ಸಿದ್ದರಾಮಯ್ಯ ಎಚ್ಚರಿಕೆಗೆ ಮಂಡ್ಯ ಕೈ ಕಾರ್ಯಕರ್ತರು ತಲೆಬಾಗ್ತಾರಾ?
Recommended Video
ಮಂಡ್ಯ, ಏಪ್ರಿಲ್ 07:ಕೇಂದ್ರದಲ್ಲಿ ಬಿಜೆಪಿಯನ್ನು ಕೆಳಗಿಳಿಸಬೇಕು ಮತ್ತು ರಾಜ್ಯದಲ್ಲಿ ಬಿಜೆಪಿಗೆ ಅಧಿಕಾರ ನೀಡಬಾರದು ಎಂಬ ಉದ್ದೇಶದಿಂದ ರಾಜಕೀಯ ದ್ವೇಷ ಮರೆತು ಒಂದಾದ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಲೋಕಸಭಾ ಚುನಾವಣೆಯಲ್ಲಿ ಹೊಂದಾಣಿಕೆ ಮಾಡಿಕೊಂಡು ಒಂದಷ್ಟು ಕ್ಷೇತ್ರಗಳನ್ನು ಹಂಚಿಕೊಂಡಿದ್ದರೂ ಇವರ ನಡುವೆ ಎಲ್ಲವೂ ಸರಿಯಿಲ್ಲ ಎಂಬುದು ಈಗ ಜಗಜ್ಜಾಹೀರಾಗಿದೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಸದ್ಯದ ಚುನಾವಣಾ ಸ್ಥಿತಿಗತಿಯನ್ನು ನೋಡಿದರೆ ಎತ್ತು ಏರಿಗೆಳೆಯಿತು.. ಕೋಣ ನೀರಿಗೆಳೆಯಿತು.. ಎಂಬಂತಹ ಪರಿಸ್ಥಿತಿ ನಿರ್ಮಾಣವಾಗಿರುವುದನ್ನು ನಾವು ಕಾಣಬಹುದಾಗಿದೆ. ಇದಕ್ಕೆ ಕಾರಣ ಮೇಲ್ಮಟ್ಟದ ಮುಖಂಡರು ಎಂದರೆ ತಪ್ಪಾಗಲಾರದು.
ಜ್ಯೋತಿಷ್ಯ ವಿಶ್ಲೇಷಣೆ: ಈ 'ಪ್ರತಿಷ್ಠಿತ' ಕ್ಷೇತ್ರಗಳಲ್ಲಿ ಯಾರು ಗೆಲ್ಲಬಹುದು?
ನಾಯಕರು ತಮ್ಮ ಅನುಕೂಲಕ್ಕೆ ತಕ್ಕಂತೆ ಮೈತ್ರಿ ಮಾಡಿಕೊಂಡರೇ ವಿನಃ ಅವರಿಗೆ ತಳಮಟ್ಟದ ಪಕ್ಷದ ಮುಖಂಡರ ಮತ್ತು ಕಾರ್ಯಕರ್ತರ ಹಿತಕಾಯುವ ಅಗತ್ಯತೆ ಇರಲೇ ಇಲ್ಲ.ರಾಹುಲ್ ಗಾಂಧಿ ಮತ್ತು ದೇವೇಗೌಡರ ಮಟ್ಟದಲ್ಲಿ ಆದ ಮೈತ್ರಿಗೆ ರಾಜ್ಯ ನಾಯಕರು ಅನಿವಾರ್ಯವಾಗಿ ಶರಣಾಗಲೇಬೇಕಾಗಿತ್ತು. ಅವತ್ತಿನ ಮಟ್ಟಿಗೆ ಎಲ್ಲವೂ ಸರಿಯಾಗುತ್ತದೆ ಎಂಬ ಭರವಸೆಯಿತ್ತು. ಆದರೆ ಮೈತ್ರಿ ರಾಜಕೀಯ ಹೆಚ್ಚಿನ ಪರಿಣಾಮ ಬೀರಿದ್ದು ಹಳೇ ಮೈಸೂರು ಭಾಗದಲ್ಲಿ ಎನ್ನುವುದರಲ್ಲಿ ಎರಡು ಮಾತಿಲ್ಲ.
ಇಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರು ಒಬ್ಬರನ್ನೊಬ್ಬರು ಪೈಪೋಟಿ ಮತ್ತು ದ್ವೇಷದ ರಾಜಕಾರಣ ಮಾಡಿಕೊಂಡೇ ಬಂದವರು. ತಮ್ಮ ಪಕ್ಷಕ್ಕಾಗಿ ಪೊಲೀಸ್ ಸ್ಟೇಷನ್, ನ್ಯಾಯಾಲಯ ಅಂಥ ಓಡಾಡಿ ಬಂದವರು, ಅಷ್ಟೇ ಅಲ್ಲ ರೌಡಿಶೀಟರ್ ಎಂಬ ಹಣೆ ಪಟ್ಟಿ ಕಟ್ಟಿಕೊಂಡವರೂ ಇದ್ದಾರೆ.
ಸುಮಲತಾ ವರ್ಸಸ್ ನಿಖಿಲ್ ಕುಮಾರಸ್ವಾಮಿ; ಯಾರಿಗುಂಟು ಗ್ರಹ ಬಲ?
ಕೇವಲ ನಾಯಕರು ತಮ್ಮ ಅನುಕೂಲಕ್ಕೆ ತಕ್ಕಂತೆ ಒಂದಾಗಿ ಬಿಟ್ಟರು ಎಂಬ ಒಂದೇ ಕಾರಣಕ್ಕೆ ಕಾರ್ಯಕರ್ತರು ಒಂದಾಗಲು ಸಾಧ್ಯನಾ? ಅಂತಹದೊಂದು ಮನಸ್ಥಿತಿ ಬರಲು ಸಾಧ್ಯನಾ? ಖಂಡಿತಾ ಸಾಧ್ಯವಿಲ್ಲ ಎಂಬುದಕ್ಕೆ ಈ ಬಾರಿಯ ಲೋಕಸಭಾ ಚುನಾವಣೆ ಸಾಕ್ಷಿಯಾಗುತ್ತಿದೆ. ಮುಂದೆ ಓದಿ...
ಸ್ವತಂತ್ರ ಅಭ್ಯರ್ಥಿ ಸುಮಲತಾಗೆ ಬಂಬಲ
ತಳಮಟ್ಟದ ಕಾಂಗ್ರೆಸ್ ನಾಯಕರಿಗೆ ಎಲ್ಲವೂ ಜೆಡಿಎಸ್ ಮಯವಾದರೆ ತಮಗೆ ಅಸ್ಥಿತ್ವವೇ ಇಲ್ಲದಾಗಬಹುದೇನೋ ಎಂಬ ಭಯವೂ ಕಾಡತೊಡಗಿದೆ. ಹೀಗಾಗಿ ತಳಮಟ್ಟದ ನಾಯಕರು ಮತ್ತು ಕಾರ್ಯಕರ್ತರು ಹೊಂದಿಕೊಳ್ಳಲಾಗದೆ ಕಿತ್ತಾಡಿಕೊಳ್ಳುತ್ತಿದ್ದಾರೆ. ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಮಂಡ್ಯ ಜಿಲ್ಲೆಯಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ನ ತಳಮಟ್ಟದ ನಾಯಕರು ಮತ್ತು ಕಾರ್ಯಕರ್ತರು ಒಬ್ಬರನೊಬ್ಬರು ಹೋರಾಟದ ರಾಜಕೀಯ ಮಾಡಿಕೊಂಡು ಬಂದವರು. ಇವತ್ತಿಗೂ ಇವರು ಹಾವು ಮುಂಗುಸಿಯಂತೆಯೇ ಇದ್ದಾರೆ. ಇವರು ಮಾನಸಿಕವಾಗಿ ಜೆಡಿಎಸ್ ನೊಂದಿಗೆ ಹೊಂದಾಣಿಕೆಯಾಗುವುದು ಕಷ್ಟಸಾಧ್ಯ ಹೀಗಾಗಿಯೇ ಅವರು ಜೆಡಿಎಸ್ ನೊಂದಿಗೆ ಹೋಗದೆ ಸ್ವತಂತ್ರ ಅಭ್ಯರ್ಥಿ ಸುಮಲತಾ ಅವರನ್ನು ಬೆಂಬಲಿಸಿದ್ದಾರೆ.
ಎಚ್ಚರಿಕೆ ನೀಡಿದ ಸಿದ್ದರಾಮಯ್ಯ
ಮಂಡ್ಯದಲ್ಲಿ ಕಾಂಗ್ರೆಸ್ಸನ್ನು ತಳಮಟ್ಟದಿಂದ ಬೆಳೆಸಿದ ನಾಯಕರು, ಕಾರ್ಯಕರ್ತರಿದ್ದಾರೆ. ಅವರಿಗೆ ಕಾಂಗ್ರೆಸ್ನೊಂದಿಗೆ ಬಾಂಧವ್ಯವಿದೆ. ಹೀಗಾಗಿ ಯಾವ ನಾಯಕರು ಎಚ್ಚರಿಕೆ ನೀಡಿದರೂ ಅದಕ್ಕೆ ಸೊಪ್ಪು ಹಾಕದೆ ಧೈರ್ಯವಾಗಿಯೇ ಕಾಂಗ್ರೆಸ್ ಬಾವುಟ ಹಿಡಿದು ಸುಮಲತಾ ಅಂಬರೀಶ್ ಪರ ಪ್ರಚಾರ ಮಾಡುತ್ತಿದ್ದಾರೆ. ಇವತ್ತು ಸಮನ್ವಯ ಸಮಿತಿ ಅಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಜೆಡಿಎಸ್ ಅಭ್ಯರ್ಥಿಗೆ ಬೆಂಬಲ ನೀಡಬೇಕು. ಕಾಂಗ್ರೆಸ್ ಬಾವುಟವನ್ನು ಸುಮಲತಾ ಅವರ ಚುನಾವಣಾ ಪ್ರಚಾರದಲ್ಲಿ ಪ್ರದರ್ಶಿಸಬಾರದು. ಜೆಡಿಎಸ್ ಗೆ ಬೆಂಬಲ ನೀಡದೆ ಹೋದರೆ ಅವರು ಕಾಂಗ್ರೆಸ್ ಪಕ್ಷದಲ್ಲಿ ಇರೋದು ಬೇಡ. ಪಕ್ಷಬಿಟ್ಟು ಹೋಗಬಹುದು ಎಂಬ ಎಚ್ಚರಿಕೆಯನ್ನು ನೀಡಿದ್ದಾರೆ.
ಸಿದ್ದರಾಮಯ್ಯ ಭೇಟಿ ಮಾಡಿದ ನಿಖಿಲ್: ರಾಜಕೀಯ ಲೆಕ್ಕಾಚಾರ ಏನು?
ಕೈ ನಾಯಕರ ಗುದ್ದಾಟ ಬಿಜೆಪಿಗೆ ವರದಾನ
ಮಂಡ್ಯ ಜಿಲ್ಲೆಯ ಗ್ರಾಮ, ಹೋಬಳಿ ಮತ್ತು ತಾಲೂಕು ಮಟ್ಟದ ಕಾಂಗ್ರೆಸ್ನ ಹೆಚ್ಚಿನ ನಾಯಕರು ಮತ್ತು ಕಾರ್ಯಕರ್ತರು ಸುಮಲತಾ ಪರ ಕೆಲಸ ಮಾಡುತ್ತಿದ್ದಾರೆ. ಅವರನ್ನೆಲ್ಲ ಶಿಸ್ತುಕ್ರಮದ ಕಾರಣ ನೀಡಿ ಉಚ್ಚಾಟನೆ ಮಾಡಿದರೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಮುಕ್ತ ಮಂಡ್ಯವಾಗುವುದಂತು ಸತ್ಯ. ಇವತ್ತು ಜೆಡಿಎಸ್ ನ ಉದ್ದಾರ ಮಾಡಲು ಹೊರಟಿರುವ ಕಾಂಗ್ರೆಸ್ ನಾಯಕರು ಮುಂದಿನ ದಿನಗಳಲ್ಲಿ ತಮಗೆ ತಾವೇ ಖೆಡ್ಡಾ ತೋಡಿಕೊಳ್ಳುವ ಎಲ್ಲ ಲಕ್ಷಣಗಳು ಕಂಡು ಬರುತ್ತಿದೆ. ಇನ್ನೊಂದೆಡೆ ಜೆಡಿಎಸ್ ಮತ್ತು ಕಾಂಗ್ರೆಸ್ ನಾಯಕರ ನಡುವಿನ ಗುದ್ದಾಟ ಬಿಜೆಪಿಗೆ ವರದಾನವಾಗಿ ಕಾಡುತ್ತಿದೆ.
ಇದು ಮಾತ್ರ ಎಲ್ಲರನ್ನು ಅಚ್ಚರಿಗೆ ತಳ್ಳುತ್ತಿದೆ
ಜೆಡಿಎಸ್ ವಿರುದ್ಧ ಆಕ್ರೋಶಗೊಳ್ಳುವ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಕಾಂಗ್ರೆಸ್ ವಿರುದ್ಧ ಅಸಮಾಧಾನಗೊಂಡಿರುವ ಜೆಡಿಎಸ್ ಸದಸ್ಯರು ಅಂತಿಮವಾಗಿ ಸಭೆಗಳಲ್ಲಿ ಮೋದಿ.. ಮೋದಿ.. ಎಂಬ ಜಯಘೋಷ ಮೊಳಗಿಸುತ್ತಿದ್ದಾರೆ. ಇದು ಮಾತ್ರ ಎಲ್ಲರನ್ನು ಅಚ್ಚರಿಗೆ ತಳ್ಳುತ್ತಿದೆ. ದೋಸ್ತಿ ಪಕ್ಷದ ನಾಯಕರು ಕಾರ್ಯಕರ್ತರ ಮನಸ್ಥಿತಿಯನ್ನು ಅರಿಯದೆ ಕ್ರಮಗಳ ಮೂಲಕ ಅವರನ್ನು ಹತ್ತಿಕ್ಕುವ ಅಥವಾ ತಾವು ಹೇಳಿದಂತೆ ಕೇಳಿಸುವ ಪ್ರಯತ್ನ ಮಾಡುತ್ತೇವೆ ಎಂದು ಎಲ್ಲಿಯಾದರೂ ಹೊರಟರೆ ಅದರ ಪರಿಣಾಮವನ್ನು ಈ ಲೋಕಸಭಾ ಚುನಾವಣೆಯಲ್ಲಿಯೇ ನೋಡಬಹುದಾಗಿದೆ.