ವರ್ಷದ ವ್ಯಕ್ತಿ 2017: ಇನ್ಫಿ ಸ್ಥಾಪಕ ಎನ್.ಆರ್ ನಾರಾಯಣ ಮೂರ್ತಿ
ಹೊಸ ವರ್ಷವನ್ನು ಸ್ವಾಗತಿಸಲು ಒನ್ಇಂಡಿಯಾ ಕೂಡಾ ಸಜ್ಜಾಗಿದೆ. ಹಳೆಯ ವರ್ಷದ ಕಹಿ ಘಟನೆಗಳನ್ನು ಮರೆತು ಹೊಸ ಕನಸುಗಳ ಜೊತೆ ಹೊಸ ವರ್ಷಕ್ಕೆ ಕಾಲಿಡಲು ಮುಂದಾಗಿರುವ ನಮ್ಮ ಓದುಗರ ಮುಂದೆ ವರ್ಷದ ವ್ಯಕ್ತಿಗಳನ್ನು ಪರಿಚಯಿಸುತ್ತಿದ್ದೇವೆ.
ದೇಶದ ಎರಡನೇ ಅತಿ ದೊಡ್ಡ ಸಾಫ್ಟ್ ವೇರ್ ರಫ್ತು ಸಂಸ್ಥೆ ಇನ್ಫೋಸಿಸ್ ನ ಸಹ ಸ್ಥಾಪಕರಾದ ಎನ್. ಆರ್ ನಾರಾಯಣ ಮೂರ್ತಿ ಅವರು ಕಳೆದ ವರ್ಷ ಸಂಸ್ಥೆಯ ಆಡಳಿತ ಮಂಡಳಿ ತಿದ್ದುವುದರಲ್ಲಿ ನಿರತರಾಗಿದ್ದರು. ಇದು ಕರ್ನಾಟಕ ಸಾಫ್ಟ್ ವೇರ್ ಜಗತ್ತು, ಆರ್ಥಿಕ ವಲಯದ ಮೇಲೆ ಪರಿಣಾಮ ಬೀರಿದ್ದು ಸುಳ್ಳಲ್ಲ.
ಸಂಬಳ ಏರಿಕೆ ವಿವಾದದಿಂದಾಗಿ ಸಿಇಒ ಹಾಗೂ ಎಂ.ಡಿ ವಿಶಾಲ್ ಸಿಕ್ಕಾ ಅವರು ಸಂಸ್ಥೆ ತೊರೆದರು. ಮತ್ತೊಮ್ಮೆ ನಾರಾಯಣ ಮೂರ್ತಿ ಅವರು ಇನ್ಫೋಸಿಸ್ ನ ಹೊಸ ಸಾರಥಿ ಆಯ್ಕೆಯ ಜವಾಬ್ದಾರಿ ಹೊತ್ತುಕೊಂಡರು.

ಇಸ್ರೇಲಿ ತಂತ್ರಜ್ಞಾನ ಸಂಸ್ಥೆ ಪನಾಯ ಖರೀದಿ ವ್ಯವಹಾರದಿಂದ ನಿಲೇಕಣಿ ಕ್ಲೀನ್ ಚಿಟ್ ಸಿಕ್ಕಿದ್ದೇ ತಡ ಇನ್ಫೋಸಿಸ್ ನ ಆಡಳಿತ ಚುಕ್ಕಾಣಿ ಹಿಡಿಯುವಂತೆ ಕೇಳಿಕೊಂಡರು. ಇನ್ಫೋಸಿಸ್ ಬೋರ್ಡ್ ಸದಸ್ಯರ ಅಸಮಾಧಾನ, ತಪ್ಪುಗಳನ್ನು ತಮ್ಮ ಮೇಲೆ ಹೇರಿಕೊಂಡು ಸಂಸ್ಥೆಯ ಪ್ರಗತಿ ಹಾದಿ ತಪ್ಪದ್ದಂತೆ ನೋಡಿಕೊಂಡರು. ಈ ಮೂಲಕ ತ್ವರಿತ ನಿರ್ಧಾರ ಕೈಗೊಂಡು ಸಂಸ್ಥೆ ಹಾಗೂ ಆರ್ಥಿಕ ಅಲ್ಲೋಲ ಕಲ್ಲೋಲವನ್ನು ತಪ್ಪಿಸಿದರು. ಸಿಕ್ಕಾ ಅವರ ಜತೆ ಜಗ್ಗಾಟದಿಂದ ಷೇರುಪೇಟೆಯಲ್ಲಾದ ತಲ್ಲಣವನ್ನು ಮರೆಯುವಂತಿಲ್ಲ.
71 ವರ್ಷ ವಯಸ್ಸಿನ ನಾರಾಯಣ ಮೂರ್ತಿ ಅವರು ಬೋರ್ಡ್ ಸದಸ್ಯರ ವಿರೋಧ ಕಟ್ಟಿಕೊಳ್ಳದೆ ನಾಜೂಕಾಗಿ ವ್ಯವಹಾರ ಮುಗಿಸಿ ಸಂಸ್ಥೆಯನ್ನು ಅಪಾಯದಿಂದ ಪಾರು ಮಾಡಿದರು.
ಸಲೀಲ್ ಎಸ್ ಪರೇಖ್ ಅವರನ್ನು ಸಿಇಒ ಹಾಗೂ ವ್ಯವಸ್ಥಾಪಕ ನಿರ್ದೇಶಕರಾಗಿ ಜನವರಿ 02, 2018ರಲ್ಲಿ ಅಧಿಕಾರ ಸ್ವೀಕರಿಸಲಿದ್ದಾರೆ. ಆದರೆ, ಸಂಸ್ಥೆಯ ಎಲ್ಲಾ ಬೆಳವಣಿಗೆ ಹಿಂದೆ ನಾರಾಯಣ ಮೂರ್ತಿ ಅವರು ಈಗಲೂ ಸಕ್ರಿಯರಾಗಿದ್ದಾರೆ. ರಾಜ್ಯದ ಸಾಫ್ಟ್ ವೇರ್ ರಫ್ತು, ಆರ್ಥಿಕ ಪ್ರಗತಿಗೆ ಇನ್ಫೋಸಿಸ್ ಕೊಡುಗೆ ಮುಂದುವರಿದಿದೆ.
ಇನ್ಫೋಸಿಸ್ ಸೈನ್ಸ್ ಫೌಂಡೇಷನ್ ಮುಖ್ಯವಾಗಿ ಯುವ ವಿಜ್ಞಾನಿಗಳಿಗೆ ಹೊಸ ಸಂಶೋಧನೆ, ಅನ್ವೇಷಣೆಗಳಿಗೆ ನೀಡುತ್ತಿರುವ ಆದ್ಯತೆಯನ್ನು ಪರಿಗಣಿಸಿ ಜಾಗತಿಕ ಮಟ್ಟದ ಅಲೈಯಸ್ ಪ್ರೈಜ್ ಕೂಡಾ ನಾರಾಯಣ ಮೂರ್ತಿ ಅವರನ್ನು ಹುಡುಕಿಕೊಂಡು ಬಂದಿತು.












Click it and Unblock the Notifications