Actress Ramya: ನಟಿ ರಮ್ಯಾಗೆ ಅಶ್ಲೀಲ ಕಾಮೆಂಟ್ಸ್ ಬಗ್ಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಹೀಗಂದಿದ್ದೇಕೆ?
ನಟಿ ರಮ್ಯಾ ಹಾಗೂ ದರ್ಶನ್ ಅಭಿಮಾನಿಗಳ ನಡುವಿನ ಸೋಷಿಯಲ್ ಮೀಡಿಯಾ ವಾರ್ ರಾಜ್ಯದಾದ್ಯಂತ ಸಂಚಲನ ಸೃಷ್ಟಿಸಿದೆ. ಈ ವಿಚಾರಕ್ಕೆ ಮಹಿಳಾ ಆಯೋಗ ಎಂಟ್ರಿ ಕೊಟ್ಟಿದೆ. ಮತ್ತೊಂದೆಡೆ ನಟಿ ರಮ್ಯಾ ಅವರೇ ಖುದ್ದಾಗಿ ತೆರಳಿ, ಬೆಂಗಳೂರು ಸಿಟಿ ಪೊಲೀಸ್ ಕಮೀಷನರ್ ಅವರಿಗೆ ದೂರು ಕೊಟ್ಟಿದ್ದಾರೆ. ಸದ್ಯ ರಮ್ಯಾ ಅವರಿಗೆ ಕೆಟ್ಟದಾಗಿ ಕಾಮೆಂಟ್ ಹಾಕಿದ್ದವರಿಗೆ ಢವಢವ ಶುರುವಾಗಿದೆ. ರಮ್ಯಾ ಅವರ ನಡೆಗೆ ಚಿತ್ರರಂಗದ ಹಲವರಿಂದ ಮೆಚ್ಚುಗೆ ಹಾಗೂ ಬೆಂಬಲ ವ್ಯಕ್ತವಾಗಿದೆ. ತಮ್ಮದೇ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ರಮ್ಯಾ ಅವರ ಪ್ರಕರಣದ ವಿಚಾರವಾಗಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ರಮ್ಯಾ ಅವರು ಮೊದಲಿಗೆ ಸಿನಿಮಾರಂಗದಲ್ಲಿ ಹೆಸರು ಮಾಡಿದರು. ಬಳಿಕ ಅವರು ಕಾಂಗ್ರೆಸ್ನಿಂದಲೇ ರಾಜಕೀಯ ಜೀವನಕ್ಕೆ ಕಾಲಿಟ್ಟಿದ್ದರು. ರಮ್ಯಾ ಅವರು 2012ರಲ್ಲಿ ಭಾರತೀಯ ಯುವ ಕಾಂಗ್ರೆಸ್ ಸೇರಿದ್ದರು. ಬಳಿಕ 2013ರಲ್ಲಿ ಉಪಚುನಾವಣೆಯಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಬಳಿಕ ಕಾಂಗ್ರೆಸ್ ಸಂಸದೆಯಾಗಿ ರಮ್ಯಾ ಮಿಂಚಿದ್ದರು. 2014ರ ಚುನಾವಣೆಯಲ್ಲಿ ಅವರು ಮತ್ತೊಮ್ಮೆ ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸಿದರು. ಆದರೆ ಸಿಎಸ್ ಪುಟ್ಟರಾಜು ಅವರ ವಿರುದ್ಧ ಸೋತರು.

ತಮ್ಮ ರಾಜಕೀಯ ಮಾರ್ಗದರ್ಶಕರಾದ ಎಸ್ಎಂ ಕೃಷ್ಣ ಅವರನ್ನು ಅನುಸರಿಸಿ ರಮ್ಯಾ ಅವರು ಬಿಜೆಪಿ ಸೇರಲಿದ್ದಾರೆ ಎಂಬ ಮಾತುಗಳು ಕೇಳಿಬಂದವು. ಆದರೆ ರಮ್ಯಾ ಅವರು ಕಾಂಗ್ರೆಸ್ನಲ್ಲೇ ಮುಂದುವರಿದಿದ್ದರು. ನಂತರ 2017ರಲ್ಲಿ ಅವರಿಗೆ ಕಾಂಗ್ರೆಸ್ ಸಾಮಾಜಿಕ ಮಾಧ್ಯಮ ವಿಭಾಗದಲ್ಲಿ ಮಹತ್ವದ ಹುದ್ದೆ ಅಲಂಕರಿಸಿದರು. ಕಾಂಗ್ರೆಸ್ನ ಡಿಜಿಟಲ್ ತಂಡದ ರಾಷ್ಟ್ರೀಯ ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಯಿತು. ನಂತರ 2018ರಲ್ಲಿ ಅವರು ಕಾಂಗ್ರೆಸ್ ಪಕ್ಷದ ಬಗ್ಗೆ ಅಸಮಾಧಾನ ಹೊಂದಿದ್ದಾರೆ ಎಂದು ವರದಿಯಾಗಿತ್ತು. ನಂತರ ಸಾಮಾಜಿಕ ಮಾಧ್ಯಮ ಮುಖ್ಯಸ್ಥೆ ಸ್ಥಾನದಿಂದ ಕೆಳಗಿಳಿದಿದ್ದಾರೆ ಎನ್ನಲಾಗಿತ್ತು.
ಒಟ್ಟಾರೆ ಕಾಂಗ್ರೆಸ್ನಲ್ಲೇ ರಮ್ಯಾ ರಾಜಕೀಯವಾಗಿ ಗುರುತಿಸಿಕೊಂಡಿದ್ದರು. ಇತ್ತೀಚೆಗೆ ಅವರು ರಾಜಕೀಯ ಹಾಗೂ ಸಿನಿಮಾ ಎರಡೂ ವೃತ್ತಿಯಿಂದ ತುಸು ಬ್ರೇಕ್ ಪಡೆದಿದ್ದರು. ಸಿನಿಮಾಗಳಲ್ಲೂ ಅವರು ನಟಿಸಲಿಲ್ಲ. ಆದರೆ ಸೋಷಿಯಲ್ ಮೀಡಿಯಾದಲ್ಲಿ ಅವರು ಫುಲ್ ಆಕ್ಟೀವ್ ಇದ್ದರು. ಇತ್ತೀಚೆಗೆ ಹಲವು ಸಿನಿಮಾಗಳ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡು ಮತ್ತೆ ತೆರೆ ಮೇಲೆ ಬರುವ ಸುಳಿವು ನೀಡಿದ್ದರು. ಒಳ್ಳೆಯ ಕಥೆ ಸಿಕ್ಕರೆ ಖಂಡಿತ ಸಿನಿಮಾ ಮಾಡ್ತೀನಿ ಎಂದಿದ್ದರು ರಮ್ಯಾ. ಇತ್ತೀಚೆಗೆ ಸಿನಿಮಾರಂಗದ ವಿಚಾರಗಳ ಬಗ್ಗೆಯೂ ಧ್ವನಿ ಎತ್ತುತ್ತಿದ್ದ ರಮ್ಯಾ, ರೇಣುಕಾಸ್ವಾಮಿ ಕೊಲೆ ಕೇಸ್ ಬಗ್ಗೆಯೂ ತಮ್ಮ ಅಭಿಪ್ರಾಯ ತಿಳಿಸಿದ್ದು ದರ್ಶನ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ.
ಇದು ಮುಂದುವರಿದು, ರಮ್ಯಾ ವಿರುದ್ಧ ಕೆಟ್ಟ ಕಾಮೆಂಟ್ ಮಾಡುವ ಮೂಲಕ ವಿಕೃತಿ ಮೆರೆದಿದ್ದಾರೆ. ಇದಕ್ಕೆ ತಿರುಗೇಟು ನೀಡಿರುವ ರಮ್ಯಾ ಅವರು ನೇರವಾಗಿ ಪೊಲೀಸರಿಗೆ ದರ್ಶನ್ ಅಭಿಮಾನಿಗಳ ವಿರುದ್ಧ ದೂರು ದಾಖಲಿಸಿದ್ದಾರೆ. ಇನ್ನು ತಮ್ಮದೇ ಪಕ್ಷದಲ್ಲಿದ್ದ ರಮ್ಯಾ ಅವರಿಗೆ ಈ ರೀತಿ ಕೆಟ್ಟದಾಗಿ ಕಾಮೆಂಟ್ ಮಾಡಿರುವ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್ ಅವರು ಮೊದಲ ಬಾರಿಗೆ ಪ್ರತಿಕ್ರಿಯಿಸಿದ್ದಾರೆ. "ನಮ್ಮ ಪಾರ್ಟಿಯವರಿಗೆ ಯಾರೆಲ್ಲ ಬೆಂಬಲ ಕೊಡುತ್ತಾರೋ? ಅವರಿಗೆಲ್ಲ ನಾವು ಕೂಡ ಬೆಂಬಲ ಕೊಡುತ್ತೇವೆ. ಈ ಬಗ್ಗೆ ನಮ್ಮ ಗೃಹ ಸಚಿವ ಜಿ.ಪರಮೇಶ್ವರ್ ಅವರನ್ನು ಕೇಳಿ, ಅವರು ನಿಮಗೆ ಹೆಚ್ಚಿನ ಮಾಹಿತಿ ಕೊಡುತ್ತಾರೆ" ಎಂದು ಡಿಸಿಎಂ ಹೇಳಿದ್ದಾರೆ.












Click it and Unblock the Notifications