Get Updates
Get notified of breaking news, exclusive insights, and must-see stories!

Presidents of India- ಸಂಬಳದ ಹಣ ದಾನ ಮಾಡಿದ, ಸರಳ ಜೀವನ ನಡೆಸಿದ ರಾಷ್ಟ್ರಪತಿಗಳಿವರು

ಬೆಂಗಳೂರು, ಜೂನ್ 21: ಭಾರತದಲ್ಲಿ ನೂತನ ರಾಷ್ಟ್ರಪತಿಗಳ ಆಯ್ಕೆಗೆ ಚುನಾವಣಾ ಪ್ರಕ್ರಿಯೆ ನಡೆಯುತ್ತಿದೆ. 2022, ಜುಲೈ 18ರಂದು ಮತದಾನ ನಡೆಯಲಿದೆ. ವಿಪಕ್ಷಗಳು ಒಮ್ಮತದಿಂದ ಯಶವಂತ್ ಸಿನ್ಹಾರನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡಿವೆ. ಆಡಳಿತಾರೂಢ ಮೈತ್ರಿಕೂಟದಿಂದ ಅಭ್ಯರ್ಥಿ ಆಯ್ಕೆ ನಡೆಯುತ್ತಿದೆ. ಮಂಗಳವಾರ ರಾತ್ರಿಯೊಳಗೆ ಎನ್‌ಡಿಎಯಿಂದ ಅಭ್ಯರ್ಥಿ ಘೋಷಣೆ ಆಗುವ ನಿರೀಕ್ಷೆ ಇದೆ.

ಭಾರತದಲ್ಲಿ ರಾಷ್ಟ್ರಪತಿ ಹುದ್ದೆಗೆ ಅದರದ್ದೇ ಗೌರವ ಇದೆ. ಭಾರತದಲ್ಲಿ ಎಲ್ಲಾ ಅಧಿಕಾರ ಪ್ರಧಾನಮಂತ್ರಿ ಬಳಿ ಕೇಂದ್ರಿತವಾಗಿರುವುದನ್ನು ನೋಡುತ್ತೇವೆ. ಆದರೆ, ವಾಸ್ತವದಲ್ಲಿ ರಾಷ್ಟ್ರಪತಿಯೇ ಪರಮಾಧಿಕಾರ ಹೊಂದಿರುವುದು. ರಾಷ್ಟ್ರಪತಿ ಈ ದೇಶದ ಕಾರ್ಯಾಂಗದ ಮುಖ್ಯಸ್ಥ ಹಾಗು ಭಾರತದ ಸೇನಾ ಪಡೆಗಳ ಮುಖ್ಯ ಕಮಾಂಡರ್ ಆಗಿ ಅಧಿಕಾರ ಹೊಂದಿರುತ್ತಾರೆ. ರಾಷ್ಟ್ರಪತಿ ತಮ್ಮ ಪರಮಾಧಿಕಾರ ಉಪಯೋಗಿಸಲು ಸಂವಿಧಾನ ಅವಕಾಶ ಕಲ್ಪಿಸುತ್ತದೆ. ಪ್ರಧಾನಿ ಮೂಲಕ ಆಡಳಿತ ನಡೆಸಬಹುದು. ಭಾರತದಲ್ಲಿ ಇದೇ ರೂಢಿಗತವಾಗಿದ್ದು ಪ್ರಧಾನಿಯೇ ಎಲ್ಲಾ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ. ರಾಷ್ಟ್ರಪತಿಯದ್ದು ಕೇವಲ ಸಮ್ಮತಿಯ ಮುದ್ರೆ ಒತ್ತುವುದು ಎನ್ನುವಂಥ ಸ್ಥಿತಿ ಇದೆ.

ಇಂಥ ಸ್ಥಿತಿಯಲ್ಲಿ ರಾಷ್ಟ್ರಪತಿಗಳಾಗಿ ಛಾಪು ಮೂಡಿಸಿದ ಮತ್ತು ತಮ್ಮ ವೈಯಕ್ತಿಕ ಸರಳತೆಯಿಂದ ಗಮನ ಸೆಳೆದವರು ಇದ್ದಾರೆ. ತಮ್ಮ ಸಂಬಳ ಅಥವಾ ಸಂಭಾವನೆಯನ್ನು ಸಮಾಜಕ್ಕಾಗಿ ಮೀಸಲಿಟ್ಟವರಿದ್ದಾರೆ. ಇಂಥ ಕೆಲವರನ್ನು ಸ್ಮರಿಸಿಕೊಳ್ಳುವುದು ಸಂದರ್ಭೋಚಿತ ಎನಿಸುತ್ತದೆ.

 ಡಾ. ರಾಜೇಂದ್ರ ಪ್ರಸಾದ್

ಡಾ. ರಾಜೇಂದ್ರ ಪ್ರಸಾದ್

ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಡಾ. ರಾಜೇಂದ್ರ ಪ್ರಸಾದ್ ಸ್ವತಂತ್ರ ಭಾರತದ ಮೊದಲ ರಾಷ್ಟ್ರಪತಿ ಎನಿಸಿದ್ದಾರೆ. ಡಾ. ರಾಜೇಂದ್ರಪ್ರಸಾದ್ ಅವರ ಸಂಬಳ ಆಗಿನ ಕಾಲದಲ್ಲೇ ತಿಂಗಳಿಗೆ ಹತ್ತು ಸಾವಿರ ರೂ ಇತ್ತು. ಅದರಲ್ಲಿ ಅವರು ಅರ್ಧದಷ್ಟು ಸಂಬಳ ಮಾತ್ರ ಸ್ವೀಕರಿಸಿ ಉಳಿದವನ್ನು ಸರಕಾರದ ನಿಧಿಗೆ ಕಳುಹಿಸುತ್ತಿದ್ದರು. ತಮ್ಮ ಅಧಿಕಾರಾವಧಿ ಅಂತ್ಯವಾಗುವ ಕಾಲಘಟ್ಟದಲ್ಲಿ ಅವರು ಶೇ. 25 ಭಾಗದ ಸಂಬಳ ಮಾತ್ರ ಪಡೆಯುತ್ತಿದ್ದರಂತೆ.

ರಾಜೇಂದ್ರ ಪ್ರಸಾದ್ ಸರಳತನಕ್ಕೆ ಒಂದು ಒಳ್ಳೆಯ ನಿದರ್ಶನ ಇದೆ. ಅವರು ರಾಷ್ಟ್ರಪತಿ ಭವನದಲ್ಲಿ ಇರುವವರೆಗೂ ವೈಯಕ್ತಿಕ ಸಿಬ್ಬಂದಿವರ್ಗದಲ್ಲಿ ಇದ್ದದ್ದು ಒಬ್ಬರೇ ವ್ಯಕ್ತಿ. ಅಂದರೆ ಇವರಿಗೆ ಸಹಾಯಕವಾಗಿ ಮನೆಯಲ್ಲಿದ್ದದ್ದು ಒಬ್ಬ ವ್ಯಕ್ತಿ ಮಾತ್ರ. ಅಡುಗೆ ಮಾಡುತ್ತಿದ್ದುದು ರಾಜೇಂದ್ರ ಪ್ರಸಾದ್ ಅವರ ಪತ್ನಿಯೇ.

ನಿವೃತ್ತರಾದ ಬಳಿಕ ಅವರು ತಮ್ಮ ಸ್ವ ರಾಜ್ಯ ಬಿಹಾರಕ್ಕೆ ಮರಳಿ ತಮ್ಮ ಮುಂದಿನ ಜೀವನವನ್ನು ಬಹಳ ಸರಳವಾಗಿ ಬಾಳಿದರೆನ್ನಲಾಗಿದೆ.

 ವೈಸ್‌ರಾಯ್ ಹೌಸ್ ರಾಷ್ಟ್ರಪತಿ ಭವನವಾಗಿದ್ದು

ವೈಸ್‌ರಾಯ್ ಹೌಸ್ ರಾಷ್ಟ್ರಪತಿ ಭವನವಾಗಿದ್ದು

ರಾಷ್ಟ್ರಪತಿ ಭವನವನ್ನು ಕಟ್ಟಿದ್ದು ಬ್ರಿಟಿಷರ ಕಾಲದಲ್ಲಿ. ಆಗ ಅದು ವೈಸ್‌ರಾಯ್ ಬಂಗಲೆಯಾಗಿತ್ತು. ವೈಸ್ ರಾಯ್ ಹೌಸ್ ಎಂದೇ ಕರೆಯಲಾಗುತ್ತಿತ್ತು. ರಾಜೇಂದ್ರಪ್ರಸಾದ್ ರಾಷ್ಟ್ರಪತಿಯಾದ ಬಳಿಕ ಅವರು ಮಾಡಿದ ಮುಖ್ಯ ಕೆಲಸ ಎಂದರೆ ಇದನ್ನು ರಾಷ್ಟ್ರಪತಿ ಭವನ ಎಂದು ಮರುನಾಮಕರಣ ಮಾಡಿದ್ದು. ವಿಶ್ವದ ಯಾವ ದೇಶದಲ್ಲೂ ಅಧ್ಯಕ್ಷರ ಬಂಗಲೆ ಇಷ್ಟು ದೊಡ್ಡದಿಲ್ಲ ಎನ್ನಬಹುದು.

 ರಾಧಾಕೃಷ್ಣನ್ ಮುಕ್ಕಾಲು ಪಾಲು ಸಂಬಳ ದಾನ

ರಾಧಾಕೃಷ್ಣನ್ ಮುಕ್ಕಾಲು ಪಾಲು ಸಂಬಳ ದಾನ

ಮೊದಲ ರಾಷ್ಟ್ರಪತಿ ಡಾ. ರಾಜೇಂದ್ರಪ್ರಸಾದ್ ಅವರಂತೆ ಎರಡನೇ ರಾಷ್ಟ್ರಪತಿ ಡಾ. ಎಸ್ ರಾಧಾಕೃಷ್ಣನ್ ಕೂಡ ತಮ್ಮ ಸಂಬಳದ ನಿರ್ದಿಷ್ಟ ಭಾಗವನ್ನು ಸರಕಾರಕ್ಕೆ ಮರಳಿಸುತ್ತಿದ್ದರು. ತಮ್ಮ ಶೇ. 75ರಷ್ಟು ಸಂಬಳವನ್ನು ಅವರು ಪ್ರಧಾನಿ ರಾಷ್ಟ್ರೀಯ ಪರಿಹಾರ ನಿಧಿಗೆ ದಾನವಾಗಿ ಕೊಡುತ್ತಿದ್ದರು. ಆದಾಯ ತೆರಿಗೆ ಇತ್ಯಾದಿ ಎಲ್ಲವೂ ಕಡಿತಗೊಂಡು ಇವರ ಕೈಗೆ ಸಿಗುತ್ತಿದ್ದುದು ಕೇವಲ 1,700 ರೂ. ತಮ್ಮ ಮೂಲ ಸಂಬಳದಲ್ಲಿ ಇವರ ಪಡೆದುಕೊಳ್ಳುತ್ತಿದ್ದುದು ಶೇ. 20ಕ್ಕಿಂತಲೂ ಕಡಿಮೆ ಸಂಬಳ.

ರಾಧಾಕೃಷ್ಣನ್ ಅವರದ್ದೂ ಸರಳ ಜೀವನಶೈಲಿಯೇ. ವಿದೇಶ ಪ್ರವಾಸಗಳಿಗೆ ಇವರು ತಮ್ಮ ನೆಂಟರಿಷ್ಟರನ್ನು ಜೊತೆಗೆ ಕರೆದೊಯ್ಯುತ್ತಲೇ ಇರಲಿಲ್ಲ. ಇವರ ಸಿಬ್ಬಂದಿ ವರ್ಗದಲ್ಲಿ ಇದ್ದವರು ಇಬ್ಬರು ಮಾತ್ರ. ಸರಕಾರ ಕೊಡುತ್ತಿದ್ದ ಕಾರು ಬಿಟ್ಟು ತಮ್ಮ ಸ್ವಂತ ಕಾರನ್ನು ಇವರು ಬಳಕೆ ಮಾಡುತ್ತಿದ್ದರು.

 ಸರಕಾರಕ್ಕೆ 60 ಎಕರೆ ಜಮೀನು ಕೊಟ್ಟ ರೆಡ್ಡಿ

ಸರಕಾರಕ್ಕೆ 60 ಎಕರೆ ಜಮೀನು ಕೊಟ್ಟ ರೆಡ್ಡಿ

ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ನೀಲಂ ಸಂಜೀವ ರೆಡ್ಡಿ ಭಾರತದ 6ನೇ ರಾಷ್ಟ್ರಪತಿ. 1977ರಲ್ಲಿ ರಾಷ್ಟ್ರಪತಿಯಾದ ಇವರು ತಮಗೆ ಬರುತ್ತಿದ ಸಂಬಳದಲ್ಲಿ ಶೇ. 70 ಭಾಗವನ್ನು ಸರಕಾರಕ್ಕೆ ಮರಳಿಸಿದ್ದರು. ಆಗರ್ಭ ಶ್ರೀಮಂತರಾಗಿದ್ದ ಅವರು ತಮ್ಮ 60 ಎಕರೆ ಸ್ವಂತ ಜಮೀನನ್ನು ಸರಕಾರಕ್ಕೆ ದಾನವಾಗಿ ಕೊಟ್ಟಿದ್ದರು.

ರಾಷ್ಟ್ರಪತಿ ಭವನಕ್ಕೆ ರೆಡ್ಡಿ ಅಡಿ ಇಟ್ಟಾಗ ತೆಗೆದುಕೊಂಡು ಬಂದ ಲಗೇಜು ಬಹಳ ಅಲ್ಪ. ಅಧಿಕಾರಾವಧಿ ಮುಗಿದ ಬಳಿಕ ಇವರ ಲಗೇಜು ಇನ್ನೂ ಕಡಿಮೆ ಆಗಿಹೋಗಿತ್ತು.

 ಸಂಬಳ, ಉಳಿತಾಯವೆಲ್ಲಾ ದಾನ ಮಾಡಿದ ಕಲಾಂ

ಸಂಬಳ, ಉಳಿತಾಯವೆಲ್ಲಾ ದಾನ ಮಾಡಿದ ಕಲಾಂ

ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಸದಸ್ಯರ ಬೆಂಬಲದೊಂದಿಗೆ 2002ರಲ್ಲಿ ಭಾರತದ 11ನೇ ರಾಷ್ಟ್ರಪತಿ ಆದ ಎಪಿಜೆ ಅಬ್ದುಲ್ ಕಲಾಂ ಹೆಸರು ಈಗಿನ ತಲೆಮಾರಿಗೆ ಚಿರಪರಿಚಿತ. ಭಾರತದ ಮಿಸೈಲ್ ಮ್ಯಾನ್ ಎಂದೇ ಖ್ಯಾತವಾದ ಅಬ್ದುಲ್ ಕಲಾಂ ಅತ್ಯಂತ ಜನಪ್ರಿಯ ರಾಷ್ಟ್ರಪತಿ ಎನಿಸಿದ್ದರು. ಕಲಾಂ ತಮ್ಮೆಲ್ಲಾ ಸಂಬಳ ಹಾಗೂ ಉಳಿತಾಯವನ್ನು ತಾವೇ ಸ್ಥಾಪಿಸಿದ್ದ ಪೂರಾ ಎಂಬ ಚಾರಿಟಬಲ್ ಟ್ರಸ್ಟ್‌ಗೆ ದಾನ ಮಾಡಿದ್ದರು.

ಜೀವಿತದ ಕೊನೆಯ ದಿನದವರೆಗೂ ಯೋಗಕ್ಷೇಮವನ್ನು ಸರಕಾರವೇ ನೋಡಿಕೊಳ್ಳುವಾಗ ಸಂಬಳ ಇಟ್ಟುಕೊಂಡು ಏನು ಮಾಡುವುದು. ಸಮಾಜದ ಒಳಿತಿಗೆ ಉಪಯೋಗವಾಗಲಿ ಎಂಬುದು ಕಲಾಂ ಅನಿಸಿಕೆ. ಕಲಾಂ ಯಾವತ್ತೂ ಟಿವಿ ಖರೀದಿಸಿದವರಲ್ಲ. ತಮ್ಮಲ್ಲಿದ್ದ ಅಲ್ಪ ಆಸ್ತಿಗೆ ಯಾರಿಗೂ ವಿಲ್ ಬರೆಯಲಿಲ್ಲ.

ಅಬ್ದುಲ್ ಕಲಾಂ ರಾಷ್ಟ್ರಪತಿಯಾಗಿದ್ದಾಗ ತಿರುವನಂತಪುರಂನಲ್ಲಿ ವಿಕ್ರಂ ಸಾರಾಭಾಯ್ ಗಗನ ಕೇಂದ್ರಕ್ಕೆ ಅಧಿಕೃತ ಭೇಟಿ ನೀಡಿದ್ದರು. ಕಲಾಂ ಹಿಂದೆ ಅಲ್ಲಿಯೇ ಕೆಲಸ ಮಾಡುತ್ತಿದ್ದುದುದು. ಅಲ್ಲಿದ್ದ ಎಲ್ಲಾ ಸಿಬ್ಬಂದಿಯನ್ನೂ ಕಲಾಂ ಆತ್ಮೀಯವಾಗಿ ಕಾಣುತ್ತಿದ್ದರು. ರಾಷ್ಟ್ರಪತಿಯಾಗಿ ಬಂದಾಗಲೂ ಅದೇ ಆತ್ಮೀಯತೆ ಇತ್ತು. ಹಿಂದೆಲ್ಲಾ ತನಗೆ ಚಪ್ಪಲಿ ರಿಪೇರಿ ಮಾಡಿಕೊಡುತ್ತಿದ್ದ ಚಮ್ಮಾರನನ್ನು ನೆನಪಿಸಿಕೊಂಡು ಅವರೇ ಖುದ್ದಾಗಿ ಹೋಗಿ ಮಾತನಾಡಿಸುತ್ತಿದ್ದರು.

(ಒನ್ಇಂಡಿಯಾ ಸುದ್ದಿ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+