ಉತ್ತರಕನ್ನಡದಲ್ಲಿ ವಿಭಿನ್ನ ರೀತಿಯ ದೀಪಾವಳಿ ಆಚರಣೆ, ಇಲ್ಲಿದೆ ವಿವರ
ಕಾರವಾರ, ಅಕ್ಟೋಬರ್, 24: ಹಿಂದೂಗಳ ಪಾಲಿಗೆ ದೊಡ್ಡ ಹಬ್ಬವಾಗಿರುವ ದೀಪಾವಳಿಯನ್ನು ಉತ್ತರಕನ್ನಡ ಜಿಲ್ಲೆಯಲ್ಲಿ ಭಿನ್ನ ವಿಭಿನ್ನವಾಗಿ ಆಚರಿಸಲಾಗುತ್ತದೆ. ಜಿಲ್ಲೆಯಲ್ಲಿರುವ ಹತ್ತಾರು ಸಮುದಾಯಗಳು, ಬುಡಕಟ್ಟು ಜನರು ತಾವು ಹಿಂದಿನಿಂದಲೂ ನಡೆದುಕೊಂಡು ಬಂದಂತಹ ಕೆಲ ಸಂಪ್ರದಾಯ, ಕಲೆ-ಸಂಸ್ಕೃತಿಯ ಚಿತ್ರಣ ಹಬ್ಬದಲ್ಲಿ ಅನಾವರಣಗೊಳ್ಳಲಿದ್ದು, ಎಲ್ಲರ ಗಮನ ಸೆಳೆಯಲಿದೆ.
ಭತ್ತದ ಪೈರು, ತೆನೆಯೊಡೆದು ಕೊಯ್ಲಿಗೆ ಬರುವ ಸಮಯ ಇದಾಗಿದ್ದು, ಇದೇ ಕಾರಣಕ್ಕೆ ದೀಪಾವಳಿ ರೈತರ ಪಾಲಿಗೆ ದೊಡ್ಡ ಹಬ್ಬವಾಗಿದೆ. ಅದರಲ್ಲಿಯೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಹಬ್ಬವನ್ನೂ ವಿಶೇಷವಾಗಿ ಆಚರಣೆ ಮಾಡಲಾಗುತ್ತದೆ. ನಾಲ್ಕು ದಿನಗಳ ಕಾಲ ನಡೆಯುವ ಹಬ್ಬವನ್ನು ಒಂದೊಂದು ಸಮುದಾಯದಲ್ಲಿ ಅಥವಾ ಊರುಗಳಲ್ಲಿ ಒಂದೊಂದು ರಿತಿಯಾಗಿ ಆಚರಣೆ ಮಾಡಲಾಗುತ್ತದೆ. ಅದರಂತೆಯೇ ಕಾರವಾರದಲ್ಲಿ ಹಾಲಕ್ಕಿ ಸಮುದಾಯದವರು ದೀಪಾವಳಿ ಹಬ್ಬದ ವೇಳೆ ಇಬ್ಬರು ಯುವಕರಿಗೆ ಮದುವೆ ಮಾಡುತ್ತಾರೆ. ಈ ಸಂಪ್ರದಾಯ ತಲೆ ತಲಾಂತರಗಳಿಂದ ನಡೆದುಬಂದಿದೆ. ಬಲಿಪಾಡ್ಯದ ದಿನದಂದು ನಡೆಯುವ ಈ ಆಚರಣೆಯಲ್ಲಿ ಎರಡು ವಿಭಿನ್ನ ಗೋತ್ರಗಳ ಇಬ್ಬರು ಯುವಕರನ್ನು ಆಯ್ಕೆ ಮಾಡಲಾಗುತ್ತದೆ. ಒಬ್ಬ ಯುವಕ ಬಲೀಂದ್ರನಂತೆ ಹಾಗೂ ಮತ್ತೊಬ್ಬ ಯುವಕನಿಗೆ ಭೂದೇವಿ ಎಂದು ಹೆಣ್ಣಿನ ವೇಷಭೂಷಣ ತೊಡಿಸಲಾಗುತ್ತದೆ.
ದೀಪಾವಳಿ ಹಬ್ಬ 2022; ಕರ್ನಾಟಕದ ನಗರಗಳಲ್ಲಿ ಇಂದಿನ ಹೂ, ಹಣ್ಣಿನ ದರ ತಿಳಿಯಿರಿ
ಹಿರಿಯ ಮಹಿಳೆಯರಿಂದ ಜಾನಪದ ಗೀತೆ
ಹೆಣ್ಣು ಕೇಳುವ ಶಾಸ್ತ್ರದಿಂದ ಮದುವೆ ಶಾಸ್ತ್ರದವರೆಗೂ ಹಿರಿಯ ಮಹಿಳೆಯರು ಜಾನಪದ ಗೀತೆಗಳನ್ನು ಹಾಡುತ್ತಾರೆ. ಗ್ರಾಮದೇವತೆ ಎದುರು ಎಲ್ಲ ಶಾಸ್ತ್ರಗಳನ್ನು ನೆರವೇರಿಸಿದ ನಂತರ ಅವಲಕ್ಕಿ ಮತ್ತು ಬೆಲ್ಲವನ್ನು ಸೇವಿಸುತ್ತಾರೆ. ನಂತರ ವಿವಾಹ ಮಹೋತ್ಸವವನ್ನು ಸಮಾಪ್ತಿಗೊಳಿಸಲಾಗುತ್ತದೆ. ಸಂಪ್ರದಾಯ ಹೇಗೆ ಶುರುವಾಯಿತು ಎಂದು ಗೊತ್ತಿಲ್ಲ. ಆದರೆ ತಲೆಮಾರುಗಳಿಂದ ನಡೆದು ಬಂದಿದ್ದರಿಂದ ನಾವೂ ಕೂಡ ಮುಂದುವರಿಸುತ್ತಿದ್ದೇವೆ. ಇದರಿಂದ ದೀಪಾವಳಿ ಹಬ್ಬದಲ್ಲಿ ಮತ್ತಷ್ಟು ಖುಷಿ ಸಿಕ್ಕಂತಾಗುತ್ತದೆ. ಈ ಆಚರಣೆಯನ್ನು ನೋಡಲು ಎಲ್ಲ ಸಮುದಾಯಗಳ ಜನರೂ ಆಗಮಿಸುತ್ತಾರೆ. ಒಂದು ರೀತಿಯಲ್ಲಿ ಸಮಾಜದ ಸಾಮರಸ್ಯ ಬೆಸೆಯಲು ಇದು ಸಹಕಾರಿ ಆಗಿದೆ. ಸಾಮಾನ್ಯವಾಗಿ ಮೂರರಿಂದ ಐದು ದಿನಗಳವರೆಗೂ ಇದನ್ನು ಆಚರಣೆ ಮಾಡುತ್ತಾರೆ. ಇನ್ನು ಕೆಲವರು ಒಂಬತ್ತು ದಿನಗಳವರೆಗೂ ಆಚರಿಸುತ್ತಾರೆ ಎಂದು ಸಮಾಜದ ಹಿರಿಯ ಕುಮಾರ ಗೌಡ ಹೇಳಿದರು.
ಅಂಕೋಲಾ; ಹೊಂಡೆಯಾಟದ ವಿಶೇಷತೆ ಏನು? ಇಲ್ಲಿದೆ ಸಂಪೂರ್ಣ ಮಾಹಿತಿ
ಹುಲಿಗೆ ಪೂಜೆ ಮಾಡಲು ಕಾರಣ ಏನು?
ಜಿಲ್ಲೆಯ ಮಲೆನಾಡು ಭಾಗಗಳಾದ ಶಿರಸಿ, ಸಿದ್ದಾಪುರ, ಯಲ್ಲಾಪುರ ಹಾಗೂ ಕರಾವಳಿಯ ಕುಮಟಾ, ಹೊನ್ನಾವರದ ಕೆಲ ಭಾಗಗಳಲ್ಲಿ ದೀಪಾವಳಿ ವೇಳೆ ಹುಲಿ ದೇವರಿಗೆ ವಿಶೇಷ ಪೂಜೆಯನ್ನು ಸಲ್ಲಿಸಲಾಗುತ್ತದೆ. ಊರಿನ ದನ ಕರುಗಳು ಕಾಡಿಗೆ ತೆರಳುವುದರಿಂದ ಅವುಗಳಿಗೆ ಹುಲಿರಾಯ ಏನು ಮಾಡದಿರಲಿ ಎಂದು ಪೂಜಿಸಲಾಗುತ್ತದೆ. ಅಲ್ಲದೆ ಕಾಡಿನೆಡೆಗೆ ತೆರಳಿದ ಗೋವುಗಳು ಹಿಂದಿರುಗದೇ ಇದ್ದಾಗ ಹರಕೆ ಹೊತ್ತುಕೊಂಡು ದೀಪಾವಳಿ ವೇಳೆ ಪೂಜೆ ಸಲ್ಲಿಸುವ ಸಂಪ್ರದಾಯ ಇಂದಿಗೂ ನಡದುಕೊಂಡು ಬಂದಿದೆ.
ಗಮನ ಸೆಳೆಯಲಿರುವ ಅಲಂಕಾರ
ದೀಪಾವಳಿಯ ದಿನದಂದು ಮಲೆನಾಡಿನ ಭಾಗಗಳಲ್ಲಿ ಗೋವುಗಳಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಎಲೆ, ಅಡಿಕೆ, ಸಿಂಗಾರ, ಪತ್ತೆ ತೇನೆ, ರೊಟ್ಟಿ ಸೇರಿದಂತೆ ಇನ್ನಿತರ ವಸ್ತುಗಳನ್ನು ಸೇರಿಸಿ ಗಂಟು ಕಟ್ಟಲಾಗುತ್ತದೆ. ಬಳಿಕ ಬಲೀಂದ್ರನನ್ನು ಕೊಟ್ಟಿಗೆ ಬಳಿ ತಂದು ಪೂಜೆ ಸಲ್ಲಿಸಿ, ಚೌಲು, ಬಾಸಿಂಗ, ಬಲೂನ್, ಹೂ ಸೇರಿದಂತೆ ಇನ್ನಿತರ ಅಲಂಕಾರಿಕ ವಸ್ತುಗಳಿಂದ ಶೃಂಗರಿಸಿ ಬೆದರಿಸಲಾಗುತ್ತದೆ. ನಂತರ ಅವುಗಳನ್ನು ಗೋಳಿಗೆ ಕೊಂಡೊಯ್ದು ಪೂಜೆ ಸಲ್ಲಿಸುವ ಸಂಪ್ರದಾಯ ಇದೆ.
ಲಕ್ಷ್ಮಿ ಪೂಜೆಯಂದು ಮೀನುಗಾರಿಕೆಗೆ ರಜೆ
ಮೀನುಗಾರ ಸಮುದಾಯದವರು ದೀಪಾವಳಿಗೆ ಮೀನುಗಾರಿಕೆಗೆ ತೆರಳುವುದಿಲ್ಲ. ಜೀವನ ನಿರ್ವಹಣೆಗೆ ದಿನವಿಡಿ ದುಡಿಯುವ ಮೀನುಗಾರರು ಸಹ ಲಕ್ಷ್ಮೀ ಪೂಜೆಯ ದಿನದಂದು ಮನೆಯಲಿಯೇ ಇದ್ದು, ಮನೆಯವರೊಂದಿಗೆ ಲಕ್ಷ್ಮೀ ದೇವಿಯ ಆರಾಧನೆಯನ್ನು ಮಾಡುತ್ತಾರೆ. ಅನಾದಿ ಕಾಲದಿಂದಲೂ ನಡೆದುಕೊಂಡು ಬಂದ ಈ ಪದ್ಧತಿಯನ್ನು ಇಂದಿಗೂ ಅವರು ಮುರೆತಿಲ್ಲ. ಜೊತೆಗೆ ದುಡಿಮೆಗೆ ಕಾರಣವಾಗಿರುವ ದೋಣಿಗಳಿಗೂ ಪೂಜೆ ಸಲ್ಲಿಸಲಾಗುತ್ತದೆ.
ಕರಾವಳಿಯಲ್ಲಿ ದೀಪಾವಳಿಗೆ ತುಳಸಿ ಪೂಜೆ ಹಾಗೂ ಗೋಪೂಜೆ ಕಡ್ಡಾಯವಾಗಿರುತ್ತದೆ. ಈ ಸಂದರ್ಭದಲ್ಲಿ ಬೆಲ್ಲ ಮತ್ತು ಅವಲಕ್ಕಿ ಸಾಮಾನ್ಯ ತಿಂಡಿ ಆಗಿರುತ್ತದೆ. ಕಹಿ ಆಗಿರುವ ಹಿಂಡ್ಲೆಕಾಯಿಯನ್ನು ಕರಾವಳಿಯಲ್ಲಿ ನರಕಾಸುರನಿಗೆ ಹೋಲಿಸಲಾಗುತ್ತದೆ. ಅದನ್ನು ನರಕ ಚತುರ್ದಶಿಯ ದಿನ ಮುಂಜಾನೆ ಮನೆಯ ಮುಂದೆ ಇಡಲಾಗುತ್ತದೆ. ಪುರುಷರು ಅದನ್ನು ತುಳಿಯುತ್ತಾರೆ. ನಂತರ ದುಷ್ಟಶಕ್ತಿಯ ದಮನದ ಪ್ರತೀಕ ಎಂದು ಭಾವಿಸಲಾಗುತ್ತದೆ. ಬಳಿಕ ಮನೆಯ ಮುತ್ತೈದೆಯರು ಆರತಿ ಬೆಳಗಿ, ಹಣೆಗೆ ತಿಲಕವಿಟ್ಟು ಮನೆಯೊಳಗೆ ಪುರುಷರನ್ನು ಸ್ವಾಗತಿಸುತ್ತಾರೆ.
ಬಿಂಗಿ ಪದದ ವಿಶೇಷತೆ ಏನು?
ಈ ಭಾಗದಲ್ಲಿ ಬಿಂಗಿ ಕುಣಿತ ಹೆಚ್ಚು ಪ್ರಚಲಿತದಲ್ಲಿದೆ. ಬಲಿಂದ್ರನನ್ನು ಕಳುಹಿಸಿಕೊಟ್ಟ ಬಳಿಕ ಬಿಂಗಿ ಹಾಡುವವರು ತಂಡ ಕಟ್ಟಿಕೊಂಡು ಮನೆ ಮನೆಗೆ ತೆರಳುವ ಪದ್ಧತಿ ಜಿಲ್ಲೆಯ ವಿವಿಧ ಭಾಗಗಳಲ್ಲಿ ಇದೆ. ಮೂರು ದಿನ ತಮ್ಮ ಸುತ್ತಮುತ್ತ ಇರುವ ಹಳ್ಳಿಗಳಿಗೆ ಹಗಲು ರಾತ್ರಿ ತಿರುಗುತ್ತಾರೆ. ಶಿರಸಿ ಭಾಗದಲ್ಲಿ ತಂಡ ಕಟ್ಟಿಕೊಂಡು ಮನೆ ಮನೆಗೆ ತೆರಳಿ ಹಾಡು ಮತ್ತು ಕುಣಿತವಿರುತ್ತದೆ. ಸಿದ್ದಾಪುರ ಭಾಗಗದಲ್ಲಿ ಮನೆ ಮನೆಗೆ ತೆರಳಿ ಹಾಡು ಮಾತ್ರ ಹೇಳುವ ಪದ್ಧತಿ ಚಾಲ್ತಿಯಲ್ಲಿದೆ. ಬಿಂಗಿ ಕುಣಿತದಲ್ಲಿ ದೇವರ ಭಜನೆಯನ್ನು ಹೇಳುತ್ತಾರೆ. ಅವರಿಗೆ ಅಕ್ಕಿ, ಕಾಯಿ, ಹಣ ನೀಡುವ ಸಂಪ್ರದಾಯವಿದೆ. ಈ ರೀತಿ ವಸ್ತುವನ್ನು ಬಿಂಗಿ ಮುಗಿದ ಬಳಿಕ ತಂಡದ ಸದಸ್ಯರು ಹಂಚಿಕೊಳ್ಳುತ್ತಾರೆ. ಕುಣಿತದ ವೇಳೆ ತಂಡದ ಮುಖಂಡ ಹಾಡು ಹೇಳಿದ ಬಳಿಕ ಉಳಿದ ಸದಸ್ಯರು ಅದೇ ಹಾಡನ್ನು ಪುನರುಚ್ಛರಿಸುತ್ತಾರೆ.