Get Updates
Get notified of breaking news, exclusive insights, and must-see stories!

ಯಶಸ್ವಿ ಉದ್ಯಮಿ ಆರ್ಥಿಕ ತಜ್ಞ ಆಗಲಾರ: ಉದಾಹರಣೆಗೆ ಇನ್ಫಿ ನಾರಾಯಣ ಮೂರ್ತಿ

"300 ವರ್ಷಗಳಲ್ಲೇ ಮೊದಲ ಬಾರಿಗೆ ಭಾರತದಲ್ಲಿ ಎಂತಹ ಆರ್ಥಿಕ ಪರಿಸರ ಇದೆ ಅಂದರೆ ಪ್ರತಿಯೊಬ್ಬ ಭಾರತೀಯರಿಗೆ ಉತ್ತಮ ಭವಿಷ್ಯ ರೂಪಿಸುವ ವಿಶ್ವಾಸ ಮೂಡಿದೆ." ಇದು ಕಳೆದ ವಾರ ಇನ್ಫೋಸಿಸ್‌ನ ಸಂಸ್ಥಾಪಕರಲ್ಲಿ ಒಬ್ಬರಾದ ನಾರಾಯಣ ಮೂರ್ತಿ ಹೇಳಿದ ಮಾತು.

ಉತ್ತರಪ್ರದೇಶದ ಗೋರಖ್ ‌ಪುರದ ಮದನಮೋಹನ ಮಾಳವೀಯ ತಾಂತ್ರಿಕ ವಿಶ್ವವಿದ್ಯಾಲಯದ ಪದವಿ ಪ್ರದಾನ ಸಮಾರಂಭದಲ್ಲಿ ಅವರು ದೇಶದ ಆರ್ಥಿಕತೆಯ ಕುರಿತು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಮುಂದುವರಿದ ಅವರು, "ನಾವು ಇನ್ನಷ್ಟು ಶ್ರಮಪಟ್ಟರೆ, ಬಡ ಮಗುವಿನ ಕಣ್ಣೀರನ್ನು ಒರೆಸಬಹುದು; ಅದು ಕೂಡ ಮಹಾತ್ಮ ಗಾಂಧಿ ಆಶಯದಂತೆ," ಎಂದರು.

Recommended Video

      ಹಣದ ಬಗ್ಗೆ ಸುಧಾಮೂರ್ತಿ ಏನು ಹೇಳ್ತಾರೆ ಕೇಳಿ | Oneindia Kannada

      ಆರ್ಥಿಕ ತಜ್ಞರ ಮಾದರಿಯಲ್ಲಿ ಅಂಕಿ- ಅಂಶಗಳನ್ನು ಮುಂದಿಟ್ಟ ನಾರಾಯಣ ಮೂರ್ತಿ, "ನಮ್ಮ ಆರ್ಥಿಕತೆ ಆರರಿಂದ ಏಳು ಪರ್ಸೆಂಟ್ ‌ನಷ್ಟು ಈ ವರ್ಷ ಪ್ರಗತಿಯಾಗಿದೆ. ಭಾರತವು ಜಗತ್ತಿನ ಸಾಫ್ಟ್‌ವೇರ್ ಅಭಿವೃದ್ಧಿ ಕೇಂದ್ರ ಆಗಿದೆ. ನಮ್ಮ ವಿದೇಶಿ ವಿನಿಮಯ ಸಂಗ್ರಹ ನಾನೂರು ಬಿಲಿಯನ್ ಅಮೆರಿಕನ್ ಡಾಲರ್ ದಾಟಿದೆ. ಹೂಡಿಕೆದಾರರ ವಿಶ್ವಾಸ ಐತಿಹಾಸಿಕ ದಾಖಲೆ ಮಟ್ಟದಲ್ಲಿದೆ. ವಿದೇಶದಿಂದ ಪೋರ್ಟ್ ಫೋಲಿಯೋ ಇನ್ವೆಸ್ಟ್ ‌ಮೆಂಟ್ ಹಾಗೂ ವಿದೇಶ ನೇರ ಬಂಡವಾಳ ಹಿಂದೆಂದಿಗಿಂತ ಹೆಚ್ಚಾಗಿದೆ. ನಮ್ಮ ಉದ್ಯಮಿಗಳಿಗೆ ದೊಡ್ಡ ಮಟ್ಟದ ಬಂಡವಾಳ ವಿದೇಶಿ ಬಂಡವಾಳ ಹೂಡಿಕೆದಾರರಿಂದ ದೊರೆಯುತ್ತಿದೆ. ನಮ್ಮ ಷೇರು ಮಾರುಕಟ್ಟೆಗಳು ತುಂಬಾ ಚೆನ್ನಾಗಿವೆ. ಫೋರ್ಬ್ಸ್ ನಿಯತಕಾಲಿಕೆ ಪ್ರಕಾರ ಭಾರತದಲ್ಲಿ ಶತಕೋಟ್ಯಧಿಪತಿಗಳ ಸಂಖ್ಯೆಯಲ್ಲಿ ಹೆಚ್ಚಳ ಆಗುತ್ತಿದೆ," ಎಂದು ಬಣ್ಣಿಸಿದ್ದಾರೆ.

      Infosys Narayana Murthy A Successful Entrepreneur, Not An Economist

      ಮೂರ್ತಿಗಳ ಮಾತಿಗೂ ವಾಸ್ತವಕ್ಕೂ ತಾಳೆ ಆಗುತ್ತಿಲ್ಲ
      ನಾರಾಯಣ ಮೂರ್ತಿ ಅವರಿಗೆ 73 ವರ್ಷ ವಯಸ್ಸು. ಭಾರತದ ಸಾಫ್ಟ್‌ವೇರ್ ರಫ್ತು ಉದ್ಯಮದಲ್ಲಿ ಅವರ ಹೆಜ್ಜೆ ಗುರುತುಗಳಿವೆ. ಆಧುನಿಕ ಕರ್ನಾಟಕದ ಯಶಸ್ವಿ ಉದ್ಯಮಿ ಅವರು. ಹಾಗಂತ ಅವರು ದೇಶದ ಆರ್ಥಿಕತೆ ಕುರಿತು ಆಡುವ ಮಾತುಗಳನ್ನು ಯಾವುದೇ ಪರಿಶೀಲನೆ ಇಲ್ಲದೆ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಯಾಕೆಂದರೆ ಇನ್ಫಿ ನಾರಾಯಣ ಮೂರ್ತಿಗಳ ಮಾತಿಗೂ ವಾಸ್ತವದಲ್ಲಿ ದೇಶದ ಆರ್ಥಿಕ ಪರಿಸ್ಥಿತಿಗೂ ಹೊಂದಾಣಿಕೆ ಆಗುತ್ತಿಲ್ಲ.

      '300 ವರ್ಷಗಳಲ್ಲೇ ಮೊದಲ ಬಾರಿಗೆ ಭಾರತದಲ್ಲಿ ಆರ್ಥಿಕ ಪರಿಸರ ಅತ್ಯುತ್ತಮವಾಗಿದೆ' ಎಂಬುದು ನಾರಾಯಣ ಮೂರ್ತಿ ಹೇಳಿಕೆ. ಮೂರು ಶತಮಾನದ ಹಿಂದೆ ಭಾರತ ಎಂಬ ಕಲ್ಪನೆ ಹೇಗಿತ್ತು? ಅವತ್ತಿನ ಆರ್ಥಿಕತೆಗೂ, ಆಧುನಿಕ ಭಾರತದ ಆರ್ಥಿಕತೆಗೂ ಹೋಲಿಕೆ ಮಾಡಲು ಸಾಧ್ಯವಿದೆಯಾ?' ಇಲ್ಲ ಎನ್ನುತ್ತಾರೆ ಇತಿಹಾಸ ತಜ್ಞರು.

      Infosys Narayana Murthy A Successful Entrepreneur, Not An Economist

      "300 ವರ್ಷಗಳ ಹಿಂದೆ ಭಾರತ ಎಂಬ ಪರಿಕಲ್ಪನೆಯೇ ಇರಲಿಲ್ಲ. ಎಲ್ಲವೂ ಸಣ್ಣ ಸಣ್ಣ ಸಂಸ್ಥಾನಗಳಾಗಿದ್ದವು. ಉದಾಹರಣೆಗೆ ಯಲಹಂಕದ ನಾಡಪ್ರಭು, ಮೈಸೂರು ಸಂಸ್ಥಾನದ ಹೈದರ್‌ ಅಲಿ, ಚಿತ್ರದುರ್ಗದ ಮದಕರಿ ನಾಯಕ ಹೀಗೆ ಆಯಾ ಪ್ರದೇಶಕ್ಕೆ ಅಲ್ಲಿಯದೇ ನಾಣ್ಯ, ತೆರಿಗೆ ವ್ಯವಸ್ಥೆಗಳ ಅಡಿಯಲ್ಲಿ ಆಡಳಿತ ನಡೆದುಕೊಂಡು ಬಂತು. ಹೀಗಿರುವಾಗ 300 ವರ್ಷಗಳ ಹಿಂದಿನ ಕಾಲಘಟ್ಟವನ್ನು ಯಾಕಾಗಿ ನಾರಾಯಣ ಮೂರ್ತಿ ಹೋಲಿಕೆಗೆ ತೆಗೆದುಕೊಂಡರು ಎಂಬುದು ಅರ್ಥವಾಗುತ್ತಿಲ್ಲ," ಎಂದು ತುಮಕೂರು ವಿವಿಯ ಇತಿಹಾಸ ವಿಭಾಗದ ಪ್ರೊಫೆಸರ್‌ ಒಬ್ಬರು.

      ಇನ್ನು ಇತಿಹಾಸದ ಹೋಲಿಕೆಯನ್ನು ಪಕ್ಕಕ್ಕಿಟ್ಟು ಪ್ರಸಕ್ತ ಆರ್ಥಿಕತೆಯ ಬಗ್ಗೆ ನಾರಾಯಣ ಮೂರ್ತಿ ಹೇಳಿದ ಮಾತುಗಳನ್ನು ಒಪ್ಪಲು ಸಾಧ್ಯವಿದೆಯಾ? ಇದಕ್ಕೂ ತೀಕ್ಷ್ಣ ಪ್ರತಿಕ್ರಿಯೆ ವ್ಯಕ್ತವಾಗುತ್ತದೆ.

      ಸಿದ್ಧಾರ್ಥ್ ಆತ್ಮಹತ್ಯೆ ಭಾರತದ ಆರ್ಥಿಕ ಸಂಕಷ್ಟದ ಸಂಕೇತ
      "ಭಾರತದ ಆರ್ಥಿಕತೆ ಅತ್ಯಂತ ಸಂಕಷ್ಟದಲ್ಲಿದೆ. ಇಷ್ಟನ್ನು ಅರ್ಥ ಮಾಡಿಕೊಳ್ಳಲು ವಿಶೇಷವಾದ ಕನ್ನಡಕದ ಅಗತ್ಯವೇನೂ ಇಲ್ಲ. ಕಾಫಿಡೇ ಸಿದ್ಧಾರ್ಥ್ ಸಾವು ಇದೆಯಲ್ಲಾ, ಅದು ಭಾರತದ ಆರ್ಥಿಕತೆಯ ಸಂಕಷ್ಟದ ಸಂಕೇತ. ಜನರ ಕೊಳ್ಳುವ ಸಾಮರ್ಥ್ಯವೇ ಕಡಿಮೆ ಆಗಿದೆ. ಜನರು ಸಿನಿಮಾಗಳನ್ನೂ ನೋಡ್ತಿಲ್ಲ. ಪ್ರತಿ ವ್ಯಾಪಾರವೂ ಮುಳುಗುತ್ತಿದೆ. ನೋಟುಗಳ ಅಮಾನ್ಯೀಕರಣದಿಂದ ಬಿದ್ದ ಹೊಡೆತ ಭಯಂಕರವಾದದ್ದು. ಇನ್ಫೋಸಿಸ್‌ನಿಂದಲೇ ಸಾಕಷ್ಟು ಜನ ಕೆಲಸ ಕಳೆದುಕೊಂಡು ಹೊರಗೆ ಬರುತ್ತಿದ್ದಾರೆ. ಇನ್ಫೋಸಿಸ್ ನಾರಾಯಣಮೂರ್ತಿ ಅವರಿಗೆ ಇತಿಹಾಸ ಅಂತಲ್ಲ, ವರ್ತಮಾನದ ಪ್ರಜ್ಞೆಯೂ ಇದ್ದಂತಿಲ್ಲ. ಹೀಗೆ ಅವರು ಮಾತನಾಡಿರಬೇಕು ಅಂದರೆ, ಒಂದೋ ಅವರಿಗೆ ಭಾರತದ ಆರ್ಥಿಕತೆ ಬಗ್ಗೆ ಗೊತ್ತಿಲ್ಲ ಅಥವಾ ಯಾರನ್ನೋ ಓಲೈಸುವುದಕ್ಕೆ ಅವರು ಹೀಗೆ ಮಾತನಾಡಿರಬಹುದು," ಎನ್ನುತ್ತಾರೆ ಹಿರಿಯ ಪತ್ರಕರ್ತ ರವಿ ಬೆಳಗೆರೆ.

      1990ರ ದಶಕದಲ್ಲಿ ಆಯ್ಕೆ ಮಾಡಿಕೊಂಡ ನವ ಭಾರತದ ಆರ್ಥಿಕತೆಯ ಫಲಾನುಭವಿಗಳ ಪಟ್ಟಿಯಲ್ಲಿ ಪ್ರಮುಖ ಸ್ಥಾನ ಪಡೆದುಕೊಂಡವರು ನಾರಾಯಣ ಮೂರ್ತಿ. ಅವರ ಇನ್ಫೋಸಿಸ್‌ಗೆ ರಾಜ್ಯ ಹಾಗೂ ಕೇಂದ್ರ ಸರಕಾರಗಳು ಟ್ಯಾಕ್ಸ್ ಹಾಲಿಡೇ, ಟ್ಯಾಕ್ಸ್ ಫಾರ್‌ಗಾನ್ ಹೆಸರಿನಲ್ಲಿ ನೀಡಿದ ತೆರಿಗೆ ವಿನಾಯಿತಿಗಳು, ಚಿಲ್ಲರೆ ಬೆಲೆಗೆ ನೀಡಿದ ಭೂಮಿ, ಒದಗಿಸಿದ ಮೂಲ ಸೌಕರ್ಯಗಳ ಜತೆಗೆ ಅವರ ಶ್ರಮವೂ ಅವರನ್ನು ಯಶಸ್ವಿ ಉದ್ಯಮಿಯನ್ನಾಗಿಸಿದೆ.

      ಯಶಸ್ವಿ ಉದ್ಯಮಿ ಆರ್ಥಿಕ ತಜ್ಞನೂ ಆಗಲಾರ
      ಕಳೆದ ಕೆಲವು ತಿಂಗಳು ಅಂತರದಲ್ಲಿ ಸುತ್ತಮುತ್ತ ಕುಸಿಯುತ್ತಿರುವ ಆರ್ಥಿಕತೆಯ ಲಕ್ಷಣಗಳು ಢಾಳಾಗಿ ಕಾಣಿಸುತ್ತಿವೆ. ತಾಂಡವವಾಡುತ್ತಿರುವ ನಿರುದ್ಯೋಗಕ್ಕೆ ಸಾಕ್ಷಿಗಳು ಯಥೇಚ್ಛವಾಗಿ ಸಿಗುತ್ತಿವೆ, ದುರ್ಬರವಾಗಿರುವ ಜನರ ಸಂಕಷ್ಟಗಳು ಕಣ್ಣಿಗೆ ರಾಚುವಂತಿವೆ. ಡಾಲರ್‌ ಎದುರಿಗೆ ರುಪಾಯಿ ಮೌಲ್ಯ ಕುಸಿದಿದೆ. ರಫ್ತು ಉದ್ಯಮದಲ್ಲಿರುವ ಇನ್ಫಿ ನಾರಾಯಣ ಮೂರ್ತಿಯವರಿಗೆ ಕೊನೆಯ ಒಂದು ಅಂಶ ಅನುಕೂಲಕರವಾಗಿರಬಹುದು. ಅದೊಂದೇ ಕಾರಣಕ್ಕೆ ಅವರು ಇಡೀ ದೇಶದ ಆರ್ಥಿಕತೆ ಅತ್ಯಂತ ಸಮಪರ್ಕವಾಗಿದೆ ಎಂದು ಫರ್ಮಾನು ಕೊಡಲು ಮುಂದಾದರೆ ಹೇಗೆ ಎಂಬುದು ಸಾಮಾನ್ಯರಿಗೂ ಮೂಡುವ ಪ್ರಶ್ನೆ.

      ಈ ಕಾರಣಕ್ಕೆ ಹೇಳಿದ್ದು, ಒಬ್ಬ ಯಶಸ್ವಿ ಉದ್ಯಮಿ ಆರ್ಥಿಕ ತಜ್ಞನೂ ಆಗಲಾರ, ಇಲ್ಲವೇ ಇತಿಹಾಸಕಾರನೂ ಆಗಲಾರ. ಆತ ತನ್ನ ಉದ್ಯಮದ ಲಾಭ- ನಷ್ಟಗಳ ಆಧಾರದ ಮೇಲೆಯೇ ಎಲ್ಲವನ್ನೂ ಅರ್ಥಮಾಡಿಕೊಳ್ಳಲಷ್ಟೆ ಸಮರ್ಥನಾಗಿರುತ್ತಾನೆ. ಉದಾಹರಣೆ ನಮ್ಮ ಮುಂದಿದೆ.

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+