ಸುಳ್ಳು ಸುದ್ದಿಯಿಂದ ರಕ್ಷಾ ಕವಕ; ಗೂಗಲ್ ಪ್ರಯೋಗ- ಏನಿದರ ಮರ್ಮ?
ಮಾಧ್ಯಮ ಎನ್ನುವುದು ಜನರಲ್ಲಿ ಜಗತ್ತಿನ ಅಥವಾ ನಮ್ಮ ಸುತ್ತಮುತ್ತಲ ಆಗುಹೋಗುಗಳನ್ನು ತಿಳಿಸುವ ಮತ್ತು ಅರಿವು ಮೂಡಿಸುವ ಒಂದು ಪ್ರಮುಖ ವೇದಿಕೆ. ಆದರೆ, ಮೀಡಿಯಾವನ್ನು ದುರುಪಯೋಗಿಸಿಕೊಳ್ಳುವ ಪ್ರವೃತ್ತಿ ಹೆಚ್ಚುತ್ತಿದೆ. ಅನೇಕ ಮಾಧ್ಯಮಗಳು ಈಗ ನಿಷ್ಪಕ್ಷಪಾತವಾಗಿ ಉಳಿದಿಲ್ಲ. ಸ್ವಾರ್ಥದ ಲಾಲಸೆಯಲ್ಲಿ ಉದ್ದೇಶಪೂರ್ವಕವಾಗಿ ಸುಳ್ಳು ಸುದ್ದಿಗಳನ್ನು ಹರಡಿಸಲಾಗುತ್ತಿದೆ. ಮುಖ್ಯವಾಹಿನಿ ಮಾಧ್ಯಮಗಳಲ್ಲೇ ಈ ಸುಳ್ಳು ಸುದ್ದಿಗಳು ಕಂಡುಬರುತ್ತಿರುವುದು ದುರದೃಷ್ಟ.
ವಿಪರ್ಯಾಸ ಎಂದರೆ ಸುಳ್ಳು ಸುದ್ದಿಗಳನ್ನು ಪತ್ತೆಹಚ್ಚಲು ಹಲವು ಜಾಲತಾಣಗಳು ಫ್ಯಾಕ್ಟ್ ಚೆಕಿಂಗ್ ಆರಂಭಿಸಿವೆಯಾದರೂ ಅಲ್ಲಿಯೂ ನಿಷ್ಪಕ್ಷಪಾತಿತನ ಎಂಬುದೇ ಮರೆಯಾಗಿ ಹೋಗಿದೆ. ಫ್ಯಾಕ್ಟ್ ಚೆಕಿಂಗ್ ಹೆಸರಿನಲ್ಲಿ ಅರೆಸತ್ಯಗಳನ್ನು ತಿಳಿಸುವ ಪ್ರಯತ್ನಗಳೂ ನಡೆದಿವೆ.
2020ರ ಅಮೆರಿಕ ಅಧ್ಯಕ್ಷೀಯ ಚುನಾವಣೆ ವೇಳೆ ಸೋಷಿಯಲ್ ಮೀಡಿಯಾಗಳಲ್ಲಿ "ಪ್ರೀ-ಬಂಕಿಂಗ್" ಎಂಬ ಹೊಸ ಕಾನ್ಸೆಪ್ಟ್ ಹುಟ್ಟಿಕೊಂಡಿತು. ವಾಟ್ಸಾಪ್ ಇತ್ಯಾದಿ ಮೂಲಕ ಹರಡಬಹುದಾದ ಸುಳ್ಳು ಮಾಹಿತಿಯನ್ನು ಮೊದಲೇ ಗ್ರಹಿಸಿ ಅದರ ವಿರುದ್ಧ ಜನರಲ್ಲಿ ಜನಜಾಗೃತಿ ಮೂಡಿಸುವ ಕ್ರಿಯೆಯೇ ಪ್ರೀ ಬಂಕಿಂಗ್.
ಇದೀಗ ಸಂಶೋಧಕರು ಈ ನಿಟ್ಟಿನಲ್ಲಿ ಬಹಳಷ್ಟು ಪ್ರಯೋಗ ಮಾಡಿದ್ದಾರೆ. ಸುಳ್ಳು ಸುದ್ದಿಯನ್ನು ಎದುರಿಸುವುದು ಹೇಗೆ ಎಂದು ಜನರಿಗೆ ತಿಳಿಸಿಕೊಡುವ ಅಭಿಯಾನ ಆರಂಭವಾಗುತ್ತಿದೆ. ಗೂಗಲ್ ಸಂಸ್ಥೆ ಈ ಕಾರ್ಯವನ್ನು ಮುಂದಿನ ವಾರ ಕೈಗೆತ್ತಿಕೊಳ್ಳುತ್ತಿದೆ.
ಪ್ರೀ-ಬಂಕಿಂಗ್
ಗೂಗಲ್ನ ಉಪಾಂಗವಾದ ಜಿಗ್ಸಾ (Google Jigsaw) ಸಂಸ್ಥೆ ಮುಂದಿನ ವಾರ ಸುಳ್ಳು ಸುದ್ದಿ ಎದುರಿಸಲು ಅಭಿಯಾನ ಆರಂಭಿಸುತ್ತಿದೆ. ಸದ್ಯಕ್ಕೆ ಇದು ಉಕ್ರೇನ್ ವಲಸಿಗರ ಬಗ್ಗೆ ಇರುವ ಸುಳ್ಳು ಸುದ್ದಿಗಳಿಗೆ ಮಾತ್ರ ಗಮನ ಕೊಡಲಾಗುತ್ತಿದೆ. ಎರಡು ಬ್ರಿಟನ್ ವಿಶ್ವವಿದ್ಯಾಲಯಗಳ ಮನಃಶಾಸ್ತ್ರಜ್ಞರು ನಡೆಸಿದ ಸಂಶೋಧನೆಯ ಆಧಾರದ ಮೇಲೆ ಈ ಅಭಿಯಾನ ಸಾಗಲಿದೆ. 'ಪ್ರೀ-ಬಂಕಿಂಗ್' ಜಾಹೀರಾತುಗಳನ್ನು ಜನರಿಗೆ ತಲುಪಿಸುವ ಪ್ರಯತ್ನ ನಡೆಯಲಿದೆ.

ಯೂಟ್ಯೂಬ್, ಫೇಸ್ಬುಕ್, ಟ್ವಿಟ್ಟರ್, ಟಿಕ್ ಟಾಕ್ ಇತ್ಯಾದಿ ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ಗಳಲ್ಲಿ ಸುಳ್ಳು ಸುದ್ದಿ ಹೇಗೆ ಹರಡುತ್ತದೆ ಎಂದು ಸಂಶೋಧನೆ ನಡೆಸಿ ಹಲವು ಅಂಶಗಳನ್ನು ಗುರುತಿಸಲಾಗಿದೆ. ಅದರ ಆಧಾರದ ಮೇಲೆ 'ಪ್ರೀ ಬಂಕಿಂಗ್' ಜಾಹೀರಾತು ರೂಪಿಸಲಾಗಿದೆ.
ಅದ್ಯ ಉಕ್ರೇನ್ ವಲಸಿಗರ ಬಗ್ಗೆ ಈ ಅಭಿಯಾನ ನಡೆಯುತ್ತಿರುವುದರಿಂದ ಈ ಜನರ ಸಂಖ್ಯೆ ಹೆಚ್ಚು ಇರುವ ಪೋಲೆಂಡ್, ಸ್ಲೊವಾಕಿಯಾ ಮತ್ತು ಚೆಕ್ ರಿಪಬ್ಲಿಕ್ ದೇಶಗಳ ಜನರಿಗೆ ಅಭಿಯಾನ ತಲುಪಿಸುವ ಯೋಜನೆ ಹಾಕಿಕೊಳ್ಳಲಾಗಿದೆ.
ವಲಸಿಗರ ವಿರುದ್ಧ ಪಿತೂರಿ
ರಷ್ಯಾದಿಂದ ಉಕ್ರೇನ್ ಆಕ್ರಮಣಕ್ಕೆ ಒಳಗಾದ ಬಳಿಕ ಅನೇಕ ಉಕ್ರೇನಿಗರು ಬೇರೆ ದೇಶಗಳಿಗೆ ವಲಸೆ ಹೋಗಿದ್ದಾರೆ. ಪೋಲೆಂಡ್ನಲ್ಲಿ ಅತಿ ಹೆಚ್ಚು ವಲಸಿಗರು ಹೋಗಿದ್ದಾರೆ. ಚೆಕ್ ರಿಪಬ್ಲಿಕ್ ಮತ್ತು ಸ್ಲೊವಾಕಿಯಾದಲ್ಲೂ ಬಹಳಷ್ಟು ಮಂದಿ ಉಕ್ರೇನಿಗರು ಸೇರಿಕೊಂಡಿದ್ದಾರೆ. ಇದೇ ವೇಳೆ, ಉಕ್ರೇನ್ ವಲಸಿಗರ ವಿರುದ್ಧ ಕಪೋಲಕಲ್ಪಿತ ಸುದ್ದಿಗಳು ಹರಿದಾಡುತ್ತಿರುವುದು ಕಂಡುಬಂದಿದೆ. ಆದರೆ, ಸುಳ್ಳು ಸುದ್ದಿಗಳು ಯಾವುವು, ನೈಜ ವಿಚಾರಗಳು ಯಾವುವು ಎಂಬುದು ಜನರಿಗೆ ಸೂಕ್ಷ್ಮವಾಗಿ ಗೊತ್ತಾದರೆ ಸರಿ, ಇಲ್ಲವಾದರೆ ಸುಳ್ಳನ್ನೇ ಸತ್ಯವೆಂದು ನಂಬಿ ಪೂರ್ವಗ್ರಹಪೀಡಿತ ಭಾವನೆ ಹೊಂದುವ ಸಾಧ್ಯತೆ ಇರುತ್ತದೆ.
ಈ ಹಿನ್ನೆಲೆಯಲ್ಲಿ ಉಕ್ರೇನ್ ವಲಸಿಗರ ಬಗ್ಗೆ ಬರುವ ಸುಳ್ಳು ಸುದ್ದಿಗಳನ್ನು ಗುರುತಿಸುವುದು ಹೇಗೆ ಎಂದು ಅರಿವು ಮೂಡಿಸಲು ಅಭಿಯಾನದಲ್ಲಿ ಪ್ರಯತ್ನಿಸಲಾಗುತ್ತಿದೆ. ಸಂಶೋಧನೆ ಆಧಾರಿತವಾಗಿ ತಯಾರಿಸಲಾದ 90 ಸೆಕೆಂಡ್ನ ವಿಡಿಯೋವನ್ನು ತಯಾರಿಸಲಾಗಿದೆ. ಅಭಿಯಾನದಲ್ಲಿ ಈ ವಿಡಿಯೋ ಪ್ರಧಾನ ಪಾತ್ರ ವಹಿಸುತ್ತಿದೆ.

90 ಸೆಕೆಂಡ್ ವಿಡಿಯೋ
ಬ್ರಿಟನ್ನ ಕೇಂಬ್ರಿಡ್ಜ್ ಮತ್ತು ಬ್ರಿಸ್ಟಲ್ ವಿಶ್ವವಿದ್ಯಾಲಯದ ಮನಃಶಾಸ್ತ್ರಜ್ಞರು ಸೇರಿ ಸುಳ್ಳು ಸುದ್ದಿಗಳು ಹಾಗೂ ಅದನ್ನು ಎದುರಿಸುವ ಬಗೆ ಹೇಗೆ ಎಂದು ಬಹಳಷ್ಟು ಅಧ್ಯಯನ ನಡೆಸಿದ್ದಾರೆ. 90 ಸೆಕೆಂಡ್ಗಳಿರುವ ವಿಡಿಯೋ ಕ್ಲಿಪ್ಗಳನ್ನು ತಯಾರಿಸಿ, ಅವುಗಳ ಮೂಲಕ ಅಪಮಾಹಿತಿ ಬಗ್ಗೆ ಜನರಲ್ಲಿ ಪರಿಣಾಮಕಾರಿಯಾಗಿ ಹೇಗೆ ಅರಿವು ಮೂಡಿಸಹುದು ಎಂದು ತೋರಿಸಿಕೊಟ್ಟಿದ್ದಾರೆ. ರೋಗಕ್ಕೆ ನೀಡುವ ಲಸಿಕೆಯಂತೆ ಇವು ಸುಳ್ಳು ಸುದ್ದಿ ಎದುರಿಸಲು ಜನರಿಗೆ ನೀಡುವ ಲಸಿಕೆ ಎಂದು ಪರಿಗಣಿಸಲಾಗಿದೆ.
ಸಂಶೋಧಕರು ಬರೆದಿರುವ ಅಧ್ಯಯದನ ವರದಿ ಸೈನ್ಸ್ ಅಡ್ವಾನ್ಸಸ್ ಜರ್ನಲ್ನಲ್ಲಿ ಪ್ರಕಟವಾಗಿದೆ. ತಜ್ಞರು 90 ಸೆಕೆಂಡ್ ಕಾಲಮಾನ ಇರುವ ಐದು ವಿಡಿಯೋಗಳನ್ನು ತಯಾರಿಸಿದ್ದಾರೆ.
ನಿರ್ದಿಷ್ಟ ಘಟನೆ ಅಲ್ಲ
ನಿರ್ದಿಷ್ಟವಾಗಿ ಒಂದು ಘಟನೆಯನ್ನು ಉಲ್ಲೇಖಿಸಿ ಅದು ಸರಿ ಅಥವಾ ತಪ್ಪು ಎಂದು ಹೇಳುವ ಗೋಜಿಗೆ ಹೋಗುವುದಿಲ್ಲ. ಹಾಗೆ ಮಾಡಿದರೆ ಅಲ್ಲಿಯೂ ಪರ ವಿರೋಧ ಅನಿಸಿಕೆಗಳು ಬರುತ್ತವೆ. ಹೀಗಾಗಿ, ಸುಳ್ಳು ಸುದ್ದಿಗಳನ್ನು ಹಬ್ಬಿಸಲು ಮತ್ತು ಜನಸಾಮಾನ್ಯರನ್ನು ಏಮಾರಿಸಲು ಯಾವ್ಯಾವ ಮಾರ್ಗ, ತಂತ್ರ ಅನುಸರಿಸಬಹುದು ಎಂದು ಈ ವಿಡಿಯೋಗಳಲ್ಲಿ ಅರಿವು ಮೂಡಿಸಲಾಗುತ್ತದೆ. ಇದರಿಂದ ಸುಳ್ಳು ಸುದ್ದಿ ಯಾವುದು, ದುರುದ್ದೇಶಪೂರಿತ ಮಾಹಿತಿ ಯಾವುದು, ಅಪಪ್ರಚಾರದ ಸರಕು ಯಾವುದು ಎಂಬುದನ್ನು ಜನರು ಮೊದಲೇ ಗ್ರಹಿಸಲು ಸಾಧ್ಯವಾಗುವ ರೀತಿಯಲ್ಲಿ ಈ ವಿಡಿಯೋಗಳನ್ನು ತಯಾರಿಸಲಾಗಿದೆಯಂತೆ.
ಈಗ ಗೂಗಲ್ ತನ್ನ ಪ್ಲಾಟ್ಫಾರ್ಮ್ಗಳಲ್ಲಿ ಇಂಥ ಕಿರು ವಿಡಿಯೋಗಳನ್ನು ತಯಾರಿಸಿ ಉಕ್ರೇನ್ ವಲಸಿಗರಿರುವ ಸ್ಥಳಗಳಲ್ಲಿ ಪ್ರಯೋಗ ಮಾಡುತ್ತಿದೆ. ಒಂದು ವೇಳೆ ಈ ಪ್ರಯೋಗ ಯಶಸ್ವಿಯಾದಲ್ಲಿ ಬೇರೆ ಬೇರೆ ಕಡೆ ಇದನ್ನು ಅನುಸರಿಸುವುದು ಗೂಗಲ್ ಉದ್ದೇಶ.
(ಒನ್ಇಂಡಿಯಾ ಸುದ್ದಿ)
-
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
Bengaluru: 'ಮುಕ್ಕಾಲ ಮುಕ್ಕಾಬುಲ' ಹಾಡಿಗೆ ಸಖತ್ ಹೆಜ್ಜೆ ಹಾಕಿದ ಗಣಿತ ಪ್ರೊಫೆಸರ್; ಡಾನ್ಸ್ ವಿಡಿಯೋ ಭಾರೀ Viral -
Naseer Ahmed: ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ನಸೀರ್ ಅಹ್ಮದ್ ವಜಾ; ಕಾಂಗ್ರೆಸ್ನಲ್ಲಿ ಆಂತರಿಕ ಭಿನ್ನಮತ ಸ್ಫೋಟ -
ದ್ವಿತೀಯ PUC ಪರೀಕ್ಷೆ-2: ಅನುತ್ತೀರ್ಣರಾದ ವಿದ್ಯಾರ್ಥಿಗಳಿಗಾಗಿ ಸರ್ಕಾರಿ ಕಾಲೇಜುಗಳಲ್ಲಿ ವಿಶೇಷ ತರಗತಿಗಳು ಆರಂಭ












Click it and Unblock the Notifications