ಬೂತ್ ಮಟ್ಟದಲ್ಲಿ ಬಿಜೆಪಿಗೆ ಬಲ ತುಂಬಲಿದೆ ಆರೆಸ್ಸೆಸ್
Recommended Video
ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಆರೆಸ್ಸೆಸ್ ಮುಖ್ಯ ಪಾತ್ರ ವಹಿಸಲಿದೆ. ನೇರವಾಗಿ ಆರೆಸ್ಸೆಸ್ ಪಾಲ್ಗೊಳ್ಳದಿರಬಹುದು. ಆದರೆ ಕರ್ನಾಟಕದಲ್ಲಿ ಬಿಜೆಪಿಯು ಗದ್ದುಗೆ ಏರಲು ನೆರವನ್ನಂತೂ ನೀಡಲಿದೆ. ಆರೆಸ್ಸೆಸ್ ಅಂದರೆ ಅದರ ಸಂಘಟನಾ ಶಕ್ತಿಯಿಂದಲೇ ಹೆಸರುವಾಸಿ. ಆ ಮೂಲಕ ಬೂತ್ ಮಟ್ಟದಲ್ಲಿ ಬಿಜೆಪಿಗೆ ನೆರವು ನೀಡಲಿದೆ.
ಈ ಸಂದರ್ಭದಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಹೇಳಿದ್ದ ಮಾತನ್ನು ನೆನಪಿಸಿಕೊಳ್ಳಬಹುದು. "ಬಿಜೆಪಿ ಬೂತ್ ಮಟ್ಟದಲ್ಲಿ ಗೆದ್ದರೆ, ಕರ್ನಾಟಕ ಚುನಾವಣೆ ಗೆದ್ದಂತೆಯೇ" ಎಂದಿದ್ದರು. ಕರ್ನಾಟಕದ ಬಿಜೆಪಿ ಪ್ರಮುಖ ನಾಯಕರಾದ ಬಿ.ಎಸ್.ಯಡಿಯೂರಪ್ಪ, ಅನಂತಕುಮಾರ್ ಈಚೆಗೆ ಆರೆಸ್ಸೆಸ್ ನ ಪ್ರಮುಖ ನಾಯಕರನ್ನು ಭೇಟಿ ಮಾಡಿದ್ದಾರೆ.
ಸಿದ್ದರಾಮಯ್ಯನ ಸೋಲಿಸಲು ಬಿಜೆಪಿಗೆ ಆರ್ಎಸ್ಎಸ್ ಬಲ
ಚುನಾವಣೆಗೆ ಹೆಣೆಯಬೇಕಾದ ರಣತಂತ್ರದ ಬಗ್ಗೆ ಈ ವೇಳೆ ಚರ್ಚೆ ನಡೆದಿದೆ. ನೆರವು ಬಯಸುವ ಬಿಜೆಪಿ ನಾಯಕರಿಗೆ ಸಹಾಯ ಮಾಡಲು ಆರೆಸ್ಸೆಸ್ ಕೂಡ ಸಿದ್ಧವಿದೆ. ಆದರೆ ನೇರವಾಗಿ ಆರೆಸ್ಸೆಸ್ ಎಲ್ಲೂ ಕಾಣಿಸಿಕೊಳ್ಳುವುದಿಲ್ಲ. ಇದೇ ವೇಳೆ ಮತದಾನ ಮಾಡುವಂತೆ ಪ್ರೇರಣೆ ನೀಡುವ ಕೆಲಸವನ್ನು ಆರೆಸ್ಸೆಸ್ ಮಾಡುತ್ತದೆ.
"ಪ್ರಜಾಪ್ರಭುತ್ವ ಬಲವಾಗಬೇಕು ಅಂದರೆ ದೊಡ್ಡ ಮಟ್ಟದಲ್ಲಿ ಮತದಾನ ಆಗಬೇಕು. ಸರಿಯಾದ ಅಭ್ಯರ್ಥಿಗೆ ಜನ ಮತ ಹಾಕಬೇಕು. ಇಂಥ ಅಭಿಯಾನವನ್ನು ನಮ್ಮ ಸ್ವಯಂಸೇವಕರು ಕೈಗೊಳ್ಳುತ್ತಾರೆ" ಎಂದು ಈಚೆಗೆ ಆರೆಸ್ಸೆಸ್ ನಾಯಕರೊಬ್ಬರು ಪಿಟಿಐಗೆ ತಿಳಿಸಿದ್ದರು.
ಎಷ್ಟು ಸ್ವಯಂಸೇವಕರು ಪಾಲ್ಗೊಳ್ಳುತ್ತಾರೆ ಎಂದು ಸಂಖ್ಯೆ ಹೇಳುವುದು ಕಷ್ಟ. ಆದರೆ ಸಾವಿರಾರು ಸಂಖ್ಯೆಯಲ್ಲಿ ಪಾಲ್ಗೊಳ್ಳುತ್ತಾರೆ ಎಂದು ಹೇಳಿದ್ದಾರೆ. ಕರ್ನಾಟಕ ಚುನಾವಣೆಗೆ ನೆರವು ನೀಡುವುದಾಗಿ ಆರೆಸ್ಸೆಸ್ ನಾಯಕರು ಭರವಸೆ ನೀಡಿರುವುದಾಗಿ ಈಚೆಗೆ ಅಮಿತ್ ಶಾ ಕೂಡ ಹೇಳಿದ್ದಾರೆ.