ರಾಜ್ಯದಲ್ಲಿ ಉದ್ಯೋಗವೇ ಸಿಗುತ್ತಿಲ್ಲ ಎನ್ನುತ್ತಿದ್ದಾರೆ ಜನ
ಬೆಂಗಳೂರು, ಏಪ್ರಿಲ್ 13: ರಾಜ್ಯ ಎದುರಿಸುತ್ತಿರುವ ಅತಿ ದೊಡ್ಡ ಸಮಸ್ಯೆ ಯಾವುದು?
ಬರ, ಕುಡಿಯುವ ನೀರು, ಆರೋಗ್ಯ, ಆಹಾರ, ಶಿಕ್ಷಣ, ವಸತಿ, ಬಡತನ, ಭ್ರಷ್ಟಾಚಾರ ಮುಂತಾದ ಸಮಸ್ಯೆಗಳು ಪಟ್ಟಿಯಲ್ಲಿದ್ದರೂ ಜನರ ಪ್ರಕಾರ ರಾಜ್ಯವನ್ನು ಬಾಧಿಸುತ್ತಿರುವ ಅತಿ ಪ್ರಮುಖ ಸಮಸ್ಯೆಯೆಂದರೆ ನಿರುದ್ಯೋಗ.
ಇಂಡಿಯಾ ಟುಡೇ-ಕಾರ್ವಿ ನಡೆಸಿದ ಸಮೀಕ್ಷೆಯಲ್ಲಿ ಹೆಚ್ಚಿನ ಜನರು ಉದ್ಯೋಗದ ಕೊರತೆ ರಾಜ್ಯದಲ್ಲಿ ತಾಂಡವವಾಡುತ್ತಿರುವ ಬೃಹತ್ ಸಮಸ್ಯೆಯಾಗಿದೆ ಎಂದು ಉತ್ತರಿಸಿದ್ದಾರೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಬಿಜೆಪಿ ಅಭ್ಯರ್ಥಿಗಳ ಮೊದಲ ಅಧಿಕೃತ ಪಟ್ಟಿ ಪ್ರಕಟ
ಶೇ 22ರಷ್ಟು ಜನರು ನಿರುದ್ಯೋಗವೇ ಅತಿ ದೊಡ್ಡ ಕಳವಳಕಾರಿ ಸಂಗತಿ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಬೆಲೆ ಏರಿಕೆ, ಭ್ರಷ್ಟಾಚಾರ ಮತ್ತು ಕುಡಿಯುವ ನೀರಿನ ಕೊರತೆ ಜನರನ್ನು ಕಾಡುತ್ತಿರುವ ಪ್ರಮುಖ ಸಮಸ್ಯೆಗಳಲ್ಲಿ ಮುಖ್ಯವಾಗಿವೆ.

ರಾಜ್ಯದಲ್ಲಿ ನೌಕರಿಯ ಅಲಭ್ಯತೆ ಅತಿ ಗಂಭೀರ ಸಮಸ್ಯೆ ಎಂದು ಶೇ 56ರಷ್ಟು ಜನರು ಅಭಿಪ್ರಾಯಪಟ್ಟಿದ್ದಾರೆ. ಜತೆಗೆ ಕಳೆದ ಐದು ವರ್ಷಗಳಲ್ಲಿ ನಿರುದ್ಯೋಗ ಸಮಸ್ಯೆ ಎಂದಿಗಿಂತ ಹೆಚ್ಚು ಕಾಡುತ್ತಿದೆ ಎಂದಿದ್ದಾರೆ.
ಶೇ 33ರಷ್ಟು ಜನರು ಮಾತ್ರ ಕರ್ನಾಟಕದ ಉದ್ಯೋಗ ಸ್ಥಿತಿಗತಿಯ ಬಗ್ಗೆ ಆಶಾಭಾವ ವ್ಯಕ್ತಪಡಿಸಿದ್ದಾರೆ.
ಭ್ರಷ್ಟಾಚಾರದಿಂದ ಕಾಂಗ್ರೆಸ್ ಸರ್ಕಾರ ಹೊರತಾಗಿಲ್ಲ ಎಂದು ಸುಮಾರು ಅರ್ಧದಷ್ಟು ಜನರು ಅನಿಸಿಕೆ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಭ್ರಷ್ಟ ಪಕ್ಷವೆಂದು ಶೇ 40ರಷ್ಟು ಜನರು ಹೇಳಿದ್ದರೆ, ಬಿಜೆಪಿ ಅತ್ಯಂತ ಭ್ರಷ್ಟ ಪಕ್ಷವೆಂದು ಅರ್ಧದಷ್ಟು ಜನರು ತಿಳಿಸಿದ್ದಾರೆ.
ಅದೇ ರೀತಿ ಕಳೆದ ಐದು ವರ್ಷಗಳಲ್ಲಿ ಕಾಂಗ್ರೆಸ್ ಸರ್ಕಾರದಲ್ಲಿ ಭ್ರಷ್ಟಾಚಾರವು ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗಿದೆ ಎಂದು ಶೇ 50ರಷ್ಟು ಜನರು ಅಭಿಪ್ರಾಯಪಟ್ಟಿದ್ದಾರೆ.
ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಜನರ ಜೀವನಮಟ್ಟ ಸುಧಾರಣೆಯಾಗಿದೆಯೇ? ಐದು ವರ್ಷಗಳಲ್ಲಿ ಏನೂ ಬದಲಾವಣೆಯಾಗಿಲ್ಲ ಎನ್ನುವುದು ಅಧಿಕ ಜನರ ಅಭಿಮತ.
ಶೇ 46ರಷ್ಟು ಜನರು ತಮ್ಮ ಜೀವನದ ಸ್ಥಿತಿಗತಿ ಹಾಗೆಯೇ ಉಳಿದಿದೆ ಎಂದಿದ್ದಾರೆ. ಇನ್ನು ಶೇ 30ರಷ್ಟು ಮಂದಿ ಹಿಂದಿಗಿಂತ ಹೋಲಿಸಿದರೆ ತಮ್ಮ ಬದುಕು ಸಾಕಷ್ಟು ಸುಧಾರಣೆಯಾಗಿದೆ ಎಂದು ಹೇಳಿಕೊಂಡಿದ್ದಾರೆ. ಶೇ 19ರಷ್ಟು ಜನ ಮಾತ್ರ ಹಿಂದಿಗಿಂತಲೂ ಜೀವನ ನಿರ್ವಹಣೆ ಕಷ್ಟವಾಗಿದೆ ಎಂದಿದ್ದಾರೆ.












Click it and Unblock the Notifications