ಸರಕಾರೀ ಬಂಗಲೆ ಇನ್ನೂ ಖಾಲಿ ಮಾಡದ ಯೋಗೇಶ್ವರ್: ಅದೆಂತಾ ಕಾನ್ಫಿಡೆನ್ಸ್!
ಎಚ್.ಡಿ.ಕುಮಾರಸ್ವಾಮಿಯವರ ನೇತೃತ್ವದ ಸಮ್ಮಿಶ್ರ ಸರಕಾರ ಅಧಿಕಾರಕ್ಕೆ ಬಂದ ನಂತರ, ಒಂದಲ್ಲಾ ಒಂದು ಕಾರಣಕ್ಕೆ ಸುದ್ದಿಯಲ್ಲಿ ಇದ್ದವರು ಎಂದರೆ ಸಾಹುಕಾರ ರಮೇಶ್ ಜಾರಕಿಹೊಳಿ ಮತ್ತು ಸೈನಿಕ ಸಿ.ಪಿ.ಯೋಗೇಶ್ವರ್. ಬೊಮ್ಮಾಯಿ ಸರಕಾರ ಅಧಿಕಾರಕ್ಕೆ ಬಂದ ನಂತರವೂ ಇವರಿಬ್ಬರು ಸುದ್ದಿಯಲ್ಲಿದ್ದಾರೆ.
ಯಡಿಯೂರಪ್ಪನವರ ಸರಕಾರದ ಅವಧಿಯಲ್ಲಿ ಕಾಡಿಬೇಡಿ ಸಚಿವ ಸ್ಥಾನವನ್ನು ಗಿಟ್ಟಿಸಿಕೊಂಡಿದ್ದ ಯೋಗೇಶ್ವರ್ ಅವರು ನಂತರ ತಮಗೆ ಸಿಕ್ಕ ಖಾತೆಯ ವಿಚಾರದಲ್ಲಿ ಅಸಮಾಧಾನಗೊಂಡು, ವರಿಷ್ಠರ ಕೆಂಗಣ್ಣಿಗೆ ಗುರಿಯಾಗಿದ್ದರು. ಅದರ ಫಲವನ್ನು ಅವರೀಗ ಅನುಭವಿಸುತ್ತಿದ್ದಾರೆ.
ರಾಮನಗರ: ಒಂದೇ ವೇದಿಕೆಯಲ್ಲಿ ಬದ್ಧ ವೈರಿಗಳ ಸಮಾಗಮ
ಸರಕಾರದ ವಿರುದ್ದ, ಯಡಿಯೂರಪ್ಪನವರ ಪರ/ವಿರುದ್ದ ಮಾತನಾಡುತ್ತಿದ್ದ ಅಥವಾ ಲಾಬಿ ಮಾಡುತ್ತಿದ್ದ ಮುಖಂಡರಿಗೆ ಸಂಪುಟ ರಚನೆಯ ವೇಳೆ ಬಿಜೆಪಿ ವರಿಷ್ಠರು ಮುಲಾಜಿಲ್ಲದೇ ಗೇಟ್ ಪಾಸ್ ನೀಡಿದ್ದರು. ಅದರಲ್ಲಿ, ಯೋಗೇಶ್ವರ್ ಒಬ್ಬರಾದರೆ, ಇನ್ನೊಬ್ಬರು ಎಂ.ಪಿ.ರೇಣುಕಾಚಾರ್ಯ.
ಪ್ರವಾಸೋದ್ಯಮ ಇಲಾಖೆಯ ಸಚಿವರಾಗಿದ್ದ ಯೋಗೇಶ್ವರ್ ಅವರಿಗೆ ಖಾತೆಯನ್ನು ನಿಭಾಯಿಸಲು ಮನಸ್ಸೇ ಇರಲಿಲ್ಲ. ಹೇಗೂ, ಕೊರೊನಾದ ವೇಳೆ ಪ್ರವಾಸಿ ತಾಣಗಳಿಗೆ ಜನರು ಬರುವುದಿಲ್ಲ ಎನ್ನುವುದನ್ನು ಗಟ್ಟಿ ಮಾಡಿಕೊಂಡಿದ್ದ ಯೋಗೇಶ್ವರ್, ಯಡಿಯೂರಪ್ಪನವರು ಕೆಳಗಿಳಿಯುವ ಕೆಲ ತಿಂಗಳ ಮುನ್ನ ಹುದ್ದೆ ನಿಭಾಯಿಸಿದ್ದರು. ಆ ವೇಳೆ, ಸರಕಾರೀ ಬಂಗಲೆ ಕೂಡಾ ನೀಡಲಾಗಿತ್ತು.
'ಸೈನಿಕ'ನಿಗೆ ಖುಷಿ ಕೊಡಲಿಲ್ಲವೇ ಬಸವರಾಜ ಬೊಮ್ಮಾಯಿ ಆಯ್ಕೆ!?
Recommended Video
ಬಸವರಾಜ ಬೊಮ್ಮಾಯಿ ಸರಕಾರ ಅಧಿಕಾರಕ್ಕೆ ಬಂದು ನಲವತ್ತು ದಿನದ ಮೇಲೆ
ಬಸವರಾಜ ಬೊಮ್ಮಾಯಿಯವರ ನೂತನ ಸಚಿವ ಸಂಪುಟದಲ್ಲಿ ಜಗದೀಶ್ ಶೆಟ್ಟರ್, ಯೋಗೇಶ್ವರ್, ಸುರೇಶ್ ಕುಮಾರ್, ಲಿಂಬಾವಳಿ ಸೇರಿದಂತೆ ಹಲವರಿಗೆ ಕೊಕ್ ನೀಡಲಾಗಿತ್ತು. ಆದರೆ, ಸಚಿವರಾಗಿದ್ದಾಗ ನೀಡಿದ್ದ ಸರಕಾರೀ ವಸತಿ ಗೃಹವನ್ನು, ಸಚಿವ ಸ್ಥಾನ ಹೋಗಿ ನಲವತ್ತು ದಿನವಾದರೂ ಯೋಗೇಶ್ವರ್ ಖಾಲಿ ಮಾಡದೇ ತಮ್ಮಲ್ಲೇ ಇಟ್ಟುಕೊಂಡಿದ್ದಾರೆ. ಮೂಲಗಳ ಪ್ರಕಾರ, ಮುಂದಿನ ಮೂರ್ನಾಲ್ಕು ತಿಂಗಳು ತಮ್ಮಲೇ ಉಳಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.
ಯಡಿಯೂರಪ್ಪ ವಿರುದ್ಧ ಸಮರ ಸಾರಿದ್ದ ಯೋಗೇಶ್ವರ್
ಯಡಿಯೂರಪ್ಪ ವಿರುದ್ಧ ಸಮರ ಸಾರಿದ್ದ ಯೋಗೇಶ್ವರ್ ನಾಯಕತ್ವ ಬದಲಾವಣೆಗೆ ಶತಪ್ರಯತ್ನ ಮಾಡಿದ್ದರು. ಹೈಕಮಾಂಡ್ ಮಟ್ಟದಲ್ಲಿ ನಾಯಕರನ್ನು ಆಗಾಗ ಭೇಟಿ ಮಾಡುತ್ತಾ ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಪ್ರಸ್ತಾವನೆ ಸಲ್ಲಿಸುತ್ತಿದ್ದರು. ಯಡಿಯೂರಪ್ಪನವರು ಬಯಸಿದವರೇ ಸಿಎಂ ಆಗಿದ್ದರಿಂದ, ಅವರ ಸಿಟ್ಟಿಗೊಳಗಾಗಿದ್ದ ಯೋಗೇಶ್ವರ್ ಅವರಿಗೆ ಸಚಿವ ಸ್ಥಾನ ನೀಡಲು ಬಿಎಸ್ವೈ ವಿರೋಧ ವ್ಯಕ್ತ ಪಡಿಸಿದ್ದರು ಎಂದು ಹೇಳಲಾಗುತ್ತಿದೆ.
ಬಯಸಿದ ಖಾತೆ ಸಿಗುವುದು ಖಂಡಿತ ಎನ್ನುವ ಖಚಿತ ವಿಶ್ವಾಸದಲ್ಲಿರುವ ಯೋಗೇಶ್ವರ್
ಬೊಮ್ಮಾಯಿ ಸರಕಾರ ಅಧಿಕಾರಕ್ಕೆ ಬಂದ ನಂತರವೂ ರಮೇಶ್ ಜಾರಕಿಹೊಳಿ, ಅರವಿಂದ್ ಬೆಲ್ಲದ್, ಮಹೇಶ್ ಕುಮಟಳ್ಳಿ ಜೊತೆಗೆ ಯೋಗೇಶ್ವರ್ ಈಗಲೂ ಹೈಕಮಾಂಡ್ ಮಟ್ಟದಲ್ಲಿ ಲಾಬಿ ನಡೆಸುತ್ತಲೇ ಬರುತ್ತಿದ್ದಾರೆ. ಆವಾಗಾವಾಗ, ದೆಹಲಿಗೆ ಹೋಗುವ ಇವರೆಲ್ಲಾ ಮಂತ್ರಿ ಸ್ಥಾನಕ್ಕಾಗಿ ಒತ್ತಡ ಹೇರುತ್ತಲೇ ಬರುತ್ತಿದ್ದಾರೆ. ಮುಂದಿನ ಸಂಪುಟ ವಿಸ್ತರಣೆಯ ವೇಳೆ ತಮಗೆ ಬಯಸಿದ ಖಾತೆ ಸಿಗುವುದು ಖಂಡಿತ ಎನ್ನುವ ಖಚಿತ ವಿಶ್ವಾಸದಲ್ಲಿರುವ ಯೋಗೇಶ್ವರ್, ಈ ಕಾರಣಕ್ಕಾಗಿ ಸರಕಾರೀ ಅತಿಥಿ ಗೃಹವನ್ನು ಖಾಲಿ ಮಾಡುತ್ತಿಲ್ಲ ಎಂದು ಬಿಜೆಪಿ ಆಪ್ತಮೂಲಗಳು ಹೇಳುತ್ತಿವೆ.
ಕುಮಾರಕೃಪಾ, ಶಾಸಕರ ಭವನ, ಬಾಲಬ್ರೂಯಿ ವಸತಿ ಗೃಹದಲ್ಲಿ ದಿನ ಕಳೆಯುವ ಅನಿವಾರ್ಯತೆ
ಮತ್ತೆ ಸಚಿವರಾದ ನಂತರ ಸರಕಾರೀ ಬಂಗಲೆಗೆ ಪರದಾಡುವ ಸ್ಥಿತಿ ಬರುವುದು ಬೇಡ ಎನ್ನುವ ಮುಂದಾಲೋಚನೆಯಿಂದ ಯೋಗೇಶ್ವರ್ ತಮಗೆ ನೀಡಲಾಗಿರುವ ಮನೆಯನ್ನು ಖಾಲಿ ಮಾಡುತ್ತಿಲ್ಲ ಎಂದು ಹೇಳಲಾಗುತ್ತಿದೆ. ನೂತನ ಸರಕಾರದಲ್ಲಿ ಸುನೀಲ್ ಕುಮಾರ್, ಎಚ್.ನಾಗೇಶ್, ಅರಗ ಜ್ಞಾನೇಂದ್ರ ಸೇರಿದಂತೆ ಹೊಸ ಮುಖಗಳಿವೆ. ಇವರಿಗೆಲ್ಲಾ ವಸತಿ ಗೃಹವನ್ನು ನೀಡಬೇಕಿದೆ. ಆದರೆ, ಮಾಜಿಗಳು ಖಾಲಿ ಮಾಡದೇ ಇರುವುದರಿಂದ, ಹಾಲೀಗಳು ಕುಮಾರಕೃಪಾ, ಶಾಸಕರ ಭವನ, ಬಾಲಬ್ರೂಯಿ ವಸತಿ ಗೃಹದಲ್ಲಿ ದಿನ ಕಳೆಯುವ ಅನಿವಾರ್ಯತೆಯಲ್ಲಿದ್ದಾರೆ.