ಬಿಜೆಪಿ ಹೈಕಮಾಂಡ್ ಮಟ್ಟದಲ್ಲಿ ವಿಶೇಷ ಸ್ಥಾನ ಪಡೆದ ಶೋಭಾ, ಪ್ರಲ್ಹಾದ್ ಜೋಶಿ
ಪಂಚ ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ನಾಲ್ಕರಲ್ಲಿ ಗೆದ್ದಿದೆ. ಗೋವಾದಲ್ಲಿ ಇತರರ ಬೆಂಬಲದೊಂದಿಗೆ ಬಿಜೆಪಿ ಸರಕಾರ ರಚಿಸಲಿದೆ. ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಸಿಕ್ಕ ಗೆಲುವು, ರಾಷ್ಟ್ರ ರಾಜಕಾರಣದ ಮುಂದಿನ ರಾಜಕಾರಣಕ್ಕೆ ಬಿಜೆಪಿಗೆ ಬಲವನ್ನು ನೀಡಿದೆ.
ಈ ಗೆಲುವಿನಲ್ಲಿ ಕರ್ನಾಟಕದ ಇಬ್ಬರು ಸಂಸದರ ಪಾಲು ಬಹಳ ಮಹತ್ವವಾದದ್ದು. ಉಡುಪಿ - ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆಯವರಿಗೆ ಉತ್ತರ ಪ್ರದೇಶದ ಮತ್ತು ಹುಬ್ಬಳ್ಳಿ-ಧಾರವಾಡ ಸಂಸದ ಪ್ರಲ್ಹಾದ್ ಜೋಶಿಯವರಿಗೆ ಉತ್ತರಾಖಂಡ್ ಜವಾಬ್ದಾರಿಯನ್ನು ನೀಡಲಾಗಿತ್ತು.
ಯೋಗಿಗೆ ಭರ್ಜರಿ ಬೂಸ್ಟ್ ನೀಡಿದ ಗೋರಖ್ಪುರ ಮತದಾರ: ಕ್ಲೀನ್ ಸ್ವೀಪ್
ಶೋಭಾಗೆ ಉತ್ತರ ಪ್ರದೇಶದ ಅವಧ್ ಪ್ರದೇಶದ ಉಸ್ತುವಾರಿಯನ್ನು ನೀಡಲಾಗಿದ್ದರೆ, ಜೋಶಿಗೆ ಸಂಪೂರ್ಣ ಉತ್ತರಾಖಾಂಡ್ ಜವಾಬ್ದಾರಿಯನ್ನು ನೀಡಲಾಗಿತ್ತು. ಕೊಟ್ಟ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದ ಇವರಿಬ್ಬರೂ ಹೈಕಮಾಂಡಿಗೆ ಇನ್ನಷ್ಟು ಹತ್ತಿರವಾಗಿದ್ದಾರೆ.
ಚುನಾವಣೆ ಘೋಷಣೆಗೆ ಮೂರ್ನಾಲ್ಕು ತಿಂಗಳಿಗೂ ಮುನ್ನವೇ ಪ್ರವಾಸ ಆರಂಭಿಸಿದ್ದ ಈ ಇಬ್ಬರು ನಾಯಕರು ಸತತವಾಗಿ ಪ್ರಚಾರವನ್ನು ನಡೆಸಿ, ಕಾರ್ಯಕರ್ತರನ್ನು ಹುರಿದುಂಬಿಸಿ ಬಿಜೆಪಿ ದಡ ಸೇರುವಂತೆ ಮಾಡುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿದ್ದರು.
ಪಂಜಾಬ್: ಕೋಟೆ ಕಟ್ಟಿ ಮೆರೆದ ಮೂವರನ್ನೂ ಮನೆಗೆ ಕಳುಹಿಸಿದ ಮತದಾರ
ಪ್ರಮುಖವಾಗಿ ಬಿಜೆಪಿಗೆ ಅಧಿಕಾರ ಉಳಿಸಿಕೊಳ್ಳುವುದು ಗುರುತರ ಸವಾಲು
ಪ್ರಮುಖವಾಗಿ ಉತ್ತರಾಖಂಡದಲ್ಲಿ ಬಿಜೆಪಿಗೆ ಅಧಿಕಾರ ಉಳಿಸಿಕೊಳ್ಳುವುದು ಗುರುತರ ಸವಾಲಾಗಿತ್ತು. ಒಂದು ಕಡೆ, ಪ್ರತೀ ಐದು ವರ್ಷಕ್ಕೊಮ್ಮೆ ಸರಕಾರ ಬದಲಾವಣೆಯಾಗುವ ಇತಿಹಾಸ, ಮೂರು ಮುಖ್ಯಮಂತ್ರಿಗಳ ಬದಲಾವಣೆಯಿಂದಾಗಿ ಪಕ್ಷಕ್ಕೆ ಇದು ದೊಡ್ಡ ಸವಾಲಾಗಿತ್ತು. ಇದು ಪಕ್ಷದೊಳಗೆ ಆಂತರಿಕ ಭಿನ್ನಮತಕ್ಕೂ ಕಾರಣವಾಗಿತ್ತು. ರಾಜ್ಯದ ಚುನಾವಣಾ ಉಸ್ತುವಾರಿ ಎಂದು ಪ್ರಲ್ಹಾದ್ ಜೋಶಿ ನೇಮಕವಾದ ಕೂಡಲೇ ಪ್ರಮುಖ ನಾಯಕರೊಂದಿಗೆ ಸಭೆ ನಡೆಸಿ ದೆಹಲಿಯ ಸ್ಪಷ್ಟ ಸಂದೇಶವನ್ನು ಉತ್ತರಾಖಂಡದ ಮುಖಂಡರಿಗೆ ತಲುಪಿಸುವಲ್ಲಿ ಜೋಶಿ ಮೊದಲನೆಯದಾಗಿ ಯಶಸ್ವಿಯಾಗಿದ್ದರು.
ಕೇಂದ್ರದಲ್ಲಿ ಮೋದಿ ಸರಕಾರ ಮತ್ತು ರಾಜ್ಯದಲ್ಲಿ ಯೋಗಿ ಸರಕಾರ
ಇನ್ನೊಂದು ಕಡೆ, ಉತ್ತರ ಪ್ರದೇಶದ ಒಟ್ಟು 403 ಸ್ಥಾನಗಳ ಪೈಕಿ ಅವಧ್ ಭಾಗದ 82 ಕ್ಷೇತ್ರಗಳ ಜವಾಬ್ದಾರಿಯನ್ನು ಶೋಭಾ ಕರಂದ್ಲಾಜೆಗೆ ವಹಿಸಲಾಗಿತ್ತು. ಕಳೆದ ಕೆಲವು ತಿಂಗಳಿನಿಂದ ಲಕ್ನೋದಲ್ಲೇ ಮನೆ ಮಾಡಿಕೊಂಡಿದ್ದ ಕೇಂದ್ರ ಸಚಿವೆ ಶೋಭಾಗೆ ಇದ್ದ ಪ್ರಮುಖ ತೊಂದರೆ ಭಾಷೆ. ಆದರೆ, ನಿರಂತರ ಸಭೆ, ಪ್ರಚಾರದಿಂದಾಗಿ ಎಲ್ಲಾ ಅಡೆತಡೆಗಳನ್ನು ಮೀರಿ ಕಾರ್ಯಕರ್ತರು ಮತ್ತು ಮತದಾರರ ಮನವೊಲಿಸುವಲ್ಲಿ ಶೋಭಾ ಯಶಸ್ವಿಯಾದರು. ಕೇಂದ್ರದಲ್ಲಿ ಮೋದಿ ಸರಕಾರ ಮತ್ತು ರಾಜ್ಯದಲ್ಲಿ ಯೋಗಿ ಸರಕಾರದ ಕ್ರಮಗಳನ್ನು ಜನರಿಗೆ ತಲುಪಿಸುವಲ್ಲಿ ಶೋಭಾ ಎಡವಲಿಲ್ಲ.
ಸ್ಥಳೀಯ ನಾಯಕರಲ್ಲಿ ಒಡಕು ಮೂಡಿಸದಂತೇ ಪ್ರಲ್ಹಾದ್ ಜೋಶಿ ಎಚ್ಚರಿಕೆ
ಉತ್ತರಾಖಂಡದಲ್ಲಿ ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ಪ್ರಮುಖವಾಗಿ ಸ್ಥಳೀಯ ನಾಯಕರಲ್ಲಿ ಒಡಕು ಮೂಡಿಸದಂತೇ ಪ್ರಲ್ಹಾದ್ ಜೋಶಿ ಎಚ್ಚರಿಕೆ ವಹಿಸಿದ್ದರು. ಕೊರೊನಾ ಸಮಯದಲ್ಲಿ ಸರಕಾರದ ಕೆಲಸಗಳು, ದೇವನಾಡು ಉತ್ತರಾಖಂಡವನ್ನು ಪ್ರವಾಸೀ ತಾಣವನ್ನಾಗಿ ಬದಲಿಸಲು ಸರಕಾರದ ಯೋಜನೆಗಳನ್ನು ಮತದಾರರ ಮುಂದೆ ಇಟ್ಟರು. ಮತದಾರರ ಮುಂದೆ ಏನು ಮಾತನಾಡಬೇಕು ಎನ್ನುವ ತರಬೇತಿಯನ್ನೂ ಜೋಶಿ ಮತ್ತು ತಂಡ ನೀಡಿತ್ತು. ನಲವತ್ತರ ಆಸುಪಾಸಿನಲ್ಲಿ ಬಿಜೆಪಿ ನಿಲ್ಲಲಿದೆ ಎಂದು ಜೋಶಿ ಹೇಳಿದ್ದರು. ಈಗ, ಅವರ ನಿರೀಕ್ಷೆಗಿಂತ ಹೆಚ್ಚಿನ ಸೀಟನ್ನು ಮತದಾರ ನೀಡಿದ್ದಾನೆ.
ಪಕ್ಷದ ಗೆಲುವಿನಲ್ಲಿ ಮಹಿಳೆಯರ ಪಾತ್ರ ಮಹತ್ವ ಎಂದು ಶೋಭಾ ಸಾರಿದ್ದಾರೆ
ತಮಗೆ ವಹಿಸಲಾದ ಕ್ಷೇತ್ರಗಳಲ್ಲಿ ಪಕ್ಷದ ಗೆಲುವಿನ ಬಗ್ಗೆ ವಿಶ್ವಾಸವನ್ನು ಇಟ್ಟುಕೊಂಡಿದ್ದ ಶೋಭಾ ಕರಂದ್ಲಾಜೆ, ಇತ್ತೀಚೆಗೆ ಹಿಂಸಾಚಾರಕ್ಕೆ ಕಾರಣವಾದ ಲಖೀಂಪುರದಲ್ಲೂ ಬಿಜೆಪಿ ಗೆಲ್ಲಲಿದೆ ಎನ್ನುವ ವಿಶ್ವಾಸದ ಮಾತನ್ನು ಆಡಿದ್ದರು. ಮೋದಿ ಮತ್ತು ಯೋಗಿ ಸರಕಾರದಲ್ಲಿ ಮಹಿಳೆಯರು ಎಷ್ಟು ಸುರಕ್ಷಿತ ಎನ್ನುವ ವಿಚಾರವನ್ನು ಪ್ರತೀ ಸಭೆಯಲ್ಲೂ ಪ್ರಸ್ತಾವಿಸಿದ ಶೋಭಾ, ಪಕ್ಷದ ಗೆಲುವಿನಲ್ಲಿ ಮಹಿಳೆಯರ ಪಾತ್ರ ಮಹತ್ವ ಎಂದು ಸಾರಿದ್ದಾರೆ. ಆ ಮೂಲಕ, ಕರ್ನಾಟಕ ಮೂಲದ ಇಬ್ಬರು ಕೇಂದ್ರ ಸಚಿವರು ಮುಂದಿನ ದಿನಗಳಲ್ಲಿ ರಾಷ್ಟ್ರ/ರಾಜ್ಯ ರಾಜಕಾರಣದಲ್ಲಿ ಮಹತ್ವದ ಪಾತ್ರವನ್ನು ವಹಿಸುವ ಸಾಧ್ಯತೆಯಿಲ್ಲದಿಲ್ಲ.