ಗದಗದ ಹುಯಿಲಗೋಳದಲ್ಲೊಂದು ಡಿಫರೆಂಟ್ ಕವಿಗೋಷ್ಠಿ
ರೋಣ : ಜನಸಂಖ್ಯೆ ಯದ್ವಾತದ್ವಾ ಬೆಳೆಯುತ್ತಿರುವಾಗ ಪರಿಸರ ಉಳಿಸಿ ಎಂಬ ಮಾತಿಗೆ ಪ್ರಾಕ್ಟಿಕಲ್ ಆಗಿ ಅಷ್ಟೊಂದು ಗಟ್ಟಿಯಾಗಿ ಕೇಳಿಸುವುದಿಲ್ಲ. ಪರಿಸರ ಕಾಳಜಿಯ ಮಾತು ದೊಡ್ಡ ಪ್ರಕರಣ ಆಗಬೇಕಾದರೆ ಅದು ಕುದುರೆಮುಖ ಉಳಿಸಿ ಹೋರಾಟವೋ, ರಾಜ್ಯದ ಕರಾವಳಿಯನ್ನು ಉಳಿಸಿ ಎಂಬ ಆಂದೋಳನವೋ ಅಥವಾ ಕೊಜೆಂಟ್ರಿಕ್ಸ್ ತೊಲಗು.. ಎಂಬ ಚಳವಳಿಯ ಹಾಗೆ ದೊಡ್ಡ ಪ್ರಮಾಣದ್ದಾಗಿರಬೇಕು.
ಆದರೆ ಈ ಬೃಹತ್ ಹೋರಾಟಕ್ಕಿಂತ ವ್ಯಕ್ತಿಗತ ಜಾಗೃತಿ ಮುಖ್ಯ ಅಲ್ಲವೇ ? ಎಲ್ಲ ಸಮಾರಂಭಗಳಲ್ಲಿಯೂ ಟೀಪಾಯ್ ಮೇಲೆ ನೀರಿನ ಪ್ಲಾಸ್ಟಿಕ್ ಬಾಟಲಿಗಳು ಸಾಲಾಗಿ ಕೂತಿರುತ್ತವೆ. ವಿಧಾನ ಮಂಡಲದ ಅಧಿವೇಶನಗಳ ಬಗ್ಗೆ ತೋರಿಸುವ ಕ್ಲಿಪ್ಪಿಂಗ್ಗಳಲ್ಲಂತೂ ಕಿನ್ಲೆ ಬಾಟಲಿಗಳ ಸಾಲು ನೋಡಿ ಪ್ಲಾಸ್ಟಿಕ್ ನಿಯಂತ್ರಿಸುವ ಬಗ್ಗೆ ಮಾತಾಡುವ ಸರಕಾರಕ್ಕೆ ಆ ಬಗ್ಗೆ ಒಂದಿಷ್ಟೂ ಪ್ರಜ್ಞೆ ಇಲ್ಲವೇ ಅಂತನಿಸುತ್ತದೆ.
ಪರಿಸರದ ಕಾಳಜಿ ಸಾಮಾನ್ಯ ನಾಗರಿಕರಲ್ಲಿ ಬರದಿದ್ದರೆ ಪರವಾಗಿಲ್ಲ ಬಿಡಿ. ಆದರೆ ಮೌಲ್ಯಗಳ ಬಗ್ಗೆ ಭಾಷಣ ಬಿಡುವ ಸಾಹಿತಿಗಳಿಗೂ ಇದು ನೆನಪಾಗುವುದಿಲ್ಲವಲ್ಲ ಅಂತ ಆಶ್ಚರ್ಯವಾಗುತ್ತದೆ. ಆದರೆ ರೋಣ ತಾಲ್ಲೂಕಿನ ಹುಯಿಲಗೋಳದಲ್ಲಿ ಒಂದು ವಿಶೇಷ ಕಾರ್ಯಕ್ರಮ ಬುಧವಾರ ನಡೆಯಿತು. ಇದು ಪರಿಸರ ಪ್ರಿಯರ ಕವಿಗೋಷ್ಠಿ. ಕವಿಗೋಷ್ಠಿಯ ಉದ್ಘಾಟನೆ ಗಿಡವೊಂದನ್ನು ನೆಡುವ ಮೂಲಕ ನಡೆಯಿತು. ಅರಣ್ಯಾಧಿಕಾರಿ ಕೆ. ಆರ್. ಪ್ರಸಾದ್ ಗಿಡ ನೆಟ್ಟರು.
ಕವಿಗಳು ಹಾಗೂ ಕಲಾವಿದ ಸಿ.ಜಿ.ಬಿ.ಹೀರೇಮಠ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು. ತುಂಬಾ ಸರಳವಾಗಿದ್ದ ಕಾರ್ಯಕ್ರಮದಲ್ಲಿ ಕವಿತೆಗಳನ್ನು ಓದಿದವರು - ಪ್ರೊ. ರವೀಂದ್ರ ಕೊಪ್ಪರ್, ಬಸವರಾಜ್ ದಂಡಿನ್, ಐ.ಕೆ. ಕಮ್ಮಾರ್, ಕವಿತಾ ದಂಡಿನ್, ಪ್ರೇಮಾ ಮೆಟಿ ಮತ್ತು ಸಂಗಮೇಶ್ ಮೇಣಸಿನಕಾಯಿ.
(ಇನ್ಫೋ ವಾರ್ತೆ)