ಟೆಸ್ಟ್ - ಟಿ20 ಪಂದ್ಯಗಳಿಗೆ ನಾಯಕತ್ವ ವಹಿಸಿದ್ದೇನೆ, ಬಾಕಿ ಇರುವುದು ಏಕದಿನ ಕ್ರಿಕೆಟ್ ಮಾತ್ರ: ಜಸ್ಪ್ರಿತ್ ಬುಮ್ರಾ
Jasprit Bumrah: ಧರ್ಮಶಾಲಾದಲ್ಲಿ ಗುರುವಾರ (ಮೇ 14) ನಡೆದ ಐಪಿಎಲ್ ರೋಚಕ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ 6 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತು. ಪಂದ್ಯದ ಬಳಿಕ ಎಂಐ ಹಂಗಾಮಿ ನಾಯಕ ಜಸ್ಪ್ರಿತ್ ಬುಮ್ರಾ ಮಾತನಾಡಿ ಅಚ್ಚರಿ ಹೇಳಿಕೆ ನೀಡಿ ಗಮನ ಸೆಳೆದಿದ್ದಾರೆ. ಇದೀಗ ಇದು ಎಲ್ಲೆಡೆ ಭಾರಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ.
ಟಾಸ್ ಸೋತು ಮೊದಲು ಬ್ಯಾಟ್ ಬೀಸಿದ ಪಂಜಾಬ್ ಕಿಂಗ್ಸ್ ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 200 ರನ್ಗಳ ಬೃಹತ್ ಮೊತ್ತವನ್ನು ಪೇರಿಸಿತು. ಆದರೆ ಮುಂಬೈ ಇಂಡಿಯನ್ಸ್ ತಂಡವು ತಿಲಕ್ ವರ್ಮಾ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ 201 ರನ್ಗಳ ಗುರಿಯನ್ನು 19.5 ಓವರ್ಗಳಲ್ಲಿ ಮುಟ್ಟುವ ಮೂಲಕ ಭರ್ಜರಿ ಜಯ ಸಾಧಿಸಿತು. ತಿಲಕ್ಗೆ ಕೊನೆಯಲ್ಲಿ ವಿಲ್ ಜಾಕ್ಸ್ ಅಜೇಯ 25 ರನ್ ಸಿಡಿಸಿ ಉತ್ತಮ ಸಾಥ್ ನೀಡಿದರು.

ಮಿಂಚಿದ ತಿಲಕ್ ವರ್ಮಾ
ತಿಲಕ್ ವರ್ಮಾ ಕೇವಲ 33 ಎಸೆತಗಳಲ್ಲಿ 6 ಬೌಂಡರಿ, 6 ಸಿಕ್ಸರ್ಗಳೊಂದಿಗೆ ಅಜೇಯ 75 ರನ್ಗಳನ್ನು ಸಿಡಿಸಿ ತಂಡದ ಗೆಲುವಿಗೆ ಪ್ರಮುಖ ಪಾತ್ರವಹಿಸಿದರು. ಈ ಮೂಲಕ ಮುಂಬೈ ಈ ಸೀಸನ್ನಲ್ಲಿ ತನ್ನ ನಾಲ್ಕನೇ ಗೆಲುವು ಸಾಧಿಸಿತು. ಮತ್ತೊಂದೆಡೆ ಪಂಜಾಬ್ ಕಿಂಗ್ಸ್ ಸತತ ಐದು ಸೋಲನುಭವಿಸಿದ್ದು, ಪ್ಲೇ-ಆಫ್ ಪ್ರವೇಶದ ಹಾದಿ ಮತ್ತಷ್ಟು ಕಠಿಣವಾಗಿದೆ.
ಹಾರ್ದಿಕ್ ಪಾಂಡ್ಯ ಮತ್ತು ಸೂರ್ಯಕುಮಾರ್ ಯಾದವ್ ಅವರ ಅನುಪಸ್ಥಿತಿಯಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನಡೆಸಿದ ಜಸ್ಪ್ರಿತ್ ಬುಮ್ರಾ ಇಡೀ ಇನ್ನಿಂಗ್ಸ್ನಲ್ಲಿ ತಮ್ಮ ಚಾಣಕ್ಷ ಬೌಲಿಂಗ್ ಬದಲಾವಣೆಗಳ ಮೂಲಕ ಗಮನ ಸೆಳೆದರು. ಈ ಪಂದ್ಯದಲ್ಲಿ ಶಾರ್ದೂಲ್ ಠಾಕೂರ್ ಮಾರಕ ಬೌಲಿಂಗ್ ದಾಳಿ ಮಾಡಿ ನಾಲ್ಕು ವಿಕೆಟ್ ಪಡೆದು ಮಿಂಚಿದರು. ಶಾರ್ದೂಲ್ ದಾಳಿಗೆ ಪಂಜಾಬ್ ಕಿಂಗ್ಸ್ ತಂಡ ಹಿನ್ನಡೆ ಅನುಭವಿಸಿದರೂ ಸಹ ಅಂತಿಮವಾಗಿ 8 ವಿಕೆಟ್ ನಷ್ಟಕ್ಕೆ 200 ರನ್ಗಳ ಬೃಹತ್ ಮೊತ್ತವನ್ನು ಪೇರಿಸುವಲ್ಲಿ ಯಶಸ್ವಿಯಾಯಿತು.
ಜವಾಬ್ದಾರಿಯುತ ಆಟ ಆಡಿ ಆಡಿದ ತಿಲಕ್
ಮುಂಬೈ ತಂಡ ಈ ಗುರಿಯನ್ನು ಬೆನ್ನಟ್ಟುವಾಗ ಮಧ್ಯದ ಓವರ್ಗಳಲ್ಲಿ ವಿಕೆಟ್ ಕಳೆದುಕೊಂಡು ಸ್ವಲ್ಪ ಒತ್ತಡಕ್ಕೆ ಒಳಗಾಗಿತ್ತು. ಇದರಿಂದ ರನ್ ವೇಗ ಕೂಡ ತಗ್ಗಿತು. ಆದರೆ ತಿಲಕ್ ವರ್ಮಾ ಕೊನೆವರೆಗೂ ಜವಾಬ್ದಾರಿಯುತ ಆಟ ಆಡಿ ತಂಡಕ್ಕೆ ಆಧಾರವಾಗಿ ನಿಂತರು. ಅವರು ಸರಿಯಾದ ಸಮಯದಲ್ಲಿ ಆಕ್ರಮಣಕಾರಿ ಬ್ಯಾಟಿಂಗ್ ಮಾಡುವ ಮೂಲಕ ಒಂದು ಎಸೆತ ಬಾಕಿ ಇರುವಂತೆಯೇ ತಂಡವನ್ನು ಗೆಲುವಿನ ದಡ ಸೇರಿದರು.
ಜಸ್ಪ್ರಿತ್ ಬುಮ್ರಾ ಹೇಳಿದ್ದೇನು?
ಪಂದ್ಯದ ಬಳಿಕ ಮಾತನಾಡಿದ ಮುಂಬೈ ಇಂಡಿಯನ್ಸ್ ಹಂಗಾಮಿ ನಾಯಕ ಜಸ್ಪ್ರಿತ್ ಬುಮ್ರಾ, ಬೌಲಿಂಗ್ ಯೋಜನೆಗಳು ಮತ್ತು ಪಿಚ್ಗೆ ತಕ್ಕಂತೆ ಮಾಡಿಕೊಂಡ ಪ್ರಮುಖ ಬದಲಾವಣೆಗಳ ಕುರಿತು ವಿವರಣೆ ನೀಡಿದರು. ಶಿಸ್ತುಬದ್ಧ ಆಟ, ಲೆಂತ್ ಮೇಲಿನ ನಿಯಂತ್ರಣ ಮತ್ತು ಸನ್ನಿವೇಶಕ್ಕೆ ತಕ್ಕ ಹೊಂದಾಣಿಕೆಯಿಂದಾಗಿ ಎರಡೂ ತಂಡಗಳು ಪಂದ್ಯದಲ್ಲಿ ಹೇಗೆ ಪೈಪೋಟಿ ನೀಡಲು ಸಾಧ್ಯವಾಯಿತು ಎಂಬ ಬಗ್ಗೆಯೂ ಕೂಡ ಹೇಳಿದರು.
ಎರಡೂ ತಂಡಗಳಿಂದ ಉತ್ತಮ ಪ್ರದರ್ಶನ
ಪಂದ್ಯದ ನಂತರ ನಡೆದ ಬಹುಮಾನ ವಿತರಣಾ ಸಮಾರಂಭದಲ್ಲಿ ಮಾತನಾಡಿದ ಬುಮ್ರಾ, "ಎರಡೂ ತಂಡಗಳಿಂದ ಉತ್ತಮ ಪ್ರದರ್ಶನ ಕಂಡುಬಂದಿತು. ಆದರೆ ನಾವು ಕೊನೆಯಲ್ಲಿ ಪಂದ್ಯಕ್ಕೆ ಭರ್ಜರಿಯಾಗಿ ಮರಳಿದೆವು. ಹಿಂದಿನ ಪಂದ್ಯಕ್ಕೆ ಹೋಲಿಕೆ ಮಾಡಿದರೆ ಈ ಪಂದ್ಯದಲ್ಲಿ ಪಿಚ್ ಕೊಂಚ ಒಣಗಿದಂತೆ ಕಾಣುತ್ತಿತ್ತು. ಲೆಂತ್ ಕಾಯ್ದುಕೊಳ್ಳುವುದು ತುಂಬಾ ಮುಖ್ಯವಾಗಿತ್ತು. ಅದೇ ನಮ್ಮ ಯೋಜನೆಯಾಗಿತ್ತು. ಅದರ ಶ್ರೇಯಸ್ಸು ಎಲ್ಲಾ ಬೌಲರ್ಗಳಿಗೆ ಸಲ್ಲಬೇಕು," ಎಂದು ಹೇಳಿದರು.
ನಾಯಕತ್ವದ ಬಗ್ಗೆ ಬುಮ್ರಾ ಹೇಳಿದ್ದೇನು?
ಮುಂಬೈ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ ನಂತರ ಬುಮ್ರಾ ತಮ್ಮ ನಾಯಕತ್ವದ ಬಗ್ಗೆ ತಮಾಷೆಯಾಗಿ ಪ್ರತಿಕ್ರಿಯಿಸಿದರು. "ನಾನು ಈಗಾಗಲೇ ಟೆಸ್ಟ್ ಮತ್ತು ಟಿ20 ಪಂದ್ಯಗಳಲ್ಲಿ ನಾಯಕತ್ವ ವಹಿಸಿದ್ದೇನೆ. ಈಗ ಬಾಕಿ ಇರುವುದು ಏಕದಿನ ಕ್ರಿಕೆಟ್ ಮಾತ್ರ, ಆದರೆ ಅದು ಸಂಭವಿಸುತ್ತದೆ ಎಂದು ನನಗನ್ನಿಸುತ್ತಿಲ್ಲ," ಎಂದು ಅವರು ಹಾಸ್ಯಚಟಾಕಿ ಹಾರಿಸಿದರು. "ತಮಾಷೆ ಪಕ್ಕಕ್ಕಿರಲಿ, ಈ ಜವಾಬ್ದಾರಿ ನನಗೆ ತುಂಬಾ ಸಂತೋಷ ನೀಡಿದೆ. ಇಲ್ಲಿನ ಉತ್ತಮ ಹವಾಮಾನ ಹಾಗೂ ಮೈದಾನದಲ್ಲಿ ಆಟವನ್ನು ಆನಂದಿಸಿದೆ ಎಂದು ಅವರು ಹೇಳಿದರು.
"ತಿಲಕ್ ವರ್ಮಾ ಅವರ ಅದ್ಭುತ ಆಟ ಮತ್ತು ಶಾರ್ದೂಲ್ ಠಾಕೂರ್ ಬೌಲಿಂಗ್ ಮಾಡಿದ ರೀತಿ ಎರಡಕ್ಕೂ ಸಮನಾದ ಶ್ರೇಯಸ್ಸು ಸಲ್ಲಬೇಕು. ತಿಲಕ್ ಪಂದ್ಯದ ಉದ್ದಕ್ಕೂ ಸಂಯಮದಿಂದ ಆಡಿದರು ಮತ್ತು ವಿಲ್ ಜಾಕ್ಸ್ ಕೂಡ ಉತ್ತಮ ಕೊಡುಗೆ ನೀಡಿದರು," ಎಂದು ಬುಮ್ರಾ ತಿಳಿಸಿದ್ದಾರೆ.












Click it and Unblock the Notifications