ಅಂಬಿ ನಿರ್ಗಮನ : ಕಾಂಗ್ರೆಸ್ ಮೇಲೆ ಪರಿಣಾಮ ಬೀರಲು 10 ಕಾರಣ
Recommended Video
ದಿನ ನಿತ್ಯದ ಸುದ್ದಿ ಹಲವಾರು. ಪ್ರಸ್ತುತ ನಮ್ಮೆಲ್ಲರ ಗಮನವೆಲ್ಲ ಚುನಾವಣಾ ವಾತಾವರಣದತ್ತ! ದಿನಕ್ಕೊಂದು ರೀತಿಯ ಆಘಾತಕಾರಿ ಸುದ್ದಿ ರಾಜಕೀಯ ಕ್ಷೇತ್ರದ ದಿಕ್ಕು ತಿರುಗಿಸುತ್ತದೆ. ವಿವಿಧ ಕ್ಷೇತ್ರಗಳಲ್ಲಿ, ಪಕ್ಷಗಳಲ್ಲಿ ನಾಯಕರ ನಿರ್ಗಮನ, ಆಗಮನ ಜನತೆಯಲ್ಲಿ ಗೊಂದಲ, ಕುತೂಹಲ ಹುಟ್ಟಿಸಿದೆ.
ಸದ್ಯದಲ್ಲಿ ಎಲ್ಲರಿಗೂ, ಮುಖ್ಯವಾಗಿ ಕಾಂಗ್ರೆಸ್ ಹೈ ಕಮಾಂಡ್ ಗೆ ಶಾಕ್ ಕೊಟ್ಟಿರುವ ಸುದ್ದಿಯೆಂದರೆ ಅಂಬರೀಶ್ ಕಾಂಗ್ರೆಸ್ ಪಕ್ಷದ ನಂಟು ಕಳೆದುಕೊಂಡು, ಕೊಂಡಿ ಕಳಚಿಕೊಂಡಿರುವುದು. ಮಂಡ್ಯದ ಜೊತೆ ಜೋಡಿ ಪದವಾಗಿ ಹೆಣೆದು ಹೋಗಿರುವ ಅಂಬಿ, "ನನಗೆ ವಯಸ್ಸಾಯಿತು ರಾಜಕೀಯವನ್ನೇ ತೊರೆಯುತ್ತಿದ್ದೇನೆ, ಇನ್ನು ಜನಸೇವೆ ಮಾಡಲು ಸಾಧ್ಯವಿಲ್ಲ" ಎಂದು ಹೇಳುತ್ತಿರುವ ಮಾತು ಎಲ್ಲೆಡೆ ಪ್ರತಿಧ್ವನಿಸುತ್ತಿದೆ.
ಅಂಬರೀಶ್ ಚುನಾವಣಾ ನಿವೃತ್ತಿ: ಮಂಡ್ಯ ರಾಜಕೀಯದಲ್ಲಿ ಏನೇನಾಗಬಹುದು?
ಮಂಡ್ಯದ ಜನರ ಮನಗೆದ್ದಿರುವ ಈ ಮಂಡ್ಯದ ಗಂಡು ನನಗೆ 66 ವಯಸ್ಸಾಯಿತು, ಇನ್ನೆಷ್ಟು ವರ್ಷ ಸೇವೆ ಸಲ್ಲಿಸಲಿ ಅಂತಿರೋದೇನೋ ಸರಿ. ಆದರೆ ಅವರ ಈ ನಿವೃತ್ತಿಗೆ ಕಾರಣವಿಷ್ಟೇನಾ? ಅಥವಾ ಇನ್ನೇನಾದರೂ ಗುಪ್ತ ರಾಜಕೀಯ ವಿಚಾರಗಳಿವೆಯಾ?
ಈ ಚುನಾವಣೆ ಹಾವು-ಏಣಿ ಆಟದಂತೆ. ಅಂಬಿಯಣ್ಣನ ನಿರ್ಗಮನದ ಪ್ರಭಾವ ಕಾಂಗ್ರೆಸ್ ಮೇಲೆ ಬೀರದೆ ಇರುತ್ತದೆಯೇ? ಅಷ್ಟು ಪ್ರಭಾವಶಾಲಿ ವ್ಯಕ್ತಿಯು ಕಾಂಗ್ರೆಸ್ ತ್ಯಜಿಸಿದ ಮೇಲೆ ಪಕ್ಷ ದುರ್ಬಲವಾಗದೆ ಇರುತ್ತದೆಯೇ? ಕಾಂಗ್ರೆಸ್ ಬೆಳವಣಿಗೆ ಕುಂಠಿತವಾಗುವುದು ಖಂಡಿತ. ಬನ್ನಿ ನಾವೇ ಪರಿಸ್ಥಿತಿಯ, ಜನಮನಗಳ ಆಳಕ್ಕಿಳಿದು ಪರಿಶೀಲಿಸಿ ನೋಡೋಣ:
ನಾನೇ ಮಂಡ್ಯದ ಗಂಡು ಅಂತ ಸಾಬೀತು ಮಾಡಿದ್ದೇನೆ
ನಾನೊಂದು ಸೀಕ್ರೆಟ್ ಹೇಳ್ತೀನಿ ಕೇಳಿ. ಯಾವ ಪಕ್ಷದ (ಕಾಂಗ್ರೆಸ್) ಜೊತೆಯೂ ಚುನಾವಣೆಯಲ್ಲಿ ಪ್ರಚಾರ ಮಾಡಲ್ಲ ಅಂತ ಹೇಳಿ ನಾನು ನಿಜವಾದ ಮಂಡ್ಯದ ಗಂಡು ಅಂತ ಸಾಬೀತು ಮಾಡಿದ್ದೇನೆ ಎಂದು ಹೇಳಿ ನೇರವಾಗಿಯೇ ಕಾಂಗ್ರೆಸ್ಸಿಗೆ ಅಂಬರೀಶ್ ತಾವು ಎಂಥವರೆಂದು ಮನವರಿಕೆ ಮಾಡಿಕೊಟ್ಟಿದ್ದಾರೆ. ಮೇಲ್ನೋಟಕ್ಕೆ ಅಂಬಿ ಕಾಂಗ್ರೆಸ್ಸಿಗೆ ಬೇಡವಾಗಿರಬಹುದು. ಆದರೆ, ಅವರು ಆಡುವ ಮಾತುಗಳು ಗಾಯ ಮಾಡದೆ ಬಿಡಲಾರವು.
ಅಂಬಿ ಮತದಾರರಿಗೆ ನೀಡಿರುವ ಸಂದೇಶವೇನು?
ಚುನಾವಣಾ ರಾಜಕೀಯಕ್ಕೆ ಗುಡ್ ಬೈ ಹೇಳುವ ಮುನ್ನ ಪ್ರತ್ಯಕ್ಷವಾಗಿಯಲ್ಲದಿದ್ದರೂ ಪರೋಕ್ಷವಾಗಿಯಾದರೂ ಅಂಬರೀಶ್ ಅವರು ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ಮತ ಹಾಕಬೇಡಿ, ಜೆಡಿಎಸ್ಸಿಗೆ ಮತ ಹಾಕಿ ಎಂಬ ಸಂದೇಶ ರವಾನಿಸಿದ್ದಾರೆ. ಕೂಡಲೆ ಪ್ರತಿಕ್ರಿಯೆ ನೀಡಿದ್ದ ಎಚ್ ಡಿ ಕುಮಾರಸ್ವಾಮಿ ಅವರು, ಅಂಬರೀಶ್ ಅವರು ನನ್ನ ಅಣ್ಣ ಇದ್ದಂತೆ, ಅವರು ಎಲ್ಲರೊಂದಿಗೂ ಚೆನ್ನಾಗಿದ್ದಾರೆ. ಅವರು ಪಕ್ಷಕ್ಕೆ ಬರುವುದಾದರೆ ಸ್ವಾಗತ ಎಂದು ಕೆಂಪು ಹಾಸು ಹಾಸಿದ್ದಾರೆ.
ಜಮೀರ್ ಗೆ ಟಾಂಗ್ ಕೊಟ್ಟು, ಅಂಬಿ ನನ್ನ ದೊಡ್ಡ ಅಣ್ಣ ಎಂದ ಕುಮಾರಸ್ವಾಮಿ
ಅಂಬಿ ಮಾತಿನಲ್ಲಿ ವ್ಯಂಗ್ಯ, ಆಕ್ರೋಶ, ಬೇಸರ
ಮಾಧ್ಯಮಗಳೊಂದಿಗೆ ಅನಿಸಿಕೆ ಹಂಚಿಕೊಳ್ಳುತ್ತ, "ನನಗೆ ಶಕ್ತಿ ಕುಂದಿದೆ, ಅನಾರೋಗ್ಯದ ಹಿನ್ನೆಲೆಯಷ್ಟೇ ಇದಕ್ಕೆ ಕಾರಣ. ಇದನ್ನು ನಾನೇ ಅರ್ಥ ಮಾಡಿಕೊಳ್ಳಬೇಕು. ಅದಕ್ಕೆ ಅಲ್ಲವೇ ನನ್ನನ್ನು ಈ ಹಿಂದೇನೇ ವಸತಿ ಸಚಿವ ಸ್ಥಾನದಿಂದ ರಾಜೀನಾಮೆ ನೀಡಲು ಹೇಳಿದ್ದು" ಎಂದಿದ್ದಾರೆ. ನಾವು ಈ ಪದಗಳನ್ನು ಸರಿಯಾಗಿ ಅರ್ಥೈಸಿದರೆ ಈ ಪ್ರಕ್ರಿಯೆಯಲ್ಲಿ ಅವರ ವ್ಯಂಗ್ಯ, ಆಕ್ರೋಶ, ಅಸಮಾಧಾನ, ಬೇಸರ ಎದ್ದು ಕಾಣುತ್ತಿದೆ. ಕಾಂಗ್ರೆಸ್ಗೆ ಆಗ ನಾನು ಬೇಕಿಲ್ಲ, ಅಂದ್ರೆ ಈಗ ಯಾಕೆ ಬೇಕು? ಆಗ ನಾನು ಎಷ್ಟೆಲ್ಲಾ ಜನ ಸೇವೆ ಮಾಡಿಲ್ಲ? ಅಂತಹುದರಲ್ಲಿ ನನ್ನ ತಿರಸ್ಕರಿಸಿದ್ದೀರಿ, ಈಗ ನಾನು ನಿಮ್ಮನ್ನೇ ತಿರಸ್ಕರಿಸುತ್ತಿದ್ದೀನಿ ಅಂತ ಏಟಿಗೆ ತಿರುಗೇಟು ಕೊಟ್ಟಂತಿದೆ. ಅಂಬಿ ಕೊಟ್ಟಿರುವ ಈ ಸಿಡಿಲುಬಡಿತಕ್ಕೆ ಕಾಂಗ್ರೆಸ್ ಪಕ್ಷ ಅಲ್ಲಾಡಿ ಹೋಗುತ್ತಾ? ಬಂಡೆಗಲ್ಲಾಗಿ ನಿಲ್ಲುತ್ತಾ?
ಜನ ಸುಲಭವಾಗಿ ಬಿಟ್ಟುಕೊಡಲಾರರು
ಮೊದಲಿಗೆ ಅಂಬಿ ಮಂಡ್ಯದಲ್ಲಿ ಬುನಾದಿಯೂರಿ ಕಾಲಗಳಾಯಿತು. ಸಾರ್ವಜನಿಕರ ಮನಗೆದ್ದು ಎಲ್ಲರ ಅಭಿಮಾನಿಯಾಗಿ ಮಂಡ್ಯದ ತಳಪಾಯ ಊರಿದ್ದಾರೆ. ಅವರೇ ಮಂಡ್ಯದ ಆಧಾರವೆಂದು ಜನತೆ ಕೂಗಿ ಹೇಳುತ್ತಿದೆ. ಅವರ ಜನಸೇವೆ ಅಲ್ಲಿ ಎಲ್ಲರಿಗೂ ತೃಪ್ತಿಕರವಾಗಿಲ್ಲದಿರಬಹುದು, ಸ್ಥಳೀಯ ನಾಯಕರೊಂದಿಗೆ ಸಾಕಷ್ಟು ವಿರೋಧ ಕಟ್ಟಿಕೊಂಡಿರಬಹುದು, ಅಭಿವೃದ್ಧಿಯನ್ನೂ ಮಾಡದಿರಬಹುದು. ಆದರೆ, ಅವರನ್ನು ಜನ ಅಷ್ಟು ಸುಲಭವಾಗಿ ಬಿಟ್ಟುಕೊಡುವಂಥವರಲ್ಲ.
ಚಿತ್ರನಟರ ಮೇಲಿನ ಹುಚ್ಚು ಅಭಿಮಾನ
ಚಿತ್ರನಟರ ಮೇಲಿನ ಹುಚ್ಚು ಅಭಿಮಾನ ಅಷ್ಟು ಬೇಗನೆ ಆರಿ ಹೋಗುವುದಿಲ್ಲ. ಜನ ತಮ್ಮ ಪ್ರಿಯನಾಯಕ ಇಷ್ಟೆಲ್ಲಾ ಸೇವೆ ಮಾಡಿದ್ದರೂ ಅವರಿಗೆ ಕಾಂಗ್ರೆಸ್ ನೋವು ಕೊಟ್ಟಿತಲ್ಲ ಎಂದು ಜನ ಭಾವೋದ್ವೇಗಕ್ಕೆ ಒಳಗಾಗುವುದು ಸಹಜ. ಇಂತಹ ನಾಯಕನನ್ನು ಮಂಡ್ಯ ಮುಂದುವರಿಸಿಕೊಳ್ಳಲು ಆಗುತ್ತಿಲ್ಲವಲ್ಲ. ನಮ್ಮ ಪ್ರತಿಭಟನೆಗೂ ಅಂಬಿ ಓಗೊಡದಂತೆ ಆಗಿರುವುದಕ್ಕೆ ಕಾರಣ ಕಾಂಗ್ರೆಸ್ ಅನ್ನುತ್ತಿರುವ ಜನ, ಸಮಯ ಸಿಕ್ಕಾಗ ಅವರ ಸಿಟ್ಟು ತೀರಿಸಿಕೊಳ್ಳದೇ ಬಿಟ್ಟರಾ! ಇದೇ ಸರಿಯಾದ ಸಮಯವೆಂದು ತಮ್ಮ ಮತ ಚಲಾಯಿಸದೆ ಕಾಂಗ್ರೆಸ್ ಗೆ ಏಟು ಕೊಡುವ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ.
ಅಂಬಿ ನಿವೃತ್ತಿಯಿಂದ ಸಿದ್ದು ಬಾದಾಮಿ ಚಲೋವರೆಗೆ ದಿನದ 5 ಬೆಳವಣಿಗೆ
6 ತಿಂಗಳ ಮುಂಚೆ ಏಕೆ ಈ ನಿರ್ಧಾರ ಪ್ರಕಟಿಸಲಿಲ್ಲ
ಮಂಡ್ಯದ ಜನ ಅಂಬಿಯನ್ನು ಎಷ್ಟು ಬಿಟ್ಟುಕೊಡರು ಅಂದರೆ, ಅಂಬಿಯವರು ಸ್ವತ: ಹೇಳಿರುವ ಮಾತೇ ಸಾಕ್ಷಿ. ನನಗೆ ನನ್ನ ಈ ನಿರ್ಧಾರ 6 ತಿಂಗಳ ಮೊದಲಿಂದಲೇ ಗೊತ್ತಿತ್ತು ಆಗಲೇ ಹೇಳಿದ್ದರೆ ಜನ ನನ್ನನ್ನು ಬಿಟ್ಟು ಕೊಡಲಾಗದೆ ಸುಮ್ಮನೆ ಗಲಾಟೆಗಳು ನಡೆಯುತ್ತಿದ್ದವು ಅಂತ ನಾನು ಬೇಕಂತಲೇ ಈ ಸುದ್ದಿಯನ್ನು ಈಗ ಪ್ರಕಟಿಸುತ್ತಿದ್ದೇನೆ ಅಂದಿದ್ದಾರೆ. ಇದರಲೇ ಗೊತ್ತಾಗುತ್ತೆ ಜನತೆಯ ಮೇಲೆ ಅವರಿಟ್ಟಿರುವ ವಿಶ್ವಾಸ. ಇಂತಹ ಜನತೆ ತಮ್ಮ ಬೇಸರ ಮರೆತು ಕಾಂಗ್ರೆಸ್ ಜೊತೆ ಕೈಗೂಡಿಸುತ್ತಾರಾ?
ಫಲಿತಾಂಶ ಮೇ 15ರಂದು ತಿಳಿದುಬರಲಿದೆ
ಈಗ ಮಂಡ್ಯದಲ್ಲಿ ಕಾಂಗ್ರೆಸ್ ನಿಂದ ಗಣಿಗ ರವಿಕುಮಾರ್ ಗೌಡ ಅವರಿಗೆ ಟಿಕೆಟ್ಟೇನೊ ಸಿಕ್ಕಿರಬಹುದು. ಆದರೆ ಹಿಂದೆ ಅವರು ಅಂಬಿಯನ್ನು ಸಾಕಷ್ಟು ಬಾರಿ ಹೀಯಾಳಿಸಿದ್ದರು. ಈಗ ಜನತೆಯ ಮುಂದೆ ಬಂದು, ಅಂಬಿ ಐದು ಸಾವಿರ ಕೋಟಿ ಕೆಲಸ ಮಾಡಿದ್ದಾರೆ, ಅಂತಹವರ ಆಶೀರ್ವಾದ ನನಗೆ ಬೇಕು ಅಂತ ಅಟ್ಟ ಹತ್ತಿಸುತ್ತಿದ್ದಾರೆ. ಈ ಬಣ್ಣದ ಮಾತಿಗೆ ಜನ ಒಲೀತಾರಾ? ಫಲಿತಾಂಶ ಮೇ 15ರಂದು ತಿಳಿದುಬರಲಿದೆ.
ಪ್ರಚಾರಕ್ಕೆ ಬರದಿರುವಷ್ಟು ನಿಶ್ಶಕ್ತರಾ ಅಂಬಿ?
ಇದೆಲ್ಲಾ ನಕಾರಾತ್ಮಕ ಅಂಶಗಳಾದರೂ ಒಂದು ಕಡೆಯಿರಲಿ, ಏನಾದರೂ ಚೂರು ಸಕಾರಾತ್ಮಕ ಅಂಶ ಗೋಚರಿಸುತ್ತಿದೆಯಾ ಅಂದರೆ, ಅಂಬಿ ಜನತೆಯನ್ನು ಕುರಿತು ಮಾತನಾಡಿ ಕಾಂಗ್ರೆಸ್ ಗೆ ಮತ ನೀಡಿ ಅಂತ ಬೆಂಬಲ ಕೂಡ ನೀಡುತ್ತಿಲ್ಲ. ಅನಾರೋಗ್ಯದ ಕಾರಣ ಹೇಳಿದ್ದಾರಾದರೂ ಪ್ರಚಾರಕ್ಕೆ ಬರದಿರುವಷ್ಟು ನಿಶ್ಶಕ್ತರೇನೂ ಆಗಿಲ್ಲ. ಅವರ ಮನವೊಲಿಸಲು ಹಲವಾರು ನಾಯಕರು ಪ್ರಯತ್ನಿಸಿದರಾದರೂ ಅವರು ಅದಕ್ಕೆ ಸೊಪ್ಪು ಹಾಕಿಲ್ಲ. ಇದು ಕಾಂಗ್ರೆಸ್ಸಿಗೆ ಭಾರೀ ಹೊಡೆತ ಕೊಟ್ಟಿದೆ.
ಕಾಂಗ್ರೆಸ್ ಕೂಟ ತನ್ನ ಆಟ ಆಡುತ್ತಿದೆ
ಅಂಬರೀಶ್ ಅವರು ಚುನಾವಣೆಗೂ ನನಗೂ ಇದಕ್ಕೂ ಸಂಬಂಧವಿಲ್ಲ ಎಂದಿದ್ದಾರೆ. ನಾನು ಯಾರನ್ನೂ ಬೆಂಬಲಿಸಿ ಪ್ರಚಾರ ಕೊಡುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳಿದ್ದಾರೆ. ಇತ್ತ ಅಂಬಿಯವರು ಕೈಕೊಟ್ಟ ಸಿಟ್ಟಿಗೆ ಅವರಿಗೇ ಪಾಠ ಕಲಿಸುತ್ತೇವೆಂದು ಕಾಂಗ್ರೆಸ್ ತನ್ನ ಆಟ ಮುಂದುವರಿಸಿದೆ. ಆಟ ಈಗಿದ್ದಂತೆ ಮುಂದೆ ಇರುವುದಿಲ್ಲ ಅಂತ ಏನು ಗ್ಯಾರಂಟಿ? ಏರುಪೇರು, ಏಳುಬೀಳು ಮಾಮೂಲು. ಇದು ಒಂದು ರೀತಿಯ ಚದುರಂಗದ ಆಟವೆಂದರೆ ತಪ್ಪಾಗಲಾರದು.
ಓದುಗರಿಗೆ ಅಂಬಿ ಕುರಿತು ಕೇಳಿದ್ದ ಪ್ರಶ್ನೆ
ಅಂಬರೀಶ್ ಅವರು 'ರೆಬೆಲ್' ಆದ ನಂತರ ಓದುಗರಿಗೆ ಒಂದು ಪ್ರಶ್ನೆ ಕೇಳಿದ್ದೆವು. ಅಂಬರೀಶ್ ನಿರ್ಗಮನದಿಂದ ಮಂಡ್ಯದಲ್ಲಿ ಕಾಂಗ್ರೆಸ್ಸಿಗೆ ಹೊಡೆತ ಬೀಳತ್ತಾ? ಅಂತ. ಶೇ.56ರಷ್ಟು ಓದುಗರು ಕಾಂಗ್ರೆಸ್ಸಿಗೆ 'ಭರ್ತಿ ಹೊಡೆತ ಬೀಳುತ್ತದೆ' ಎಂದಿದ್ದರೆ, ಶೇ.34ರಷ್ಟು ಜನರು 'ಯಾವ ಪರಿಣಾಮವೂ ಬೀರುವುದಿಲ್ಲ' ಅಂದಿದ್ದಾರೆ. ಕೇವಲ ಶೇ.10ರಷ್ಟು ಜನರು ಮಾತ್ರ ಇದರಿಂದ 'ಇದರಿಂದ ಕಾಂಗ್ರೆಸ್ಸಿಗೆ ಲಾಭ' ಅಂತ ಅಭಿಮತ ವ್ಯಕ್ತಪಡಿಸಿದ್ದಾರೆ. ಮುಂದೇನಾಗುತ್ತೋ ಕಾದು ನೋಡೋಣ.