Get Updates
Get notified of breaking news, exclusive insights, and must-see stories!

ತಿರುಗುಬಾಣವಾದ ನೆಗೆಟಿವ್ ಅಭಿಯಾನ, ಕಾಂಗ್ರೆಸ್ಸಿನಲ್ಲಿ ಕೆಂಡ ನಿಗಿನಿಗಿ

ನವದೆಹಲಿ, ಮೇ 25 : 'ಗೆಲುವಿಗೆ ನೂರಾರು ಅಪ್ಪಂದಿರು, ಆದರೆ ಸೋಲಿಗೆ ಒಬ್ಬನೇ ಅಪ್ಪ' ಎಂಬ ಮಾತಿಗೆ ಕನ್ನಡಿಯಾಗಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಸಾಕ್ಷಿಯಾಗಿ ನಿಂತಿದ್ದಾರೆ. ಐದು ವರ್ಷಗಳಲ್ಲಿ ಎರಡನೇ ಭಾರೀ ಸೋಲು ಅವರನ್ನು ಕಂಗೆಡುವಂತೆ ಮಾಡಿದೆ.

2017ರಲ್ಲಿ ಉತ್ತರ ಪ್ರದೇಶದಲ್ಲಿ ಊಹಿಸಲಸಾಧ್ಯವಾದ ಸೋಲಿನ ನಂತರ ಎರಡನೇ ಬಾರಿ ರಾಹುಲ್ ಗಾಂಧಿ ಅವರು, ಶತಕಗಳ ಇತಿಹಾಸವಿರುವ ಕಾಂಗ್ರೆಸ್ ಅಧ್ಯಕ್ಷ ಗಾದಿಯನ್ನು ಬಿಡುವ ಮಾತಾಡಿದ್ದಾರೆ. ಈ ಬಾರಿ 2019ರ ಲೋಕಸಭೆ ಚುನಾವಣೆಯ ಹೀನಾಯ ಸೋಲು ಅವರ ಜಂಘಾಬಲವನ್ನೇ ಉಡುಗಿಸಿದೆ.

ಅವಮಾನಕರ ಪರಾಭವದ ನಂತರ, ನರೇಂದ್ರ ಮೋದಿ ವಿರುದ್ಧದ 'ಚೌಕಿದಾರ್ ಚೋರ್ ಹೈ' ಎಂಬ ಋಣಾತ್ಮಕ ಅಭಿಯಾನ, ಪುಲ್ವಾಮಾ ಆತ್ಮಾಹುತಿ ದಾಳಿ ಮತ್ತು ಬಾಲಕೋಟ್ ಏರ್ ಸ್ಟ್ರೈಕ್ ನಂತರ ಪಕ್ಷದ ನಾಯಕತ್ವ ನಡೆದುಕೊಂಡ ರೀತಿ ಪಕ್ಷದ ಸೋಲಿಗೆ ಕಾರಣವಾಗಿದೆ ಎಂದು ಕಾಂಗ್ರೆಸ್ಸಿನ ಕೆಲ ನಾಯಕರೇ ಅಪಸ್ವರ ಎತ್ತುತ್ತಿದ್ದಾರೆ.

ಇದು ನಿಜವೂ ಹೌದು. ಚೌಕಿದಾರ್ ಚೋರ್ ಹೈ ಎಂಬ ಋಣಾತ್ಮಕ ಅಭಿಯಾನ ಕಾಂಗ್ರೆಸ್ಸಿಗೆ ಸಂಪೂರ್ಣ ಉಲ್ಟಾ ಹೊಡೆದಿದೆ. ಎಕ್ಸಿಟ್ ಪೋಲ್ ಫಲಿತಾಂಶ ಹೊರಬಿದ್ದಾಗ 'ಚೌಕಿದಾರ್ ಚೋರ್ ನಹೀ ಹೈ' ಎಂದು ಬದಲಾಗಿದ್ದ ಜನರ ಅಭಿಮತ, ಲೋಕಸಭೆ ಚುನಾವಣೆ ಫಲಿತಾಂಶ ಹೊರಬೀಳುತ್ತಿದ್ದಂತೆ 'ಚೌಕಿದಾರ್ ಶೇರ್ ಹೈ' ಎನ್ನುವಲ್ಲಿಗೆ ಬಂದು ನಿಂತಿದೆ.

ಇದೆಲ್ಲದರ ಪರಿಣಾಮವಾಗಿ, ಭಾರತೀಯ ಜನತಾ ಪಕ್ಷ ಏಕಾಂಗಿಯಾಗಿ 303 ಸೀಟುಗಳನ್ನು ಗೆದ್ದು ಬೀಗುತ್ತಿದ್ದರೆ, ದಕ್ಷಿಣ ರಾಜ್ಯಗಳಲ್ಲಿನ ಗೆಲುವಿನ ಸಹಾಯದಿಂದ ಕಾಂಗ್ರೆಸ್ ಕೇವಲ 52 ಕ್ಷೇತ್ರಗಳಲ್ಲಿ ಮಾತ್ರ ವಿಜಯಿಯಾಗಿದೆ. ನೆಗೆಟಿವ್ ತಂತ್ರಗಾರಿಕೆ ಎಲ್ಲ ಸಮಯದಲ್ಲಿಯೂ ಸಹಾಯಕ್ಕೆ ಬರುವುದಿಲ್ಲ ಎಂಬುದು ರಾಹುಲ್ ಗಾಂಧಿ ಅವರಿಗೆ ತಡವಾಗಿಯಾದರೂ ಮನವರಿಕೆಯಾಗಿರಬಹುದು.

ರಾಹುಲ್ ಗಾಂಧಿಯಿಂದ ಸಾಧ್ಯವೇ ಇಲ್ಲ

ರಾಹುಲ್ ಗಾಂಧಿಯಿಂದ ಸಾಧ್ಯವೇ ಇಲ್ಲ

ರಾಹುಲ್ ಗಾಂಧಿ ಅವರು ಉನ್ನತ ಸ್ಥಾನದಲ್ಲಿಯೇ ಇದ್ದರೆ ಕಾಂಗ್ರೆಸ್ ಮತ್ತೆ ಮೇಲೇಳುವುದು ಖಂಡಿತ ಸಾಧ್ಯವಿಲ್ಲ ಎಂದು ಹೆಸರು ಹೇಳಲಿಚ್ಛಿಸದ ಕಾಂಗ್ರೆಸ್ ಮುಖ್ಯಮಂತ್ರಿಯೊಬ್ಬರು ಅಸಮಾಧಾನ ಹೊರಹಾಕಿದ್ದಾರೆ. ಒಂದು ಕುಟುಂಬಕ್ಕೆ ಸೇರಿದ ಮಾತ್ರಕ್ಕೆ 'ನಾನು ನಾಯಕನಾಗುತ್ತೇನೆ, ನನ್ನ ಸಹೋದರಿ ನಾಯಕಿಯಾಗುತ್ತಾಳೆ' ಎಂಬ ನಿರ್ಧಾರದ ಹೇರಿಕೆಯನ್ನು ಎಲ್ಲರೂ ಒಪ್ಪಿಕೊಳ್ಳಲೇಬೇಕು ಎಂಬಂಥ ಪರಿಸ್ಥಿತಿ ಕಾಂಗ್ರೆಸ್ಸಿನಲ್ಲಿದೆ. ಆದರೆ, ಇದನ್ನು ಇಂದಿನ ಪೀಳಿಗೆಯ ನಾಯಕ, ನಾಯಕಿಯರು ಒಪ್ಪಿಕೊಳ್ಳಲು ತಯಾರಿಲ್ಲ ಎಂದು ಮನದಲ್ಲಿ ಗಟ್ಟಿಯಾಗಿ ಹುದುಗಿದ್ದ ಕೋಪವನ್ನು ಅವರು ಮತ್ತು ಇತರ ನಾಯಕರು ಹೊರಹಾಕಿದ್ದಾರೆ.

ಚೌಕಿದಾರ್ ಚೋರ್ ಹೈನಿಂದ ಚೌಕಿದಾರ್ ಶೇರ್ ಹೈ

ಚೌಕಿದಾರ್ ಚೋರ್ ಹೈನಿಂದ ಚೌಕಿದಾರ್ ಶೇರ್ ಹೈ

ಚೌಕಿದಾರ್ ಚೋರ್ ಹೈ ಎಂಬ ಅಭಿಯಾನವೇ ತಪ್ಪಾಗಿತ್ತು. ಇಂಥ ನೆಗೆಟಿವ್ ಅಭಿಯಾನದ ಮೂಲಕ ದೇಶದ ಜನರಲ್ಲಿ ನರೇಂದ್ರ ಮೋದಿ ಬಗ್ಗೆ ತಪ್ಪು ಕಲ್ಪನೆ ಹುಟ್ಟಿಸುವ, ಆಕ್ರೋಶ ಉಕ್ಕಿಸುವ ಯತ್ನ ಹೊಳೆಯಲ್ಲಿ ಹುಣಿಸೆಹಣ್ಣು ತೊಳೆದಂತೆ ಆಗಿದೆ ಮತ್ತು ಅದು ನಮಗೇ ತಿರುಗುಬಾಣವಾಗಿದೆ. ಬರೀ ನೆಗೆಟಿವ್ ಸಂಗತಿಯನ್ನೇ ಬಿತ್ತುತ್ತ ಹೋದರೆ ಜನರು ಖಂಡಿತ ಇಷ್ಟಪಡುವುದಿಲ್ಲ. ಇದನ್ನು ಜನರಿಗೆ ಮನವರಿಕೆ ಮಾಡಿಕೊಡಲು ರಾಹುಲ್ ಗಾಂಧಿ ಅವರು ಸಾಕಷ್ಟು ಶ್ರಮಿಸಿದರೂ ಪ್ರತಿಫಲ ಸಿಕ್ಕಿಲ್ಲ. ಬದಲಿಗೆ, ಅವರ ಬಗ್ಗೆಯೇ ಜನರು ಅಸಹ್ಯಕರವಾಗಿ ನೋಡುವಂತಾಯಿತು.

ಸರ್ಜಿಕಲ್ ಸ್ಟ್ರೈಕ್ ಆದ ಏರ್ ಸ್ಟ್ರೈಕ್

ಸರ್ಜಿಕಲ್ ಸ್ಟ್ರೈಕ್ ಆದ ಏರ್ ಸ್ಟ್ರೈಕ್

ಪುಲ್ವಾಮಾ ಆತ್ಮಾಹುತಿ ದಾಳಿಯ ನಂತರ, ಚುನಾವಣೆಯನ್ನು ಗಮನದಲ್ಲಿರಿಸಿಕೊಂಡೇ ನರೇಂದ್ರ ಮೋದಿ ಸರಕಾರ ಷಡ್ಯಂತ್ರ ಮಾಡಿದೆ. ನಮ್ಮ ಜವಾನರನ್ನು ಬಲಿಕೊಟ್ಟಿದೆ ಮತ್ತು ಅದನ್ನು ಚುನಾವಣೆಯ ಟ್ರಂಪ್ ಕಾರ್ಡ್ ಆಗಿ ಬಳಸಿಕೊಳ್ಳುತ್ತಿದೆ ಎಂದು ಕಾಂಗ್ರೆಸ್ ರಾಗ ಎತ್ತಿತ್ತು. ಇಷ್ಟು ಸಾಲದೆಂಬಂತೆ, ಬಾಲಕೋಟ್ ನಲ್ಲಿರುವ ಪಾಕ್ ಉಗ್ರರ ನೆಲೆಗಳನ್ನು ಏರ್ ಸ್ಟ್ರೈಕ್ ಮೂಲಕ ಧ್ವಂಸ ಮಾಡಿದ ಮೇಲೆ, ನವಜೋತ್ ಸಿಂಗ್ ಸಿಧು, ರಣದೀಪ್ ಸುರ್ಜೇವಾಲಾರಂಥ ಹಲವಾರು ಕಾಂಗ್ರೆಸ್ ನಾಯಕರು ದಾಳಿಯ ಯಶಸ್ಸಿನ ಬಗ್ಗೆ ಸಾಕ್ಷಿ ಕೇಳಲು ಆರಂಭಿಸಿದರು ಮತ್ತು ವ್ಯಂಗ್ಯವಾಡಿ ಪ್ರತಿಕ್ರಿಯೆ ನೀಡಲು ಆರಂಭಿಸಿದರು. ಇದರಿಂದ ಜನರಿಗೆ ಮನವರಿಕೆ ಆಗಲೇ ಇಲ್ಲ. ಬದಲಿಗೆ ಅವರಲ್ಲಿ ದೇಶಭಕ್ತಿ ಇನ್ನಷ್ಟು ಜಾಗೃತವಾಗಿ ನರೇಂದ್ರ ಮೋದಿಯವರನ್ನೇ ಬೆಂಬಲಿಸಲು ಆರಂಭಿಸಿದರು. ಬಿಜೆಪಿ ಮಾಡಿದ ಏರ್ ಸ್ಟ್ರೈಕ್ ಕಾಂಗ್ರೆಸ್ ಮೇಲಿನ ಸರ್ಜಿಕಲ್ ಸ್ಟ್ರೈಕ್ ಆಯಿತು.

ಗಬ್ಬರ್ ಸಿಂಗ್ ಟ್ಯಾಕ್ಸ್ - ಗಹಗಹಿಸಿದ ಮತದಾರ

ಗಬ್ಬರ್ ಸಿಂಗ್ ಟ್ಯಾಕ್ಸ್ - ಗಹಗಹಿಸಿದ ಮತದಾರ

ಅಪನಗದೀಕರಣ ಮತ್ತು ಗ್ರಾಹಕ ಸೇವಾ ತೆರಿಗೆಯನ್ನು ಬಳಸಿಕೊಂಡು ಎಷ್ಟು ದುರ್ಬಲವಾಗಿ ರಾಹುಲ್ ಗಾಂಧಿ ಅವರು ನರೇಂದ್ರ ಮೋದಿ ಸರಕಾರದ ಮೇಲೆ ಆಕ್ರಮಣ ಮಾಡಿದರೆಂದರೆ, ಅವರ ಮಾತುಗಳೆಲ್ಲ ಅಪಹಾಸ್ಯದಂತೆ ಕಾಣಿಸಲು ಆರಂಭಿಸಿದವು. ನಿಮ್ಮಿಂದ ಕಿತ್ತುಕೊಂಡು ಶ್ರೀಮಂತರಿಗೆ ನೀಡಿದ ಹಣವನ್ನು ನಿಮಗೇ ವಾಪಸ್ ಕೊಡಿಸುತ್ತೇವೆ, ನಾಲ್ಕು ಸ್ಲ್ಯಾಬ್ ಗಳ 'ಗಬ್ಬರ್ ಸಿಂಗ್ ಟ್ಯಾಕ್ಸ್' ಎಂದು ರಾಹುಲ್ ಬಣ್ಣಿಸಿದ್ದ ಜಿಎಸ್ಟಿಯನ್ನು ಸವರಿಹಾಕಿ ಒಂದೇ ಸ್ಲ್ಯಾಬ್ ಅಡಿಯಲ್ಲಿ ತೆರಿಗೆ ಹೇರುವಂತೆ ಮಾಡುತ್ತೇವೆ ಎಂದು ರಾಹುಲ್ ಆಡಿದ ಮಾತುಗಳನ್ನು ಕೇಳಿ ಜನರು ಗಹಗಹಿಸಿ ನಕ್ಕರು. ಏಕೆಂದರೆ, ಜಿಎಸ್ಟಿಯಿಂದ ಸಾಕಷ್ಟು ಬಂಡವಾಳ ಹರಿದುಬರುತ್ತಿದೆ ಮತ್ತು ವ್ಯಾಪಾರ ವಹಿವಾಟುಗಳಲ್ಲಿ ಪಾರದರ್ಶಕತೆ ಕಂಡುಬಂದಿದೆ. ಜನರು ರಾಹುಲ್ ಅವರ ಅಪ್ರಬುದ್ಧ ಮಾತುಗಳನ್ನು ಕೇಳಲು ಕಿವಿಯಲ್ಲಿ ಹೂವು ಇಟ್ಟುಕೊಂಡಿರಲಿಲ್ಲ.

ಸ್ಯಾಮ್ ಪಿತ್ರೋಡಾ, ಮಣಿ ಶಂಕರ್ ಅಯ್ಯರ್

ಸ್ಯಾಮ್ ಪಿತ್ರೋಡಾ, ಮಣಿ ಶಂಕರ್ ಅಯ್ಯರ್

ಇದೆಲ್ಲ ಮುಗಿದು, ಜನರಲ್ಲಿ ರಾಹುಲ್ ಗಾಂಧಿ ಬಗ್ಗೆ ಸ್ವಲ್ಪ ಮಟ್ಟಿನ ನಂಬಿಕೆ ಹುಟ್ಟಿಕೊಳ್ಳುತ್ತಿದೆ ಎನ್ನುವಷ್ಟರಲ್ಲಿ, ಇಬ್ಬರು ಪ್ರಭೃತಿಗಳಾದ ಸ್ಯಾಮ್ ಪಿತ್ರೋಡಾ ಮತ್ತು ಹರಕು ಬಾಯಿಯ ಹಿರಿಯ ನಾಯಕ ಮಣಿ ಶಂಕರ್ ಅಯ್ಯರ್ ಅವರು ಕಾಂಗ್ರೆಸ್ಸಿನ ಶವಪೆಟ್ಟಿಗೆಗೆ ಕೊನೆಯ ಮೊಳೆ ಹೊಡೆದುಬಿಟ್ಟಿದ್ದರು. 1984ರ ಸಿಖ್ ಹತ್ಯಾಕಾಂಡ ಬಗ್ಗೆ 'ಹುವಾ ತೋ ಹುವಾ' (ಆದಿದ್ದಾಯಿತು) ಎಂದು ಬಡಬಡಿಸಿ ಕಾಂಗ್ರೆಸ್ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡುವಂತೆ ಮಾಡಿದರು. ಇನ್ನು, 2017ರಲ್ಲಿ ನರೇಂದ್ರ ಮೋದಿ ಅವರ ಬಗ್ಗೆ 'ನೀಚ್' ಕಾಮೆಂಟ್ ಮಾಡಿ ಪಕ್ಷದಿಂದಲೇ ಉಚ್ಚಾಟಿತರಾಗಿದ್ದ ಮಣಿ ಶಂಕರ್ ಅಯ್ಯರ್ ಅವರು ಅದೇ ಮಾತನ್ನು ಮತ್ತೆ ಅನುಮೋದಿಸಿ ವಿವಾದದ ಹೊಗೆಯೆಬ್ಬಿಸಿದ್ದರು. ಸ್ಯಾಮ್ ಪಿತ್ರೋಡಾ ಕ್ಷಮೆ ಕೇಳಿದ್ದರೂ ಅಷ್ಟರಲ್ಲಾಗಲೇ ಜನರು ಯಾರನ್ನು ಆಯ್ಕೆ ಮಾಡಬೇಕೆಂದು ನಿರ್ಧರಿಸಿಯಾಗಿತ್ತು.

ಕಾಂಗ್ರೆಸ್ಸಿನಲ್ಲಿ ಕ್ರಾಂತಿಯಾಗುವುದಾ

ಕಾಂಗ್ರೆಸ್ಸಿನಲ್ಲಿ ಕ್ರಾಂತಿಯಾಗುವುದಾ

ನನ್ನಿಂದ ಇಷ್ಟು ಮಾತ್ರ ಮಾಡಲು ಸಾಧ್ಯ ಎಂದು ನಿರ್ಧರಿಸಿದಂತಿರುವ ರಾಹುಲ್ ಗಾಂಧಿ ಅವರು ಕಾಂಗ್ರೆಸ್ ಕಾರ್ಯಕಾರಿಣಿ ಸಭೆಯಲ್ಲಿ, ಪಕ್ಷದ ಅಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡುವ ಪ್ರಸ್ತಾವನೆಯನ್ನು ಈಗಾಗಲೆ ಮುಂದಿಟ್ಟಿದ್ದಾರೆ. 2017ರಲ್ಲಿಯೂ ಅವರು ಇದೇ ಮಾತನ್ನು ಹೇಳಿದ್ದರು. ಈಗಲೂ ಸೋನಿಯಾ ಗಾಂಧಿ ಅವರು ಈ ಪ್ರಸ್ತಾವನೆಯನ್ನು ತಿರಸ್ಕರಿಸಿದ್ದು ರಾಹುಲ್ ಅವರೇ ಮುಂದುವರಿಯಬೇಕು ಎಂದು ಆಗ್ರಹಿಸಿದ್ದಾರೆ. ಆದರೆ, ರಾಹುಲ್ ಅವರೇ ಮುಂದುವರಿಯಬೇಕಿರುವುದು ಹೊಸ ಪೀಳಿಗೆಯ ನಾಯಕರಾದ ಜ್ಯೋತಿರಾಧಿತ್ಯ ಸಿಂಧಿಯಾ, ಸಚಿನ್ ಪೈಲಟ್, ಮಿಲಿಂದ್ ದೇವೋರಾ, ಅಜಯ್ ಮಾಕೇನ್ ಅಂಥವರಿಗೆ ಬೇಕಾಗಿದೆಯಾ? ಇದೀಗ ರಾಜಕೀಯಕ್ಕೆ ಧುಮುಕಿರುವ ಪ್ರಿಯಾಂಕಾ ಅವರು ಕಾಂಗ್ರೆಸ್ಸಿನ ನೊಗವನ್ನು ಹೊತ್ತುಕೊಳ್ಳುತ್ತಾರಾ? ಅಥವಾ ಕಾಂಗ್ರೆಸ್ಸಿನಲ್ಲಿ ಕ್ರಾಂತಿಯೇ ನಡೆಯಲಿದೆಯಾ? ಕಾಲವೇ ಉತ್ತರಿಸಲಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+