ಬರ್ತ್ಡೇ ಖುಷಿಯಲ್ಲಿ ಡಿವೈನ್ಸ್ಟಾರ್: ರಿಷಬ್ ಶೆಟ್ಟಿ ಹೊಸ ಸಿನಿಮಾಗಳು, ಲೈಫ್ನ ಇಂಟರೆಸ್ಟಿಂಗ್ ಸಂಗತಿಗಳು
ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ 43ನೇ ವರ್ಷಕ್ಕೆ ಬಲಗಾಲಿಟ್ಟು ಬಂದಿದ್ದಾರೆ. ಅವರ ಬದುಕಿನಲ್ಲಾದ ಅವಮಾನ, ನೋವಿನ ಜೊತೆಗೆ ಸಿಕ್ಕಾಪಟ್ಟೆ ಸಿನಿಮಾ ಪ್ರೀತಿ ಅವರನ್ನು ಇಲ್ಲೀವರೆಗೆ ತಂದು ನಿಲ್ಲಿಸಿದೆ. ರಿಷಬ್ ಲೈಪು ಮತ್ತು ಸಿನಿಮಾ ಬಗ್ಗೆ ಇಂಟರೆಸ್ಟಿಂಗ್ ಸಂಗತಿಗಳು ಇಲ್ಲಿವೆ.
ರಿಷಬ್ ಶೆಟ್ಟಿ ಅಂದರೆ ಕ್ರಿಯೇಟಿವಿಟಿಗೆ ಇನ್ನೊಂದು ಹೆಸರು. ಕೆರಾಡಿ ಅನ್ನುವ ಕುಂದಾಪುರದ ಸಣ್ಣ ಊರಿನಿಂದ ಬಂದ ಅಪ್ಪಟ ಕಲಾವಿದ, ನಿರ್ದೇಶಕ ಇಂದು ಪ್ರಧಾನಿಯಿಂದ ಸಾಮಾನ್ಯರವರೆಗೆ ಎಲ್ಲರ ಬಾಯಲ್ಲೂ ಮನೆಮಾತಾಗಿದ್ದಾರೆ. ರಾಜ್ಯ, ರಾಷ್ಟ್ರ ಪ್ರಶಸ್ತಿಗಳಿಂದ ಆಸ್ಕರ್ ರೇಸ್ಗೆ ಎಂಟ್ರಿಕೊಡುವ ತನಕ ಅವರ ಸಿನಿಮಾ ಜರ್ನಿ, ಲೈಫ್ ಜರ್ನಿ ರೋಚಕವಾದದ್ದು.

ಸದ್ಯ ʼಜೈ ಹನುಮಾನ್ʼ ಎಂಬ ಕನ್ನಡ ಮತ್ತು ತೆಲುಗು ಸಿನಿಮಾ, ಮಲಯಾಳಂನಲ್ಲಿ ಎನ್.ಟಿ ವಾಸುದೇವನ್ ನಾಯರ್ ಕಾದಂಬರಿ ಆಧರಿತ ರಂಡಾಮೂಲಂ ಸಿನಿಮಾ, ಛತ್ರಪತಿ ಶಿವಾಜಿ ಮಹಾರಾಜ್, ಜೊತೆಗೆ ತನ್ನ ಹೋಂ ಬ್ಯಾನರ್ನಲ್ಲಿ ಒಂದು ಸಿನಿಮಾ ಅದು ಕಾಂತಾರ ಚಾಪ್ಟರ್ 2 ಎಂಬ ಮಾತಿದೆ, ಆ ಸಿನಿಮಾ ಸೇರಿ ಸಾಕಷ್ಟು ಸಿನಿಮಾಗಳನ್ನು ಒಟ್ಟು ಹಾಕಿಕೊಂಡು ಲೈಫೇ ಸಿನಿಮಾ ಮಾಡಿಕೊಂಡಿದ್ದಾರೆ. ಅವರು ಈ ಎತ್ತರಕ್ಕೆ ಹೋಗಿರುವ ಹಿಂದೆ ಅವರ ಲೈಫಿನ ಸೋಲು ಗೆಲುವುಗಳ ಇಂಟರೆಸ್ಟಿಂಗ್ ಕಥೆ ಇದೆ.
ಐದನೇ ಕ್ಲಾಸ್ ಫೇಲ್
ರಿಷಬ್ ಶೆಟ್ಟಿ ಓದಿನಲ್ಲಿ ಅಂಥಾ ಜಾಣ ಆಗಿರಲಿಲ್ಲ. ಓದಿದ್ದು ಸರ್ಕಾರಿ ಶಾಲೆಯಲ್ಲಿ. ಐದನೇ ಕ್ಲಾಸ್ನಲ್ಲಿ ಯಾವ್ಯಾವುದೋ ಕಾರಣಕ್ಕೆ ಸರಿಯಾಗಿ ಓದಿನ ಕಡೆ ಗಮನ ಕೊಡಲಾಗಿರಲಿಲ್ಲ. ಆದರೆ ಪಾಸಾಗ್ತೇನೆ ಅಂತ ಏನೋ ಕಾನ್ಫಿಡೆನ್ಸ್. ಆ ಆತ್ಮವಿಶ್ವಾಸದಲ್ಲೇ ಮನೆಯಿಂದ ಪಾಸಾದ ಖುಷಿಗೆ ಚಾಕ್ಲೆಟ್ ಕೊಡಲು ಕಾಸು ಇಸ್ಕೊಂಡು ಹೋದದ್ದೂ ಆಯ್ತು. ಕ್ಲಾಸ್ನಲ್ಲಿ ಮೇಷ್ಟ್ರು ಪಾಸಾದವರ ಪಟ್ಟಿಯಲ್ಲಿ ಇವರ ಹೆಸರೂ ಹೇಳಿದ್ದಾಯ್ತು. ತಾನು ಪಾಸು ಅಂತ ಊರಿಗೆಲ್ಲ ಚಾಕ್ಲೆಟ್ ಹಂಚಿದ್ದೂ ಆಯ್ತು. ಆದರೆ ಮರುದಿನ ಅಪ್ಪನಿಗೆ ಸಿಕ್ಕ ಮೇಷ್ಟ್ರು ನಿಮ್ಮ ಮಗ ಫೇಲು ಅಂದಾಗಲೇ ವಿಷಯ ಗೊತ್ತಾದದ್ದು. ಆದರೆ ಗೊತ್ತಾಗುವಾಗ ಹೊತ್ತಾಗಿತ್ತು.
ಓದು, ಬಿಸಿನೆಸ್, ಸಿನಿಮಾ ಹುಚ್ಚು
ಒಂದು ಕಡೆ ಬಿಕಾಂ ಓದುತ್ತ ಇನ್ನೊಂದು ಕಡೆ ಅಂಗಡಿ ಅಂಗಡಿಗಳಿಗೆ ಬಿಸ್ಲೆರಿ ನೀರು ಸಪ್ಲೈ ಮಾಡುತ್ತ ಮತ್ತೊಂದು ಬಹಳ ದೂರದಲ್ಲಿ ಕಾಲೇಜ್ಗೆ ಹೋಗುತ್ತಿದ್ದ ಅಕ್ಕನಿಗೆ ಡ್ರಾಪ್, ಪಿಕಪ್ ಮಾಡುತ್ತ ರಾತ್ರಿ ಹಗಲು ಕಷ್ಟಪಡುತ್ತಿದ್ದ ಹುಡುಗನಿಗೆ ಸಿಕ್ಕಾಪಟ್ಟೆ ಸಿನಿಮಾ ಕ್ರೇಜ್. ಹೀಗಾಗಿ ಇಷ್ಟೆಲ್ಲ ಓಡಾಟದ ನಡುವೆಯೂ ತನ್ನಿಷ್ಟದ ಸಿನಿಮಾಕ್ಕೂ ಟೈಮ್ ಕೊಡುತ್ತಿದ್ದರು. ಸೆಟ್ ಬಾಯ್ ಆಗಿ, ಕ್ಲಾಪ್ ಬಾಯ್ ಆಗಿ, ಸಹ ನಿರ್ದೇಶಕನಾಗಿ ಕೆಲಸ ಮಾಡುತ್ತಿದ್ದರು. ಒಮ್ಮೆ ಹಾಗೆ ಕೆಲಸ ಮಾಡುತ್ತಿರುವಾಗ ನಿರ್ದೇಶಕರೊಬ್ಬರು ಸಿಟ್ಟಲ್ಲಿ ಇವರಿಗೆ ಹೊಡೆದೇ ಬಿಟ್ಟರು. ಹಾಗೆ ಅವಮಾನವಾದ ಮೇಲೆ ಅಲ್ಲಿ ಒಂದು ಕ್ಷಣವೂ ನಿಲ್ಲದೆ ಆಚೆ ಬಂದರು.
ಕಿರಿಕ್ ಪಾರ್ಟಿ ಸಕ್ಸಸ್ ಆದರೂ ಅವಮಾನ
ರಕ್ಷಿತ್ ಶೆಟ್ಟಿ ನಟನೆಯ ಕಿರಿಕ್ ಪಾರ್ಟಿ ಸಿನಿಮಾ ಭಾರೀ ಸಕ್ಸಸ್ ಕಂಡಿತು. ಅದನ್ನು ನಿರ್ದೇಶನ ಮಾಡಿದ್ದು ರಿಷಬ್. ಆದರೆ ಆ ಕ್ರೆಡಿಟ್ ಅನ್ನು ಇವರಿಗೆ ಕೊಡಲು ಇಂಡಸ್ಟ್ರಿಯ ಕೆಲವರು ಹಿಂದೆಮುಂದೆ ನೋಡಿದ್ರು. ಏಲ್ಲ ರಕ್ಷಿತ್ ಮಾಡಿರ್ತಾರೆ, ಫ್ರೆಂಡ್ ಅಂತ ಇವ್ರ ಹೆಸರು ಹಾಕಿರ್ತಾರೆ ಎಂಬೆಲ್ಲ ವ್ಯಂಗ್ಯದ ಮಾತು ಕೇಳಿಬಂತು. ಇದು ರಿಷಬ್ ಆತ್ಮಾಭಿಮಾನಕ್ಕೆ ಏಟು ಕೊಟ್ಟಿತು. ಆ ಅವಮಾನಕ್ಕೆ ಪ್ರತಿಯಾಗಿ ಇವರು ನಿರ್ದೇಶನ ಮಾಡಿದ ʼಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು - ಕೊಡುಗೆ ರಾಮಣ್ಣ ರೈʼ ಊಹಿಸಲೂ ಆಗದ ಸಕ್ಸಸ್ ತಂದುಕೊಟ್ಟಿತು.
ಕಾಂತಾರದ ಯಶಸ್ಸು
ತನ್ನೂರಿನ ಕಥೆಯನ್ನು ಜಗತ್ತಿಗೆ ಹೇಳಬೇಕು ಅಂತ ಮಾಡಿದ ಸಿನಿಮಾ ʼಕಾಂತಾರʼ ನಿರೀಕ್ಷೆಗೂ ಮೀರಿ ಯಶಸ್ವಿಯಾಗಿ ರಿಷಬ್ ಹೆಸರು ದೇಶಾದ್ಯಂತ ಫೇಮಸ್ ಆಗಿದ್ದು ಎಲ್ಲರಿಗೂ ಗೊತ್ತಿರುವ ಕಥೆಯೇ. ಆ ಯಶಸ್ಸು ಇವರಿಗೆ ಅನೇಕ ರಾಷ್ಟ್ರಮಟ್ಟದ ಬಹುಕೋಟಿಗಳ ಸಿನಿಮಾಗಳಲ್ಲಿ ಅವಕಾಶ ಕಲ್ಪಿಸಿಕೊಟ್ಟಿದೆ. ನೋಡ ನೋಡುತ್ತಿರುವಂತೇ ರಿಷಬ್ ನ್ಯಾಶನಲ್ ಸ್ಟಾರ್ ಆಗಿ ಮಿಂಚುತ್ತಿದ್ದಾರೆ.
(ಬರಹ: ಭವಾನಿ ಭಟ್)














Click it and Unblock the Notifications