ಬೆಂಗಳೂರಿನಲ್ಲಿ ಯಾರಿಗೆ ಟಿಕೆಟ್ ನೀಡಬೇಕೆನ್ನುವ ಗೊಂದಲಕ್ಕೆ ತೆರೆ!
ಬೆಂಗಳೂರು ನಗರ ಮತ್ತು ಗ್ರಾಮೀಣ ಭಾಗದ ಹಲವು ದಿನಗಳ ಟಿಕೆಟ್ ಹಂಚಿಕೆ ಗೊಂದಲ ಕೊನೆಗೂ ಸುಖಾಂತ್ಯ ಕಂಡಿದೆ. ಬೆಂಗಳೂರಿನಲ್ಲಿ ಬುಧವಾರ (ಏ 11) ನಡೆದ ಸರ್ವಸದಸ್ಯರ ಸಭೆಯಲ್ಲಿ ಬೆಂಗಳೂರಿನಲ್ಲಿ ಯಾರಿಗೆ ಟಿಕೆಟ್ ನೀಡಬೇಕೆನ್ನುವ ಗೊಂದಲಕ್ಕೆ ತೆರೆ ಎಳೆಯಲಾಗಿದೆ.
ಬೆಂಗಳೂರು ಮಹಾನಗರದ ಬಸ್ ಮಾಲೀಕರು ಮತ್ತು ನಿರ್ವಾಹಕ ಸಂಘದ ತುರ್ತು ಸಭೆಯಲ್ಲಿ ಬಸ್ಸಿನಲ್ಲಿ ದುಡ್ಡು ಕೊಟ್ಟು ಪ್ರಯಾಣಿಸುವವರಿಗೆಲ್ಲಾ ಕಡ್ಡಾಯವಾಗಿ ಟಿಕೆಟ್ ನೀಡಬೇಕೆಂದು ತೀರ್ಮಾನಿಸಲಾಗಿದೆ.
ಜೊತೆಗೆ, ಟಿಕೆಟ್ ನೀಡುವ ವಿಷಯದಲ್ಲಿ ಯಾರೂ ಗೊಂದಲಕ್ಕೆ ಈಡಾಗಬಾರದು ಮತ್ತು ವದಂತಿಗಳಿಗೆ ಕಿವಿಗೊಡಬಾರದು ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿಕೊಳ್ಲಲಾಗಿದೆ. ಈ ಬಗ್ಗೆ ಮಾತನಾಡುತ್ತಿದ್ದ ಸಂಘದ ವಕ್ತಾರ, ಯಾವುದೇ ಜಾತಿ ಮತ, ಬಡವ ಶ್ರೀಮಂತ ಎಂದು ಪರಿಗಣಿಸದೆ ಎಲ್ಲರಿಗೂ ಟಿಕೆಟ್ ನೀಡಲಾಗುವುದು, ಈ ಬಗ್ಗೆ ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಒಂದೇ ಸ್ಟಾಪಿನಲ್ಲಿ ಇಳಿಯಲಿ, ಕೊನೆಯ ಸ್ಟಾಪಿನಲ್ಲಿ ಇಳಿಯಲಿ, ಅಥವಾ ಸಿಗ್ನಲ್ ನಲ್ಲೇ ಇಳಿದು ಹೋಗಲಿ, ಎಲ್ಲರಿಗೂ ಯಾವುದೇ ತಾರತಮ್ಯ ಮಾಡದೇ ಟಿಕೆಟ್ ನೀಡಲಾಗುವುದು. ಒಂದು ವೇಳೆ ನಿರ್ವಾಹಕ ಟಿಕೆಟ್ ನೀಡದಿದ್ದರೆ, ಪ್ರಯಾಣಿಕರು ಡಿಮಾಂಡ್ ಮಾಡಿ ಟಿಕೆಟ್ ತೆಗೆದುಕೊಳ್ಳಬೇಕೆಂದು ವಕ್ತಾರರು ಜನರಲ್ಲಿ ಮನವಿ ಮಾಡಿದ್ದಾರೆ.
ಟಿಕೆಟ್ ವಿಚಾರದಲ್ಲಿ ಭಾರೀ ಗೊಂದಲ ಇತ್ತೀಚಿನ ದಿನಗಳಲ್ಲಿ ಮೂಡುತ್ತಿರುವುದರಿಂದ, ತುರ್ತು ಸಭೆ ಕರೆದು ಈ ಬಗ್ಗೆ ಸಂಘದಿಂದ ಸ್ಪಷ್ಟನೆ ನೀಡಲಾಗಿದೆ.
ಇತ್ತೀಚೆಗೆ ಕೆಲವರಿಗೆ ಟಿಕೆಟ್ ನೀಡಬೇಕು ಮತ್ತು ಕೆಲವರಿಗೆ ಟಿಕೆಟ್ ನೀಡಬಾರದೆಂದು ಕೆಲವು ಗುಂಪುಗಳು ಬಹಿರಂಗವಾಗಿ ಮಾಧ್ಯಮಗಳೊಂದಿಗೆ ಚರ್ಚಿಸಿದ ಬಳಿಕ ಬೆಂಗಳೂರಿನಲ್ಲಿ ಯಾರಿಗೆ ಟಿಕೆಟ್ ಸಿಗುತ್ತದೆ ಎನ್ನುವುದು ತೀವ್ರ ಕುತೂಹಲಕ್ಕೆ ಕಾರಣವಾಗಿತ್ತು.
ಈಗ, ಬಸ್ ಮಾಲೀಕರ ಸಂಘದವರ ಸ್ಪಷ್ಟೀಕರಣದ ನಂತರ ಇದ್ದ ಎಲ್ಲಾ ಗೊಂದಲಗಳಿಗೆ ತೆರೆ ಬಿದ್ದಂತಾಗಿದೆ. (ವಾಟ್ಸಾಪ್)












Click it and Unblock the Notifications