ಕೊಡಗಿನ ಹುಡುಗ ಕೊನೆಗೂ ಸಿಕ್ಕ
ಕೊಡಗಿನ ಹುಡುಗ ಬರಲಿ ಆರು,
ಸಹಸ್ರಾರು, ಕೋಟಿ ಬಿರುದು
ಮೇರು ಸಹ್ಯಾದ್ರಿಯನೇರು,
ಕಡಲಾಳದ ಹವಳದ ಗಣಿಯಾಗು,
ಕನ್ನಡಮ್ಮನ ಮುಕುಟದ ಮಣಿಯಾಗು
ಹರಕೆಗಳ ಬೆಟ್ಟ ಏರಿ ಬರಲಿ
ತೆರೆಯನೇರಿ ಹಾರಿ ಹಾರಿ
ಬೀಸಲಿ ನಿನ್ನ ಕೀರ್ತಿ ಪತಾಕೆ !!
ದೆಹಲಿಗೆ ಕರ್ನಾಟಕದಿಂದ ಯಾರಾದರೂ ಬಂದರೆ ಸಾಕು ‘ಕನ್ನಡವೆನೆ ಕುಣಿದಾಡುವದೆನ್ನೆದೆ, ಕನ್ನಡವೆನೆ ಕಿವಿ ನಿಮಿರುವದು’. ಹಾ ಎಂಥ ಸವಿಗನ್ನಡ ನಮ್ಮದು!
ನಮ್ಮ ಕೊಡಗಿನ ಹುಡುಗ, ತಮ್ಮ ವಿಶೇಷವಾದ ಕಥೆಗಳಿಂದ ವಿಶಿಷ್ಟವಾದ ಛಾಪು ಒತ್ತಿದ ಲೇಖಕ ಅಬ್ದುಲ್ ರಶೀದರು ದೆಹಲಿಗೆ ಬರುತ್ತಾರೆಂದು ಎಲ್ಲರಿಗೂ ಎಲ್ಲಿಲ್ಲದ ಖುಷಿಯಾಗಿತ್ತು. ಪುರಸ್ಕಾರ ಪಡೆದವರಿಗಿಂತಲೂ ಹೆಚ್ಚು ನಾವೇ ಸಂತಸಪಟ್ಟಿದ್ದೆವು. ವಿಮರ್ಶಾ ಕ್ಷೇತ್ರದ ದಿಗ್ಗಜ, ಪಾಶ್ಚಿಮಾತ್ಯ ಕಲೆ ಸಾಹಿತ್ಯ ಸಂಸ್ಕೃತಿಯನ್ನು ಆಳವಾಗಿ ಮೈಗೂಡಿಸಿಕೊಂಡ ಡಾ.ಯು.ಅರ್. ಅನಂತಮೂರ್ತಿಯವರೂ ರಾಷ್ಟ್ರದ ಪ್ರಧಾನಿಯವರಿಂದ ಕೇಂದ್ರ ಸಾಹಿತ್ಯ ಅಕಾಡೆಮಿಯ ಫೆಲೋಶಿಪ್ ಸ್ವೀಕರಿಸಲು ದೆಹಲಿಯಲ್ಲೇ ಇದ್ದುದು ನಮಗೆಲ್ಲ ಅನಂದದ ಸುದ್ದಿ. ಆದರೆ, ಡಾ.ಅನಂತಮೂರ್ತಿಯವರನ್ನು ಸಂಪರ್ಕಿಸಲು ಕಾರಣಾಂತರಗಳಿಂದ ಸಾಧ್ಯವಾಗದೇ ಹೋಯಿತು.
ನವಂಬರ್ 1 ರಂದು ಪ್ರಧಾನಿ ಮನಮೋಹನ ಸಿಂಗ್ರಿಂದ ಕೇಂದ್ರ ಸಾಹಿತ್ಯ ಅಕಾಡೆಮಿಯ ಪುರಸ್ಕಾರ ಸ್ವೀಕರಣಾ ಸಮಾರಂಭವನ್ನು ಮುಗಿಸಿ, ಕ್ಷಣವೂ ಬಿಡುವಿಲ್ಲದ ಕಾರ್ಯಕ್ರಮಗಳ ನಡುವೆ ಅವಕಾಶ ಮಾಡಿಕೊಂಡು ಅಬ್ದುಲ್ ರಶೀದರು ಡಾ.ಬಿಳಿಮಲೆಯವರನ್ನು ಫೋನಾಯಿಸಿದ್ದರು. ಹೀಗೆ ನಮ್ಮ ದೆಹಲಿಯ ಕನ್ನಡ ಸಂಘದ ಅಧ್ಯಕ್ಷರೂ , ಗುರಗಾಂವ್ನಲ್ಲಿ ಸ್ಥಿತವಾದ ಬಹುರಾಷ್ಟ್ರೀಯ ಸಂಸ್ಥೆ American Institute of Indian Studies ನ ನಿರ್ದೇಶಕ, ಸಾಹಿತಿ ಡಾ.ಪುರುಷೋತ್ತಮ ಬಿಳಿಮಲೆಯವರನ್ನು ಸಂಪರ್ಕಿಸಿದ್ದುದರಿಂದ, ಎಲ್ಲರಿಗೂ ರಷೀದರನ್ನು ಕಾಣುವ ಇಚ್ಛೆಯಿದ್ದುದರಿಂದ ನಾವು ರಶೀದರನ್ನು ನಮ್ಮ ನಾಡ ಹಬ್ಬದ ಉತ್ಸವದಲ್ಲಿ ಆಮಂತ್ರಿಸಿ, ಅವರೊಂದಿಗೆ ಕೆಲಕಾಲ ಕಳೆಯಬೇಕೆಂದು ಆಶಿಸಿದ್ದೆವು. ಆದರೆ ನಮ್ಮ ಆಸೆ ಆಸೆಯಾಗಿಯೇ ಉಳಿಯಿತು. ಅಬ್ದುಲ್ ರಶೀದರಿಗೆ ಅಂದಿನ ರಾತ್ರಿಯೂಟ ಜತೆಗೆ ಶ್ರೇಷ್ಠ ಗಜಲ್ ಸಾಮ್ರಾಟ್ ಜಗಜಿತ್ ಸಿಂಗರ ಸುಗಮ ಸಂಗೀತ ಕಾರ್ಯಕ್ರಮವಿದ್ದುದರಿಂದ ನಮ್ಮ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಬರಲಾಗಲಿಲ್ಲ. ಆದರೂ ಅವರು ಉಳಿದುಕೊಂಡ ಹೊಟೆಲಲ್ಲಿ ಸಂಪರ್ಕಿಸಿದಾಗ, ರಶೀದರು- ತಾವು ನಾಳೆಯೇ ಜಯಪೂರಕ್ಕೆ ಹೋಗುತ್ತಿರುವದಾಗಿ ಹೇಳಿ, ತಮ್ಮ ಸೆಲ್ ನಂಬರನ್ನಿತ್ತು, ವಾಪಸು ಬಂದ ನಂತರ ಭೆಟ್ಟಿಸುವದಾಗಿ ವಿನಂತಿಸಿಕೊಂಡರು.
ಎರಡು ದಿನಗಳ ಜಯಪೂರ, ಆಗ್ರಾ ಟೂರ್ ಮುಗಿದ ನಂತರ ಅಂದೇ ಅವರಿಗೆ 7-50 ಕ್ಕೆ ಬೆಂಗಳೂರಿಗೆ ಮರಳುವ ಫ್ಲೈಟ್ ಇತ್ತು. ಅವರನ್ನು ನಮ್ಮ ಸಂಘದಲ್ಲಿ ಕಾಣಬೇಕೂಂತ ಕಾದವರಿಗೆಲ್ಲ ನಿರಾಶೆಯಾಗಿತ್ತು. ನಮ್ಮೊಂದಿಗೆ ತುಂಬಾ ಶ್ರಮ ವಹಿಸಿದ ದೆಹಲಿಯಲ್ಲಿನ ಅವರ ಹಳೆಯ ಮಿತ್ರ, ಒಡನಾಡಿಯಾಗಿದ್ದ ಅವನೀಂದ್ರನಾಥ ರಾವ್ ಕೂಡ ಇದ್ದಕ್ಕಿದ್ದಂತೆ ಈ ಸಮಾರಂಭ ಮುಗಿಯುವದೇ ತಡ ದೆಹಲಿಯ ಛಳಿ, ಹವಾಮಾನ ಬದಲಾವಣೆಯ ಅಸೌಖ್ಯದಿಂದ ಆಫೀಸಿನಲ್ಲೂ ಸಿಗದೇ, ಮತ್ತೆಲ್ಲೂ ಸಿಗದಂತೆ ನಾಪತ್ತೆಯಾಗಿಬಿಟ್ಟರು. ಕೊನೆಗೆ 2 ದಿನಗಳ ನಂತರ ರಶೀದರ ಮೊಬೈಲ್ಗೆ ಸಂಪರ್ಕಿಸಿ, ಅವರು ದೆಹಲಿಗೆ ವಾಪಸಾಗುವ ಸಮಯ ತಿಳಿದು, ದೆಹಲಿಗೆ ತಲುಪುವುದೇ ತಡ , ಬೆಂಬಿಡದ ಬೇತಾಳನಂತೆ ಬೆನ್ನಿಗೆ ಬಿದ್ದು, ಫೋನ್ ಮಾಡಿ, ಕೊನೆಗೂ ರಶೀದರನ್ನು ಅವರು ತಾತ್ಪೂರ್ತಿಕವಾಗಿ ತಂಗಿದ ದೆಹಲಿಯ ಅಲಕ್ನಂದಾದ ಯಮುನಾ ಅಪಾರ್ಟಮೆಂಟಲ್ಲಿ ಹೋಗಿ ಕಂಡು, ಮಾತನಾಡಿಸಿ ಬಂದಾಗಲೇ ನನಗೆ ಮನಸ್ಸಿಗೆ ಸಮಾಧಾನವಾದದ್ದು.
ಸರಳ, ಹಸನ್ಮುಖಿ, ತೂಕದಿಂದ ಮಾತನಾಡುವ ರಶೀದರ ಮುಖದಲ್ಲಿ ಯಾವ ಅಹಮ್ಮೂ ಕಾಣಲಿಲ್ಲ. ಪುರಸ್ಕಾರ ಪಡೆದ ಸಮಾರಂಭದ ಬಗ್ಗೆ ಯಾವ ಬಡಾಯಿಯನ್ನೂ ಅವರು ಕೊಚ್ಚಿಕೊಳ್ಳಲಿಲ್ಲ . ಅವರು, ಅವರ ಪತ್ನಿ, ಪುಟ್ಟಮಕ್ಕಳೂ ದೆಹಲಿ ಜಯಪುರ್, ಆಗ್ರಾ ಸುತ್ತಾಡಿ ಆಗಷ್ಟೇ ಬಂದಿದ್ದರು. ಅವರ ಪತ್ನಿ ತಮ್ಮ ಪ್ರವಾಸ ಚೆನ್ನಾಗಿದ್ದುದರ ಬಗ್ಗೆ ಹೇಳಿ, ಮೈಸೂರಿಗೆ ಬಂದರೆ ತಮ್ಮಲ್ಲಿ ಖಂಡಿತ ಬನ್ನಿ ಎನ್ನುವದನ್ನು ಬಾಯಿತುಂಬ ಹೇಳಿದರು.
ರಶೀದರೊಂದಿಗೆ ಇನ್ನೂ ಮಾತಾಡುವ ಹಂಬಲ ಹಾಗೇ ಉಳಿಯಿತು. ಸಮಯದ ಅಭಾವವೆಂದರೆ ಅದು ನಮಗೆ ಅರಿವಿಲ್ಲದೇ ಓಡುತ್ತದೆ. ಓಡು ಅಂದಾಗ ಕಾಲ ನಿಂತಿದೆಯೇನೋ ಅನ್ನುವಷ್ಟು ನಿಧಾನ ಮಾಡುತ್ತದೆ. ಆದರೂ ಹೆಕ್ಟಿಕ್ ಶೆಡ್ಯೂಲ್ಗಳಲ್ಲೂ ನಾವೆಲ್ಲ ನಮ್ಮತನಕ್ಕಾಗಿ, ನಮ್ಮವರೆನ್ನುವ ಅಭಿಮಾನಕ್ಕಾಗಿ, ಚೂರೆ ಚೂರು ಕ್ಷಣಗಳ ಭೆಟ್ಟಿ ನೀಡುವ ಮುದಕ್ಕಾಗಿ ಹಾತೊರೆಯುತ್ತೇವೆ. ಒಬ್ಬ ಲೇಖಕನ ಬದುಕಿನಲ್ಲಿ ಅಪರಿಮಿತ ಧನ್ಯತೆಯನ್ನು ಕೊಟ್ಟು, ಪದವಿಗಳಿಂದ ಶೃಂಗರಿಸಿ ಸಹಸ್ರಾರು ಅಭಿಮಾನಿಗಳನ್ನು ಉದಾರವಾಗಿ ನೀಡುವ ಪ್ರತಿಭೆ ಪುರಸ್ಕಾರಕ್ಕಿಂತಲೂ ಬೆಲೆಯುಳ್ಳದ್ದು.
ಅಬ್ದುಲ ರಶೀದರ ಸಾಹಿತ್ಯಕೃಷಿ ಇನ್ನೂ ಸಂಪದ್ಭರಿತವಾಗಲಿ, ನಮ್ಮೆಲ್ಲರ ಸ್ಪಂದನಗಳನ್ನು ತಟ್ಟುವ ಲೇಖನಿ ಕೊಡಗಿನ ಕಾವೇರಿಯಂತೆ ಸದಾ ಜೀವನೋತ್ಸಾಹದಿಂದ ಪುಟಿಪುಟಿದು ಹರಿಯುವ ಧಾರೆಯಾಗಲಿ, ಕನ್ನಡಮ್ಮ ಹೆಮ್ಮೆಯ ಪುತ್ರನಿಗೆ ಇಂಥ ಪುರಸ್ಕಾರಗಳು ಇನ್ನೂ ಹತ್ತು, ಹಲವು ಸಾವಿರಾರು ಸಿಗಲಿ ಎಂದು ಹಾರೈಸುವೆ.












Click it and Unblock the Notifications