸಮಾಜ ಸೇವೆಯ ಮಾನದಂಡಗಳನ್ನು ಬಳಸಿ ಇತ್ಯರ್ಥಮಾಡಲಾಗುವ ಈ ಪ್ರಶಸ್ತಿಯನ್ನು ಜನವರಿ 5ರಂದು ನಡೆಯಲಿರುವ ಹದಿನಾರನೆ 'ನುಡಿ ಹಬ್ಬ' ಸಮಾರಂಭದಲ್ಲಿ ಪ್ರದಾನ ಮಾಡಲಾಗುವುದು. ಈ ಮೊದಲು ನಾಡೋಜ ಪ್ರಶಸ್ತಿ ಡಾ. ರಾಜ್ ಕುಮಾರ್, ದೇ.ಜವರೇಗೌಡ, ಜಿ.ವೆಂಕಟಸುಬ್ಬಯ್ಯ, ಸಿ.ಪಾರ್ವತಮ್ಮ, ಎಚ್.ಎಲ್.ನಾಗೇಗೌಡ ಮುಂತಾದವರಿಗೆ ಸಂದಿದೆ.
(ದಟ್ಸ್ಕನ್ನಡ ವಾರ್ತೆ)