Get Updates
Get notified of breaking news, exclusive insights, and must-see stories!

ಡೇಂಜರಸ್ ಆಟಕ್ಕೆ ಇಳಿದಿದ್ದಾರೆಯೆ ಯಡಿಯೂರಪ್ಪ? ಪಾಟೀಲರ ಕಥೆಯೇನು?

ಕರ್ನಾಟಕದ ರಾಜಕಾರಣದಲ್ಲಿ ಸದ್ಯಕ್ಕೆ, ಹೆಚ್ಚೂಕಡಿಮೆ ಒಂದೇ ವಿಷಯಕ್ಕೆ ಸಂಬಂಧಿಸಿದಂತೆ ಅತ್ಯಂತ ಚಿಂತಾಕ್ರಾಂತರಾಗಿರುವ ಇಬ್ಬರು ನಾಯಕರು ಎಂದರೆ, ಮಾಜಿ ಮುಖ್ಯಮಂತ್ರಿ ಬಿಜೆಪಿಯ ಬಿಎಸ್ ಯಡಿಯೂರಪ್ಪ ಹಾಗೂ ಕಾಂಗ್ರೆಸ್ ಪಕ್ಷದ ಪ್ರಭಾವಿ ನಾಯಕ ಎಂ.ಬಿ. ಪಾಟೀಲ.

ಕೆಲ ಕಾಲದ ಹಿಂದೆ ಯಡಿಯೂರಪ್ಪ ಹಾಗೂ ಎಂ.ಬಿ. ಪಾಟೀಲ ಪರಸ್ಪರ ಒಬ್ಬರ ಚಿಂತೆಗೆ ಮತ್ತೊಬ್ಬರು ಕಾರಣರಾಗಿದ್ದರು. ಆಗ ಲಿಂಗಾಯತ ನಾಯಕತ್ವವನ್ನು ಉಳಿಸಿಕೊಳ್ಳುವುದು ಯಡಿಯೂರಪ್ಪ ಅವರ ಚಿಂತೆಯಾಗಿತ್ತು. ಆದರೆ ಅವರ ನೆತ್ತಿಯ ಮೇಲಿದ್ದ ಲಿಂಗಾಯತ ನಾಯಕತ್ವದ ಕಿರೀಟವನ್ನು ಕಿತ್ತುಕೊಳ್ಳುವುದು ಎಂ.ಬಿ. ಪಾಟೀಲರ ಚಿಂತೆಯಾಗಿತ್ತು.

ಅವತ್ತು ಆ ರೀತಿ ಚಿಂತೆ ಮಾಡುವುದು ಅವರಿಗೆ ಅನಿವಾರ್ಯವಾಗಿತ್ತು. ಆದರೆ ಈಗ ಅವರವರ ಪಕ್ಷಗಳ ಹೈಕಮಾಂಡ್ ನಡವಳಿಕೆಯಿಂದ ನೊಂದು ಅವರು ಚಿಂತೆಗೆ ಬಿದ್ದಿದ್ದಾರೆ.

ಅಂದ ಹಾಗೆ ಯಡಿಯೂರಪ್ಪ ಅವರಿಗೆ ದಿನದಿಂದ ದಿನಕ್ಕೆ ಒಂದು ವಿಷಯ ತುಂಬ ನೋವು ಕೊಡುತ್ತಿದೆ. ಅದೆಂದರೆ, ರಾಜ್ಯದಲ್ಲಿರುವ ಸಮ್ಮಿಶ್ರ ಸರ್ಕಾರವನ್ನು ಉರುಳಿಸಿ ಪರ್ಯಾಯ ಸರ್ಕಾರ ಮಾಡಲು ಅವರು ಸಜ್ಜಾಗಿದ್ದರೂ ಬಿಜೆಪಿ ಹೈಕಮಾಂಡ್ ಅದಕ್ಕೆ ಅನುಮತಿ ನೀಡುತ್ತಿಲ್ಲ.

ಕೆಲ ದಿನಗಳ ಹಿಂದೆ ಇದೇ ಕಾರಣಕ್ಕಾಗಿ ಅವರು ದೆಹಲಿಗೆ ಹೋಗಿದ್ದರು. ಹೋದವರು ಪಕ್ಷದ ಹಿರಿಯ ನಾಯಕರ ಜತೆ ಮಾತನಾಡಿ, ಕರ್ನಾಟಕದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು ಪೂರಕವಾದ ಶಕ್ತಿ ಈಗ ನನ್ನ ಜತೆಗಿದೆ. ಮುಂದುವರಿಯಲು ಅವಕಾಶ ಕೊಡಿ ಎಂದು ಕೇಳಿಕೊಂಡರು. ಆದರೆ ಪಕ್ಷದ ಪ್ರಮುಖರು ಅದಕ್ಕೆ ಒಪ್ಪಿಗೆ ನೀಡಲಿಲ್ಲ.

ಅದಕ್ಕೆ ಬಿಜೆಪಿ ಹೈಕಮಾಂಡ್ ನೀಡುತ್ತಿರುವ ಕಾರಣವೆಂದರೆ, ಒಂದು ವೇಳೆ ಕರ್ನಾಟಕದಲ್ಲಿ ಆಪರೇಷನ್ ಕಮಲ ಕಾರ್ಯಾಚರಣೆ ನಡೆಸಿ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರವನ್ನು ಉರುಳಿಸಿದರೆ ರಾಷ್ಟ್ರಾದ್ಯಂತ ಕಮಲ ಪಾಳೆಯದ ಬಗ್ಗೆ ತಪ್ಪು ಸಂದೇಶ ರವಾನೆಯಾಗುತ್ತದೆ. ಆ ಮೂಲಕ ಪಾರ್ಲಿಮೆಂಟ್ ಚುನಾವಣೆಯಲ್ಲಿ ಪಕ್ಷ, ಕಷ್ಟಕರ ಸನ್ನಿವೇಶವನ್ನು ಎದುರಿಸಬೇಕಾಗುತ್ತದೆ ಎಂಬುದು.

ಗುಜರಾತ್ ನಲ್ಲಿ ಅಮಿತ್ ಶಾ ಮಾಡಿದ್ದೇನು?

ಗುಜರಾತ್ ನಲ್ಲಿ ಅಮಿತ್ ಶಾ ಮಾಡಿದ್ದೇನು?

ವಾಸ್ತವದಲ್ಲಿ ಬಿಜೆಪಿ ಹೈಕಮಾಂಡ್ ಕೊಡುತ್ತಿರುವ ಕಾರಣಕ್ಕೂ, ಅದರ ಉದ್ದೇಶಕ್ಕೂ ಪರಸ್ಪರ ಸಂಬಂಧವೇ ಇಲ್ಲ ಅನ್ನುವುದು ಯಡಿಯೂರಪ್ಪ ಅವರ ಕಟ್ಟಾ ಬೆಂಬಲಿಗರ ವಾದ. ಆಪರೇಷನ್ ಕಮಲ ಕಾರ್ಯಾಚರಣೆಯ ವಿಷಯದಲ್ಲಿ ಪಕ್ಷ ಅಷ್ಟು ಕಟ್ಟು ನಿಟ್ಟಾಗಿದ್ದಿದ್ದೇ ಆಗಿದ್ದರೆ, ಗುಜರಾತ್ ವಿಧಾನಸಭೆಯಿಂದ ರಾಜ್ಯಸಭೆಗೆ ನಡೆದ ಚುನಾವಣೆಯಲ್ಲಿ ವರಿಷ್ಠರಾದ ಅಮಿತ್ ಶಾ ಏನು ಮಾಡಲು ಹೊರಟಿದ್ದರು? ಅನ್ನುವುದು ಇವರ ಪ್ರಶ್ನೆ.

ಇಂತಹ ಹಲವು ಪ್ರಶ್ನೆಗಳನ್ನು ಯಡಿಯೂರಪ್ಪ ಅವರ ಬೆಂಬಲಿಗರು ತಮ್ಮ ಬತ್ತಳಿಕೆಯಲ್ಲಿಟ್ಟುಕೊಂಡಿದ್ದಾರೆ. ಗುಜರಾತ್ ವಿಷಯ ಒಂದು ಸ್ಯಾಂಪಲ್ ಅಷ್ಟೇ. ಗುಜರಾತ್ ವಿಧಾನಸಭೆಯಿಂದ ರಾಜ್ಯಸಭೆಗೆ ಚುನಾವಣೆ ನಡೆಯಬೇಕು ಎಂದು ನಿರ್ಧಾರವಾದಾಗ ಇದೇ ಅಮಿತ್ ಶಾ ಏನು ಮಾಡಲು ಹೊರಟಿದ್ದರು?

ಕಾಂಗ್ರೆಸ್ ಪಕ್ಷದ ಶಾಸಕರನ್ನು ದಂಡು ದಂಡಾಗಿ ಸೆಳೆಯಲು ಹೊರಟಿದ್ದರು. ಸೋನಿಯಾ ಗಾಂಧಿ ಅವರ ಪರಮಾಪ್ತ ಅಹ್ಮದ್ ಪಟೇಲ್ ಅವರನ್ನು ಸೋಲಿಸಬೇಕು ಎಂಬ ಒಂದೇ ಕಾರಣಕ್ಕಾಗಿ ತಾನೇ ಆ ಮಟ್ಟದಲ್ಲಿ ಅಮಿತ್ ಶಾ ಅವರು ಇಂತಹ ಕಾರ್ಯಾಚರಣೆ ಮಾಡಲು ಹೊರಟಿದ್ದು?

ಹಿಂದೆ ಗುಜರಾತ್ ನಲ್ಲಿ ನಡೆದ ಸೊಹ್ರಾಬುದ್ದೀನ್ ಎನ್ ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ತಾವು ಜೈಲು ಸೇರಲು ಅಹ್ಮದ್ ಪಟೇಲ್ ಕಾರಣ ಅನ್ನುವ ಸೇಡಿಗಾಗಿ ಅಮಿತ್ ಶಾ ಈ ಕೆಲಸ ಮಾಡುವುದಾದರೆ, ಕರ್ನಾಟಕದಲ್ಲಿ, ಆ ಮೂಲಕ ದಕ್ಷಿಣ ಭಾರತದಲ್ಲಿ ಬಿಜೆಪಿ ತಲೆಯೆತ್ತುವಂತೆ ಮಾಡಲು ಹೊರಟಿರುವ ಯಡಿಯೂರಪ್ಪ ಅವರಿಗೆ ಅಗತ್ಯವಾದ ಬೆಂಬಲವನ್ನು ಏಕೆ ಕೊಡುತ್ತಿಲ್ಲ?

ರೈತರ ಸಾಲ ಮನ್ನಾ : ಎಚ್ಡಿಕೆ ಹೇಳಿದ್ದರ ಮಾತಿನ ಅರ್ಥ ಅದಾಗಿರಲಿಲ್ಲ!

ಶತಾಯ ಗತಾಯ ಯಡಿಯೂರಪ್ಪ ಸಿಎಂ ಆಗಬಾರದು

ಶತಾಯ ಗತಾಯ ಯಡಿಯೂರಪ್ಪ ಸಿಎಂ ಆಗಬಾರದು

ಶತಾಯ ಗತಾಯ ಯಡಿಯೂರಪ್ಪ ಸಿಎಂ ಆಗಬಾರದು ಎಂದು ತಾನೇ? ಹೋಗಲಿ ಪಾರ್ಲಿಮೆಂಟ್ ಚುನಾವಣೆಯ ನಂತರ ಕರ್ನಾಟಕದಲ್ಲಿ ನಡೆಯುವ ರಾಜಕೀಯ ಬೆಳವಣಿಗೆಗಳನ್ನು ಎನ್ ಕ್ಯಾಶ್ ಮಾಡಿಕೊಳ್ಳಲು ಯಡಿಯೂರಪ್ಪ ಅವರಿಗೆ ಅವಕಾಶ ಮಾಡಿಕೊಡಲಾಗುತ್ತದೆಯೇ? ನಿಶ್ಚಿತವಾಗಿಯೂ ಇಲ್ಲ. ಇದು ಯಡಿಯೂರಪ್ಪ ಅವರ ಆಪ್ತರ ವಾದ.

ಇದಕ್ಕೆ ಪೂರಕವಾಗಿ ಅವರೊಂದು ಅನುಮಾನ ವ್ಯಕ್ತಪಡಿಸುತ್ತಾರೆ. ವಿಧಾನಸಭೆ ಚುನಾವಣೆಯ ಫಲಿತಾಂಶ ಬಂದಾಗ ಯಡಿಯೂರಪ್ಪ ಅವರಿಗೆ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಲು ರಾಜ್ಯಪಾಲರು ಆಹ್ವಾನ ನೀಡಿದರು ಮತ್ತು ತಮಗಿರುವ ಬಹುಮತವನ್ನು ಸಾಬೀತುಪಡಿಸಲು ಯಡಿಯೂರಪ್ಪ ಅವರಿಗೆ ಹದಿನೈದು ದಿನಗಳ ಕಾಲಾವಕಾಶ ನೀಡಿದರು.

ಆದರೆ ಈ ವಿಷಯದಲ್ಲಿ ತಕರಾರು ಎದ್ದಾಗ ತರಾತುರಿಯಲ್ಲಿ ನ್ಯಾಯಾಲಯ ವಿಚಾರಣೆಯನ್ನು ಕೈಗೆತ್ತಿಕೊಂಡು, ಬಹುಮತ ಸಾಬೀತುಪಡಿಸಲು ನೀಡಿದ್ದ ಕಾಲಾವಕಾಶವನ್ನು ಮೊಟಕು ಮಾಡಿತು. ಹಾಗೆ ಮೊಟಕು ಮಾಡುವುದು ನ್ಯಾಯಾಲಯದ ವಿವೇಚನೆ. ಆದರೆ ಈ ವಿಷಯದಲ್ಲಿ ತರಾತುರಿಯಿಂದ ವಿಚಾರಣೆಯನ್ನು ಕೈಗೆತ್ತಿಕೊಂಡ ನ್ಯಾಯಾಲಯ ಅದೇ ಯಡಿಯೂರಪ್ಪ ಅವರ ವಿರುದ್ಧ ಹಿಂದಿನ ಸಿದ್ಧರಾಮಯ್ಯ ಸರ್ಕಾರ ಸಲ್ಲಿಸಿರುವ ಮೇಲ್ಮನವಿ ಅರ್ಜಿಯನ್ನು ಯಾಕೆ ಇದುವರೆಗೆ ಕೈಗೆತ್ತಿಕೊಂಡಿಲ್ಲ?

ಸೂಕ್ತ ಕಾಲಕ್ಕಾಗಿ ಅದು ಕಾಯುತ್ತಿದೆಯೇ? ಒಂದು ಸರ್ಕಾರ ಸಲ್ಲಿಸಿದ ಮೇಲ್ಮನವಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ಇದುವರೆಗೆ ಕೈಗೆತ್ತಿಕೊಂಡಿಲ್ಲ ಎಂಬುದರ ಅರ್ಥ ಏನು? ಸೂಕ್ತ ಕಾಲ ಬರಬೇಕು ಅಂತಲೇ? ಮತ್ತು ಪಾರ್ಲಿಮೆಂಟ್ ಚುನಾವಣೆಯ ನಂತರ ಆ ಕಾಲ ಬರಲಿದೆಯೇ? ಇದು ಯಡಿಯೂರಪ್ಪ ಅವರ ಬೆಂಬಲಿಗರ ಅನುಮಾನ.

ಮುಖ್ಯಮಂತ್ರಿಯಾಗಿ ಅನಂತ್, ಡಿಸಿಎಂ ರೇವಣ್ಣ?

ಮುಖ್ಯಮಂತ್ರಿಯಾಗಿ ಅನಂತ್, ಡಿಸಿಎಂ ರೇವಣ್ಣ?

ಹೀಗಾಗಿ ಅವರು ಪದೇ ಪದೇ ಯಡಿಯೂರಪ್ಪ ಅವರ ಮೇಲೆ ಒತ್ತಡ ಹೇರುತ್ತಾ, ಸಾರ್, ಪಾರ್ಲಿಮೆಂಟ್ ಚುನಾವಣೆಯ ಒಳಗಾಗಿ ನೀವು ಸಿಎಂ ಆಗಿ, ಇಲ್ಲದಿದ್ದರೆ ನೀವೆಂದೂ ಸಿಎಂ ಆಗಲಾರಿರಿ. ಯಾಕೆಂದರೆ ಲಿಂಗಾಯತ ಸಮುದಾಯದ ಮತಗಳಿಗಾಗಿ ಬಿಜೆಪಿ ಹೈಕಮಾಂಡ್ ಕಾಯುತ್ತಿದೆ. ಪಾರ್ಲಿಮೆಂಟ್ ಚುನಾವಣೆಯಲ್ಲಿ ಅದು ದಕ್ಕಿದರೆ ಇನ್ನೈದು ವರ್ಷ ಅದು ಸೇಫ್.

ತನಗೆ ಜೀವ ಸಿಕ್ಕ ಮೇಲೆ ಅದು ನಿಮ್ಮನ್ನು ಸೈಡ್ ಲೈನ್ ಮಾಡುತ್ತದೆ. ಅಷ್ಟೇ ಅಲ್ಲ, ರಾಜಕೀಯ ಸ್ಥಿತ್ಯಂತರಗಳ ನಡುವೆ ಇದೇ ಜೆಡಿಎಸ್ ಜತೆ ಕೈ ಜೋಡಿಸಿ ಕರ್ನಾಟಕದಲ್ಲಿ ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರ ಬರುವಂತೆ ಮಾಡುತ್ತದೆ.

ಹಾಗೇನಾದರೂ ಆದರೆ ಇವತ್ತು ಕೇಂದ್ರ ಸಚಿವರಾಗಿರುವ ಅನಂತ್ ಕುಮಾರ್ ಕರ್ನಾಟಕದ ಮುಖ್ಯಮಂತ್ರಿಯಾಗುತ್ತಾರೆ. ಜೆಡಿಎಸ್ ನ ಎಚ್.ಡಿ. ರೇವಣ್ಣ ಉಪಮುಖ್ಯಮಂತ್ರಿಯಾಗುತ್ತಾರೆ. ಹಾಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಕೇಂದ್ರ ಸಚಿವ ಸಂಪುಟದಲ್ಲಿ ಮಂತ್ರಿಯಾಗುತ್ತಾರೆ ಎಂದವರು ತಮ್ಮ ಲೆಕ್ಕಾಚಾರ ಹೇಳುತ್ತಿದ್ದಾರೆ.

ಡೇಂಜರಸ್ ಆಟಕ್ಕೆ ಇಳಿದ ಬಿಎಸ್ವೈ

ಡೇಂಜರಸ್ ಆಟಕ್ಕೆ ಇಳಿದ ಬಿಎಸ್ವೈ

ಇದು ಯಡಿಯೂರಪ್ಪ ಅವರ ತಲೆಗೂ ನಾಟಿದೆ. ನಾಟಿ ಮೊಳಕೆಯೊಡೆದು ಸಸಿಯೂ ಆಗಿ ಬೆಳೆದಿದೆ. ಹೀಗಾಗಿ ಅವರು ಬಿಜೆಪಿ ಹೈಕಮಾಂಡ್ ನ ಮಾತೇನೇ ಇದ್ದರೂ ಒಂದು ಡೇಂಜರಸ್ ಆಟಕ್ಕೆ ಇಳಿದಿದ್ದಾರೆ. ಆ ಆಟವೆಂದರೆ, ಹೈಕಮಾಂಡ್ ವಿರೋಧದ ನಡುವೆಯೂ ಪಾರ್ಲಿಮೆಂಟ್ ಚುನಾವಣೆಗೂ ಮುನ್ನ ಸರ್ಕಾರ ರಚಿಸಬೇಕು ಎಂಬುದು.

ಒಂದು ವೇಳೆ ಸರ್ಕಾರ ರಚಿಸುವ ಸಂದರ್ಭದಲ್ಲಿ ಬಿಜೆಪಿ ಹೈಕಮಾಂಡ್ ವಿರೋಧ ವ್ಯಕ್ತಪಡಿಸಿದರೆ ತಾವು ಮುಖ್ಯಮಂತ್ರಿಯಾಗುವುದನ್ನು ಪಕ್ಷದ ಹೈಕಮಾಂಡ್ ನಾಯಕರೇ ಸಹಿಸುತ್ತಿಲ್ಲ ಎಂಬ ಮೆಸೇಜು ಲಿಂಗಾಯತ ಸಮುದಾಯಕ್ಕೆ ರವಾನೆಯಾಗುವಂತೆ ಮಾಡುವುದು ಅವರ ಉದ್ದೇಶ.

ಹೀಗಾಗಿಯೇ ಅವರು ಮೊದಲು ತಮ್ಮ ಉದ್ದೇಶ ಸಾಧನೆಗಾಗಿ ಕಾಂಗ್ರೆಸ್ ನಲ್ಲಿರುವ ಲಿಂಗಾಯತ ನಾಯಕರಿಗೆ ಗಾಳ ಹಾಕಿದ್ದಾರೆ. ಈ ಪೈಕಿ ಮಾಜಿ ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ ಮುಖ್ಯರಾದವರು. ಸಿದ್ಧರಾಮಯ್ಯ ಅವರ ಸರ್ಕಾರವಿದ್ದಾಗ ವೀರಶೈವ-ಲಿಂಗಾಯತ ವಿವಾದ ಭುಗಿಲೇಳುವಂತೆ ಮಾಡಿ, ಅದರ ಮುಂಚೂಣಿಯಲ್ಲಿ ನಿಂತವರು ಎಂ.ಬಿ. ಪಾಟೀಲ.

ಈ ವಾದ ದೊಡ್ಡ ಮಟ್ಟದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಲಾಭದಾಯಕವಾಗದೇ ಇದ್ದರೂ ಅದರ ಕಿಡಿ ಜೀವಂತವಾಗಿರುವುದು, ಮುಂದಿನ ದಿನಗಳಲ್ಲಿ ಸುಡು ಬೆಂಕಿಯಾಗುವ ಶಕ್ತಿಯನ್ನು ಕಾಪಾಡಿಕೊಂಡಿರುವುದು ನಿಜ. ಹೀಗಾಗಿ ಅದನ್ನು ಕಾಪಾಡಿಕೊಂಡು ಬಂದಿರುವ ಎಂ.ಬಿ. ಪಾಟೀಲರಿಗೆ ಬಿಜೆಪಿಯ ಹಿರಿಯ ನಾಯಕರಾದ ಉಮೇಶ್ ಕತ್ತಿ ಸೇರಿದಂತೆ ಹಲವರು ಬೆನ್ನು ಬಿದ್ದಿದ್ದಾರೆ.

ಪಾಟೀಲರಿಗೆ ಉಮೇಶ್ ಕತ್ತಿ ಹಿತೋಪದೇಶ

ಪಾಟೀಲರಿಗೆ ಉಮೇಶ್ ಕತ್ತಿ ಹಿತೋಪದೇಶ

ಪಾಟೀಲರೇ.. ಪುರೋಹಿತಶಾಹಿ ಎಂಬುದು ಎಲ್ಲ ವರ್ಗಗಳಲ್ಲೂ ಇದೆ. ಮನುವಿನ ವರ್ಣಾಶ್ರಮ ವ್ಯವಸ್ಥೆಯಡಿ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಎಂಬ ವಿಂಗಡಣೆಯಿತ್ತು. ಆದರೆ ಇವತ್ತು ಪ್ರತಿಯೊಂದು ಜಾತಿಯಲ್ಲೂ ಇದಕ್ಕೆ ತತ್ಸಮಾನವಾದ ವ್ಯವಸ್ಥೆ ಉದ್ಭವವಾಗಿದೆ. ಹೀಗಾಗಿ ವೀರಶೈವ-ಲಿಂಗಾಯತ ಬೇರೆ ಬೇರೆ ಎಂದು ವಾದಿಸುವ ಮೂಲಕ ನೀವು ಕಾಂಗ್ರೆಸ್ ಪಕ್ಷಕ್ಕೆ ವೋಟ್ ಬ್ಯಾಂಕ್ ಸೃಷ್ಟಿ ಮಾಡಿಕೊಡಲು ಹೋಗುತ್ತಿದ್ದೀರಿ.

ಆದರೆ ಇತಿಹಾಸವನ್ನು ಗಮನಿಸಿ ನೋಡಿ. ನಿಜಲಿಂಗಪ್ಪ ಅವರಿಂದ ಹಿಡಿದು ನಿಮ್ಮ ತನಕ ಎಷ್ಟು ಮಂದಿ ಲಿಂಗಾಯತ ನಾಯಕರಿಗೆ ಕಾಂಗ್ರೆಸ್ ಪಕ್ಷ ಕೈ ಕೊಟ್ಟಿದೆ? ಒಬ್ಬ ವೀರೇಂದ್ರ ಪಾಟೀಲರಿಗೆ ಮುಖ್ಯಮಂತ್ರಿಗಿರಿ ನೀಡಿದರೂ, ಅವರನ್ನು ಎಷ್ಟು ನಿರ್ದಾಕ್ಷಿಣ್ಯವಾಗಿ ಪದಚ್ಯುತಗೊಳಿಸಲಾಯಿತು? ವಾಸ್ತವವಾಗಿ ಅವರ ಆರೋಗ್ಯ ಹದಗೆಟ್ಟ ಕಾರಣದಿಂದ ಅವರನ್ನು ಸಿಎಂ ಪಟ್ಟದಿಂದ ತೆಗೆಯಲಾಗಿರಲಿಲ್ಲ. ಬದಲಿಗೆ ಆ ಪಟ್ಟದಿಂದ ಪದಚ್ಯುತಗೊಳಿಸುವ ಸೂಚನೆ ನೀಡಿ, ಅವರ ಆರೋಗ್ಯ ಏರುಪೇರಾಗುವಂತೆ ಕಾಂಗ್ರೆಸ್ ಮಾಡಿತು.

ಮುಂದೆ 1999ರಲ್ಲಿ ಅಧಿಕಾರಕ್ಕೆ ಬಂದ ಎಸ್.ಎಂ. ಕೃಷ್ಣ ನೇತೃತ್ವದ ಸರ್ಕಾರ ಲಿಂಗಾಯತ ಸಮುದಾಯವನ್ನು ನಿರ್ಲಕ್ಷಿಸಿದ ರೀತಿ ನಿಮಗೆ ಗೊತ್ತು. ರಾಜ್ಯದ ಇತಿಹಾಸದಲ್ಲಿ ಆಳುವ ಪಕ್ಷದ ಮುಂಚೂಣಿಯಲ್ಲಿ ಒಬ್ಬೇ ಒಬ್ಬ ಲಿಂಗಾಯತ ನಾಯಕರು ಬಂದು ಕೂರದಂತೆ ಎಸ್.ಎಂ.ಕೃಷ್ಣ ನೋಡಿಕೊಂಡರು.

ಬಿಜೆಪಿ ಜೊತೆ ಬಂದುಬಿಡಿ ಪಾಟೀಲರೆ

ಬಿಜೆಪಿ ಜೊತೆ ಬಂದುಬಿಡಿ ಪಾಟೀಲರೆ

ಅದೇ ರೀತಿ, ನೀವು ಇಷ್ಟೆಲ್ಲ ಕಷ್ಟಪಟ್ಟರೂ ನಿಮಗೆ ಒಂದು ಮಂತ್ರಿ ಸ್ಥಾನ ನೀಡಲು ಅದು ಹಿಂದೆ ಮುಂದೆ ನೋಡುತ್ತಿದೆ. ಅದರರ್ಥ ಬೇರೇನೂ ಅಲ್ಲ. ನೀವು ಕಷ್ಟಪಟ್ಟು ದುಡಿದಿಟ್ಟಿದ್ದನ್ನು(ಮತ ಬ್ಯಾಂಕ್) ತನ್ನ ಲಾಭಕ್ಕೆ ಬಳಸಿಕೊಳ್ಳಲು ಅದು ಹವಣಿಸುತ್ತಿದೆಯೇ ಹೊರತು ಇನ್ನೇನಲ್ಲ. ಹೀಗಾಗಿ ನೀವು ಬಿಜೆಪಿಯ ಜತೆ ಬಂದು ಬಿಡಿ. ಆ ಮೂಲಕ ವೀರಶೈವ-ಲಿಂಗಾಯತ ಒಂದೇ ಎಂದು ತೋರಿಸಿಕೊಡೋಣ.

ನಾವು ಈ ಕೆಲಸ ಮಾಡಿದರೆ ಬಿಜೆಪಿ ಹೈಕಮಾಂಡ್ ಕೂಡಾ ಮುಂದಿನ ದಿನಗಳಲ್ಲಿ ಲಿಂಗಾಯತ ಸಮುದಾಯವನ್ನು ಎದುರು ಹಾಕಿಕೊಳ್ಳಲು ಹಿಂಜರಿಯುತ್ತದೆ. ಇಲ್ಲದಿದ್ದರೆ ಈಗ ಯಡಿಯೂರಪ್ಪ ಅವರಿಗೆ ಮಾತ್ರವಲ್ಲ, ಭವಿಷ್ಯದಲ್ಲಿ ಲಿಂಗಾಯತ ಸಮುದಾಯವನ್ನು ಅದು ನಿರ್ಲಕ್ಷಿಸುವ ಸ್ಥಿತಿಗೆ ಹೋಗುತ್ತದೆ. ಅದಕ್ಕೆ ಅವಕಾಶ ನೀಡುವುದು ಬೇಡ ಎಂಬುದು ಉಮೇಶ್ ಕತ್ತಿಯವರಂತಹ ನಾಯಕರು ಎಂ.ಬಿ. ಪಾಟೀಲ ಅವರಿಗೆ ನೀಡಿದ ಸಲಹೆ.

ವಾಸ್ತವವಾಗಿ 2004ರಲ್ಲೂ ಲಿಂಗಾಯತ ಸಮುದಾಯದವರಿಗೆ ಪ್ರತಿಪಕ್ಷದ ನಾಯಕ ಸ್ಥಾನ ನೀಡಲು ಬಿಜೆಪಿ ತಯಾರಿರಲಿಲ್ಲ. ಆದರೆ ಯಡಿಯೂರಪ್ಪ ತಮ್ಮ ಹುಟ್ಟುಹಬ್ಬದ ಸಮಾರಂಭವನ್ನು ಜಕ್ಕರಾಯನಕೆರೆ ಮೈದಾನದಲ್ಲಿ ಆಚರಿಸಿದಾಗ ಸಮುದಾಯದ ಧಾರ್ಮಿಕ ಮುಖಂಡರು, ಪರೋಕ್ಷವಾಗಿ ಬಿಜೆಪಿ ಹೈಕಮಾಂಡ್ ಗೆ ಎಚ್ಚರಿಕೆ ನೀಡಿದರು. ಲಿಂಗಾಯತರಿಗೆ ಅನ್ಯಾಯವಾದರೆ ನೋಡಿಕೊಂಡು ಸುಮ್ಮನಿರಲು ಸಾಧ್ಯವಿಲ್ಲ ಎಂಬ ಮೆಸೇಜು ನೀಡಿದರು. ಪರಿಣಾಮವಾಗಿ ಯಡಿಯೂರಪ್ಪ ಅವತ್ತು ಪ್ರತಿಪಕ್ಷದ ನಾಯಕರಾದರು.

ರಾಜಕಾರಣ ಮಾಡದಿದ್ದರೆ ಸಿಎಂ ಪಟ್ಟ ಸಿಗಲ್ಲ

ರಾಜಕಾರಣ ಮಾಡದಿದ್ದರೆ ಸಿಎಂ ಪಟ್ಟ ಸಿಗಲ್ಲ

ಇವತ್ತೂ ಅಷ್ಟೇ. ಒತ್ತಡದ ರಾಜಕಾರಣ ಮಾಡದಿದ್ದರೆ ಯಡಿಯೂರಪ್ಪ ಅವರಿಗೆ ಮುಖ್ಯಮಂತ್ರಿ ಪಟ್ಟ ತಪ್ಪುತ್ತದೆ. ಆದರೆ ಅದು ಅವರೊಬ್ಬರಿಗೆ ಆಗುವ ಅನ್ಯಾಯವಲ್ಲ. ಲಿಂಗಾಯತ ಸಮುದಾಯದ ಆಶೋತ್ತರಗಳಿಗೆ ಹಾಕುವ ಕೊಡಲಿ ಪೆಟ್ಟು. ಹೀಗಾಗಿ ನೀವು ಮತ್ತು ಯಡಿಯೂರಪ್ಪ ಒಂದಾಗಿ ಬಿಡಿ ಎಂದೂ ಅವರು ವಿವರಿಸಿದ್ದಾರೆ.

ಇದಾದ ನಂತರ ಎಂ.ಬಿ. ಪಾಟೀಲರು ಕಾಂಗ್ರೆಸ್ ಪಕ್ಷ ತಮ್ಮ ವಿಷಯದಲ್ಲಿ ನಡೆದುಕೊಂಡಿದ್ದನ್ನು ಪದೇ ಪದೇ ನೆನಪಿಸಿಕೊಳ್ಳುತ್ತಾ, ಬಿಜೆಪಿಗೆ ಸೇರದಿದ್ದರೆ ಒಟ್ಟಾರೆ ಸಮುದಾಯಕ್ಕೆ ಅನ್ಯಾಯವಾಗುತ್ತದೆ ಎಂಬ ಉಮೇಶ್ ಕತ್ತಿಯಂತಹ ನಾಯಕರ ಮಾತನ್ನು ಒಪ್ಪುತ್ತಾ ಮುಂದೇನು ಮಾಡಬೇಕು? ಅನ್ನುವ ಚಿಂತೆಗೆ ಬಿದ್ದಿದ್ದಾರೆ.

ಹೀಗೆ ಅವರಿಗೆ ಒಂದು ಚಿಂತೆಯಾದರೆ, ಯಡಿಯೂರಪ್ಪ ಅವರಿಗೆ ಮತ್ತೊಂದು ಚಿಂತೆ. ಈ ಎರಡು ಚಿಂತೆಗಳು ಸೇರಿ ಮುಂದಿನ ದಿನಗಳಲ್ಲಿ ರಾಜ್ಯ ರಾಜಕೀಯ ಬಿಜೆಪಿ ಪಾಲಿನ ಸಂತೆಯಾಗಿ ಪರಿವರ್ತನೆಯಾಗುವಂತೆ ಮಾಡುತ್ತದೆಯೇ? ಗೊತ್ತಿಲ್ಲ. ಆದರೆ ಅಂತಹ ವಾತಾವರಣವನ್ನು ನಿರ್ಮಿಸುವ ಕೆಲಸವಂತೂ ಸಾಂಗೋಪಾಂಗವಾಗಿ ನಡೆದಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+