2017ರ ಇಡೀ ವರ್ಷದ ನೆನಪು ತರುವ ಅತ್ಯುತ್ತಮ ಚಿತ್ರಗಳು
Recommended Video
ಒಂದು ವರ್ಷ ಹೀಗೆ ನೋಡಿ, ಹಾಗೆ ಆಡುವುದರೊಳಗೆ ಮುಗಿದೇ ಹೋಯಿತು. ವರ್ಷಾಂತ್ಯದಲ್ಲಿ ನಿಂತು ಅದು, ಇದು ಎಂದು ನೆನಪುಗಳನ್ನು ಕೆದಕಿಕೊಂಡು ನಿಂತರೆ ಎಂಥ ಅಚ್ಚರಿಯ ಘಟನೆಗಳು ಕಣ್ಣುಗಳನ್ನು ತಾಗಿ, ಹೃದಯದೊಳಕ್ಕೆ ಇಳಿಯುತ್ತವೆ ಗೊತ್ತಾ? ಮೂನ್ನೂರಾ ಅರವತ್ತು ದಿನಗಳೂ ಒಂದಲ್ಲ ಒಂದು ಕಾರಣಕ್ಕೆ ಮುಖ್ಯವಾಗಿದ್ದವು.
ಆದರೆ, ಕೆಲವು ಘಟನೆ- ವ್ಯಕ್ತಿಗಳು, ವಿಚಾರ ಬೆರಳ ತುದಿಗೆ ಅಂಟಿಕೊಂಡ ಚಿಟ್ಟೆಯ ಬಣ್ಣದಂತೆ, ಒಂದರಿಂದ ಮತ್ತೊಂದನ್ನು ಸ್ಪರ್ಶಿಸಿದಂತೆ ಅದ್ಭುತ ಅನುಭೂತಿ ನೀಡುತ್ತದೆ. ಅಂಥ ಕೆಲವನ್ನು ಫೋಟೋಗಳ ಮೂಲಕ ನಿಮ್ಮೆದುರು ತಂದು ನಿಲ್ಲಿಸಬೇಕು ಎಂಬುದು ನಮ್ಮ ಉದ್ದೇಶ. ಅವುಗಳನ್ನು ನೋಡಿದಾಗ ನಿಮಗೇನನ್ನಿಸಿತು ಎಂಬುದನ್ನು ನಮಗೂ ತಿಳಿಸಿ.
ಪಿಟಿಐನಿಂದ ತುಂಬ ಚೆನ್ನಾಗಿ ಅಂಥ ಪ್ರಯತ್ನವಾಗಿದೆ. ಸೊಗಸಾದ ಫೋಟೋಗಳನ್ನು ಹಾಕಿದ್ದಾರೆ. ಅವುಗಳಲ್ಲೇ ಕೆಲವನ್ನು ಆಯ್ದುಕೊಂಡಿದ್ದೇವೆ. ಕೆಲವೇ ಏಕೆಂದರೆ, ಅವುಗಳ ಜತೆಗೆ ನಮ್ಮದೂ ಒಂದು ಬೆಸುಗೆ ಇದೆ. ನೋಡಿದ ತಕ್ಷಣ ಭಾವ ತಂತುವೊಂದು ಮೀಟುತ್ತದೆ ಎಂಬುದೇ ಕಾರಣ. ಇನ್ನು ಪೀಠಿಕೆ ಸಾಕು, ಫೋಟೋ- ಸುದ್ದಿಯನ್ನು ನೋಡಿ.
ಇಂದಿರಮ್ಮನ ಮೊಮ್ಮಗ ರಾಹುಲ್ ಗಾಂಧಿ
ಆಗಸ್ಟ್ ಹದಿನಾರನೇ ತಾರೀಕು ಈಗಿನ ಎಐಸಿಸಿ ಅಧ್ಯಕ್ಷ- ಆಗಿನ ಉಪಾಧ್ಯಕ್ಷ ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ, ಕಾಂಗ್ರೆಸ್ ಉಸ್ತುವಾರಿ ಕೆಸಿ ವೇಣುಗೋಪಾಲ್, ಸಚಿವ ಕೆಜೆ ಜಾರ್ಜ್, ಮೇಯರ್ ಆಗಿದ್ದ ಪದ್ಮಾವತಿ ಅವರು ಬೆಂಗಳೂರಿನ ಕನಕನ ಪಾಳ್ಯದ ಇಂದಿರಾ ಕ್ಯಾಂಟೀನ್ ನಲ್ಲಿ ಆಹಾರ ಸವಿಯುತ್ತಿರುವ ಚಿತ್ರ. ಓಹ್, ಅದು ಹಾಗಾ ಎಂದು ರಾಹುಲ್ ಗಾಂಧಿ ಅಚ್ಚರಿ ವ್ಯಕ್ತಪಡಿಸುತ್ತಿರುವಂತಿದೆ.
ಮುಂಬೈನಲ್ಲಿ ಮಹಾ ಮಳೆ
ಈ ವರ್ಷ ಮುಂಬೈನಲ್ಲಿ ಭಾರೀ ಮಳೆಯಾಯಿತು. ಅಷ್ಟು ಇಷ್ಟು ಎಂದು ಹೇಳುವುದು ಒಂದು ಲೆಕ್ಕ ಆಗುತ್ತದೆ. ಅದೇ ಈ ಫೋಟೋ ಉದಾಹರಣೆಯಾಗಿ ಇರುವುದರಿಂದ ಮಹಾ ಮಳೆಗೆ ಬೊರಿವಿಲಿಯ ಶ್ರೀ ಕೃಷ್ಣ ನಗರದಲ್ಲಿ ಒಂದು ಕಾರಿನ ಮೇಲೆ ಮತ್ತೊಂದು ಕಾರು ಹೀಗೆ ನಿಂತಿದ್ದು ಮಳೆಯ ಮಹಾತ್ಮೆ ಅಂದರೆ ನೀವು ನಂಬಲೇ ಬೇಕು.
ಬಿಹಾರದ ಪ್ರವಾಹ ಸ್ಥಿತಿ
ಇದು ಮತ್ತೊಂದು ಪ್ರವಾಹ ಸ್ಥಿತಿಯ ಚಿತ್ರಣ ಬಾಳೆಯ ಕಂದಿನ ಮೇಲೆ ಆಹಾರ ಧಾನ್ಯವನ್ನು ಇಟ್ಟು ಸಾಗಿಸುತ್ತಿರುವ ಹಳ್ಳಿಗರೊಬ್ಬರ ಚಿತ್ರವಿದು. ಬಿಹಾರದ ಅರಾರಿಯ ಜಿಲ್ಲೆಯಲ್ಲಿನ ಪರಿಸ್ಥಿತಿ ಭೀಕರತೆಯನ್ನು ಇದಕ್ಕಿಂತ ಪರಿಣಾಮಕಾರಿಯಾಗಿ ಹೇಳಬಹುದಾದ ಚಿತ್ರ ಸಿಗಬಹುದೆ?
ಮತ್ತೊಂದು ವಿಕೋಪ
ಇದು ಮುಂಬೈನಲ್ಲಿನ ಪ್ರಕೃತಿ ವಿಕೋಪದ ಮತ್ತೊಂದು ಚಿತ್ರ. ಇದಕ್ಕೆ ಖಂಡಿತಾ ವಿವರಣೆ ಬೇಡ. ಫೋಟೋ ತೆಗೆದ ವ್ಯಕ್ತಿಗೊಂದು ಸಲಾಂ.
ತಾಯಿಯ ಪ್ರೀತಿ
ಅಸ್ಸಾಂನಲ್ಲಿ ಪ್ರವಾಹ ಪರಿಸ್ಥಿತಿಗೆ ತನ್ನ ಮಗುವನ್ನು ತಪ್ಪಲೆಯೊಳಗೆ ಕೂರಿಸಿ ಕರೆದೊಯ್ಯುತ್ತಿದ್ದ ತಾಯಿ ಫೋಟೋ ಕಣ್ಣಿನಲ್ಲಿ ಸೆರೆಯಾಗಿದ್ದು ಹೀಗೆ.
ಕಾಶ್ಮೀರದ ಚಳಿ
ಕಾಶ್ಮೀರದ ಚಳಿಯು ಹೇಗಿರುತ್ತದೆ ಗೊತ್ತೆ? ಅಬ್ಬಾ ಅದು ಹಾಗೆ..ಹೀಗೆ ಎನ್ನುವುದಕ್ಕಿಂತ ಉತ್ತರ ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ತಂಗ್ ಮಾರ್ಗ್ ನಲ್ಲಿ ಹಿರಿಯ ವ್ಯಕ್ತಿಯೊಬ್ಬರು ನಡೆದು ಹೋಗುವಾಗ ಸೆರೆ ಹಿಡಿದ ಈ ಫೋಟೋ ನೋಡಿ.
ಗೆದ್ದ ಖುಷಿಯಲ್ಲಿ
ಹಿಮಾಚಲ ಪ್ರದೇಶ ಹಾಗೂ ಗುಜರಾತ್ ವಿಧಾನಸಭೆ ಚುನಾವಣೆ ಗೆಲುವಿನ ನಂತರ ಮೋದಿ- ಅಮಿತ್ ಶಾ ಜೋಡಿಯ ಸಂಭ್ರಮ.
ಸವಾಲು ಎದುರಿಸಲಾಗಲಿಲ್ಲ
ಇದು ಉತ್ತರಪ್ರದೇಶದ ವಿಧಾನಸಭಾ ಚುನಾವಣೆ ಪ್ರಚಾರದಲ್ಲಿನ ವೇಳೆ ತೆಗೆದ ಈ ಫೋಟೋದಲ್ಲಿರುವುದು ಅಖಿಲೇಶ್ ಯಾದವ್ ಹಾಗೂ ರಾಹುಲ್ ಗಾಂಧಿ ಜೋಡಿ. ಕೇಬಲ್ ಗಳನ್ನು ಕೋಲಿನ ಸಹಾಯದಿಂದ ಎತ್ತಿದಷ್ಟು ಸುಲಭವಾಗಿ ಮೋದಿ- ಅಮಿತ್ ಶಾ ಜೋಡಿಯ ಸವಾಲನ್ನು ಎದುರಿಸಲು ಆಗಲಿಲ್ಲ.
ತಾರಾ ವಿವಾಹ
ಇಟಲಿ ದೇಶದ ಮಿಲಾನ್ ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ- ಬಾಲಿವುಡ್ ತಾರೆ ಅನುಷ್ಕಾ ಶರ್ಮಾ.
ಟ್ರಂಪ್ ಮಗಳು ಇವಾಂಕಾ
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಗಳು ಇವಾಂಕಾ ಟ್ರಂಪ್ ಹೈದರಾಬಾದ್ ಗೆ ಭೇಟಿ ನೀಡಿದ್ದ ವೇಳೆ ಕ್ಯಾಮೆರಾಗೆ ಸೆರೆ ಸಿಕ್ಕ ಚಿತ್ರ.
ವಿಶ್ವಸುಂದರಿ
ಮಿಸ್ ವರ್ಲ್ಡ್ 2017 ಆಗಿ ಆಯ್ಕೆಯಾದ ಮಾನುಷಿ ಛಿಲ್ಲರ್ ಮುಂಬೈನಲ್ಲಿ ಪತ್ರಿಕಗೋಷ್ಠಿಯಲ್ಲಿ ಕಾಣಿಸಿಕೊಂಡಿದ್ದು ಹೀಗೆ.
ಹನಿಪ್ರೀತ್ ಳನ್ನು ಕೋರ್ಟ್ ಗೆ ಕರೆತಂದಿದ್ದು
ವಿವಾದಿತ ದೇವ ಮಾನವ ರಾಮ್ ರಹೀಮ್ ಸಿಂಗ್ ನ ದತ್ತು ಪುತ್ರಿ ಹನಿಪ್ರೀತ್ ಇನ್ಸಾನ್ ಹಾಗೂ ಆಕೆಯ ಸಹವರ್ತಿ ಜಗ್ ದೀಪ್ ಕೌರ್ ರನ್ನು ಪಂಚ್ ಕುಲಾದ ಕೋರ್ಟ್ ಗೆ ಪೊಲೀಸರು ಕರೆತಂದ ಕ್ಷಣ.