ಸಿ.ಟಿ.ರವಿ ಹಣೆಯಲು ಡಿ.ಕೆ.ಶಿವಕುಮಾರ್ ಮಾಸ್ಟರ್ ಪ್ಲ್ಯಾನ್!
ಮುಂಬರುವ ಅಸೆಂಬ್ಲಿ ಚುನಾವಣೆಯನ್ನು ಗೆಲ್ಲಲು ಏನೆಲ್ಲಾ ಕಾರ್ಯತಂತ್ರ ರೂಪಿಸಬೇಕೋ, ಅದನ್ನೆಲ್ಲಾ ಮಾಡಲು ಕಾಂಗ್ರೆಸ್ ದಿನಕ್ಕೊಂದು ಹೆಜ್ಜೆಯನ್ನು ಇಡುತ್ತಿದೆ. ಈ ನಿಟ್ಟಿನಲ್ಲಿ ಪ್ರಮುಖವಾಗಿ ಟಾರ್ಗೆಟ್ ಆಗುತ್ತಿರುವುದು ಜೆಡಿಎಸ್ ಮುಖಂಡರು.
ವಿಧಾನ ಪರಿಷತ್ ಚುನಾವಣೆಯಲ್ಲಿನ ಹನ್ನೊಂದು ಕ್ಷೇತ್ರದ ಗೆಲುವು ಮತ್ತು ಹಾನಗಲ್ ಉಪ ಚುನಾವಣೆ ಗೆದ್ದ ನಂತರ ಹೊಸ ಹುಮ್ಮಸ್ಸಿನಲ್ಲಿರುವ ಕಾಂಗ್ರೆಸ್ ಮುಖಂಡರು, ಸದ್ಯಕ್ಕೆ ಜೆಡಿಎಸ್ ಕೋಟೆಗೆ ಲಗ್ಗೆ ಇಡುತ್ತಿದ್ದಾರೆ. ಇದರ ಭಾಗವಾಗಿಯೇ, ಮಂಡ್ಯದಲ್ಲಿ ವಿಧಾನ ಪರಿಷತ್ ಚುನಾವಣೆ ಗೆದ್ದದ್ದು.
ಬಿಜೆಪಿಯ ಪ್ರಮುಖ ನಾಯಕರ ಕ್ಷೇತ್ರದಲ್ಲಿ ಪರ್ಯಾಯ ಅಭ್ಯರ್ಥಿಯನ್ನು ಈಗಿಂದಲೇ ಹುಡುಕಲು ಆರಂಭಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಪ್ರತಿನಿಧಿಸುವ ಚಿಕ್ಕಮಗಳೂರು ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.
ರಮೇಶ್ ಜಾರಕಿಹೊಳಿ ಪ್ರಾಬಲ್ಯ ಕಮ್ಮಿ ಮಾಡಲು ಆ ಭಾಗದ ಪ್ರಭಾವೀ ಲಿಂಗಾಯತ ಸಮುದಾಯದ ಅಶೋಕ್ ಪೂಜಾರಿಯವರು ಕಾಂಗ್ರೆಸ್ಸಿಗೆ ಕರೆತಂದಂತೇ, ಚಿಕ್ಕಮಗಳೂರಿನಲ್ಲೂ ಹೊಸ ಪ್ರಯತ್ನಕ್ಕೆ ಡಿ.ಕೆ.ಶಿವಕುಮಾರ್ ಕೈಹಾಕುವ ಸಾಧ್ಯತೆಯಿದೆ. ಡಿಕೆಶಿಯವರ ಈ ಪ್ರಯತ್ನ ಫಲ ಕೊಡುತ್ತೋ, ಇಲ್ಲವೋ ಎನ್ನುವುದಕ್ಕೆ 2023ರ ಅಸೆಂಬ್ಲಿ ಚುನಾವಣೆಯ ಫಲಿತಾಂಶದ ವರೆಗೆ ಕಾಯಬೇಕು. ಆದರೂ, ಡಿಕೆಶಿಯವರ ಪ್ರಯತ್ನಕ್ಕೆ ಪಕ್ಷದೊಳಗೆ ಪ್ರಶಂಸೆ ವ್ಯಕ್ತವಾಗುತ್ತಿದೆ. ಏನಿದು ಡಿಕೆಶಿ ಮಾಸ್ಟರ್ ಪ್ಲ್ಯಾನ್?

ಸಿ.ಟಿ.ರವಿ ಮತ್ತು ಡಿ.ಕೆ.ಶಿವಕುಮಾರ್ ನಡುವೆ ಟಾಕ್ ವಾರ್ ಜೋರು
ಒಂದು ವಾರದಿಂದ ಸಿ.ಟಿ.ರವಿ ಮತ್ತು ಡಿ.ಕೆ.ಶಿವಕುಮಾರ್ ನಡುವೆ ಟಾಕ್ ವಾರ್ ಜೋರಾಗಿ ನಡೆಯುತ್ತಿದೆ. ತಮಿಳುನಾಡು ಚುನಾವಣೆಯಲ್ಲಿ ಬಿಜೆಪಿಯ ನಿರಾಸಾದಾಯಕ ಪ್ರದರ್ಶನದ ನಂತರ ಸಿ.ಟಿ.ರವಿಯವರ ಸದ್ದು ರಾಜಕೀಯದಲ್ಲಿ ಅಷ್ಟಾಗಿ ಕೇಳಿಸುತ್ತಿಲ್ಲ. ಇದೇ ಸುಸಂದರ್ಭ ಎಂದು ಡಿ.ಕೆ.ಶಿವಕುಮಾರ್ ಅವರು ಭರ್ಜರಿ ಕಾರ್ಯತಂತ್ರ ಹಣೆಯಲು ಆರಂಭಿಸಿದ್ದಾರೆ ಎನ್ನುವ ಸುದ್ದಿ ಬಲವಾಗಿ ಹರಿದಾಡುತ್ತಿದೆ. ಅದು ಹೌದೇ ಆಗಿದ್ದಲ್ಲಿ, ಇನ್ನೊಂದು ಕುಟುಂಬ ರಾಜಕಾರಣಕ್ಕೆ ರಾಜ್ಯ ರಾಜಕೀಯ ಸಾಕ್ಷಿಯಾಗಬೇಕಾಗುತ್ತದೆ.

ಚಿಕ್ಕಮಗಳೂರಿನ ನಗರಸಭಾ ಚುನಾವಣೆಗೆ ಡಿಸೆಂಬರ್ 27ರ ಮಹೂರ್ತ
ದಶಕಗಳಿಂದ ಬಿಜೆಪಿಯ ಭದ್ರಕೋಟೆಯಾಗಿರುವ ಚಿಕ್ಕಮಗಳೂರಿನ ನಗರಸಭಾ ಚುನಾವಣೆಗೆ ಡಿಸೆಂಬರ್ 27ರ ಮಹೂರ್ತ ಫಿಕ್ಸ್ ಆಗಿದೆ. ಇದನ್ನು ಬೇಸ್ ಆಗಿ ಇಟ್ಟುಕೊಂಡು, ಮುಂದಿನ ಅಸೆಂಬ್ಲಿ ಚುನಾವಣೆಯ ಹೊತ್ತಿಗೆ ಕಾಂಗ್ರೆಸ್ಸಿಗೆ ಅನುಕೂಲಕರ ಪರಿಸ್ಥಿತಿ ನಿರ್ಮಿಸಲು ಜಿಲ್ಲಾ ಕಾಂಗ್ರೆಸ್ ಮುಖಂಡರು ಪಣತೊಟ್ಟಿದ್ದಾರೆ. ಈ ನಿಟ್ಟಿನಲ್ಲಿ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಮೂರನೇ ತಲೆಮಾರಿನ, ಡಿ.ಕೆ.ಶಿವಕುಮಾರ್ ಅವರ ಅಳಿಯನ ಹೆಸರನ್ನು ಜಿಲ್ಲಾ ಕಾಂಗ್ರೆಸ್ ಮುಖಂಡರು ಮುಂದಕ್ಕೆ ಬಿಟ್ಟಿದ್ದಾರೆ.

ಅಮಾರ್ಥ್ಯ ಸಿದ್ದಾರ್ಥ್ ಅವರು ಡಿಕೆಶಿಯವರ ಅಳಿಯ ಎನ್ನುವುದು ಗೊತ್ತಿರುವ ವಿಚಾರ
ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಫಿಡೇ ಮಾಲೀಕ ದಿ.ಸಿದ್ದಾರ್ಥ್ ಹೆಗಡೆಯವರಿಗೆ ಉತ್ತಮ ಹೆಸರಿದೆ. ಇವರ ಪುತ್ರ ಅಮಾರ್ಥ್ಯ ಸಿದ್ದಾರ್ಥ್ ಅವರು ಡಿಕೆಶಿಯವರ ಅಳಿಯ ಎನ್ನುವುದು ಗೊತ್ತಿರುವ ವಿಚಾರ. ಚಿಕ್ಕಮಗಳೂರು ರಾಜಕೀಯದಲ್ಲಿ ಒಕ್ಕಲಿಗ ಮತಬ್ಯಾಂಕ್ ನಿರ್ಣಾಯಕ ಪಾತ್ರ ವಹಿಸುತ್ತದೆ. ಹಾಗಾಗಿ, ಯುವಕನಾಗಿರುವ ಅಮಾರ್ಥ್ಯ ಅವರನ್ನು ಈಗಿಂದಲೇ ಜಿಲ್ಲೆಯ ರಾಜಕಾರಣಕ್ಕೆ ಎಂಟ್ರಿ ಕೊಡಿಸಬೇಕು ಎನ್ನುವ ಒತ್ತಡವನ್ನು ಹಾಕಲು ಜಿಲ್ಲಾ ಕಾಂಗ್ರೆಸ್ ನಿರ್ಧರಿಸಿದ್ದಾರೆ ಎನ್ನುವ ಮಾಹಿತಿಯಿದೆ.

ಕಾರ್ಯರೂಪಕ್ಕೆ ಬಂದರೆ, ಸಿ.ಟಿ.ರವಿಗೆ ಕಠಿಣ ಸವಾಲು ನಿಶ್ಚಿತ
ಯುವಕನಾಗಿರುವ ಅಮಾರ್ಥ್ಯರನ್ನು ಈಗಿಂದಲೇ ಚುನಾವಣಾ ಪ್ರಚಾರಕ್ಕೆ ಬಳಸಿಕೊಂಡು, ಮುಂಬರುವ ಜಿಲ್ಲಾ ಪಂಚಾಯತಿ ಚುನಾವಣೆಯಲ್ಲೂ ಉಪಯೋಗಿಸಿಕೊಂಡರೆ, ಅಸೆಂಬ್ಲಿ ಚುನಾವಣೆಯ ಹೊತ್ತಿಗೆ ಸ್ಪಷ್ಟ ರಾಜಕೀಯ ವೇದಿಕೆ ನಿರ್ಮಿಸಿ ಕೊಟ್ಟಂತಾಗುತ್ತದೆ ಎನ್ನುವುದು ಜಿಲ್ಲಾ ಮುಖಂಡರ ಲೆಕ್ಕಾಚಾರ. ಅಸಂಖ್ಯಾತ ಯುವಕರಿಗೆ ಉದ್ಯೋಗವನ್ನು ಕೊಟ್ಟಂತಹ ಸಿದ್ದಾರ್ಥ್ ಹೆಗಡೆಗೆ ಉತ್ತಮ ಹೆಸರು ಇರುವ ಪ್ಲಸ್ ಪಾಯಿಂಟ್ ಅನ್ನು ಬಳಸಿಕೊಳ್ಳಬೇಕು ಎನ್ನುವ ಒತ್ತಾಯವಿದೆ. ಇದಕ್ಕೆ ಡಿಕೆಶಿ ಯಾವ ರೀತಿ ಸ್ಪಂದಿಸುತ್ತಾರೋ, ಅದಕ್ಕಿಂತ ಹೆಚ್ಚಾಗಿ ರಾಜಕೀಯ ಎಂಟ್ರಿಯ ಬಗ್ಗೆ ಅಮಾರ್ಥ್ಯ ಯಾವ ನಿಲುವು ಹೊಂದಿದ್ದಾರೋ ಎನ್ನುವುದು ಸದ್ಯದಲ್ಲೇ ಗೊತ್ತಾಗಬಹುದು. ಒಟ್ಟಿನಲ್ಲಿ, ಇದು ಕಾರ್ಯರೂಪಕ್ಕೆ ಬಂದರೆ, ಸಿ.ಟಿ.ರವಿಗೆ ಕಠಿಣ ಸವಾಲು ನಿಶ್ಚಿತ.












Click it and Unblock the Notifications