ಪರಪ್ಪನ ಅಗ್ರಹಾರ ಜೈಲಿನಲ್ಲಿ ಶಶಿಕಲಾಗೆ ವಿಶೇಷ ಸೌಕರ್ಯ ಬಗ್ಗೆ ಎಸಿಬಿ ವರದಿ
ಬೆಂಗಳೂರು, ಆಗಸ್ಟ್ 16: ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿವಂಗತ ಜೆ ಜಯಲಲಿತಾ ಅವರ ಆಪ್ತೆ ವಿ ಕೆ ಶಶಿಕಲಾ ಅವರು ಭ್ರಷ್ಟಾಚಾರ ಪ್ರಕರಣದಲ್ಲಿ ಸಿಲುಕಿ ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿರುವ ಕೇಂದ್ರ ಕಾರಾಗೃಹದಲ್ಲಿ ಜೈಲುವಾಸ ಅನುಭವಿಸಿದ್ದು ನೆನಪಿರಬಹುದು. ಜೈಲುವಾಸ ಅವಧಿ ಪೂರೈಸಿ ತಮ್ಮ ರಾಜ್ಯಕ್ಕೆ ಈಗ ಮರಳಿದ್ದಾರೆ. ಆದರೆ, ಜೈಲಿನಲ್ಲಿ ಐಷಾರಾಮಿ ಸೌಲಭ್ಯ ಅನುಭವಿಸಿದ್ದರು ಎಂಬ ಆರೋಪದಿಂದ ಇನ್ನೂ ಮುಕ್ತರಾಗಿಲ್ಲ.
ಶಶಿಕಲಾಗೆ ಐಷಾರಾಮಿ ಸೌಕರ್ಯ ಒದಗಿಸಲು ಅಧಿಕಾರಿಗಳಿಗೆ ಲಂಚ ನೀಡಲಾಗಿತ್ತು ಎಂಬ ಆರೋಪ ಕೇಳಿ ಬಂದಿತ್ತು. ಇದಕ್ಕೆ ಸಂಬಂಧಿಸಿದಂತೆ ವಾಸ್ತವಿಕ ವರದಿ ಸಲ್ಲಿಸುವಂತೆ ಭ್ರಷ್ಟಾಚಾರ ನಿಗ್ರಹ ದಳಕ್ಕೆ (ಎಸಿಬಿ) ಕರ್ನಾಟಕ ಹೈಕೋರ್ಟ್ ನಿರ್ದೇಶಿಸಿದೆ. ಮುಚ್ಚಿದ ಲಕೋಟೆಯಲ್ಲಿ ಈ ಕುರಿತ ವರದಿಯನ್ನು ಸಲ್ಲಿಸಲು ಎಸಿಬಿ ಮುಂದಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಎಸಿಬಿ ಯಾವುದೇ ತೆರನಾದ ತನಿಖೆ ಕೈಗೊಂಡಿಲ್ಲ ಎಂದು ಅರ್ಜಿದಾರರ ಪರ ವಕೀಲರು ನ್ಯಾಯಾಲಯದ ಗಮನಸೆಳೆದ ಹಿನ್ನೆಲೆಯಲ್ಲಿ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಮತ್ತು ನ್ಯಾಯಮೂರ್ತಿ ಎನ್ ಎಸ್ ಸಂಜಯ್ ಗೌಡ ನೇತೃತ್ವದ ವಿಭಾಗೀಯ ಪೀಠ ಆದೇಶ ಮಾಡಿದೆ.
ಈ ಮಧ್ಯೆ, ತನಿಖೆ ಪೂರ್ಣಗೊಳಿಸಲು ಮತ್ತಷ್ಟು ಕಾಲಾವಕಾಶ ನೀಡುವಂತೆ ಎಸಿಬಿ ಪರ ವಕೀಲರು ನ್ಯಾಯಾಲಯವನ್ನು ಕೋರಿದರು. ತನಿಖೆಯ ವಿಸ್ತೃತ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸುವಂತೆ ಆದೇಶಿಸಿದ ಪೀಠವು ಪ್ರಕರಣರ ವಿಚಾರಣೆಯನ್ನು ಆಗಸ್ಟ್ 25ಕ್ಕೆ ಮುಂದೂಡಿದೆ.
2014ರ ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿವಗಂತ ಜೆ ಜಯಲಲಿತಾ ಜೊತೆಗೆ ಸಹ ಆರೋಪಿ ಎನಿಸಿ, ನಂತರ ಆರೋಪ ಸಾಬೀತಾಗಿದ್ದರಿಂದ ಅಪರಾಧಿಯಾಗಿ ಶಶಿಕಲಾ ಅವರು ಶಶಿಕಲಾ ಅವರು 2017ರ ಫೆಬ್ರುವರಿ 15ರಂದು ಪೊಲೀಸರಿಗೆ ಶರಣಾಗಿದ್ದರು. ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ನಾಲ್ಕು ವರ್ಷಗಳ ಕಾಲ ಶಿಕ್ಷೆ ಅನುಭವಿಸಿದ್ದರು.
ಶಶಿಕಲಾ ಅವರು 1997 ಹಾಗೂ 2014ರಲ್ಲಿ 35 ದಿನಗಳು, 2017ರಲ್ಲಿ 17 ದಿನಗಳ ಪೆರೋಲ್ ಪಡೆದುಕೊಂಡಿದ್ದರು. ಫೆಬ್ರವರಿ 15, 2017ರಲ್ಲಿ ಬಂದ ಕೋರ್ಟ್ ಆದೇಶದಂತೆ ಶಶಿಕಲಾ ಹಾಗೂ ಇತರರು ಪರಪ್ಪನ ಅಗ್ರಹಾರದಲ್ಲಿರುವ ಕೇಂದ್ರ ಕಾರಾಗೃಹ ಸೇರಿದ್ದರು. ಶಶಿಕಲಾ ಅವರು ತಮ್ಮ ಪತಿ ಎಂ.ನಟರಾಜನ್ ನಿಧನರಾದಾಗ ಪೆರೋಲ್ ಮೇಲೆ 15 ದಿನಗಳ ಕಾಲ ಜೈಲಿನಿಂದ ಹೊರಗಿದ್ದರು. ತಂಜಾವೂರಿನಲ್ಲಿ ಪತಿಯ ಅಂತ್ಯಸಂಸ್ಕಾರ ವಿಧಿ ಮುಗಿಸಿಕೊಂಡು ಜೈಲಿಗೆ ಮರಳಿದ್ದರು.
ಜನವರಿ 27, 2021ರಂದು ಅವರ ಶಿಕ್ಷೆ ಅವಧಿ ಪೂರ್ಣಗೊಂಡಿತ್ತು. ಆದರೆ, ಕೊವಿಡ್ 19 ಪೀಡಿತರಾಗಿದ್ದ ಶಶಿಕಲಾ ಅವರಿಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು.
ಎರಡು ತಿಂಗಳಲ್ಲಿ ತನಿಖೆ ಪೂರ್ಣಗೊಳಿಸಬೇಕು ಎಂದು ಎಸಿಬಿಗೆ ನಿರ್ದೇಶನ ನೀಡಿದ್ದ ನ್ಯಾಯಾಲಯವು ಚೆನ್ನೈ ಮೂಲದ ಶಿಕ್ಷಣ ತಜ್ಞೆ ಕೆ ಎಸ್ ಗೀತಾ ಸಲ್ಲಿಸಿದ್ದ ಮನವಿಯನ್ನು ಜೂನ್ 11ರಂದು ವಿಲೇವಾರಿ ಮಾಡಿತ್ತು. ಪತ್ರಿಕೆಯೊಂದರ ವರದಿ ಪ್ರಸ್ತಾಪಿಸಿ ಎಸಿಬಿಯು ಬೆಳಗಾವಿಯ ಹಿಂಡಲಗಾ ಜೈಲಿನ ಮೇಲೆ ದಾಳಿ ನಡೆಸಿದ್ದರ ಕುರಿತು ಅರ್ಜಿದಾರೆ ತಗಾದೆ ಎತ್ತಿದರು.
Recommended Video
ಈ ನಡುವೆ, ಪರಪ್ಪನ ಅಗ್ರಹಾರ ಜೈಲಿನಲ್ಲಿ ಶಶಿಕಲಾ ಅವರಿಗೆ ವಿಶೇಷ ಸೌಲಭ್ಯ ಕಲ್ಪಿಸಲಾಗಿತ್ತು ಎಂದು ನಿವೃತ್ತ ಐಎಎಸ್ ಅಧಿಕಾರಿ ವಿನಯ್ ಕುಮಾರ್ ಅವರು ರಾಜ್ಯ ಸರ್ಕಾರಕ್ಕೆ ಸಲ್ಲಿಸಿದ್ದ ವರದಿಯಲ್ಲಿ ಉಲ್ಲೇಖಿಸಿದ್ದರು. "ಜೈಲಿನಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದ್ದು, ಶಶಿಕಲಾ ಅವರಿಗೆ ವಿಶೇಷ ಆತಿಥ್ಯ ನೀಡಲಾಗಿತ್ತು" ಎಂದು ಐಪಿಎಸ್ ಅಧಿಕಾರಿ ಡಿ ರೂಪಾ ಆರೋಪಿಸಿದ್ದರು. ಹೀಗಾಗಿ, ಸರ್ಕಾರವು ವಿನಯ್ ಕುಮಾರ್ ನೇತೃತ್ವದಲ್ಲಿ ತನಿಖೆಗಾಗಿ ಸಮಿತಿ ರಚನೆ ಮಾಡಿತ್ತು. ಈ ವರದಿಯನ್ನು ಅರ್ಜಿದಾರರು ತಮ್ಮ ಮನವಿಯಲ್ಲಿ ಉಲ್ಲೇಖಿಸಿದ್ದರು.(ಮಾಹಿತಿ ಕೃಪೆ: ಬಾರ್ ಅಂಡ್ ಬೆಂಚ್)