ಎಂಪಿ ಚುನಾವಣೆ ಬಗ್ಗೆ ಸೂಲಿಬೆಲೆ ಮಾತು, ಬಿಜೆಪಿ ಟಿಕೆಟ್ ಇವ್ರಿಗೆ ಡೌಟ್
2019ರ ಲೋಕಸಭಾ ಚುನಾವಣೆಗೆ ಮತ್ತೆ ಮೋದಿ ಪರವಾದ ಪ್ರಚಾರ ನಡೆಸುವುದಕ್ಕೆ ಚಕ್ರವರ್ತಿ ಸೂಲಿಬೆಲೆ ಅವರ ನೇತೃತ್ವದಲ್ಲಿ ಯುವ ಬ್ರಿಗೇಡ್ ಸಿದ್ಧಗೊಳ್ಳುತ್ತಿದೆ. "ಕಳೆದ ಚುನಾವಣೆಯಲ್ಲಿ ಮೋದಿ ಅವರಿಗೆ ಮತ ನೀಡಿ ಅಂತ ಕೇಳಿದ್ದೆವು. ಆದರೆ ಈ ಸಲ ಕೇಂದ್ರ ಸರಕಾರದ ಕೆಲಸವನ್ನು ಮುಂದಿಟ್ಟು, ಆ ಬಗ್ಗೆ ನಿಮಗೆ ಸಮಾಧಾನ ಇದ್ದರೆ ಮಾತ್ರ ಮತ ಹಾಕಿ ಅಂತ ಕೇಳ್ತೀವಿ" ಎಂದರು ಚಕ್ರವರ್ತಿ ಸೂಲಿಬೆಲೆ.
ಉತ್ತರ ಕನ್ನಡ ಲೋಕಸಭೆ ಕ್ಷೇತ್ರದಿಂದ ಚಕ್ರವರ್ತಿ ಸೂಲಿಬೆಲೆ ಸ್ಪರ್ಧೆ ಮಾಡುತ್ತಾರಂತೆ ಎಂಬ ಸುದ್ದಿ ಮತ್ತೆ ಹರಿದಾಡುತ್ತಿರುವ ಹಿನ್ನೆಲೆಯಲ್ಲಿ ಅವರನ್ನು ಒನ್ಇಂಡಿಯಾ ಕನ್ನಡ ಮಾತನಾಡಿಸಿತು. "ನನಗೆ ಸ್ಪರ್ಧೆ ಮಾಡುವ ಉದ್ದೇಶವೇ ಇಲ್ಲ. ಕಳೆದ ಸಲವೂ ಇದೇ ಥರ ಆಗಿತ್ತು. ಆಗ ನನಗೆ ಬಿಜೆಪಿಯಿಂದಲೇ ಆಹ್ವಾನ ಬಂದಿತ್ತು. ಆದರೆ ನಾನು ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದೆ" ಎಂದು ಅವರು ಹೇಳಿದರು.
ನಾನು ಯಾವ ಚುನಾವಣೆಗೂ ಸ್ಪರ್ಧಿಸುವುದಿಲ್ಲ. ಹಾಗೆ ಸ್ಪರ್ಧಿಸುವ ಮೂಲಕ ಒಂದು ಕ್ಷೇತ್ರಕ್ಕೆ ಸೀಮಿತ ಆಗುವ ಉದ್ದೇಶ ನನಗಿಲ್ಲ. ಮೋದಿ ಅವರು ಮತ್ತೆ ಪ್ರಧಾನಿ ಆಗಬೇಕು. ಅದಕ್ಕಾಗಿ ಬಿಜೆಪಿಯಿಂದ ಯಾರೇ ಸ್ಪರ್ಧಿಸಿದರೂ ಅವರ ಪರವಾಗಿ ಯುವ ಬ್ರಿಗೇಡ್ ನಿಂದ ಪ್ರಚಾರ ಮಾಡುತ್ತೇವೆ ಎಂದು ಹೇಳಿದರು.
ಈ ಬಾರಿ ಹಾಲಿ ಸಂಸದರ ಪೈಕಿ ಹಲವರಿಗೆ ಟಿಕೆಟ್ ನೀಡುವುದಿಲ್ಲವಂತೆ ಎಂಬ ಸುದ್ದಿಯಿದೆ. ನಿಮ್ಮ ಕಡೆಯಿಂದ ಇಂತಹವರಿಗೆ ಟಿಕೆಟ್ ಕೊಡಬಾರದು ಹಾಗೂ ಇಂಥವರಿಗೇ ಕೊಡಬೇಕು ಎಂಬ ಬೇಡಿಕೆಯನ್ನು ಇಡುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಒಳ್ಳೆ ಕೆಲಸ ಮಾಡುವವರಿಗೆ ಟಿಕೆಟ್ ನೀಡಬೇಕು ಅನ್ನೋದು ನಮ್ಮ ನಿರೀಕ್ಷೆ-ಅಪೇಕ್ಷೆ ಎಲ್ಲವೂ. ಇನ್ನು ಟಿಕೆಟ್ ನೀಡುವ ವಿಚಾರ ಆ ಪಕ್ಷಕ್ಕೆ ಸೇರಿದ್ದು ಎಂದರು ಚಕ್ರವರ್ತಿ.
ಅಂದಹಾಗೆ, ಬಿಜೆಪಿಯ ಮೂಲಗಳು ತಿಳಿಸುವಂತೆ ಲೋಕಸಭೆ ಚುನಾವಣೆಗೆ ಯಾರಿಗೆ ಟಿಕೆಟ್ ಅನುಮಾನ ಎಂಬ ಬಗೆಗಿನ ಮಾಹಿತಿ ಇಲ್ಲಿದೆ.

ನಳಿನ್ ಕುಮಾರ್ ಕಟೀಲ್ ಮುಜುಗರದ ಹೇಳಿಕೆಗಳು
ಲೋಕಸಭೆ ಚುನಾವಣೆಗೆ ಬಿಜೆಪಿಯಲ್ಲಿ ಹಲವರಿಗೆ ಅಂದರೆ ಹಾಲಿ ಸಂಸದರಿಗೇ ಟಿಕೆಟ್ ಅನುಮಾನ ಎಂಬ ಮಾತು ಕೇಳಿಬರುತ್ತಿದೆ. ಅದರಲ್ಲಿ ಮೊದಲನೇ ಹೆಸರು ನಳಿನ್ ಕುಮಾರ್ ಕಟೀಲ್ ಅವರದು. ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ನಳಿನ್ ಕುಮಾರ್ ಕಾರ್ಯವೈಖರಿ ಬಗ್ಗೆ ಸಮಾಧಾನ ಇಲ್ಲ. ಅವರ ಸಂಘಟನಾ ಶಕ್ತಿ ಬಗ್ಗೆಯೇ ಆಕ್ಷೇಪಗಳಿವೆ. ಇನ್ನು ಅವರು ನೀಡಿದ ಕೆಲವು ಹೇಳಿಕೆಗಳಿಂದ ಪಕ್ಷವು ಮುಜುಗರ ಅನುಭವಿಸುವಂತಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿರೀಕ್ಷಿತ ಮಟ್ಟದ ಅಭಿವೃದ್ಧಿ ಆಗಿಲ್ಲ ಎಂಬುದು ಸೇರಿದಂತೆ ನಾನಾ ಆರೋಪಗಳಿವೆ. ನಳಿನ್ ಪರವಾಗಿ ಆರೆಸ್ಸೆಸ್ ನಿಂದ ಬಹಳ ಪ್ರಬಲವಾದ ಒತ್ತಡ ಬಾರದ ಹೊರತು ಟಿಕೆಟ್ ಅನುಮಾನವೇ.

ಸದಾನಂದ ಗೌಡರು ಕಾರ್ಯಕರ್ತರಿಗೆ ನಾಟ್ ರೀಚಬಲ್
ಬೆಂಗಳೂರು ಉತ್ತರ ಕ್ಷೇತ್ರವನ್ನು ಪ್ರತಿನಿಧಿಸುವ ಡಿ.ವಿ.ಸದಾನಂದ ಗೌಡರು ಕೇಂದ್ರದಲ್ಲಿ ಸಚಿವರೂ ಹೌದು. ಮೊದಲಿಗೆ ಮಹತ್ವದ ಖಾತೆಯನ್ನೇ ಕೊಟ್ಟು, ಬೆಳವಣಿಗೆಗೆ ಅವಕಾಶ ಮಾಡಿಕೊಟ್ಟಿದ್ದರೂ ಅದನ್ನು ಸಮರ್ಥವಾಗಿ ಬಳಸಿಕೊಳ್ಳಲು ವಿಫಲರಾದರು ಎಂಬುದು ಅವರ ಮೇಲಿನ ಆಕ್ಷೇಪ. ಇನ್ನು ಕಾರ್ಯಕರ್ತರ ಕೈಗೆ ಸಿಗುವುದಿಲ್ಲ ಎಂಬುದು ಆರೋಪ. ಬಿಜೆಪಿಯ ಪ್ರಾಥಮಿಕ ಪಾಠಗಳ ಪ್ರಕಾರ, ಕಾರ್ಯಕರ್ತರ ಜತೆಗೆ ನಿಕಟವಾಗಿ ಸಂಪರ್ಕ ಇರಿಸಿಕೊಳ್ಳುವುದು ಬಹಳ ಮುಖ್ಯ. ಅದರಲ್ಲೂ ಪಕ್ಷದೊಳಗೆ ಎತ್ತರದ ಸ್ಥಾನಗಳಿಗೆ ತಲುಪಿದಂತೆಲ್ಲ ಆ ಅಂಶಕ್ಕೆ ಹೆಚ್ಚು ಪ್ರಾಧಾನ್ಯ. ಆದರೆ ಸದಾನಂದ ಗೌಡರು ಕಾರ್ಯಕರ್ತರ ಕೈಗೂ ಸಿಗಲ್ಲ, ಕೆಲಸವೂ ನಾಸ್ತಿ. ಆದ್ದರಿಂದ ಈ ಸಲ ಅವರಿಗೆ ಟಿಕೆಟ್ ಡೌಟು ಎನ್ನುತ್ತಿವೆ ಪಕ್ಷದ ಮೂಲಗಳು.

ಅನಂತಕುಮಾರ್ ಹೆಗಡೆ ಮಾತುಗಳೇ ಮುಳುವಾಗುತ್ತವೆಯೇ?
ಉತ್ತರ ಕನ್ನಡದ ಸಂಸದ ಹಾಗೂ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆಗೆ ಸಹ ಈ ಸಲ ಟಿಕೆಟ್ ಅನುಮಾನ ಎಂಬ ಮಾತು ಕೇಳಿಬರುತ್ತಿದ್ದು, ಅಲ್ಲಿಂದ ಚಕ್ರವರ್ತಿ ಸೂಲಿಬೆಲೆ ಸ್ಪರ್ಧೆ ಮಾಡುತ್ತಾರೆ ಎಂಬ ಸುದ್ದಿ ಹರಿದಾಡುತ್ತಿತ್ತು. ಈ ಬಗ್ಗೆ ಸ್ವತಃ ಸೂಲಿಬೆಲೆ ಅವರನ್ನು ಮಾತನಾಡಿಸಿದಾಗ, ನನಗೆ ಒಂದು ಲೋಕಸಭಾ ಕ್ಷೇತ್ರಕ್ಕೆ ಸೀಮಿತನಾಗುವುದು ಇಷ್ಟವಿಲ್ಲ. ಎಂದೂ ಚುನಾವಣೆ ಸ್ಪರ್ಧೆಗೆ ಇಳಿಯುವುದಿಲ್ಲ. ಕಳೆದ ಸಲದಂತೆಯೇ ಈ ಸಲವೂ ಸುದ್ದಿ ಹಬ್ಬಿಸಿದ್ದಾರೆ. ಆದರೆ ನಾನು ಯುವ ಬ್ರಿಗೇಡ್ ಮೂಲಕ ಮೋದಿ ಅವರನ್ನು ಪ್ರಧಾನಿ ಮಾಡಲು, ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ಮಾಡುತ್ತೇನೆ ಹೊರತು ಸಂಸದ ಸ್ಥಾನಕ್ಕೆ ಸ್ಪರ್ಧೆ ಮಾಡುವುದಿಲ್ಲ ಎಂದರು. ಅನಂತಕುಮಾರ್ ಹೆಗಡೆ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳಾಗಿಲ್ಲ. ಇನ್ನು ಅವರ ಹೇಳಿಕೆ ಕಾರಣಕ್ಕೆ ವಿವಾದಗಳಾಗಿವೆ. ಈ ಸಲ ಹೊಸ ಮುಖವೊಂದಕ್ಕೆ ಟಿಕೆಟ್ ನೀಡುವ ಇರಾದೆ ಪಕ್ಷದೊಳಗಿದೆ.

ನಿರೀಕ್ಷೆಯಷ್ಟು ಚಟುವಟಿಕೆಯಲ್ಲಿ ಇಲ್ಲದ ಗದ್ದಿನಗೌಡರ್
ಬಾಗಲಕೋಟೆಯ ಸಂಸದರಾಗಿರುವ ಪಿ.ಸಿ.ಗದ್ದಿನಗೌಡರ್ ಬಗ್ಗೆ ಕೂಡ ಆಕ್ಷೇಪಗಳಿವೆ. ಅಂದುಕೊಂಡ ಮಟ್ಟದ ಅಭಿವೃದ್ಧಿ ಕಾರ್ಯಗಳು ಕ್ಷೇತ್ರದಲ್ಲಿ ಆಗಿಲ್ಲ. ನಿರೀಕ್ಷೆ ಮಾಡಿದಷ್ಟು ಚಟುವಟಿಕೆಯಾಗಿಲ್ಲ. ಆದ್ದರಿಂದ ಅವರಿಗೆ ಟಿಕೆಟ್ ನೀಡುವುದು ಬೇಡ ಎಂಬ ಮಾತು ಕೇಳಿಬರುತ್ತಿದೆ. ಇನ್ನು ಈ ಬಾರಿ ಯಾರು ನಿರೀಕ್ಷೆಯಂತೆ ಕೆಲಸ ಮಾಡಿಲ್ಲವೋ ಅಂಥವರಿಗೆ ಮುಲಾಜು ನೋಡದೆ ಟಿಕೆಟ್ ಕೊಡಬಾರದು ಅಷ್ಟೇ ಎಂಬ ಮಾತಿದೆ. ಜತೆಗೆ ಕೆಲವು ರಾಜ್ಯ ನಾಯಕರು, ಅದರಲ್ಲೂ ವರ್ಚಸ್ಸು ಉಳಿಸಿಕೊಂಡಂಥವರಿಗೆ ಲೋಕಸಭೆಗೆ ಟಿಕೆಟ್ ನೀಡುವ ಚಿಂತನೆ ಇದೆ ಎನ್ನುತ್ತವೆ ಪಕ್ಷದ ಮೂಲಗಳು.
-
ದಾವಣಗೆರೆಯಲ್ಲಿ ಹೈಡ್ರಾಮಾ: ಪ್ರದೀಪ್ ಈಶ್ವರ್ ಪ್ರಚಾರದ ವೇಳೆ ಚಪ್ಪಲಿ, ಪೊರಕೆ ತೋರಿಸಿದ ಬಿಜೆಪಿ ಕಾರ್ಯಕರ್ತರು -
ಮಾರ್ಚ್ 29ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Bengaluru: ಲಂಬೋರ್ಗಿನಿ ಪ್ರಕರಣ; ಕಾರೇ ರಿಜಿಸ್ಟರ್ ಆಗಿಲ್ಲ ಎಂದ RTO, ಸ್ಟಂಟ್ ಅಲ್ಲ ಬ್ರೇಕ್ ಸ್ಕಿಡ್ ಎಂದ ರಿಕ್ಕಿ ರೈ -
Jowar Price Today: ಕರ್ನಾಟಕದಲ್ಲಿ ಕ್ವಿಂಟಾಲ್ ಜೋಳದ ಬೆಲೆ ಎಷ್ಟಿದೆ, ಮಾರುಕಟ್ಟೆವಾರು ಪಟ್ಟಿ ಇಲ್ಲಿದೆ. -
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
ದಾವಣಗೆರೆಯಲ್ಲಿ ಹೈಡ್ರಾಮಾ: ಪ್ರದೀಪ್ ಈಶ್ವರ್ ಪ್ರಚಾರದ ವೇಳೆ ಚಪ್ಪಲಿ, ಪೊರಕೆ ತೋರಿಸಿದ ಬಿಜೆಪಿ ಕಾರ್ಯಕರ್ತರು -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger












Click it and Unblock the Notifications