ರೈಲ್ವೆ ಕ್ರಾಂತಿ ಆಗಿದ್ದೆಷ್ಟು? ಸಿಎಜಿ ವರದಿ ತೆರೆದಿಟ್ಟಿದೆ ವಾಸ್ತವ
ನವದೆಹಲಿ, ಏ. 18: ಜಗತ್ತಿನ ಅತಿದೊಡ್ಡ ರೈಲುಜಾಲಗಳಲ್ಲೊಂದೆನಿಸಿದ ಭಾರತೀಯ ರೈಲ್ವೆ ಜನಸಾಮಾನ್ಯನ ಪಾಲಿಗೆ ಅಗ್ಗದ ಸಾರಿಗೆ ಮಾಧ್ಯಮವೇ. ಅಲ್ಲದೇ ಅನೇಕ ಮೀಮ್ಗಳಿಗೆ ಎಡೆಯಾಗುವ ಇಲಾಖೆಯೂ ಹೌದು. ಸಮಯಪಾಲನೆ, ಆಮೆಗತಿ ಇತ್ಯಾದಿ ಅಂಶಗಳು ರೈಲ್ವೆ ಇಲಾಖೆಗೆ ಅಂಟಿಕೊಂಡಿರುವ ಜಾಢ್ಯ. ರೈಲ್ವೆ ಇಲಾಖೆ ಲಾಭ ಹೊಂದುವುದಿರಲಿ, ನಷ್ಟದಲ್ಲಿ ನಡೆಯುತ್ತಿದೆ. ಹಲವು ದಶಕಗಳಾದರೂ ರೈಲು ಸೇವೆಯ ಗುಣಮಟ್ಟದಲ್ಲಿ ಯಾವುದೇ ಸುಧಾರಣೆ ಆಗಿಲ್ಲ. ಈ ಹಿನ್ನೆಲೆಯಲ್ಲಿ ಕಳೆದ ಕೆಲ ವರ್ಷಗಳಿಂದ ರೈಲ್ವೆ ಇಲಾಖೆಯಲ್ಲಿ ಅಮೂಲಾಗ್ರ ಬದಲಾವಣೆ ತರಲಾಗುತ್ತಿದೆ. ಕಳೆದ ಒಂದು ದಶಕದಲ್ಲಿ ರೈಲ್ವೆಯ ಸೌಕರ್ಯ ಅಭಿವೃದ್ಧಿಪಡಿಸಲು 2.5 ಲಕ್ಷ ಕೋಟಿ ಬಂಡವಾಳ ಹಾಕಲಾಗಿದೆ. ರೈಲು ಸಂಚಾರದ ವೇಗ ಹೆಚ್ಚಿಸಲು 2016-17ರಲ್ಲಿ ಮಿಶನ್ ರಫ್ತಾರ್ ಜಾರಿಗೊಳಿಸಲಾಗಿದೆ. ಇದರಿಂದ ಭಾರತೀಯ ರೈಲ್ವೆಯ ಸೇವೆಯಲ್ಲಿ ಎಷ್ಟರ ಮಟ್ಟಿಗೆ ಸುಧಾರಣೆಗಳಾಗಿವೆ ಎಂಬ ಪ್ರಶ್ನೆ ಬರುತ್ತದೆ.
ಸಿಎಜಿ ನಡೆಸಿರುವ 2019ರ ಆಡಿಟ್ ವರದಿಯಲ್ಲಿ ಭಾರತೀಯ ರೈಲ್ವೆಯ ಈಗಿನ ವಾಸ್ತವ ಸ್ಥಿತಿ ಅನಾವರಣಗೊಂಡಿದೆ. ಲಕ್ಷಾಂತರ ಕೋಟಿ ಬಂಡವಾಳ ಹಾಕಿದರೂ, ಮಿಷನ್ ರಫ್ತಾರ್ ಯೋಜನೆ ಜಾರಿಗೊಳಿಸಿದರೂ ಭಾರತದ ಟ್ರೈನುಗಳ ವೇಗ ಮಾತ್ರ ಗಮನಾರ್ಹ ರೀತಿಯಲ್ಲಿ ಹೆಚ್ಚಳಗೊಂಡಿಲ್ಲ ಎಂಬ ವಿಚಾರಗಳನ್ನ ತಿಳಿಸಿರುವ ವರದಿಯನ್ನು ಬಜೆಟ್ ಅಧಿವೇಶನದ ವೇಳೆ ಸಂಸತ್ತಿನಲ್ಲಿ ಸಿಎಜಿ ಮಂಡಿಸಿದೆ.
ಈ ವರದಿ ಪ್ರಕಾರ ಪ್ಯಾಸೆಂಜರ್ ಟ್ರೈನುಗಳ ಸರಾಸರಿ ವೇಗ ಬಹುತೇಕ ಅಷ್ಟೇ ಇದೆ. ವಿಪರ್ಯಾಸ ಎಂದರೆ ಸರಕು ಸಾಗಣೆ ಟ್ರೈನುಗಳ ವೇಗ ಇಳಿಕೆಗೊಂಡಿರುವುದು ತಿಳಿದುಬಂದಿದೆ.
ಭಾರತೀಯ ರೈಲ್ವೆ ಇಲಾಖೆಯಲ್ಲಿ ಸುಧಾರಣೆಗೆ ಪ್ರಯತ್ನಗಳಾಗುವ ಮುನ್ನ ಜನಸಂಚಾರಿ ಟ್ರೈನುಗಳ ಸರಾಸರಿ ವೇಗ 50 ಕಿಮೀ ಇದ್ದರೆ ಸರಕು ಸಾಗಣೆ ಟ್ರೈನುಗಳು 25 ಕಿಮೀ ವೇಗದಲ್ಲಿ ಓಡುತ್ತಿದ್ದವು. ಈ ಸೇವೆಯಲ್ಲಿ ಸುಧಾರಣೆ ತರಲೆಂದು ರೈಲ್ವೆ ಇಲಾಖೆ 'ಮಿಷನ್ ರಫ್ತಾರ್' ಯೋಜನೆ ಜಾರಿಗೆ ತಂದಿತು. 2021-22ರಷ್ಟರಲ್ಲಿ ಪ್ಯಾಸೆಂಜರ್ ರೈಲು ಮತ್ತು ಸರಕು ಸಾಗಣೆ ರೈಲುಗಳ ವೇಗವನ್ನು ಗಂಟೆಗೆ 75 ಮತ್ತು 50 ಕಿಮೀಗಳಿಗೆ ಹೆಚ್ಚಿಸುವುದು ಯೋಜನೆಯ ಗುರಿಯಾಗಿತ್ತು. ಅದರೆ ಈ ಗುರಿಯನ್ನ ಈಡೇರಿಸಲು ಯೋಜನೆ ವಿಫಲವಾಗಿರುವುದು ಸಿಎಜಿ ವರದಿಯಿಂದ ತಿಳಿದುಬರುತ್ತದೆ.
2019-20ರಲ್ಲಿ ಸಿಎಜಿ ನಡೆಸಿದ ಆಡಿಟ್ನಲ್ಲಿ ಎಕ್ಸ್ಪ್ರೆಸ್ ರೈಲು ಸೇರಿದಂತೆ ಜನಸಂಚಾರಿ ಟ್ರೈನುಗಳ ಸರಾಸರಿ ವೇಗ 50.6 ಇತ್ತು. ಅಂದರೆ 0.6ರಷ್ಟು ಮಾತ್ರ ವೇಗ ಹೆಚ್ಚಳವಾದಂತಿದೆ. ಇನ್ನು, ಸರಕು ಸಾಗಣೆ ರೈಲುಗಳ ಸರಾಸರಿ ವೇಗ 25 ಇದ್ದದ್ದು 23.6ಕ್ಕೆ ಇಳಿಮುಖಗೊಂಡಿದೆ.
ವೇಗ ಹೆಚ್ಚಳವಾಗದ್ದಕ್ಕೆ ಇಲಾಖೆ ಹೇಳುವುದಿದು:
ಪ್ಯಾಸೆಂಜರ್ ರೈಲುಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ವೇಗವನ್ನು ಹೆಚ್ಚಿಸಲು ಆಗುತ್ತಿಲ್ಲ ಎಂಬುದು ರೈಲ್ವೆ ಇಲಾಖೆ ವಾದ. ದಿ ಪ್ರಿಂಟ್ ವೆಬ್ಸೈಟ್ನಲ್ಲಿ ಪ್ರಕಟವಾಗಿರುವ ವರದಿಯಲ್ಲಿ ಸಚಿವಾಲಯದ ಅಭಿಪ್ರಾಯವನ್ನು ಕೇಳಿದಾಗ, "ಪ್ಯಾಸೆಂಜರ್ ರೈಲುಗಳ ಸಂಖ್ಯೆಯಲ್ಲಿ ಗಣನೀಯವಾಗಿ ಹೆಚ್ಚಳವಾಗಿದೆ. ಒಂದು ವರ್ಷಕ್ಕೆ ಸರಾಸರಿ ೨೦೦ ಹೊಸ ಟ್ರೈನುಗಳು ಬಿಡುಗಡೆ ಆಗುತ್ತಿವೆ. ಅದಕ್ಕೆ ತಕ್ಕಷ್ಟು ಸೌಕರ್ಯ ವ್ಯವಸ್ಥೆ ಹೆಚ್ಚಾಗಿಲ್ಲ," ಎಂದು ಹೇಳಿದ್ದಾರೆ.
ಗರಿಷ್ಠ ವೇಗ ಎಷ್ಟು?
ಸಿಎಜಿ ಆಡಿಟ್ನಲ್ಲಿ ದೇಶಾದ್ಯಂತ ಚಾಲನೆಯಲ್ಲಿರುವ ವಿವಿಧ ಟ್ರೈನುಗಳ ಸರಾಸರಿ ವೇಗವನ್ನು ಗಣಿಸಲಾಗಿದೆ. 2951 ಎಕ್ಸ್ಪ್ರೆಸ್ ರೈಲುಗಳ ಪೈಕಿ ಶೇ. 2.1ರಷ್ಟು, ಅಂದರೆ 62 ರೈಲುಗಳು ಪ್ರತೀ ಗಂಟೆಗೆ ಸರಾಸರಿ 75 ಕಿಮೀ ವೇಗದಲ್ಲಿ ಓಡುತ್ತಿವೆ.
ಇನ್ನು, ಶೇ. 37ರಷ್ಟು ಎಕ್ಸ್ಪ್ರೆಸ್ ರೈಲುಗಳು ಗಂಟೆಗೆ 55-75 ಕಿಮೀ ವೇಗದಲ್ಲಿ ಸಾಗುತ್ತಿವೆ. ಇನ್ನು, ಶೇ. 31ರಷ್ಟು ರೈಲುಗಳು ಗಂಟೆಗೆ 40-50ರಷ್ಟು ವೇಗ ಹೊಂದಿದ್ದರೆ, ಶೇ. 9.4ರಷ್ಟು ಎಕ್ಸ್ಪ್ರೆಸ್ ರೈಲುಗಳು ಗಂಟೆಗೆ 40 ಕಿಮೀಗಿಂತ ಕಡಿಮೆ ವೇಗದಲ್ಲಿ ಸಾಗುತ್ತಿವೆ ಎಂದು ಸಿಎಜಿ ಆಡಿಟ್ನಲ್ಲಿ ಬಹಿರಂಗಗೊಂಡಿದೆ.
ಒಟ್ಟಾರೆ ಎಕ್ಸ್ಪ್ರೆಸ್ ರೈಲುಗಳ ಸರಾಸರಿ ವೇಗ ಕಳೆದ ಕೆಲವು ವರ್ಷಗಳಲ್ಲಿ ಸ್ವಲ್ಪಮಟ್ಟಿಗೆ ಉತ್ತಮಗೊಂಡಿರುವುದು ಹೌದು. ಆದರೆ, ನಾನ್-ಎಕ್ಸ್ಪ್ರೆಸ್ ಪ್ಯಾಸೆಂಜರ್ ರೈಲುಗಳ ವೇಗದಲ್ಲಿ ಬಹಳ ಕಡಿಮೆ ಆಗಿರುವುದು ತಿಳಿದುಬಂದಿದೆ. 2012ರಲ್ಲಿ ಮಾಮೂಲಿಯ ಪ್ಯಾಸೆಂಜರ್ ರೈಲು ಒಂದು ಸಾವಿರ ಕಿಮೀ ದೂರವನ್ನು ಕ್ರಮಿಸಲು ತೆಗೆದುಕೊಳ್ಳುತ್ತಿದ್ದುದು 27 ಗಂಟೆ 37 ನಿಮಿಷ. ಈಗ (2029ರಲ್ಲಿ) ಅಷ್ಟೇ ದೂರಕ್ಕೆ 29 ಗಂಟೆ 51 ನಿಮಿಷ ಬೇಕಾಗುತ್ತದೆ.
ಸಿಎಜಿ ವರದಿಯಲ್ಲಿ ಮತ್ತೊಂದು ಲೋಪವನ್ನು ಎತ್ತಿತೋರಿಸಲಾಗಿದೆ. ಅದೆಂದರೆ ನಿರ್ದಿಷ್ಟ ಮಾರ್ಗಗಳಲ್ಲಿ ಒಂದು ರೈಲು ಸಾಗಲು ಗರಿಷ್ಠ ಮಿತಿ (ಎಂಪಿಎಸ್) ನಿಗದಿ ಮಾಡಲಾಗಿರುತ್ತದೆ. ಹಲವು ವರ್ಷಗಳಿಂದ ಈ ಮಿತಿಯಲ್ಲಿ ಬದಲಾವಣೆ ಆಗದೇ ಹಾಗೇ ಉಳಿದಿದೆ. ಇದೂ ಕೂಡ ರೈಲುಗಳ ವೇಗ ಹೆಚ್ಚಳ ಆಗದೇ ಇರಲು ಕಾರಣ ಇರಬಹುದು.

ಸೂಪರ್ ಫಾಸ್ಟ್ ಎಕ್ಸ್ಪ್ರೆಸ್ ಹೆಸರಿಗಷ್ಟೇ:
ರಾಜಧಾನಿ ಎಕ್ಸ್ಪ್ರೆಸ್, ಶತಾಬ್ದಿ ಎಕ್ಸ್ಪ್ರೆಸ್, ಸಂಪರ್ಕ್ ಕ್ರಾಂತಿ, ಜನಶತಾಬ್ದಿ, ದುರಂತೋ ಎಕ್ಸ್ಪ್ರೆಸ್, ವಂದೇ ಭಾರತ್ ಇತ್ಯಾದಿ ಹಲವು ಸೂಪರ್ ಫಾಸ್ಟ್ ಟ್ರೈನುಗಳಿವೆ. ಇವುಗಳಲ್ಲಿ ಯಾವೊಂದು ಕೂಡ ಗಂಟೆಗೆ 100 ಕಿಮೀ ಸರಾಸರಿ ವೇಗ ಮುಟ್ಟಿಲ್ಲ. ಗತಿಮಾನ್ ಎಕ್ಸ್ಪ್ರೆಸ್ 93.1 ಕಿಮೀ ವೇಗ ಹೊಂದಿರುವುದೇ ಗರಿಷ್ಠವಾಗಿದೆ. ಜನಶತಾಬ್ದಿ ಎಕ್ಸ್ಪ್ರೆಸ್ನ ಸರಾಸರಿ ವೇಗ ಕೇವಲ 56.2 ಕಿಮೀ ಎಂಬುದು ತಿಳಿದುಬಂದಿದೆ.

ವಿಮಾನ ಪ್ರಯಾಣಕ್ಕಿಂತಲೂ ದುಬಾರಿ ಈ ಸೂಪರ್ ಫಾಸ್ಟ್ ರೈಲುಗಳು:
ಸೂಪರ್ ಫಾಸ್ಟ್ ಎಕ್ಸ್ಪ್ರೆಸ್ ರೈಲುಗಳಲ್ಲಿನ ಎಸಿ ಪ್ರಯಾಣ ದರ ಕೆಲವೊಮ್ಮೆ ವಿಮಾನ ಪ್ರಯಾಣಕ್ಕಿಂತ ದುಬಾರಿಯೂ ಹೌದು, ವಿಳಂಬವೂ ಹೌದು.
ದಿ ಪ್ರಿಂಟ್ನಲ್ಲಿ ಕೊಟ್ಟಿರುವ ಮಾಹಿತಿ ಪ್ರಕಾರ, ದಿಲ್ಲಿ ಚೆನ್ನೈ ರಾಜಧಾನಿ ಎಕ್ಸ್ಪ್ರೆಸ್ ರೈಲಿನ ಎಸಿ ಬರ್ತ್ನಲ್ಲಿ ದೆಹಲಿಯಿಂದ ಚೆನ್ನೈಗೆ ಪ್ರಯಾಣಿಸಲು 28 ಗಂಟೆ ಬೇಕು. ಟಿಕೆಟ್ ಬೆಲೆ 3140 ರೂಪಾಯಿ. ಆದರೆ, ವಿಮಾನ ಪ್ರಯಾಣಕ್ಕೆ ಪೀಕ್ ಅಲ್ಲದ ದಿನಗಳಲ್ಲಿ ಫ್ಲೈಟ್ ಹತ್ತಿದರೆ ದೆಹಲಿಯಿಂದ ಚೆನ್ನೈಗೆ ಟಿಕೆಟ್ ಬೆಲೆ 3 ಸಾವಿರ ರೂಪಾಯಿಗಿಂತಲೂ ಕಡಿಮೆ ಬೀಳುತ್ತದೆ. ಅಲ್ಲದೇ ಮೂರು ಗಂಟೆಯೊಳಗೆ ಪ್ರಯಾಣ ಮಾಡಬಹುದಾಗಿದೆ.
ಅಗ್ಗದ ದರದಲ್ಲಿ ಸೂಪರ್ ಫಾಸ್ಟ್ ರೈಲು ಸೇವೆ ಒದಗಿಸುವ ಸಂಪರ್ಕ್ ಕ್ರಾಂತಿ ಎಕ್ಸ್ಪ್ರೆಸ್ ಮತ್ತು ಜನ್ ಶತಾಬ್ದಿ ಎಕ್ಸ್ಪ್ರೆಸ್ ರೈಲುಗಳ ಸರಾಸರಿ ವೇಗ ಗಂಟೆಗೆ 62.6 ಕಿಮೀ ಮತ್ತು 56.2 ಕಿಮೀ ಮಾತ್ರ ಹೊಂದಿವೆ.

ಸರಕು ಸಾಗಣೆ ರೈಲುಗಳದ್ದು ಮುಗಿಯದ ಗೋಳು
ಸರಕು ಸಾಗಣೆ ಟ್ರೈನುಗಳು ರೈಲ್ವೆ ಇಲಾಖೆಯ ಪ್ರಮುಖ ಆದಾಯ ಮೂಲವಾಗಿವೆ. ಪ್ಯಾಸೆಂಜರ್ ರೈಲುಗಳಿಂದ ಸಿಗುವುದಕ್ಕಿಂತ ದುಪ್ಪಟ್ಟು ಆದಾಯ ಫ್ರೇಟ್ ಟ್ರೈನ್ಗಳಿಂದ ಬರುತ್ತದೆ. ಆದರೆ ಇಂಥ ರೈಲುಗಳ ವೇಗದಲ್ಲಿ ಯಾವ ಸುಧಾರಣೆ ಅಗುವುದಿರಲಿ, ಆರೇಳು ವರ್ಷಗಳಲ್ಲಿ ಗಣನೀಯವಾಗಿ ಇಳಿಮುಖವಾಗಿದೆ. 2012ರಲ್ಲಿ ಒಂದು ಗೂಡ್ಸ್ ರೈಲು 1000 ಸಾವಿರ ಕಿಮೀ ಸಾಗಲು 39 ಗಂಟೆ 49 ನಿಮಿಷ ಬೇಕಾಗುತ್ತಿತ್ತು. 2019ರಲ್ಲಿ ಇಷ್ಟೇ ದೂರ ಹೋಗಲು ಬೇಕಾದ ಸರಾಸರಿ ಕಾಲಾವಧಿ 42 ಗಂಟೆ 22 ನಿಮಿಷವಂತೆ.

ರಸ್ತೆಗಳಿಂದಲೂ ಟಫ್ ಕಾಂಪಿಟೀಶನ್
ಭಾರತದಲ್ಲಿ ಇದೀಗ ರಸ್ತೆ ಸೌಕರ್ಯ ಬಹಳಷ್ಟು ಉತ್ತಮಗೊಳ್ಳುತ್ತಿದೆ. ಅನೇಕ ಹೆದ್ದಾರಿಗಳಲ್ಲಿ ವಾಹನಗಳಿಗೆ ಸಾಗಲು ಇರುವ ಮಿತಿಯನ್ನ 100 ಕಿಮೀಗೆ ಏರಿಸಲಾಗಿದೆ ಮುಂದಿನ ದಿನಗಳಲ್ಲಿ ಇದು 120ಕ್ಕೆ ಏರಿಕೆ ಆಗಲಿದೆ. ಇಂಥ ಸಮಯದಲ್ಲಿ ರೈಲುಗಳ ವೇಗದ ಮಿತಿಯಲ್ಲಿ ಹೆಚ್ಚಳ ಮಾಡದೇ ಇರುವುದು ಅಚ್ಚರಿ ತಂದಿದೆ. ಸರಕ ಸಾಗಣೆ ಗ್ರಾಹಕರು ರೈಲುಗಳನ್ನ ಬಿಟ್ಟು ಟ್ರಕ್ಗಳ ಮೂಲಕ ಸಾಗಣೆಗೆ ಮುಗಿಬಿದ್ದರೆ ಅಚ್ಚರಿ ಇಲ್ಲ. ಒಂದು ವೇಳೆ ಗೂಡ್ಸ್ ರೈಲುಗಳ ಆದಾಯಕ್ಕೆ ಸಂಚಕಾರ ಬಂದರೆ ಪ್ಯಾಸೆಂಜರ್ ರೈಲುಗಳ ಪ್ರಯಾಣ ದರವನ್ನು ಹೆಚ್ಚಿಸದೇ ಬೇರೆ ವಿಧಿ ಇರುವುದಿಲ್ಲ ರೈಲ್ವೆ ಇಲಾಖೆಗೆ.
ಇಂಥ ಸ್ಥಿತಿಯಲ್ಲಿರುವ ಭಾರತೀಯ ರೈಲ್ವೆಗೆ ಪುಷ್ಟಿ ಸಿಗುವುದು ಎಂತು? "ಸರಕು ಸಾಗಣೆಗೆ ರೈಲು ಉತ್ತಮ ಆಯ್ಕೆ. ಆದರೆ ನಿಧಾನಗತಿಯಲ್ಲಿ ಸಾಗುವುದೇ ಸಮಸ್ಯೆ. ಇನ್ನು, ಟ್ರಕ್ಗಳು ಹೆಚ್ಚು ಡೀಸೆಲ್ ವ್ಯಯಿಸಿ ಪರಿಸರಕ್ಕೆ ಮಾರಕವಾಗುತ್ತವೆ. ಆದರೆ, ಎಕ್ಸ್ಪ್ರೆಸ್ ವೇಗಳಲ್ಲಿ ಸಾಗುವ ಟ್ರಕ್ಗಳು ವೇಗವಾಗಿ ತಲುಪುವುದರಿಂದ ವ್ಯವಹಾರ ಗಿಟ್ಟಿಸಬಹುದು. ಈ ಹಿನ್ನೆಲೆಯಲ್ಲಿ ರೈಲ್ವೆ ಇಲಾಖೆಯು ನಿಗದಿತ ಫ್ರೈಟ್ ಕಾರಿಡಾರ್ ರಚಿಸಲಿರುವುದು ಉತ್ತಮ ಕೆಲಸವಾದರೂ ತನ್ನ ವ್ಯವಸ್ಥೆಯ ಆಧುನೀಕರಣಗೊಳಿಸಲು ಮತ್ತು ತನ್ನ ಆಸ್ತಿಗಳ ಮಾನಿಟೈಸೇಶನ್ ಮಾಡುವುದರತ್ತ ಗಮನಹರಿಸಬೇಕು" ಎಂದು ಶಿವ್ ನಾಡರ್ ಯೂನಿವರ್ಸಿಟಿಯ ಪ್ರೊಫೆಸರ್ ರಜತ್ ಕಥೂರಿಯಾ ಹೇಳುತ್ತಾರೆ.

ಸೌಕರ್ಯ ಯೋಜನೆಗಳ ಕೆಲಸವೂ ವಿಳಂಬ:
ರೈಲ್ವೆ ಸೌಕರ್ಯ ಯೋಜನೆಯನ್ನ ಉತ್ತಮಪಡಿಸಲು ಸರಕಾರ 2008ರಿಂದ 2018ರವರೆಗೆ 2.5 ಲಕ್ಷ ಕೋಟಿ ರೂ ಹೂಡಿಕೆ ಮಾಡಿದೆ. ಆದರೆ, ಯೋಜನೆಗಳು ನಿಗದಿತ ಅವಧಿಯೊಳಗೆ ಮುಗಿಯುತ್ತಿಲ್ಲ. ಇದು ರೈಲುಗಳ ವೇಗ ಹೆಚ್ಚಳವಾಗದೇ ಹಿಂದುಳಿಯಲು ಪ್ರಮುಖ ಕಾರಣ ಎಂದು ನಂಬಲಾಗಿದೆ.
ಐಸಿಆರ್ಐಇಆರ್ (ICRIER) ಸಂಸ್ಥೆಯ ಪ್ರೊಫಸರ್ ಸಾವೋನ್ ರೇ ಹೇಳುವಂತೆ, "ನಿಧಾನಗತಿ ರೈಲುಗಳ ದೂರಗಾಮಿ ಪರಿಣಾಮ ಎಂದರೆ ಅಸಮರ್ಪಕ ವ್ಯವಸ್ಥೆ." (ಮಾಹಿತಿ ಕೃಪೆ: ದಿ ಪ್ರಿಂಟ್ ಡಾಟ್ ಇನ್)
(ಒನ್ಇಂಡಿಯಾ ಸುದ್ದಿ)
-
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Sachin Tendulkar: ಅಭಿಷೇಕ್ ಶರ್ಮಾಗೆ ಕ್ರಿಕೆಟ್ ದೇವರು ಸಚಿನ್ ತೆಂಡ್ಯೂಲ್ಕರ್ ವಿಶೇಷ ಸಂದೇಶ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂಬ ಮಾತಿನಂತೆ ನಡೆದುಕೊಂಡ ಯುವರಾಜ್ ಸಿಂಗ್ ಶಿಶ್ಯ ಅಭಿಷೇಕ್ ಶರ್ಮಾ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Property: ಬೆಂಗಳೂರಿನ 510 ಕೋಟಿ ಮೌಲ್ಯದ 14 ಎಕರೆ ಭೂಮಿ ವಶಕ್ಕೆ ಪಡೆದ ಜಿಬಿಎ, ಕಾರಣವೇನು -
Jaggery: ಬೆಲ್ಲದಲ್ಲಿ ಕಲಬೆರಕೆಯ ಕೆಮಿಕಲ್, ಬಣ್ಣ, ಸಕ್ಕರೆ ಮಿಶ್ರಣ: ಪರಿಶೀಲನೆ ಮಾಡುವ ಸರಳ ವಿಧಾನಗಳು












Click it and Unblock the Notifications