ಮುಂದಿನ ವರ್ಷ ಕುವೆಂಪು ಜನ್ಮಶತಮಾನೋತ್ಸವ ಆಚರಣೆ
ಬೆಂಗಳೂರು: ಮುಂದಿನ ವರ್ಷದಿಂದ ಕುವೆಂಪು ಜನ್ಮ ಶತಮಾನೋತ್ಸವವನ್ನು ಸರಕಾರದ ವತಿಯಿಂದ ಆಚರಿಸಲಾಗುವುದು ಎಂದು ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ಭರವಸೆ ನೀಡಿದ್ದಾರೆ.
ಜಾಗತೀಕರಣದಿಂದ ದಿಕ್ಕೆಟ್ಟಂತಾಗಿರುವ ಯುವ ಜನರಲ್ಲಿ ಆಶಾಭಾವನೆಯನ್ನು ಮೂಡಿಸುವ ಸಲುವಾಗಿ ಕುವೆಂಪು ಜನ್ಮಶತಮಾನೋತ್ಸವ ಆಚರಿಸಲಾಗುವುದು. 2003ರ ಡಿಸೆಂಬರ್ನಿಂದ 2004ರ ಡಿಸೆಂಬರ್ ವರೆಗೆ ಕುವೆಂಪು ಜನ್ಮಶತಮಾನೋತ್ಸವವನ್ನು ಆಚರಿಸಲು ಸಮಿತಿಯಾಂದನ್ನು ರಚಿಸಲಾಗುತ್ತಿದೆ. ಈ ಸಮಿತಿಯು ವರ್ಷ ಪೂರ್ತಿ ನಡೆಯಲಿರುವ ಕಾರ್ಯಕ್ರಮದ ರೂಪು ರೇಷೆ ನಿರ್ಮಿಸಲಿದೆ ಎಂದು ಕೃಷ್ಣ ಹೇಳಿದರು.
ಅವರು ವಿಶ್ವ ಮಾನವ ವೇದಿಕೆ ನಗರದಲ್ಲಿ ಭಾನುವಾರ ಆಯೋಜಿಸಿದ್ದ ಕುವೆಂಪು ಅವರ 98ನೇ ಜನ್ಮದಿನೋತ್ಸವವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಕಾರ್ಯಕ್ರಮದಲ್ಲಿ ಕುವೆಂಪು ವಿಚಾರ ಧಾರೆ ಕುರಿತು ಮಾತನಾಡಿದ ಗದಗದ ತೋಂಟದ ಸಿದ್ಧಲಿಂಗ ಸ್ವಾಮೀಜಿ, ಕುವೆಂಪು ರಚಿಸಿರುವ ‘ವಿಚಾರ ಕ್ರಾಂತಿಗೆ ಆಹ್ವಾನ’, ‘ನಿರಂಕುಶ ಮತಿಗಳಿಗೆ’, ಹಾಗೂ ‘ಜನತೆಯ ಕ್ರಾಂತಿ’ ಕೃತಿಗಳನ್ನು ಕಾಲೇಜು ಪಠ್ಯವನ್ನಾಗಿಸಬೇಕು ಎಂದು ಒತ್ತಾಯಿಸಿದರು.
(ಇನ್ಫೋ ವಾರ್ತೆ)