ನಿತ್ಯ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಒಣ ದ್ರಾಕ್ಷಿ ಸೇವಿಸಿದರೆ ನಿಮ್ಮ ದೇಹದಲ್ಲಿ ಈ ಬದಲಾವಣೆಗಳಾಗುವುದು!
ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನಾವು ಯಾವ ಆಹಾರ ಸೇವಿಸುತ್ತೇವೆ ಎನ್ನುವುದು ನಮ್ಮ ಇಡೀ ದಿನದ ಆರೋಗ್ಯವನ್ನು ನಿರ್ಧರಿಸುತ್ತದೆ. ಬೆಳಿಗ್ಗೆ ಎದ್ದ ಕೂಡಲೇ ನಾವು ಸೇವಿಸುವ ಆಹಾರ ದಿನವಿಡೀಯ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.ಅಂತಹ ಒಂದು ಆರೋಗ್ಯಕರ ಅಭ್ಯಾಸವೆಂದರೆ ನೀರಿನಲ್ಲಿ ನೆನೆಸಿಟ್ಟ ಒಣದ್ರಾಕ್ಷಿ ತಿನ್ನುವುದು. ರಾತ್ರಿಯಿಡೀ ನೀರಿನಲ್ಲಿ ನೆನೆಸಿದ ಒಣದ್ರಾಕ್ಷಿ ಮೃದುವಾಗುತ್ತದೆ ಮತ್ತು ಸುಲಭವಾಗಿ ಜೀರ್ಣವಾಗುತ್ತದೆ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಈ ದ್ರಾಕ್ಷಿ ನೆನೆಸಿಟ್ಟ ನೀರನ್ನು ಕುಡಿಯುವುದು ಮತ್ತು ಒಣದ್ರಾಕ್ಷಿ ತಿನ್ನುವುದರಿಂದ ದೇಹಕ್ಕೆ ಅನೇಕ ಅಗತ್ಯ ಪೋಷಕಾಂಶಗಳು ದೊರೆಯುತ್ತವೆ.
ಜೀರ್ಣಕ್ರಿಯೆ ಸುಲಭವಾಗಿಸುತ್ತದೆ:
ಒಣದ್ರಾಕ್ಷಿಗಳಲ್ಲಿ ಫೈಬರ್, ಕಬ್ಬಿಣ, ಪೊಟ್ಯಾಸಿಯಮ್, ಕ್ಯಾಲ್ಸಿಯಂ, ಬೋರಾನ್ ಮತ್ತು ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿವೆ. ಅವು ಜೀರ್ಣಕ್ರಿಯೆಯನ್ನು ಸುಲಭವಾಗಿಸುತ್ತದೆ. ಈ ಕಾರಣಗಳಿಂದಾಗಿ ಒಣ ದ್ರಾಕ್ಷಿಯನ್ನು ನೀರಿನಲ್ಲಿ ನೆನೆಸಿಟ್ಟು ತಿಂದಾಗ ಜೀರ್ಣಕ್ರಿಯೆ ಇನ್ನೂ ಸುಲಭವಾಗಿ ಆಗುತ್ತದೆ. ಫೈಬರ್ ಜೀರ್ಣಕ್ರಿಯೆಯನ್ನು ಸುಧಾರಿಸಲು ಮತ್ತು ಮಲಬದ್ಧತೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹಾಗಾಗಿ ಒಣ ದ್ರಾಕ್ಷಿಯನ್ನು ನಿಯಮಿತವಾಗಿ ಮಿತವಾಗಿ ಸೇವಿಸುವುದರಿಂದ ಜೀರ್ಣಕ್ರಿಯೆಯನ್ನು ಸುಧಾರಿಸಬಹುದು.

ರಕ್ತಹೀನತೆಯಿಂದ ಬಳಲುತ್ತಿರುವವರಿಗೆ ಪ್ರಯೋಜನಕಾರಿ:
ಒಣದ್ರಾಕ್ಷಿಯಲ್ಲಿರುವ ಕಬ್ಬಿಣವು ರಕ್ತಹೀನತೆಯಿಂದ ಬಳಲುತ್ತಿರುವವರಿಗೂ ಪ್ರಯೋಜನಕಾರಿಯಾಗಿದೆ. ಹಿಮೋಗ್ಲೋಬಿನ್ ಉತ್ಪಾದನೆಯಲ್ಲಿ ಐರನ್ ಅಂಶ ಪ್ರಮುಖ ಪಾತ್ರ ವಹಿಸುತ್ತದೆ. ಇದು ದೇಹದ ವಿವಿಧ ಭಾಗಗಳಿಗೆ ಆಮ್ಲಜನಕದ ಪೂರೈಕೆಯನ್ನು ಸುಧಾರಿಸುತ್ತದೆ.ಆದರೆ, ತೀವ್ರ ರಕ್ತಹೀನತೆ ಇರುವವರು ಕೇವಲ ಒಣದ್ರಾಕ್ಷಿಯನ್ನು ಮಾತ್ರ ಅವಲಂಬಿಸಬಾರದು. ವೈದ್ಯರ ಸಲಹೆಯಂತೆ ಚಿಕಿತ್ಸೆ ಮತ್ತು ಆಹಾರವನ್ನು ಮುಂದುವರಿಸಬೇಕು ಎಂದು ಆರೋಗ್ಯ ತಜ್ಞರು ಸೂಚಿಸುತ್ತಾರೆ.
ಮೂಳೆ ಮತ್ತು ಹಲ್ಲಿನ ಆರೋಗ್ಯ ಕಾಪಾಡಲು:
ನೆನೆಸಿದ ಒಣದ್ರಾಕ್ಷಿಯಲ್ಲಿರುವ ಕ್ಯಾಲ್ಸಿಯಂ ಮತ್ತು ಬೋರಾನ್ ನಂತಹ ಖನಿಜಗಳು ಮೂಳೆ ಮತ್ತು ಹಲ್ಲಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಬೋರಾನ್ ದೇಹವು ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಅನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಸಹಾಯ ಮಾಡುತ್ತದೆ. ಸಮತೋಲಿತ ಆಹಾರ ಮತ್ತು ವ್ಯಾಯಾಮದ ಜೊತೆಗೆ ಒಣದ್ರಾಕ್ಷಿಗಳ ಮಿತ ಸೇವನೆಯು ದೀರ್ಘಾವಧಿಯಲ್ಲಿ ಮೂಳೆಯ ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ತಜ್ಞರು ಹೇಳುತ್ತಾರೆ.
ಚರ್ಮ ಮತ್ತು ಕೂದಲಿನ ಆರೋಗ್ಯಕ್ಕೆ:
ಒಣದ್ರಾಕ್ಷಿಯಲ್ಲಿರುವ ಉತ್ಕರ್ಷಣ ನಿರೋಧಕಗಳು, ಜೀವಸತ್ವಗಳು ಮತ್ತು ಖನಿಜಗಳು ಚರ್ಮ ಮತ್ತು ಕೂದಲಿನ ಆರೋಗ್ಯಕ್ಕೂ ಪ್ರಯೋಜನಕಾರಿ. ಅವು ಫ್ರೀ ರಾಡಿಕಲ್ಗಳ ಪರಿಣಾಮಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ ಮತ್ತು ಚರ್ಮದ ನೈಸರ್ಗಿಕ ಹೊಳಪನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತವೆ. ಕಬ್ಬಿಣ ಮತ್ತು ಇತರ ಪೋಷಕಾಂಶಗಳು ಕೂದಲು ಕಿರುಚೀಲಗಳನ್ನು ಪೋಷಿಸಲು ಮತ್ತು ಅವುಗಳನ್ನು ಬಲವಾಗಿಡಲು ಸಹಾಯ ಮಾಡುತ್ತದೆ. ಆದರೆ, ಇಲ್ಲಿ ನೆನಪಿಡಬೇಕಾದ ಮತ್ತೊಂದು ಅಂಶ ಎಂದರೆ ಆರೋಗ್ಯಕರ ಚರ್ಮ ಮತ್ತು ಕೂದಲಿಗೆ, ಕೇವಲ ಒಣದ್ರಾಕ್ಷಿ ಸೇವನೆ ಸಾಕಾಗುವುದಿಲ್ಲ. ಇದರ ಜೊತೆಗೆ ಸಮತೋಲಿತ ಆಹಾರ, ಸಾಕಷ್ಟು ನೀರು ಮತ್ತು ಉತ್ತಮ ಜೀವನಶೈಲಿಯೂ ಅಗತ್ಯವಾಗಿರುತ್ತದೆ.
ಹೃದಯದ ಆರೋಗ್ಯಕ್ಕೆ:
ನೆನೆಸಿದ ಒಣದ್ರಾಕ್ಷಿಗಳು ಹೃದಯದ ಆರೋಗ್ಯಕ್ಕೂ ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ. ಅವುಗಳಲ್ಲಿರುವ ಪೊಟ್ಯಾಸಿಯಮ್ ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಉತ್ಕರ್ಷಣ ನಿರೋಧಕಗಳು ರಕ್ತನಾಳಗಳ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ನಿಯಮಿತ ವ್ಯಾಯಾಮ ಮತ್ತು ಸಮತೋಲಿತ ಆಹಾರದ ಜೊತೆಗೆ ಒಣದ್ರಾಕ್ಷಿಗಳನ್ನು ಮಿತವಾಗಿ ಸೇವಿಸುವುದರಿಂದ ಹೃದಯದ ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ತಜ್ಞರು ಹೇಳುತ್ತಾರೆ. ಆದರೆ, ಹೃದಯ ಕಾಯಿಲೆ ಅಥವಾ ಅಧಿಕ ರಕ್ತದೊತ್ತಡದ ಸಮಸ್ಯೆಯಿಂದ ಬಳಲುತ್ತಿರುವವರು ಹೊಸ ಆಹಾರವನ್ನು ಪ್ರಾರಂಭಿಸುವ ಮೊದಲು ವೈದ್ಯರನ್ನು ಸಂಪರ್ಕಿಸಬೇಕು.
ಒಣದ್ರಾಕ್ಷಿ ಎಷ್ಟೇ ಆರೋಗ್ಯಕರವಾಗಿದ್ದರೂ, ಅವುಗಳನ್ನು ಮಿತವಾಗಿ ಸೇವಿಸುವುದು ಮುಖ್ಯ. ಅವುಗಳಲ್ಲಿ ನೈಸರ್ಗಿಕ ಸಕ್ಕರೆ ಮತ್ತು ಕ್ಯಾಲೋರಿಗಳು ಅಧಿಕವಾಗಿದ್ದು, ಅತಿಯಾಗಿ ತಿನ್ನುವುದರಿಂದ ತೂಕ ಹೆಚ್ಚಾಗಬಹುದು ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟಗಳ ಮೇಲೆ ಕೂಡಾ ಪರಿಣಾಮ ಬೀರುತ್ತದೆ.
(ಬರಹ: ರಂಜಿತಾ ಆರ್.ಕೆ.)














Click it and Unblock the Notifications