ಇಂದು ಸಂಜೆ ರಾಜೀನಾಮೆ ನೀಡುತ್ತಾರಾ ಸಿದ್ದರಾಮಯ್ಯ?
ಬೆಂಗಳೂರು, ಮೇ 15: ರಾಜ್ಯದಲ್ಲಿ ವಿಧಾನಸಭೆ ಚುನಾವಣೆಯ ಫಲಿತಾಂಶ ಅನಿರೀಕ್ಷಿತ ಘಟ್ಟ ತಲುಪಿದ್ದು, ಬಿಜೆಪಿ ಬಹುಮತ ಪಡೆಯುವ ಎಲ್ಲ ಸಾಧ್ಯತೆಗಳೂ ನಿಚ್ಚಳವಾಗಿದೆ.
ಸದ್ಯದ ಟ್ರೆಂಡ್ ಪ್ರಕಾರ ಬಿಜೆಪಿ 114 ಸ್ಥಾನ, ಕಾಂಗ್ರೆಸ್ 68, ಬಿಜೆಪಿ 38 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಗೆಲುವು ನಮ್ಮದೇ ಎಂದು ಪೂರ್ಣ ವಿಶ್ವಾಸದಲ್ಲಿದ್ದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ತೀವ್ರ ಮುಖಭಂಗವಾಗಿದೆ.
LIVE: ಕರ್ನಾಟಕ ಚುನಾವಣೆ 2018, ಮತಎಣಿಕೆ ಅಪ್ಡೇಟ್ಸ್
ಚುನಾವಣೆ ಫಲಿತಾಂಶ ಬಹುತೇಕ ಘೋಷಣೆಯಾಗಿದ್ದು, ಕಾಂಗ್ರೆಸ್ಸು ಹೀನಾಯವಾಗಿ ಸೋಲು ಕಂಡಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ಸಿನ ಹಿರಿಯ ನಾಯಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿವಾಸ ಕಾವೇರಿಗೆ ಆಗಮಿಸಿದ್ದಾರೆ.
ಕಾಂಗ್ರೆಸ್ ಮುಖಂಡರಾದ ಮಲ್ಲಿಕಾರ್ಜುನ್ ಖರ್ಗೆ, ಕೆ ಸಿ ವೇಣುಗೋಪಾಲ್, ಅಶೋಕ್ ಗೆಹ್ಲೋಟ್ ಮುಂತಾದವರು ಸಿದ್ದರಾಮಯ್ಯ ಅವರ ನಿವಾಸಕ್ಕೆ ಆಗಮಿಸಿ ಸಭೆ ನಡೆಸಿದ್ದಾರೆ.
ಇಂದು ಸಂಜೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ರಾಜಭವನಕ್ಕೆ ತೆರಳಿ ರಾಜೀನಾಮೆ ಸಲ್ಲಿಸಲಿರುವ ಅವರ ಮುಂದಿನ ನಡೆ ಬಗ್ಗೆ ಯೋಚಿಸಲಿದ್ದಾರೆ.
ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಅವರು ಜಿ ಟಿ ದೇವೇಗೌಡ ಅವರ ವಿರುದ್ಧ ಹೀನಾಯ ಸೋಲುಕಂಡಿದ್ದಾರೆ. ಬಾದಾಮಿ ಕ್ಷೇತ್ರದಲ್ಲಿ ಶ್ರೀರಾಮುಲು ಅವರ ವಿರುದ್ಧ ಅಲ್ಪ ಮುನ್ನಡೆ ಸಾಧಿಸಿದ್ದು, ಫಲಿತಾಂಶ ಕುತೂಹಲ ಕೆರಳಿಸಿದೆ.