ಕಾವೇರಿ, ಲಕ್ಷ್ಮಣತೀರ್ಥ, ಹೇಮಾವತಿಯ ಉಗಮವಾಗಿದ್ದು ಹೇಗೆ?
ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಕಾವೇರಿ, ಲಕ್ಷ್ಮಣತೀರ್ಥ ಮತ್ತು ಹೇಮಾವತಿ ಸಂಗಮ ಸ್ಥಳವಾದ ಅಂಬಿಗರಹಳ್ಳಿಯಲ್ಲಿ ಕುಂಭಮೇಳ ನಡೆಯುತ್ತಿದೆ. ಜಿಲ್ಲೆ, ರಾಜ್ಯ ಮಾತ್ರವಲ್ಲದೆ ಹೊರ ರಾಜ್ಯಗಳಿಂದಲೂ ಭಕ್ತರು ಆಗಮಿಸಿ ತೀರ್ಥಸ್ನಾನ ಮಾಡುತ್ತಿದ್ದಾರೆ.
ಇನ್ನು ಕಾವೇರಿ ನದಿ ಲೋಕ ಕಲ್ಯಾಣಕ್ಕಾಗಿಯೇ ಹುಟ್ಟಿ ಹರಿಯುತ್ತಿದ್ದು, ಇದಕ್ಕೆ ಲಕ್ಷ್ಮಣತೀರ್ಥ ಮತ್ತು ಹೇಮಾವತಿ ನದಿಗಳು ಅಂಬಿಗರಹಳ್ಳಿಯಲ್ಲಿ ಸಂಗಮವಾಗಿ ಹರಿಯುವುದು ವಿಶೇಷ. ಕುಂಭ ಮೇಳದ ಈ ಸಂದರ್ಭದಲ್ಲಿ ಈ ಮೂರು ನದಿಗಳ ಉಗಮದ ಬಗ್ಗೆ ತಿಳಿದುಕೊಳ್ಳುವುದು ಬಹುಮುಖ್ಯವಾಗಿದೆ. ಈ ನದಿಗಳ ಉಗಮ ಸ್ಥಾನದಿಂದ ಆರಂಭವಾಗಿ ಅಂಬಿಗರಹಳ್ಳಿಯಲ್ಲಿ ಸಂಗಮವಾಗುವವರೆಗೆ ಹಲವೆಡೆ ಹರಿದು ಬರುವ ಹಾದಿಯಲ್ಲಿ ಪುಣ್ಯಕ್ಷೇತ್ರಗಳನ್ನು ಸೃಷ್ಟಿಸಿದಲ್ಲದೆ, ರೈತರ ಜೀವ ಜೀವನಾಡಿಯಾಗಿವೆ.
ಕಬ್ಬು ಮಾರಾಟಕ್ಕೆ ರೈತ, ಸಕ್ಕರೆ ಕಾರ್ಖಾನೆ ನಡುವೆ ಒಪ್ಪಂದ ಕಡ್ಡಾಯ
ಕೊಡಗಿನ ಬ್ರಹ್ಮಗಿರಿಬೆಟ್ಟ ಶ್ರೇಣಿಯಲ್ಲಿರುವ ತಲಕಾವೇರಿಯಲ್ಲಿ ಉಗಮವಾಗುವ ಕಾವೇರಿ ನದಿ ಭಾಗಮಂಡಲ, ಬಲಮುರಿ, ಗುಹ್ಯ, ಕಣಿವೆ ಮೂಲಕ ಕೊಡಗಿನಿಂದ ಹೊರಹರಿದು ಮೈಸೂರು ಜಿಲ್ಲೆಗಾಗಿ ಹಾಸನದ ಮೂಲಕ ಮಂಡ್ಯ ಜಿಲ್ಲೆಯನ್ನು ಪ್ರವೇಶಿಸುತ್ತದೆ. ಕಾವೇರಿ ನದಿ ಉಗಮದ ಬಗೆಗಿನ ಪುರಾಣದ ಕಥೆಯನ್ನು ನೋಡುವುದಾದರೆ ಕವೇರನ ಮಾನಸ ಪುತ್ರಿ ಕಾವೇರಿಯನ್ನು ಅಗಸ್ತ್ಯ ಮುನಿಗಳು ವಿವಾಹವಾಗುತ್ತಾರೆ. ಈ ವೇಳೆ ಕಾವೇರಿ ನನಗೆ ಜನಕಲ್ಯಾಣ ಮಾಡುವ ಅಭಿಲಾಷೆಯಿದ್ದು, ನೀವು ಸದಾ ನನ್ನೊಂದಿಗೆ ಇರಬೇಕು ಒಂದು ವೇಳೆ ನನ್ನನ್ನು ಒಬ್ಬಂಟಿಯಾಗಿ ಬಿಟ್ಟು ಹೋದದ್ದೇ ಆದರೆ ನಾನು ನದಿಯಾಗಿ ಹರಿಯುವುದಾಗಿ ಷರತ್ತು ವಿಧಿಸುತ್ತಾಳೆ. ಅದಕ್ಕೆ ಅಗಸ್ತ್ಯ ಮುನಿಗಳು ಒಪ್ಪಿಗೆ ನೀಡುತ್ತಾರೆ.
ಷರತ್ತು ಮೀರಿದ ಪತಿಯಿಂದ ದೂರವಾಗಿ ನದಿಯಾದ ಕಾವೇರಿ
ಒಂದು ದಿನ ಅಗಸ್ತ್ಯ ಮುನಿಗಳು ತಾವಿದ್ದ ಆಶ್ರಮದಿಂದ ಬೆಟ್ಟದಾಚೆಗಿರುವ ಕನ್ನಿಕೆ ನದಿಯಲ್ಲಿ ಸ್ನಾನ ಮಾಡಲೆಂದು ಹೊರಡುತ್ತಾರೆ. ಕಾವೇರಿ ನಿದ್ದೆಯಲ್ಲಿರುವುದರಿಂದ ಅವಳು ಎಚ್ಚರವಾಗುವ ವೇಳೆಗೆ ಹಿಂತಿರುಗಿ ಬರಬಹುದೆಂದುಕೊಳ್ಳುತ್ತಾರೆ. ಆದರೆ ಅಗಸ್ತ್ಯ ಮುನಿಗಳು ಅತ್ತ ಸ್ನಾನಕ್ಕೆ ತೆರಳುತ್ತಿದ್ದಂತೆಯೇ ಇತ್ತ ನಿದ್ದೆಯಲ್ಲಿದ್ದ ಕಾವೇರಿಗೆ ಎಚ್ಚರವಾಗುತ್ತದೆ. ಸನಿಹದಲ್ಲಿ ಅಗಸ್ತ್ಯಮುನಿಗಳು ಇಲ್ಲದನ್ನು ಕಂಡು ಷರತ್ತು ಮೀರಿದ ಪತಿಯಿಂದ ದೂರವಾಗಿ ನದಿಯಾಗಿ ಹರಿದು ಲೋಕಕಲ್ಯಾಣ ಮಾಡಲು ಇದು ಸೂಕ್ತ ಸಮಯವೆಂದುಕೊಂಡು ಅಲ್ಲೇ ಇದ್ದ ಕೊಳಕ್ಕೆ ಇಳಿದು ಅಗಸ್ತ್ಯ ಮುನಿಗಳಿಗೆ ತಿಳಿಯದಂತೆ ಅಲ್ಲಿಂದ ಗುಪ್ತಗಾಮಿನಿಯಾಗಿ ಹರಿದು ಭಾಗಮಂಡಲ ಸೇರುತ್ತಾಳೆ. ಅಲ್ಲಿ ಕನ್ನಿಕೆ, ಸುಜ್ಯೋತಿ ನದಿಗಳೊಂದಿಗೆ ಸಂಗಮವಾಗಿ ಮುಂದೆ ಹರಿಯುತ್ತಾಳೆ.
ಇದು ಲಕ್ಷ್ಮಣ ಸೃಷ್ಟಿಸಿದ ಜಲ
ಲಕ್ಷ್ಮಣ ತೀರ್ಥ ನದಿಯ ಉಗಮದ ಬಗ್ಗೆ ನೋಡುವುದಾದರೆ ಸೀತೆಯನ್ನು ಅರಸುತ್ತಾ ಹೊರಟ ರಾಮಲಕ್ಷ್ಮಣರು ಕೊಡಗಿನ ಬ್ರಹ್ಮಗಿರಿಯ ತಪ್ಪಲಿಗೆ ಬರುತ್ತಾರೆ. ಈ ಬೆಟ್ಟ ದಾಟಿದರೆ ಕೇರಳ ಸೀಮೆ ಎಲ್ಲರೂ ಬೆಟ್ಟಗುಡ್ಡಗಳನ್ನು ದಾಟಿ ಶ್ರೀರಾಮ ಸೇರಿದಂತೆ ವಾನರರು ನಡೆಯುತ್ತಿದ್ದರೆ ಕೋಪಗೊಂಡ ಲಕ್ಷ್ಮಣ ಮುಂದಕ್ಕೆ ಹೆಜ್ಜೆಯಿರಿಸದೆ ಅಲ್ಲಿಯೇ ಕುಳಿತುಕೊಂಡನಂತೆ. ಕೆಲಕಾಲದ ನಂತರ ಶಾಂತಗೊಂಡ ಲಕ್ಷ್ಮಣ ತನ್ನ ವರ್ತನೆಗೆ ನಾಚಿ ಅಣ್ಣ ಶ್ರೀರಾಮನನ್ನು ನೋಯಿಸಿದ್ದಕ್ಕಾಗಿ ಅಗ್ನಿಕುಂಡ ನಿರ್ಮಿಸಿ ಅದರಲ್ಲಿ ಆತ್ಮಾಹುತಿ ಮಾಡಲು ನಿರ್ಧರಿಸಿದನಂತೆ. ಇದನ್ನು ಕಂಡ ರಾಮ ಭಯಗೊಂಡು ಲಕ್ಷ್ಮಣನನ್ನು ಸಮಾಧಾನಗೊಳಿಸಿ ಆತನ ತಪ್ಪನ್ನು ಕ್ಷಮಿಸಿದನಂತೆ.
ಇದರಿಂದ ಸಂತೋಷಗೊಂಡ ಲಕ್ಷ್ಮಣ ತಾನು ನಿರ್ಮಿಸಿದ ಅಗ್ನಿಕುಂಡವನ್ನು ಆರಿಸಲು(ನಂದಿಸಲು) ಬಾಣಬಿಟ್ಟನಂತೆ ಹಾಗೆ ಬಿಟ್ಟ ಬಾಣ ಜಲವನ್ನು ಸೃಷ್ಟಿಸಿ ಅಗ್ನಿಕುಂಡವನ್ನು ನಂದಿಸಿತಂತೆ. ಈ ರೀತಿ ಸೃಷ್ಟಿಯಾದ ಜಲವನ್ನು ರಾಮನೇ ಲಕ್ಷ್ಮಣತೀರ್ಥವೆಂದು ಹೆಸರಿಸಿದನಂತೆ. ಲಕ್ಷ್ಮಣ ತೀರ್ಥ ನದಿಯು ಇರ್ಫುವಿನಲ್ಲಿ ಜಲಪಾತವನ್ನು ಸೃಷ್ಟಿಸಿದೆ. ನಾಗರಹೊಳೆಯ ಮೂಲಕ ಹುಣಸೂರು, ಕೆ.ಆರ್.ನಗರದ ಮೂಲಕ ಮಂಡ್ಯ ಜಿಲ್ಲೆಯನ್ನು ಪ್ರವೇಶಿಸಿ ಕೆ.ಆರ್.ಪೇಟೆ ತಾಲೂಕಿನ ಅಂಬಿಗರಹಳ್ಳಿಯಲ್ಲಿ ಕಾವೇರಿಯೊಂದಿಗೆ ಸಂಗಮವಾಗುತ್ತದೆ.
ಹೇಮಾವತಿ ಉಗಮದ ಹಿಂದಿನ ಕಥೆ
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಜಾವಳಿ ಗ್ರಾಮದಲ್ಲಿ ಉಗಮವಾಗುವ ಹೇಮಾವತಿ ನದಿಯ ಉಗಮದ ಬಗ್ಗೆ ನೋಡುವುದಾದರೆ ಶಿಷ್ಯ ಸತ್ಯಕಾಮನಿಗೆ ಬ್ರಹ್ಮೋಪದೇಶ ಮಾಡಿದ ಗೌತಮ ಮಹರ್ಷಿಗಳು ಮುನ್ನೂರು ಹಸುಗಳನ್ನು ನೀಡಿ ಒಂದು ಸಾವಿರ ಆಗುವ ತನಕ ನೋಡಿಕೊಳ್ಳುವಂತೆ ಹೇಳುತ್ತಾರೆ. ಗುರುವಿನ ಆಜ್ಞೆಯಂತೆ ಹಸುಗಳನ್ನು ಪಡೆದು ಕಾಡಿಗೆ ಹೊರಟ ಸತ್ಯಕಾಮನಿಗೆ ಅಲ್ಲಿ ಪಂಚಭೂತಗಳಾದ ಭೂಮಿ, ಆಕಾಶ, ವಾಯು, ಅಗ್ನಿ, ನೀರಿನ ಬ್ರಹ್ಮತ್ವದ ಜ್ಙಾನವನ್ನು ಮತ್ತು ಆದಿಶಕ್ತಿಯ ಪರಿಚಯವಾಗುತ್ತದೆ. ಹಸುಗಳಿಗೆ ಅಗತ್ಯವಿರುವ ನೀರಿ(ಗಂಗೆ)ಗಾಗಿ ಆತ ಪಾರ್ವತಿಯನ್ನು ಕುರಿತು ತಪಸ್ಸು ಮಾಡಲು ಮುಂದಾಗುತ್ತಾನೆ. ಈ ವೇಳೆ ತನ್ನ ತಪಸ್ಸಿಗೆ ವಿಘ್ನ ಬಾರದಂತೆ ಗಣಪತಿಯನ್ನು ಸೃಷ್ಟಿಸಿ ಪೂಜೆ ಸಲ್ಲಿಸುತ್ತಾನೆ ಬಳಿಕ ತಪಸ್ಸು ಮಾಡುತ್ತಾನೆ. (ಸತ್ಯಕಾಮ ತಪ್ಪಸ್ಸಿಗೆ ಕುಳಿತ ಸ್ಥಳವನ್ನು ಹೇಮಾವತಿ ಗುಡ್ಡ ಎಂದು ಕರೆದರೆ, ಇಲ್ಲಿರುವ ಗಣಪತಿ ದೇವಾಲಯ ಆತನ ಸೃಷ್ಟಿ ಎಂದು ಹೇಳಲಾಗುತ್ತದೆ.)
ಸತ್ಯಕಾಮನ ಕಠಿಣ ತಪಸ್ಸಿಗೆ ಒಲಿದು ವರ ಕೊಟ್ಟ ಪಾರ್ವತಿ
ಕೊನೆಗೂ ಸತ್ಯಕಾಮನ ಕಠಿಣ ತಪಸ್ಸಿಗೆ ಒಲಿದ ಪಾರ್ವತಿ ವರಕೇಳುವಂತೆ ಹೇಳುತ್ತಾಳೆ. ಈ ವೇಳೆ ಈ ಜಾಗದಲ್ಲಿ ತನ್ನ ಹಸುಗಳಿಗೆ ಕುಡಿಯಲು ನೀರಿಲ್ಲ ಆದ್ದರಿಂದ ಗಂಗೆಯನ್ನು ಕರುಣಿಸುವಂತೆ ಬೇಡಿಕೊಳ್ಳುತ್ತಾನೆ. ಆಗ ಪಾರ್ವತಿ ಹಮ ಕರಗಿ ನೀರಾಗಿ ಕೆಳಗಿನ ದಂಡಕಾರಣ್ಯದ ಒಣ ಭೂಮಿಯಲ್ಲಿ ಹರಿಯಲಿ ಎಂದು ವರನೀಡುತ್ತಾಳೆ. ಆಕೆಯ ವರದಂತೆ ಜಲ ಸೃಷ್ಟಿಯಾಗುತ್ತದೆ. ಅದುವೇ ಹೇಮಾವತಿ ನದಿಯಾಗಿ ಹರಿಯುತ್ತಿದೆ.
ಹಾಸನ ಜನರ ಜೀವನಾಡಿ ಹೇಮಾವತಿ
ಮೊದಲಿಗೆ ಹೇಮವಾಹಿನಿ ಎಂದು ಕರೆಯಲಾಗುತ್ತಿದ್ದೆಂದೂ ಬಳಿಕ ಅದು ಹೇಮಾವತಿಯಾಯಿತೆಂದು ಹೇಳಲಾಗಿದೆ. ಇನ್ನು ಇಂದಿನ ಜಾವಳಿ ಗ್ರಾಮವನ್ನು ಜಾಬಾಲಿಪುರ ಎಂದು ಕರೆಯಲಾಗುತ್ತಿತ್ತು ಕ್ರಮೇಣ ಅದು ಜಾವಳಿಯಾಗಿದೆ ಎಂದು ಹೇಳಲಾಗುತ್ತಿದೆ. ಹೇಮಾವತಿ ನದಿ ಹಾಸನ ಜಿಲ್ಲೆಯ ಪ್ರಮುಖ ನದಿಯಾಗಿದ್ದು ರೈತರ ಪಾಲಿಗೆ ಜೀವನಾಡಿಯಾಗಿದೆ. ಚಿಕ್ಕಮಗಳೂರು ಜಿಲ್ಲೆಯಿಂದ ಹಾಸನ ಜಿಲ್ಲೆಗೆ ಹರಿದು ಬರುವ ನದಿಗೆ ಗೊರೂರಿನಲ್ಲಿ ಜಲಾಶಯವನ್ನು ನಿರ್ಮಿಸಲಾಗಿದೆ. ಬಳಿಕ ಮಂಡ್ಯ ಜಿಲ್ಲೆಯನ್ನು ಪ್ರವೇಶಿಸುವ ನದಿ ಅಂಬಿಗರಹಳ್ಳಿಯಲ್ಲಿ ಕಾವೇರಿ ನದಿಯೊಂದಿಗೆ ಸಂಗಮವಾಗುತ್ತದೆ.
ಹಾಸನಾಂಬ ಜಾತ್ರಾ ಮಹೋತ್ಸವಕ್ಕೆ ಅ.13ರಿಂದ ಚಾಲನೆ- ಸಿದ್ಧತೆ ಹೇಗಿದೆ? ಇಲ್ಲಿದೆ ಮಾಹಿತಿ