Get Updates
Get notified of breaking news, exclusive insights, and must-see stories!

ಹತ್ತು ವರ್ಷದ ಫಾಸಲೆಯಲ್ಲಿ ನಾಲ್ಕು ಸಲ ಮನ ಬದಲಿಸಿದ ಉ.ಪ್ರ. ಮತದಾರರು!

ಉತ್ತರಪ್ರದೇಶದ ಮತದಾರರನ್ನು ಅದ್ಯಾವ ಬಗೆಯಲ್ಲಿ ಅರ್ಥ ಮಾಡಿಕೊಳ್ಳಬೇಕು? ಎಂಬತ್ತು ಲೋಕಸಭಾ ಕ್ಷೇತ್ರ ಇರುವ ಈ ರಾಜ್ಯದಲ್ಲಿ ಅತಿ ಹೆಚ್ಚು ಸ್ಥಾನಗಳನ್ನು ತೆಕ್ಕೆಗೆ ಹಾಕಿಕೊಳ್ಳಬೇಕು ಅನ್ನೋದು ಪ್ರಮುಖ ಪಕ್ಷಗಳ ಹವಣಿಕೆ. ಇಗೋ ಈ ಸಲದ ವಿಧಾನಸಭೆಗೆ ಜಾತಿ ಲೆಕ್ಕಾಚಾರ ಕೆಲಸ ಮಾಡಿದೆ ಅನ್ನುವಷ್ಟರಲ್ಲಿ ಅದು ಉಲ್ಟಾ. ಇದು ಆಡಳಿತ ವಿರೋಧಿ ಅಲೆ ಎಂದು ವ್ಯಾಖ್ಯಾನಿಸುವಷ್ಟರಲ್ಲೇ ಮತ್ತೊಂದು ಫಲಿತಾಂಶ. ಇದು ಉತ್ತರಪ್ರದೇಶ.

ಬಹಳ ವರ್ಷಗಳ ನಂತರ 2007ರಲ್ಲಿ ಸ್ವಂತ ಬಲದ ಮೇಲೆ ಬಹುಜನ ಸಮಾಜ ಪಕ್ಷದ ಮಾಯಾವತಿ ಆವರು ಉತ್ತರಪ್ರದೇಶದಲ್ಲಿ ಅಧಿಕಾರಕ್ಕೆ ಬಂದರು. ಏಕೆಂದರೆ, ಬ್ರಾಹ್ಮಣರು, ವೈಶ್ಯರು ಬಿಎಸ್ ಪಿ ಬೆನ್ನಿಗೆ ನಿಂತರು. ಜಾತಿ ಸಮೀಕರಣದ ಲೆಕ್ಕಾಚಾರವನ್ನೇ ಬದಲಿಸಿದವರು ಬೆಹೆನ್ ಜೀ. ಆ ಪ್ರಯೋಗ ಅಲ್ಲಿಗೆ ಕೊನೆಯಾಗಲೂ ಇಲ್ಲ.

2009ರ ಲೋಕಸಭಾ ಚುನಾವಣೆಯಲ್ಲಿ ಉತ್ತರಪ್ರದೇಶದಲ್ಲಿ ಕಾಂಗ್ರೆಸ್ ಒಳ್ಳೆ ಸಾಧನೆ ಮಾಡಿತು. ಅದಕ್ಕೆ ಕಾರಣ ಆಗಿದ್ದು ಇತರ ಹಿಂದುಳಿದ ವರ್ಗಗಳ ಭರ್ಜರಿ ಬೆಂಬಲ. ಮತ್ತು ದೊಡ್ಡ ಪ್ರಮಾಣದಲ್ಲಿ ಕಾಂಗ್ರೆಸ್ ಜತೆಗೆ ನಿಂತ ಜಾಟವ್ ದಲಿತಯೇತರ ಮತಗಳು. ಈ ದಮನಿತ ವರ್ಗದ ಮತಗಳು ಸಾಂಪ್ರದಾಯಿಕ ಜಾತಿ ಲೆಕ್ಕಾಚಾರಕ್ಕೂ ಮೀರಿದ್ದಾಗಿತ್ತು.

ಆ ಎಲ್ಲ ವರ್ಗಗಳು ಒಟ್ಟಾಗಿ ಕಾಂಗ್ರೆಸ್ ಕೈ ಹಿಡಿದವು. ಆ ಸಂದರ್ಭದಲ್ಲಿ ಮತದಾನ ಆದ ರೀತಿ ಇತ್ತಲ್ಲ ಅದೊಂದು ಬಗೆಯಲ್ಲಿ ತಾವು ನೀಡಬೇಕಿದ್ದ ಸಂದೇಶವನ್ನು ಆ ಜಾತಿಗಳ ಮತದಾರರು ನೀಡಿದರು. ಆದರೆ ಆ ಬಗ್ಗೆ ವಿಶ್ಲೇಷಣೆ ಆಗಲಿಲ್ಲ.

ಸುಲಭ ಜಯ ದಾಖಲಿಸಿತು ಅಖಿಲೇಶ್ ರ ಸಮಾಜವಾದಿ ಪಕ್ಷ

ಸುಲಭ ಜಯ ದಾಖಲಿಸಿತು ಅಖಿಲೇಶ್ ರ ಸಮಾಜವಾದಿ ಪಕ್ಷ

2012ರ ವಿಧಾನಸಭಾ ಚುನಾವಣೆಯಲ್ಲಿ ಯಾದವರು ಹಾಗೂ ಮುಸ್ಲಿಮರ ಮತಗಳನ್ನು ಗಣನೀಯ ಪ್ರಮಾಣದಲ್ಲಿ ಕಳೆದುಕೊಂಡ ಹೊರತಾಗಿಯೂ ಅಖಿಲೇಶ್ ಯಾದವ್ ರ ಸಮಾಜವಾದಿ ಪಕ್ಷ ವಿಧಾನಸಭಾ ಚುನಾವಣೆಯಲ್ಲಿ ಸುಲಭ ಜಯ ದಾಖಲಿಸಿತು. ಇದನ್ನು ಉತ್ತರಪ್ರದೇಶದಲ್ಲಿ ಎಂ-ವೈ ಕಾಂಬಿನೇಷನ್ ಅಂತಲೇ ಕರೆಯಲಾಗುತ್ತದೆ. ಈ ಎರಡು ಸಮುದಾಯವನ್ನು ಸಮಾಜವಾದಿ ಪಕ್ಷದ ಸಾಂಪ್ರದಾಯಿಕ ಬೆಂಬಲಿಗರು ಎನ್ನಲಾಗುತ್ತದೆ. ಇಷ್ಟಾದರೂ ಜಾತಿ ಆಧಾರಿತ ಸಮಾಜವಾದಿ ಪಕ್ಷಕ್ಕೆ ಮೈತ್ರಿ ಎಂಬ ಕಾಮನಬಿಲ್ಲಿನ ಹೊರತಾಗಿ ಯಾವುದೇ ಮಹತ್ವವಾದ ಜನ ಮನ್ನಣೆ ನಂತರ ಸಿಗಲಿಲ್ಲ.

ಧೂಳೆಬ್ಬಿಸಿತು ನರೇಂದ್ರ ಮೋದಿ ನೇತೃತ್ವದ ಬಿಜೆಪಿ

ಧೂಳೆಬ್ಬಿಸಿತು ನರೇಂದ್ರ ಮೋದಿ ನೇತೃತ್ವದ ಬಿಜೆಪಿ

2014ರ ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತೀಯ ಜನತಾ ಪಕ್ಷ ಅದುವರೆಗಿನ ಎಲ್ಲ ಪಕ್ಷಗಳ ಗಳಿಕೆ ಲೆಕ್ಕಾಚಾರವನ್ನು ಅಳಿಸಿ ಹಾಕಿತು. ಯಾವ ಬಿಜೆಪಿಯು ನಗರ ಮತದಾರರನ್ನು ಮಾತ್ರ ಹಿಡಿದಿಟ್ಟುಕೊಳ್ಳಲು ಸಾಧ್ಯ ಎಂಬ ನಂಬಿಕೆ ಅಥವಾ ಮಾತಿತ್ತು. ಅದನ್ನು ಸುಳ್ಳು ಮಾಡುವಂತೆ ಗ್ರಾಮೀಣ ಭಾಗದ ಮತ ಪ್ರಮಾಣ ದೊಡ್ಡದಾಗಿ ಹೆಚ್ಚಿಕೊಂಡಿತು. ದೊಡ್ಡ ಪ್ರಮಾಣದ ದಲಿತ ಸಮುದಾಯದ ಮತ ಬುಟ್ಟಿಗೆ ಬಿಜೆಪಿ ಕೈ ಹಾಕಿತು. ಮಾಯಾವತಿ ಅವರಿಗಿಂತ ಸ್ವಲ್ಪ ಕಡಿಮೆ ಪ್ರಮಾಣದಲ್ಲಿ ದಲಿತರ ಮತಗಳು ಕೇಸರಿ ಪಕ್ಷಕ್ಕೆ ಬಿದ್ದವು. ಎಂಬಿಸಿ ಎಂದು ಕರೆಸಿಕೊಳ್ಳುವ ಅತಿ ಹಿಂದುಳಿದ ವರ್ಗಗಳ ಮತದಾರರು ಸಾರಾಸಗಟಾಗಿ ಬಿಜೆಪಿ ಜತೆಗೆ ನಿಂತರು.

ಅಪನಗದೀಕರಣದ ಹೊರತಾಗಿಯೂ ಭರ್ಜರಿ ಫಸಲು

ಅಪನಗದೀಕರಣದ ಹೊರತಾಗಿಯೂ ಭರ್ಜರಿ ಫಸಲು

2017ರ ವಿಧಾನಸಭಾ ಚುನಾವಣೆಯಲ್ಲಿ 2014ರ ಲೋಕಸಭಾ ಚುನಾವಣೆಯ ಫಲಿತಾಂಶ ಮರುಕಳಿಸಿದಂತಾಯಿತು. ಕೇಂದ್ರದಲ್ಲಿ ಘೋಷಿಸಿದ ಅಪನಗದೀಕರಣದ ಹೊರತಾಗಿಯೂ ಬಿಜೆಪಿ ಭರ್ಜರಿ ಫಸಲು ತೆಗೆಯಿತು. ಅದುವರೆಗೆ ಉತ್ತರಪ್ರದೇಶದಲ್ಲಿ ಆಡಳಿತದಲ್ಲಿದ್ದ ಸಮಾಜವಾದಿ ಸರಕಾರದ ವಿರೋಧಿ ಅಲೆ ಅದಾಗಿತ್ತು. ಆದರೆ ಅದರ ಲಾಭ ಸಿಕ್ಕಿದ್ದು ಮಾಯಾವತಿ ಅವರ ಬಿಎಸ್ ಪಿಗೆ ಅಲ್ಲ, ನರೇಂದ್ರ ಮೋದಿ ಅವರು ಬಿಜೆಪಿಗೆ. 2007ರಿಂದ 2014ರ ಮಧ್ಯೆ ನಾಲ್ಕು ಚುನಾವಣೆಯಲ್ಲಿ ನಾಲ್ಕು ಸಲ ತಮ್ಮ ನಿಷ್ಠೆ ಬದಲಿಸಿದ್ದಾರೆ. 2007 ಮತ್ತು 2012ರ ವಿಧಾನಸಭಾ ಚುನಾವಣೆ ಹಾಗೂ 2009 ಮತ್ತು 2014ರ ಲೋಕಸಭಾ ಚುನಾವಣೆಯಲ್ಲಿ ಒಂದೊಂದು ಸಲ ಒಂದೊಂದು ಪಕ್ಷದ ಪರ ನಿಂತಿರುವುದು ಗೊತ್ತಾಗುತ್ತದೆ. ಮೇಲ್ಜಾತಿ ಮತಗಳು 2007ರಲ್ಲಿ ಮಾಯಾವತಿ ಪರ, 2009ರಲ್ಲಿ ಪ್ರತಿ ಮೂರರಲ್ಲಿ ಒಂದು ಮತ ಕಾಂಗ್ರೆಸ್ ಗೆ ಬಿದ್ದಿವೆ. ಅದೇ ಗುಂಪಿನ ಮತಗಳು ಸಾಲಿಡ್ ಆಗಿ 2014 ಮತ್ತು 2017ರಲ್ಲಿ ಬಿಜೆಪಿಯನ್ನು ಬೆಂಬಲಿಸಿದೆ.

ದಲಿತರ ಮತಗಳು ಬಿಎಸ್ ಪಿಗೆ ಎಂಬ ನಂಬಿಕೆ

ದಲಿತರ ಮತಗಳು ಬಿಎಸ್ ಪಿಗೆ ಎಂಬ ನಂಬಿಕೆ

ದಲಿತರ ಮತಗಳು ತನಗೆ ಬೀಳುತ್ತವೆ ಎಂದು ಇವತ್ತಿಗೂ ಬಿಎಸ್ ಪಿ ನಂಬಿದೆ. ಆದರೆ ಸಿಎಸ್ ಡಿಎಸ್ ನ ದತ್ತಾಂಶದ ಪ್ರಕಾರ, 2012ರ ವಿಧಾನಸಭಾ ಚುನಾವಣೆ ಚುನಾವಣೆಯಲ್ಲಿ ಉತ್ತರಪ್ರದೇಶದ ಎಲ್ಲ ಭಾಗಗಳಲ್ಲಿ ತನ್ನ ಮತ ಕಳೆದುಕೊಂಡಿದೆ. ಮಹಿಳೆಯರು, ಯುವಜನರು, ಅಕ್ಷರಸ್ಥರು ಹಾಗೂ ನಗರವಾಸಿಗಳು ದೂರ ಸರಿದರು. ಆದಾಗಿ ಎರಡು ವರ್ಷಕ್ಕೆ ನಡೆದ ಲೋಕಸಭೆ ಚುನಾವಣೆಯಲ್ಲಿ ಅದು ಮತ್ತೂ ಹೆಚ್ಚಾಗಿ ಬಿಜೆಪಿಗೆ ಹೋಗಿದ್ದಾರೆ. ಇನ್ನು ಯಾದವ ಸಮುದಾಯದವರು ಇತರ ಹಿಂದುಳಿದ ವರ್ಗಗಳ ಗುಂಪಿಗೆ ಸೇರುವ ಪ್ರಮುಖ ಜಾತಿ. ಯಾದವ ಸಮುದಾಯದವರು 2014ರಲ್ಲಿ ಅಂದಾಜು ಶೇಕಡಾ 21ರಷ್ಟು ಬಿಜೆಪಿಗೆ ಮತ ಹಾಕಿದ್ದರು.

ಬದಲಾಗಿದೆ ಮತದಾರರ ಆಲೋಚನೆ ವಿಧಾನ

ಬದಲಾಗಿದೆ ಮತದಾರರ ಆಲೋಚನೆ ವಿಧಾನ

ಒಂದು ಕಾಲಕ್ಕೆ ಆಯಾ ಜಾತಿ ನಾಯಕರ ಜತೆಗೆ ತಮ್ಮನ್ನು ಗುರುತಿಸಿಕೊಳ್ಳುತ್ತಿದ್ದರು. ಆದರೆ ಉತ್ತರಪ್ರದೇಶದಲ್ಲಿ ಆ ಸ್ಥಿತಿ ಬದಲಾಗಿದೆ. ಏಕೆಂದರೆ ದುರ್ಬಲ ವರ್ಗ ಎಂದು ಕರೆಸಿಕೊಳ್ಳುತ್ತಿದ್ದವರು ಪ್ರಬಲರಾಗಿದ್ದಾರೆ. ತಳ ವರ್ಗದವರಿಗೆ ಈ ಅಸ್ಮಿತೆಯ ರಾಜಕಾರಣದಿಂದ ಯಾವ ಫಾಯ್ದೆಯೂ ಅಗಿಲ್ಲ. ಜಾತಿ ಹೆಸರಲ್ಲಿ ಮತ ಪಡೆದ ನಂತರ ಸಮುದಾಯವನ್ನು ಮರೆತು ಬಿಡುತ್ತಾರೆ. ತಾವು ವೋಟ್ ಬ್ಯಾಂಕ್ ರೀತಿ ಬಳಕೆ ಆಗುತ್ತಿದ್ದೇವೆ ಎಂಬ ಸಂಗತಿ ಮತದಾರರಿಗೂ ಅರಿವಿಗೆ ಬಂದಿದೆ. ಆದ್ದರಿಂದ ಚುನಾವಣೆ ಸಂದರ್ಭದಲ್ಲಿ ತಾವೇನು ಕೆಲಸ ಮಾಡುತ್ತೇವೆ ಎಂಬುದನ್ನು ನಿರ್ದಿಷ್ಟವಾಗಿ ಆಯಾ ಪಕ್ಷಗಳು ಹೇಳಬೇಕು ಹಾಗೂ ಅದರಂತೆ ನಡೆದುಕೊಳ್ಳಬೇಕು.

ಆಡಳಿತ ವಿರೋಧಿ ಅಲೆ ಎದುರಿಸುತ್ತಿದೆ

ಆಡಳಿತ ವಿರೋಧಿ ಅಲೆ ಎದುರಿಸುತ್ತಿದೆ

ಚುನಾವಣೆ ಸಂದರ್ಭದಲ್ಲಿ ಆಡಳಿತವಿರೋಧಿ ಅಲೆ ಹೊಡೆತ ನೀಡಬಹುದು ಎಂಬ ಆತಂಕ ಇತ್ತು. ಆದರೆ ಪಾಕಿಸ್ತಾನದ ಜತೆಗಿನ ಕದನ ಸನ್ನಿವೇಶವು ಆ ಅಲೆಯನ್ನು ತಡೆಯುವ ನಿರೀಕ್ಷೆ ಇದೆ. ಆದರೆ ಯಾವ ಪ್ರಮಾಣದಲ್ಲಿ ತಡೆಯಬಹುದು ಎಂಬ ಅಂದಾಜಿಲ್ಲ. ಈ ಲೋಕಸಭೆ ಚುನಾವಣೆ ವೇಳೆ ದೇಶಭಕ್ತಿಯೇ ಮುಖ್ಯ ವಿಷಯ ಆಗಬಹುದು. ಆದರೆ ಈ ಹಂತದಲ್ಲಿ ನಿರ್ಧರಿಸುವುದು ಕಷ್ಟ. ಸಮಾಜವಾದಿ ಪಕ್ಷ ಹಾಗೂ ಬಹುಜನ ಸಮಾಜ ಪಕ್ಷ ಮೈತ್ರಿ ಮಾಡಿಕೊಂಡು, ಲೋಕಸಭೆ ಚುನಾವಣೆ ಎದುರಿಸುತ್ತಿರುವುದರಿಂದ ಎಲ್ಲ ಲೆಕ್ಕಾಚಾರಗಳು ಬದಲಾಗುವ ನಿರೀಕ್ಷೆ ಇದೆ. ಆದರೆ ಉತ್ತರಪ್ರದೇಶದ ಮತದಾರರ ಪಾಲಿಗೆ ಈ ಮೈತ್ರಿ ಪೂರ್ಣ ಪ್ರಮಾಣದಲ್ಲಿ ರೂಢಿಯಾಗದ ಪ್ರಯೋಗ. ಅದನ್ನು ಹೇಗೆ ಸ್ವೀಕರಿಸುತ್ತಾರೆ ಎಂಬ ಬಗ್ಗೆ ಪ್ರಶ್ನೆ ಇದೆ.

ಪ್ರಿಯಾಂಕಾ ಗಾಂಧಿ ಎಂಟ್ರಿ ಜಾದೂ ಮಾಡಬಹುದಾ?

ಪ್ರಿಯಾಂಕಾ ಗಾಂಧಿ ಎಂಟ್ರಿ ಜಾದೂ ಮಾಡಬಹುದಾ?

ಪ್ರಿಯಾಂಕಾ ಗಾಂಧಿ ಕಾಂಗ್ರೆಸ್ ನಿಂದ ಮೊದಲ ಮುಖ್ಯ ಪರೀಕ್ಷೆಗೆ ಇಳಿದಿದ್ದಾರೆ. ಕಳೆದ ಬಾರಿ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ಅವರ ಪಾಲಿಗೆ ಒದಗಿದ ಪವಾಡ ಈ ಸಲ ಏನಾಗಬಹುದೋ? ಪ್ರಿಯಾಂಕಾ ಗಾಂಧಿ ಕಣಕ್ಕೆ ಇಳಿದಿರುವುದರಿಂದ ಹಲವು ಬದಲಾವಣೆ ನಿರೀಕ್ಷಿಸಲಾಗುತ್ತಿದೆ. ಸಂಘಟನೆ ರೂಪದಲ್ಲಿ ಇರುವ ಕಾಂಗ್ರೆಸ್ ನಿಂದ ಬದಲಾವಣೆ ನಿರೀಕ್ಷಿಸಬಹುದು. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಉತ್ತರಪ್ರದೇಶ ಹೊಸ ವಿಜಯಶಾಲಿಯನ್ನು ಕಾಣಲಿದೆ. ಇತ್ತೀಚೆಗೆ ಅಲ್ಲಿನ ಆಡಳಿತಾರೂಢ ಬಿಜೆಪಿ ವಿರುದ್ಧ ಅಪಸ್ವರ ಕೇಳಿಬರುತ್ತಿದೆ. ಇವೆಲ್ಲವೂ ಲೋಕಸಭಾ ಚುನಾವಣೆಯಲ್ಲಿ ಕೆಲಸ ಮಾಡಲಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+