Election Result: ಅಧಿಕಾರ ಕೊಡಪ್ಪ ದೇವ್ರೇ.. ಟೆಂಪಲ್ ರನ್: ಅರುಣಾಚಲೇಶ್ವರ ವರದಿಂದ ಡಿಕೆಶಿ ಸಿಎಂ ಆಗ್ತಾರಾ?
ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣಾ ಮತ ಎಣಿಕೆ ಭರದಿಂದ ಸಾಗಿದೆ. ಅದರಲ್ಲೂ ವಿಪಕ್ಷ ಕಾಂಗ್ರೆಸ್ ಅಧಿಕಾರ ಹಿಡಿಯುವತ್ತ ಮುನ್ನುಗುತ್ತಿದ್ದು, ಆಡಳಿತರೂಢ ಬಿಜೆಪಿ ತೀವ್ರ ಹಿನ್ನೆಡೆ ಅನುಭವಿಸುತ್ತಿದೆ. ಮುಂಜಾನೆಯೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೇರಿದಂತೆ ಅನೇಕ ನಾಯಕರು ಗೆಲುವಿಗಾಗಿ ದೇಗುಲಗಳಿಗೆ ಭೇಟಿ ನೀಡಿದ್ದಾರೆ.
ಸಿಎಂ ಬಸವರಾಜ ಬೊಮ್ಮಾಯಿ, ಹುಬ್ಬಳ್ಳಿಯ ವಿಜಯನಗರದಲ್ಲಿರುವ ಆಂಜನೇಯ ದೇಗುಲಕ್ಕೆ ಭೇಟಿ ನೀಡಿ, ಪಕ್ಷದ ಗೆಲುವಿಗಾಗಿ ವಿಶೇಷ ಪೂಜೆ ಸಲ್ಲಿಸಿದ್ದು, ಎರಡು ವಿಧಾನಸಭಾ ಕ್ಷೇತಗಳಿಂದ ಸ್ಪರ್ಧಿಸಿರುವ ವಿ.ಸೋಮಣ್ಣ, ಮೈಸೂರಿನ ಬೆಟ್ಟದ ತಾಯಿ ಚಾಮುಂಡೇಶ್ವರಿಯ ಮೊರೆ ಹೋಗಿದ್ದರು.

ಕಾಂಗ್ರೆಸ್ ನಾಯಕರು ತಾವೇನು ಕಮ್ಮಿ ಇಲ್ಲ ಎಂಬಂತೆ ಶತಾಯಗತಾಯ ಅಧಿಕಾರ ಹಿಡಿಯಲೇ ಬೇಕು ಎಂದು ನಿರ್ಧರಿಸಿದಂತೆ ಕಾಣುತ್ತಿದ್ದು, ಡಿಕೆಶಿ ಕುಟುಂಬ ಸಮೇತ ತಿರುವಣ್ಣಾಮಲೈ ಅರುಣಾಚಲೇಶ್ವರ ದೇಗುಲಕ್ಕೆ ಭೇಟಿ ನೀಡಿ, ಪೂಜೆ ಸಲ್ಲಿಸಿದ್ದರು. ಈ ಬಾರಿಯಾದರೂ ಬಹುಮತದ ಸರ್ಕಾರ ಬರಲಿ ಎಂದು ಬೆಳಗ್ಗೆಯೇ ಪ್ರಿಯಾಂಕಾ ಗಾಂಧಿ, ಹಿಮಾಚಲ ಪ್ರದೇಶದಲ್ಲಿ ಶಿಮ್ಲಾದ ಜಖು ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದರು.
ಬೆಳಗಾವಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮೀ ಹೆಬ್ಬಾಳ್ಕರ್ ಅವರು, ಹಿಂಡಲಗಾ ಗಣಪತಿ ದೇಗುಲಕ್ಕೆ ತೆರಳಿ, ತಮ್ಮ ಹಾಗೂ ಪಕ್ಷದ ಅಖಂಡ ದ್ವಿಗ್ವಿಜಯಕ್ಕಾಗಿ ವಿಶೇಷ ಪೂಜೆ ಮಾಡಿಸಿದ್ದು, ಬೆಂಗಳೂರಿನ ಹೆಚ್ಎಸ್ಆರ್ ಲೇಔಟ್ನ ಬಸವೇಶ್ವರ ದೇವಸ್ಥಾನದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಪೂಜೆ ಸಲ್ಲಿಸಿದ್ದರು.

ಈಗಾಗಲೇ ಕಾಂಗ್ರೆಸ್ ನಲ್ಲಿ ಸಂಭ್ರಮ ಮನೆ ಮಾಡಿದ್ದು, ಬೆಂಗಳೂರಿನ ಕಚೇರಿಯ ಮುಂಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಜಮಾಯಿಸಿದ್ದು, ಜೈಕಾರ ಹಾಕುತ್ತಿದ್ದಾರೆ. ಪಕ್ಷದ ಅಭ್ಯರ್ಥಿಗಳು ವಿವಿಧ ಕ್ಷೇತ್ರದಲ್ಲಿ ಜಯಗಳಿಸಿರುವ ಬಗ್ಗೆ ವರದಿಯಾಗಿದೆ. ಇನ್ನು, ತಿರುವಣ್ಣಾಮಲೈ 'ಅರುಣಾಚಲೇಶ್ವರ'ನಿಂದ ಡಿಕೆಶಿಗೆ ಸಿಎಂಯಾಗುವಂತೆ ವರ ಸಿಗುತ್ತಾ? ಎಂಬ ಚರ್ಚೆಗಳು ಸೋಷಿಯಲ್ ಮೀಡಿಯಾದಲ್ಲಿ ಆರಂಭವಾಗಿವೆ.

ರಾಜ್ಯದಲ್ಲಿ ಅಧಿಕಾರದ ಗದ್ದುಗೆಗೆ ಏರಲು 113 ಸ್ಥಾನಗಳನ್ನು ಪಡೆಯಬೇಕು. ಕಾಂಗ್ರೆಸ್ ಈಗಾಗಲೇ ಮ್ಯಾಜಿಕ್ ನಂಬರ್ ದಾಟಿ ಮುನ್ನುಗುತ್ತಿದ್ದು, ಹೀಗಾಗಿ, ಈ ಬಾರಿ ಅಧಿಕಾರಕ್ಕೆ ಬರುವುದು ಗ್ಯಾರಂಟಿ ಆಗಿದೆ. ಜೊತೆಗೆ ಆಡಳಿತರೂಢ ಬಿಜೆಪಿ ವಿಪಕ್ಷ ಸ್ಥಾನದಲ್ಲಿ ಕೂರುವುದು ಶತಸಿದ್ದ ಎನ್ನುವಂತಿದೆ. ಅತಂತ್ರ ಸರ್ಕಾರ ಬಂದರೆ, 'ಕಿಂಗ್ ಮೇಕರ್' ಆಗುತ್ತೇವೆ ಎಂಬ ಜೆಡಿಎಸ್ ಕನಸು ಭಗ್ನವಾಗುವಂತೆ ಭಾಸವಾಗುತ್ತಿದೆ.












Click it and Unblock the Notifications